Site icon Vistara News

Bear Attack: ಬನ್ನೇರುಘಟ್ಟ ಸಫಾರಿ ವೇಳೆ ಸಿಬ್ಬಂದಿ ಮೇಲೆ ಕರಡಿ ದಾಳಿ

Bear attack staff during Bannerghatta safari

ಬೆಂಗಳೂರು ಗ್ರಾಮಾಂತರ: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ವೇಳೆ ಕರಡಿಯೊಂದು (Bear Attack) ಸಿಬ್ಬಂದಿ ಮೇಲೆ ದಾಳಿ (Wild Animal Attack) ಮಾಡಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಘಟನೆ ನಡೆದಿದೆ.ಬೆಟ್ಟಪ್ಪ (54) ಕರಡಿ ದಾಳಿಗೊಳಗಾದವರು.

ಬೆಟ್ಟಪ್ಪ ಕಳೆದ ಇಪ್ಪತ್ತು ವರ್ಷಗಳಿಂದ ಬನ್ನೇರುಘಟ್ಟದಲ್ಲಿ ಸಫಾರಿಯ ಗೇಟ್‌ ಆಪರೇಟರ್‌ ಕೆಲಸ ಮಾಡುತ್ತಿದ್ದಾರೆ. ಶನಿವಾರ ಸಫಾರಿಯಲ್ಲಿ ಗೇಟ್ ಆಪರೇಟ್ ಮಾಡುವಾಗ ಏಕಾಏಕಿ ಕರಡಿ ದಾಳಿ ಮಾಡಿದೆ. ಬೆಟ್ಟಪ್ಪ ಗಂಭೀರ ಗಾಯಗೊಂಡಿದ್ದು. ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಾವು ಬದುಕಿನ ನಡುವೆ ಬೆಟ್ಟಪ್ಪ ಹೋರಾಟ ನಡೆಸುತ್ತಿದ್ದಾರೆ.

ಬಳ್ಳಾರಿಯಲ್ಲಿ ಚಿರತೆ ದಾಳಿಗೆ ಕುರಿಗಳು ಸಾವು

ಕುರಿಗಳ ಮೇಲೆ ಚಿರತೆ ದಾಳಿ ಮಾಡಿದ್ದು, ಮೂರು ಕುರಿಗಳು ಮೃತಪಟ್ಟಿವೆ. ಬಳ್ಳಾರಿ ತಾಲೂಕಿನ ಮಿಂಚೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಮಹಮ್ಮಸ್‌ ಸಾಬ್ ಎಂಬುವವರಿಗೆ‌ ಸೇರಿದ ಕುರಿಗಳು ಮೃತಪಟ್ಟಿವೆ. ಶುಕ್ರವಾರ ರಾತ್ರಿ ಮಿಂಚೇರಿ ಗ್ರಾಮದ ಕುರಿಹಟ್ಟಿಗೆ ನುಗ್ಗಿದ ಚಿರತೆ ಕುರಿಗಳ ಮೇಲೆ ದಾಳಿ ಮಾಡಿ ತಿಂದು ಹಾಕಿದೆ. ಸದ್ಯ ಬಳ್ಳಾರಿಯಲ್ಲಿ ಚಿರತೆ ಮತ್ತು ಕರಡಿ ದಾಳಿ ಹೆಚ್ಚುತ್ತಿದೆ.

ಕೊಪ್ಪಳದಲ್ಲಿ ಹೆಚ್ಚಾಯಿತು ಕರಡಿ ದಾಂಧಲೆ

ಕೊಪ್ಪಳದಲ್ಲಿ ಮತ್ತೆ ಕರಡಿ ಹಾವಳಿ ಹೆಚ್ಚಾಗಿದೆ. ರಾತ್ರೋರಾತ್ರಿ ಕಲ್ಲಗಂಡಿ ತೋಟಕ್ಕೆ ನುಗ್ಗಿದ ಎರಡು ಕರಡಿಗಳು ಹಣ್ಣು ತಿಂದು ಹಾಳು ಮಾಡಿವೆ. ಸಾವಿರಾರು ರೂಪಾಯಿ ಬೆಲೆ ಬಾಳುವ ಕಲ್ಲಗಂಡಿ ಬೆಳೆಯನ್ನು ಹಾಳು ಮಾಡಿದೆ. ಕೊಪ್ಪಳ ತಾಲೂಕಿನ ಸೂಳಿಕೇರಿ ತಾಂಡಾದಲ್ಲಿ ಈ ಘಟನೆ ನಡೆದಿದೆ.

ಶರಣಪ್ಪ ರಾಠೋಡ್ ಎಂಬುವವರ ಜಮೀನಿಗೆ ನುಗ್ಗಿದ್ದ ಎರಡು ಕರಡಿಗಳು ಒಂದು ಎಕರೆ ಪ್ರದೇಶದಲ್ಲಿ ಬೆಳದಿದ್ದ ಬೆಳೆಯನ್ನು ನಾಶ ಮಾಡಿವೆ. ಇತ್ತ ಜಮೀನಿನಲ್ಲಿ ಮಲಗಿದ್ದವರ ಮೇಲೆ ಕರಡಿಗಳು ದಾಳಿಗೆ ಮುಂದಾಗಿವೆ. ಕರಡಿ ಭಯದಿಂದ ಜಮೀನಿನಿಂದ ಓಡಿ ಹೋಗಿ ಶರಣಪ್ಪ ಜೀವ ಉಳಿಸಿಕೊಂಡಿದ್ದಾರೆ. ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಶರಣಪ್ಪ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Zika Virus : ಡೆಂಗ್ಯೂ ಬೆನ್ನಲ್ಲೇ ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧ ಬಲಿ

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ರಾಮನಗರ: ಆಹಾರ ಅರಸಿ ಮತ್ತೆ ಕಾಡುಪ್ರಾಣಿಗಳು ನಾಡಿಗೆ ಲಗ್ಗೆಯಿಡುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿರುವ (Wild Animal Attack) ಪ್ರಕರಣಗಳು ಹೆಚ್ಚಾಗುತ್ತಿವೆ. ಸದ್ಯ ರಾಮನಗರ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ತೋಟದಲ್ಲಿ ನೀರು ಹಾಯಿಸುವಾಗ ಕಾಡಾನೆ ದಾಳಿಗೆ (Elephant attack) ರೈತರೊಬ್ಬರು ಬಲಿಯಾಗಿದ್ದಾರೆ. ಕನಕಪುರ ತಾಲೂಕಿನ ತಿಪ್ಪೂರು ಗ್ರಾಮದ ಶಿವರುದ್ರ (42) ಮೃತ ದುರ್ದೈವಿ.

ಶಿವರುದ್ರ ರೇಷ್ಮೆ ತೋಟದಲ್ಲಿ ನೀರು ಹಾಯಿಸುವಾಗ ಏಕಾಏಕಿ ಒಂಟಿ ಸಲಗವೊಂದು ದಾಳಿ ಮಾಡಿದೆ. ಆನೆಯಿಂದ ತಪ್ಪಿಸಿಕೊಳ್ಳಲು ಆಗದೆ ಅದರ ಕಾಲ್ತುಳಿತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವರುದ್ರ ಮನೆಗೆ ಬಾರದೆ ಇದ್ದಾಗ ತೋಟಕ್ಕೆ ಬಂದು ಹುಡುಕಾಟ ನಡೆಸಿದ್ದಾಗ ಶವವಾಗಿ ಪತ್ತೆಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಕಾಡಾನೆಯನ್ನು ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version