Site icon Vistara News

Assault Case: ಸಚಿವರ ಮನೆ ಮುಂದೆಯೇ ಅಮಾನುಷ ಕೃತ್ಯ, ಹಲವಾರು ಬಾರಿ ಕಾರು ಹತ್ತಿಸಿ ರೌಡಿಶೀಟರ್ ಕೊಲೆ ಯತ್ನ!

rowdy sheeter sunil

ಬೆಂಗಳೂರು: ರಾಜಧಾನಿಯಲ್ಲಿ ರೌಡಿಗಳ ಪುಂಡಾಟಿಕೆ ಹಾಗೂ ಮಾರಕ ಕೃತ್ಯಗಳು ಮಿತಿ ಮೀರಿದ್ದಕ್ಕೆ ಇನ್ನೊಂದು ಉದಾಹರಣೆಯಾಗಿ, ಸಚಿವರೊಬ್ಬರ ಮನೆ ಮುಂದೆಯೇ ಅಮಾನುಷವಾದ ಘಟನೆ ನಡೆದಿದೆ.

ರೌಡಿಗಳು ತಮ್ಮ ಸ್ನೇಹಿತನ ಮೇಲೆ ಹಲವಾರು ಬಾರಿ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇದು ನಡೆದಿರುವುದು ಸಚಿವೆ ಶಶಿಕಲಾ ಜೊಲ್ಲೆ ಅವರ ಮನೆಯ ಮುಂದೆಯೇ. ಬೆಳ್ಳಂಬೆಳಗ್ಗೆ ನಡೆದ ಈ ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ.

ಮಾರ್ಚ್ 21ರ ಮುಂಜಾನೆ 5.30ರಿಂದ 6 ಗಂಟೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೈಗ್ರೌಂಡ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಗಗನ್ ಶರ್ಮಾ ಎಂಬಾತನ ಮೇಲೆ ಆತನ ಸ್ನೇಹಿತರೇ ಆದ ಸುನೀಲ್ ಕುಮಾರ್, ಅರುಣ್, ಕೃಷ್ಣ ಎಂಬವರು ಈ ವಿಕೃತಿ ಮೆರೆದಿದ್ದಾರೆ.

ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನೀಲ್ ಕುಮಾರ್ ಹಾಗೂ ಗಗನ್‌ ನಡುವೆ ಆಸ್ತಿ ವಿಚಾರಕ್ಕಾಗಿ ಮನಸ್ತಾಪ ಉಂಟಾಗಿತ್ತು. ಮಾರ್ಚ್ 20ರಂದು ರಾತ್ರಿ 10 ಗಂಟೆಗೆ ಮಾತನಾಡಬೇಕು ಎಂದು ಗಗನ್‌ನನ್ನು ಸುನಿಲ್‌ ಫ್ರೇಜರ್ ಟೌನ್ ಬಳಿ ಕರೆಸಿಕೊಂಡಿದ್ದ. ಅಲ್ಲಿಂದ ಕಾರಿನಲ್ಲಿ ಕೂರಿಸಿಕೊಂಡು ಸಿಟಿ ರೌಂಡ್ಸ್ ಹಾಕಿದ್ದು, 21ರ ಬೆಳಗ್ಗೆ ಜಯಮಹಲ್ ರಸ್ತೆ ಬಳಿ ಕಾರು ನಿಲ್ಲಿಸಿದ್ದಾರೆ. ಕಾರಿನ ಒಳಗೇ ಗಲಾಟೆ ಮಾಡಿಕೊಂಡಿದ್ದು, ಸುನೀಲ್ ಸೇರಿ ಮೂವರಿಂದ ಗಗನ್ ಮೇಲೆ ಹಲ್ಲೆ ನಡೆದಿದೆ. ದೊಣ್ಣೆ, ಕೈಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಕೆಳಗೆ ತಳ್ಳಿ ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಗಗನ್ ಕಾಲು, ಪಕ್ಕೆಲಬು ಮುರಿದಿದ್ದು, ಕಣ್ಣು, ಮುಖ, ಕೈಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ರೌಡಿಶೀಟರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸ್ಥಳೀಯರು ಜೆಸಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಸಿ ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆರೋಪಿ ಸುನೀಲ್‌ನನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆದಿದೆ.

ಇದನ್ನೂ ಓದಿ: Murder Case: ಕಾವೇರಿಪಟ್ಟಣಂ ಬಳಿ ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನ ಕೊಲೆ

Exit mobile version