Site icon Vistara News

Assault Case : ಬೆಂಗಳೂರಿನಲ್ಲಿ ನಿಲ್ಲದ ರೋಡ್‌ ರೇಜ್‌ ಕಿರಿಕ್‌; ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ

Assault case

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದಲ್ಲ ಎರಡಲ್ಲ ಹತ್ತಾರು ಕಡೆಗಳಲ್ಲಿ ರೋಡ್ ರೇಜ್ ಪ್ರಕರಣಗಳು ನಡೆಯುತ್ತಲೇ ಇವೆ. ಸದ್ಯ ಕಿಡಿಗೇಡಿಯೊಬ್ಬ ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತು ಹಾಕಿ ಅಟ್ಟಹಾಸ (Assault Case) ಮೆರೆದಿದ್ದಾನೆ. ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಹಳ್ಳಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಲಿ ಬಳಿ ನಿನ್ನೆ ಸೋಮವಾರ ರಾತ್ರಿ‌ 10.30ರ ಸುಮಾರಿಗೆ ಘಟನೆ ನಡೆದಿದೆ. ಕಾರು ಅಡ್ಡಗಟ್ಟಿ ಗುಂಡಾ ವರ್ತನೆ ತೋರಿದ ಬೈಕ್ ಸವಾರನೊಬ್ಬ, ಕಾರಿನ ವೈಪರ್ ಕಿತ್ತು ಮುಂಭಾಗದ ಗಾಜಿಗೆ ಕಲ್ಲುಎತ್ತಿಹಾಕಿ ಹೊಡೆದು ಹಾಕಿದ್ದಾನೆ.

ಇತ್ತ ವ್ಯಕ್ತಿಯ ದೌರ್ಜನ್ಯ ಕಂಡು ಕಾರೊಳಗೆ ಇದ್ದ ಮಹಿಳೆ ಮತ್ತು ಮಗು ಕಿರುಚಾಡಿದ್ದಾರೆ. ಅಲ್ಲದೇ ಬೈಕ್ ಸವಾರನ ಗುಂಡಾ ವರ್ತನೆ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಇದೇ ವೇಳೆ ಸ್ಥಳೀಯರು ದರ್ಪ ತೋರುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬೈಕ್ ಸವಾರನನ್ನು ಬೆಳ್ಳಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಅಸಲಿ ಕಾರಣ ಏನು ಎಂಬುದರ ಬಗ್ಗೆ ಇಬ್ಬರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಇಂಡಿಕೇಟರ್‌ ಹಾಕದೆ ಕಾರು ಚಾಲಕ ಯಡವಟ್ಟು

ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಆರೋಪಿ ಅನಿಲ್ ರೆಡ್ಡಿ ಎಂಬಾತನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸರ್ಜಾಪುರ ಮುಖ್ಯ ರಸ್ತೆಯ ದೊಡ್ಡಕನ್ನಹಳ್ಳಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿತ್ತು. ಕಾರು ಚಾಲಕ ಬಲ ತಿರುವ ಪಡೆಯಲು ಇಂಡಿಕೇಟರ್ ಬಳಸದೆ ಏಕಾಏಕಿ ನುಗ್ಗಿದ್ದ. ಈ ವೇಳೆ ಬೈಕ್ ಸವಾರನಿಗೆ ಕಾರ್ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದ. ಸಾವರಿಸಿಕೊಂಡು ಮೇಲೆ ಎದ್ದ ಅನಿಲ್ ರೆಡ್ಡಿ ಕಾರಿನಿಂದ ಕೆಳಗೆಇಳಿಯುವಂತೆ ಚಾಲಕನಿಗೆ ಹೇಳಿದ್ದ. ಆದರೆ ಕಾರಿನಿಂದ ಚಾಲಕ ಕೆಳಗೆ ಇಳಿಯದೆ ಕುಳಿತಿದ್ದರಿಂದ ಕೋಪಗೊಂಡು ಕಲ್ಲಿನಿಂದ ಗ್ಲಾಸ್ ಪುಡಿಗಟ್ಟಿದ್ದ. ಘಟನೆ ಸಂಬಂಧ ಕಾರು ಚಾಲಕನಿಂದ ಬೆಳ್ಳಂದೂರು ಠಾಣೆಗೆ ದೂರು ದೂರಿನ ಹಿನ್ನಲೆ ಕೇಸ್ ದಾಖಲಾಗಿತ್ತು. ಇದೀಗ ಎಫ್ಐಆರ್ ದಾಖಲಿಸಿ ಅನಿಲ್ ರೆಡ್ಡಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Rayara Aradhane 2024 : ಏಕಾಏಕಿ ಸುರಿದ ಮಳೆ; ಭಕ್ತರಿಗೆ ಮಠದ ಪ್ರಾಕಾರದಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟ ಮಂತ್ರಾಲಯ ಶ್ರೀಗಳು

ಕಾರು ಅಡ್ಡಗಟ್ಟಿ ಗಲಾಟೆ

ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣವು ಮುಂದುವರಿದಿದ್ದು, ಬೈಕ್‌ನಲ್ಲಿ ಬಂದವರು ಕಾರನ್ನು ಚೇಸ್ ಮಾಡಿ ಅಡ್ಡಗಟ್ಟಿ ಗಲಾಟೆ‌ ಮಾಡಿದ್ದಾರೆ. ಜಿತಿನ್ ರಾಜ್ ಎಂಬುವವರು ತಮ್ಮ ಕಾರಲ್ಲಿ ಗೆಳೆಯನ ಜತೆ ಇಂದಿರಾನಗರದ ಗೆಳೆಯನ ಮನೆಗೆ ಹೋಗುತ್ತಿದ್ದರು. ಈ ವೇಳೆ ಸಿಗ್ನಲ್ ವೇಳೆ ಅಡ್ಡ ಬಂದು ಮೂರ್ನಾಲ್ಕು ಕಿಲೋ ಮೀಟರ್ ಕಾರನ್ನು ಫಾಲೋ ಮಾಡಿದ್ದಾರೆ. ನಂತರ ಇಂದಿರಾನಗರದ ಬಳಿ ಪಲ್ಸರ್ ಬೈಕಲ್ಲಿ ಓವರ್ ಟೇಕ್ ಮಾಡಿ, ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಆರೋಪಿಗಳು ಕಾರು ಅಡ್ಡಗಟ್ಟುವ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಚಾಲಕ ಜಿತಿನ್ ರಾಜ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ವ್ಹೀಲಿಂಗ್‌ ಚಾಳಿ ಮುಂದುವರಿಸಿದ ಸವಾರ

ಬೆಂಗಳೂರಿನಲ್ಲಿ ವ್ಹೀಲಿಂಗ್‌ ಹಾವಳಿ ಮಿತಿ ಮೀರಿದೆ. ಆರ್.ಟಿ.ನಗರ ಸಂಚಾರಿ ಪೊಲೀಸರು, ಮೂರು ಬಾರಿ ಬಂಧಿಸಿ ವ್ಹೀಲಿಂಗ್‌ ಮಾಡದಂತೆ ಎಚ್ಚರಿಕೆ ನೀಡಿದ್ದರೂ, ಮತ್ತೆ ಅದೆ ಚಾಳಿ ಮುಂದುವರಿಸಿದ್ದಾನೆ. ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದಾಗ, ನಾನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದರೆ ಹಣ ಬರುತ್ತೆ ಎಂದಿದ್ದ. ತಿಂಗಳಿಗೆ ಬೈಕ್ ವ್ಹೀಲಿಂಗ್ ಮಾಡಿ ಸಾವಿರಗಟ್ಟಲೆ ಸಂಪಾದನೆ ಮಾಡುತ್ತೆನೆ. ನನಗೆ ಏನು ಕೆಲಸವಿಲ್ಲ ,ಬೈಕ್ ವ್ಹೀಲಿಂಗ್‌ ಮಾಡಿದರೆ ಹಣ ಬರುತ್ತೆ. ದಯವಿಟ್ಟು ನನ್ನ ಬಿಟ್ಟು ಬಿಡಿ ಎಂದಿದ್ದ. ಬಂಧಿಸಿ ದಂಡ ಹಾಕಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಬೈಕ್‌ ಸವಾರ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾನೆ.

ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್‌ಗೆ ಹಿಗ್ಗಾಮುಗ್ಗ ಥಳಿತ

ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ಸಮೀಪ ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಫುಡ್‌ ಡೆಲಿವರಿ ಬಾಯ್‌ಗೆ ನಾಲ್ಕೈದು ಮಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸೌತ್ ಎಂಡ್ ಸರ್ಕಲ್ ಸಿಗ್ನಲ್ ಬಳಿಯೇ‌ ಮನಸೋ ಇಚ್ಚೆ ಹಲ್ಲೆ ಮಾಡಿದ್ದು, ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನೂ ಘಟನೆ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಬಿಎಂಟಿಸಿ ಬಸ್‌ನಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಮೊಬೈಲ್‌ನಲ್ಲಿ ಗಲಾಟೆ ವಿಡಿಯೋ ಸೆರೆಯಾಗಿದೆ. ಸದ್ಯ ಹೊಡದಾಟದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version