Site icon Vistara News

Murder Case : ತಮ್ಮನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಂದ ಅಣ್ಣ

Brothers murder for property

ದೇವನಹಳ್ಳಿ: ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಅಕ್ಷರಶಃ ಸತ್ಯವಾಗಿದೆ. ಕಾರು‌ ಹಾಗೂ ಜಮೀನು ವಿಚಾರಕ್ಕೆ ಅಣ್ಣ-ತಮ್ಮಂದಿರ ನಡುವೆ ಗಲಾಟೆಯಾಗಿದ್ದು, ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೋಖರೆ ಗ್ರಾಮದಲ್ಲಿ ಘಟನೆ ನಡೆದಿದೆ. ಅಣ್ಣನೇ ತಮ್ಮನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಜಗದೀಶ್ ಮೃತ ದುರ್ದೈವಿ. ಅಣ್ಣ ವೆಂಕಟೇಶ್‌ ಕೊಲೆ ಆರೋಪಿ ಆಗಿದ್ದಾನೆ.

ಕಳೆದ ಮೂರು ದಿನಗಳ ಹಿಂದೆ ಕಾರು ಹಾಗೂ ಜಮೀನು ವಿಚಾರಕ್ಕೆ ಜಗದೀಶ್‌ ಹಾಗೂ ವೆಂಕಟೇಶ್‌ ನಡುವೆ ಜಗಳ ನಡೆದಿತ್ತು. ಮುಂಚೆ ಒಟ್ಟಿಗೆ ಇದ್ದಾಗ ತಮ್ಮನ ಹೆಸರಲ್ಲಿ ಕಾರು ಖರೀದಿ ಮಾಡಿದ್ದರು. ಆದರೆ ಮದುವೆಯಾದ ನಂತರ ಅಣ್ಣ -ತಮ್ಮಂದಿರು ಬೇರೆ ಬೇರೆಯಾಗಿದ್ದರು.

ಇತ್ತ‌ ಒಟ್ಟಾಗಿ ಖರೀದಿಸಿದ್ದ ಕಾರನ್ನು ತಮ್ಮ ಜಗದೀಶ್‌ನೇ ಓಡಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಕಾರು ಕೊಡುವಂತೆ ಅಣ್ಣ‌ ವೆಂಕಟೇಶ್ ಕೇಳಿದ್ದ. ಆಗ ಜಗದೀಶ್‌ ಕಾರು ಕೊಡಲ್ಲ ಎಂದಿದ್ದ. ಈ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಕಿರಿಕ್ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಗಲಾಟೆಯು ವಿಕೋಪಕ್ಕೆ ತಿರುಗಿತ್ತು.

ಇದನ್ನೂ ಓದಿ: Murder Case : ಕುಡುಕ ಅಳಿಯನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಮಾವ

ಜಗದೀಶ್‌ ಕಾರು ತೆಗೆಯಲು ಹೋದಾಗ, ವೆಂಕಟೇಶ್‌ ಕೈಯಲ್ಲಿ ಪೆಟ್ರೋಲ್ ಹಿಡಿದು ಅಡ್ಡ ನಿಂತಿದ್ದ. ಆದರೂ ಜಗದೀಶ್‌ ಜಗ್ಗದೇ ಇದ್ದಾಗ ಕೈನಲ್ಲಿದ್ದ ಪೆಟ್ರೋಲ್ ತಮ್ಮನ ಮೇಲೆ ಹಾಕಿದ್ದ. ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಜಗದೀಶ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಆಸ್ವತ್ರೆಯಲ್ಲಿ ಜಗದೀಶ್‌ ಮೃತಪಟ್ಟಿದ್ದಾರೆ.

ಅಂತ್ಯ ಸಂಸ್ಕಾರಕ್ಕೂ ಅಡ್ಡಿ ಮಾಡಿದ ಅಣ್ಣನ ಕುಟುಂಬಸ್ಥರು

ಜಮೀನು ಭಾಗವಾಗುವವರೆಗೂ ಅಂತ್ಯ ಸಂಸ್ಕಾರ ಮಾಡಲ್ಲ‌ ಎಂದು ವೆಂಕಟೇಶ್‌ ಕುಟುಂಬಸ್ಥರು ಪಟ್ಟು ಹಿಡಿದ ಘಟನೆಯು ನಡೆದಿದೆ. ಸಾವಿನ ಮನೆಯಲ್ಲೇ ಆಸ್ತಿಗಾಗಿ ಕಿತ್ತಾಡಿದ್ದಾರೆ. ಸದ್ಯ ದೇವನಹಳ್ಳಿ ಪೊಲೀಸರು ಆರೋಪಿ ವೆಂಕಟೇಶ್‌ನನ್ನು ಬಂಧಿಸಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version