Site icon Vistara News

BJP ಜನಸ್ಪಂದನ | ವಲಸಿಗ ಶಾಸಕರನ್ನು ವೀರರು ಎಂದ ಸಿಎಂ ಬೊಮ್ಮಾಯಿ

ಬೊಮ್ಮಾಯಿ

ದೊಡ್ಡಬಳ್ಳಾಪುರ: ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ 17 ವಲಸಿಗ ಶಾಸಕರನ್ನು ವೀರರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಭೋದಿಸಿದ್ದಾರೆ.

ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಜತೆಗಿದ್ದು ರಾಜ್ಯವನ್ನು ಹಾಳು ಮಾಡಬಾರದು ಎಂದು 17 ಜನರು ರಾಜೀನಾಮೆ ನೀಡಿ ಹೊರ ಬಂದರು. ಜನರ ಬಳಿಗೆ ತೆರಳಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಧೈರ್ಯ ಈ ಹದಿನೇಳು ಜನ ವೀರರಿಗಿತ್ತು. ಅವರೆಲ್ಲರೂ ಯಡಿಯೂರಪ್ಪ ಅವರಿಗೆ ಬಲ ನೀಡಿದ್ದರಿಂದ ಬಿಜೆಪಿ ಸರ್ಕಾರ ರಚನೆಯಾಯಿತು ಎಂದರು.

ಯಡಿಯೂರಪ್ಪ ಅವರ ಆಡಳಿತದಲ್ಲಿ ಕೋವಿಡ್‌ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಕೆಲಸ ಇಲ್ಲದ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಿದ್ದೇವೆ. ದೇಶದಲ್ಲಿ 130 ಕೋಟಿ ಜನಸಂಖ್ಯೆಗೆ ಉಚಿತವಾಗಿ ಎರಡು ಡೋಸ್‌ ಲಸಿಕೆಯನ್ನು ಭಾರತದಲ್ಲಿ ಮಾತ್ರ ನೀಡಲಾಗಿದೆ. ಕೇಂದ್ರದಲ್ಲಿ ಮೋದಿ, ಇಲ್ಲಿ ಯಡಿಯೂರಪ್ಪ ಅಲ್ಲದೆ ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಿದ್ದರೆ ನರಕಕ್ಕೆ ತಳ್ಳುತ್ತಿದ್ದರು ಎಂದು ಬೊಮ್ಮಾಯಿ ಬಣ್ಣಿಸಿದರು.

ಮತ್ತೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದ ಬೊಮ್ಮಾಯಿ, ಅನ್ನಭಾಗ್ಯವನ್ನು ನೀವು ಕೊಟ್ಟಿರಿ ಎಂದು ಹೇಳಿಕೊಂಡಿರಿ. ಏಳು ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಅದನ್ನು ಮೂರು ಕೆ.ಜಿಗೆ ಇಳಿಸಿ ಆಮೇಲೆ ಚುನಾವಣೆ ಸಂದರ್ಭದಲ್ಲಿ ಏಳು ಕೆ.ಜಿಗೆ ಹೆಚ್ಚಿಸಿದಿರಿ. ಇದರಲ್ಲಿ ಅಕ್ಕಿಯನ್ನು ಮೋದಿ ಸರ್ಕಾರ ನೀಡಿದರೆ ಅದರ ಚೀಲ ಮಾತ್ರ ನೀಡಿದಿರಿ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಗರಣ ಆರೋಪಗಳ ಪಟ್ಟಿ

ಸಿದ್ದರಾಮಯ್ಯ ಸರ್ಕಾರದಲ್ಲಿ ಹಗರಣಗಳು ನಡೆದಿದ್ದವು ಎಂದು ದೊಡ್ಡ ಪಟ್ಟಿ ಮಾಡಿದ ಸಿಎಂ ಬೊಮ್ಮಾಯಿ, ಅನ್ನಭಾಗ್ಯ ಹಗರಣವನ್ನು ತನಿಖೆ ಮಾಡುತ್ತಿದ್ದ ಅನುರಾಗ್‌ ತಿವಾರಿಯ ಸಾವು ಅನುಮಾನಾಸ್ಪದವಾಗಿ ಉತ್ತರ ಪ್ರದೇಶದಲ್ಲಿ ನಡೆಯಿತು. ಮರಳು ದಂಧೆಯಲ್ಲಿ ಸಚಿವ ಸಂಪುಟದ ಸದಸ್ಯರ ಮಗನ ಮೇಲೆ ಪ್ರಕರಣ ದಾಖಲಾಯಿತು. ರೈತರಿಗೆ ಬೋರ್‌ವೆಲ್‌ ಕೊರೆಯಿಸುವ ಯೋಜನೆಯಲ್ಲಿ ಒಂದೇ ದಿನದಲ್ಲಿ ಮೂವತ್ತಾರು ಸಾವಿರ ಬೋರ್‌ವೆಲ್‌ ಕೊರೆಸುವ ಹಗರಣ ಮಾಡಿದಿರಿ. ಎಸ್‌ಸಿ,ಎಸ್‌ಟಿ ಹಾಸ್ಟೆಲ್‌ಗಳ ಹಾಸಿಗೆ ದಿಂಬಿನಲ್ಲಿ, ಬಿಡಿಎ ಅರ್ಕಾವತಿಯಲ್ಲಿ, ಲ್ಯಾಪ್‌ಟಾಪ್‌ ನೀಡುವುದರಲ್ಲಿ ಹಗರಣ ಮಾಡಿದಿರಿ ಎಂದರು. ಸಣ್ಣ ನೀರಾವರಿಯಲ್ಲಿ ಕೆಲಸವನ್ನೇ ಮಾಡದೆ 40 ಸಾವಿರ ಕೋಟಿ ರೂಪಾಯಿ ಬಿಲ್‌ ಮಾಡಿದಿರಿ ಎಂದ ಸಿಎಂ ಬೊಮ್ಮಾಯಿ, ನಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದೀರಿ. ನಿಮ್ಮದು 100% ಸರ್ಕಾರ. ಕೆಲಸವನ್ನೇ ಮಾಡದೆ ಬಿಲ್‌ ಮಾಡುವ ಸರ್ಕಾರ ನಿಮ್ಮದು ಎಂದರು.

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪೊಲೀಸ್‌ ನೇಮಕಾತಿ ಹಗರಣದಲ್ಲಿ ದೂರು ದಾಖಲಾಯಿತಾದರೂ ಯಾರ ಮೇಲೆಯೂ ಏನೂ ಕ್ರಮ ಆಗಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮತಿ ನೀಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ನಿಮ್ಮ ಅವಧಿಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಮೂರು ಬಾರಿ ಪರೀಕ್ಷೆ ಮುಂದೂಡಲ್ಪಟ್ಟಿತು. ಪರೀಕ್ಷೆಯನ್ನೇ ತೆಗೆದುಕೊಳ್ಳದವರಿಗೆ ನೇಮಕಾತಿ ಮಾಡಿದ್ದೀರ ಎಂದರು.

ಹಗರಣಗಳನ್ನು ಬಯಲಿಗೆಳೆಯುತ್ತೇವೆ

ಇಂತಹ ನಾಟಕ, ದುಷ್ಟ ನಾಟಕ ಕರ್ನಾಟಕದಲ್ಲಿ ನಡೆಯುವುದಿಲ್ಲ ಎನ್ನುವುದನ್ನು ತೋರಿಸಲು ಈ ಕಾರ್ಯಕ್ರಮ ನಡೆಯುತ್ತಿದೆ ಎಂದ ಬೊಮ್ಮಾಯಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಗರಣಗಳನ್ನು ಬಯಲಿಗೆಳೆಯುವುದಾಗಿ ಘೋಷಿಸಿದರು.

ಕರ್ನಾಟಕದ ಜನ ನಿಮ್ಮ ಭ್ರಷ್ಟಾಚಾರವನ್ನು ನೋಡಿದ್ದಾರೆ. ದೊಡ್ಡಬಳ್ಳಾಪುರದಿಂದ ಆರಂಭವಾದ ಜನಸ್ಪಂದವನ್ನು ದಮ್‌ ಇದ್ದರೆ, ತಾಕತ್ತಿದ್ದರೆ ನಿಲ್ಲಿಸುವ ಪ್ರಯತ್ನ ಮಾಡಿ. ಕರ್ನಾಟಕದ ಹಳ್ಳಿ ಹಳ್ಳಿಗೂ ಇದು ಹಬ್ಬಲಿದೆ. ಭ್ರಷ್ಟಾಚಾರದಿಂದ ಕೂಡಿಟ್ಟ ನಿಮ್ಮ ಹಣ ಪ್ರಯೋಜನಕ್ಕೆ ಬರುವುದಿಲ್ಲ. ನಿಮ್ಮ ಬಂಡವಾಳ, ನಿಮ್ಮ ಹಣದ ಬಂಡವಾಳ ಬಯಲಾಗುತ್ತದೆ. ಎಲ್ಲ ಹಗರಣಗಳೂ ಸ್ವಲ್ಪ ದಿನದಲ್ಲೇ ಬಯಲಾಗುತ್ತವೆ. ನಿಮ್ಮ ನಿಜ ಸ್ವರೂಪವನ್ನು ಜನರ ಮುಂದೆ ಇಡುತ್ತೇವೆ. ಆಗ ಜನರು ನಿಮ್ಮನ್ನು ಛೀ ಥೂ ಎನ್ನುತ್ತಾರೆ ಎಂದರು.

Exit mobile version