Site icon Vistara News

777 ಚಾರ್ಲಿ | ಸಿನಿಮಾ ನೋಡಿ ಕಾಲಿವುಡ್‌ ನಿಂದ ಸ್ಯಾಂಡಲ್‌ವುಡ್‌ಗೆ ಬಂತು ಕಾಲ್‌!

777 ಚಾರ್ಲಿ

ಬೆಂಗಳೂರು: ರಕ್ಷಿತ್‌ ಶೆಟ್ಟಿ ಅಭಿನಯಿಸಿದ, ಕಿರಣ್‌ ರಾಜ್‌ ನಿರ್ದೇಶನದ “777 ಚಾರ್ಲಿʼʼಯನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಜಗತ್ತಿನಾದ್ಯಂತ ಈ ಚಿತ್ರ ಪ್ರದರ್ಶನಗೊಳ್ಳುತ್ತಿದ್ದೆ. ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್‌ ಮಾಡಿದೆ.

ಈ ಚಿತ್ರವನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ವೀಕ್ಷಿಸಿ ಕೊಂಡಾಡಿದ್ದರು. ಸಿನಿಮಾ ನೋಡಿದ ನಂತರ ತಮ್ಮ ಮನೆಯಲ್ಲಿದ್ದ, ಕಳೆದ ವರ್ಷ ಮೃತಪಟ್ಟ ನಾಯಿಯನ್ನು ನೆನಪು ಮಾಡಿಕೊಂಡು ಕಣ್ಣೀರಾಗಿದ್ದರು. ಅಲ್ಲದೆ ಈ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿಯನ್ನೂ ಘೋಷಿಸಿದ್ದರು.

ಇದೇ ರೀತಿ ಅನೇಕ ಗಣ್ಯರು ಈಗಾಗಲೇ ಈ ಸಿನಿಮಾ ನೋಡಿ ಮೆಚ್ಚಿದ್ದಾರೆ. ಈ ಸಾಲಿನಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕೂಡ ಈಗ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಅವರು ಈ ಸಿನಿಮಾವನ್ನು ನೋಡಿ ಖುಷಿ ಪಟ್ಟರಲ್ಲದೆ, ನಟ ರಕ್ಷಿತ್ ಶೆಟ್ಟಿ ಅವರಿಗೇ ಕಾಲ್‌ ಮಾಡಿ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸೂಪರ್ ಸ್ಟಾರ್ ಮೆಚ್ಚುಗೆಯಿಂದ ಈ ಸಿಂಪಲ್‌ ಸ್ಟಾರ್ ರೋಮಾಂಚನಗೊಂಡಿದ್ದು, ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರು 777 ಚಾರ್ಲಿ ಸಿನಿಮಾವನ್ನು ನೋಡಿ ನನಗೆ ಕಾಲ್ ಮಾಡಿ ಮೆಚ್ಚುಗೆಯ ಮಾತುಗಳನ್ನು ಆಡಿದರು. ಇದೊಂದು ನಿರೀಕ್ಷಿಸಿರದ ಅಚ್ಚರಿಯ ಕಾಲ್ ಆಗಿತ್ತು. ಇಂತದ್ದೊಂದು ಟೈಮ್ ನನ್ನ ಜೀವನದಲ್ಲೂ ಬರುತ್ತದೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಇದು ನನ್ನ ಜೀವನದಲ್ಲಿ ನನಗೆ ಸಿಕ್ಕ ದೊಡ್ಡ ಗೌರವವಾಗಿದೆ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಈ ಸಿನಿಮಾ ನಾಯಿ ಮತ್ತು ಮನುಷ್ಯನ ಬಾಂಧವ್ಯವನ್ನು ಹೇಳುವ ಕತೆಯನ್ನು ಹೊಂದಿದೆ. ಇದರ ಮೇಕಿಂಗ್‌, ಕತೆ ಹೇಳಿದ ರೀತಿ ಮತ್ತು ಕ್ಲೈಮೆಕ್ಸ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ಬಹಳವಾಗಿ ಹಿಡಿಸಿದೆಯಂತೆ.

ಇದನ್ನೂ ಓದಿ: 777 ಚಾರ್ಲಿ | ಸನ್ನಿ ನೆನಪಿನಲ್ಲಿ ಚಾರ್ಲಿ ನೋಡಿದ ಸಿಎಂ ಬೊಮ್ಮಾಯಿ

Exit mobile version