Site icon Vistara News

Assault Case: ಕುಡಿದು ರಾಜಕೀಯ ಮಾತಾಡಿದ, ಸ್ನೇಹಿತರಿಂದಲೇ ಬುರುಡೆ ಒಡೆಸಿಕೊಂಡ!

assault case amrithahalli

ಬೆಂಗಳೂರು: ಮದ್ಯಪಾನ ಮಾಡಿದ ಬಳಿಕ ಆ ಕಿಕ್‌ನಲ್ಲಿ ʼಪಾಲಿಟಿಕ್ಸ್’ ಮಾತಾಡಿದರೆ ಏನಾಗುತ್ತದೆ ಗೊತ್ತೆ? ಬುರುಡೆ ಬಿಚ್ಚಿಸಿಕೊಂಡು ಆಸ್ಪತ್ರೆ ಸೇರಬೇಕಾಗುತ್ತದೆ. ಬೆಂಗಳೂರಿನ ಅಮೃತಹಳ್ಳಿಯಲ್ಲಿ ಅಂಥದೊಂದು ಘಟನೆ (Assault Case) ನಡೆದಿದೆ.

ಅಮೃತಹಳ್ಳಿಯಲ್ಲಿರುವ ಈಶ್ವರ ದೇವಸ್ಥಾನದ ಬಳಿ ಇರುವ ಕೊಠಡಿಯಲ್ಲಿ ಈ ಘಟನೆ ನಡೆದಿದೆ. ತನ್ನಿಂದ ಪಾರ್ಟಿ ಪಡೆದು ಕಂಠಮಟ್ಟ ಬಿಯರ್‌ ಕುಡಿದ ಸ್ನೇಹಿತರೇ ರಾಜಕೀಯದ ವಿಚಾರ ಬಂದಾಗ ದುಷ್ಮನ್‌ಗಳಾಗಿ ಬದಲಾಗಿದ್ದಾರೆ! ರಂಗನಾಥ್‌ ಎಂಬಾತ, ಪಾರ್ಟಿ ಕೊಡಿಸಿದ ತಪ್ಪಿಗೆ ರೂಮೇಟ್‌ಗಳಿಂದಲೇ ಬುರುಡೆ ಬಿಚ್ಚಿಸಿಕೊಂಡು ಆಸ್ಪತ್ರೆ ಪಾಲಾಗಿದ್ದಾನೆ.

ಜೊಮ್ಯಾಟೋದಲ್ಲಿ ಡೆಲಿವರಿ ಕೆಲಸ ಮಾಡಿಕೊಂಡಿರುವ ರಂಗನಾಥ್ ಎಂಬಾತ ರೂಂ ಮಾಡಿಕೊಂಡು ಸ್ನೇಹಿತರ ಜೊತೆ ಇದ್ದಾನೆ. ಒಂದು ವಾರದ ಹಿಂದೆ ಗಂಡು ಮಗು ಆಯ್ತು ಎಂಬ ಖುಷಿಗೆ ಸ್ನೇಹಿತರಿಗೆ ಪಾರ್ಟಿ ಕೊಡಿಸಿದ್ದ. ಡಿಜೆ ಬಾರ್‌ನಲ್ಲಿ ಬಿಯರ್ ತೆಗೆದುಕೊಂಡು ತನ್ನ ರೂಂಗೆ ಹೋಗಿ, ಮಧುಸೂಧನ್, ಮನೋಜ್ ಹಾಗು ಪ್ರಸಾದ್ ಎಂಬ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಕುಳಿತಿದ್ದ.

ಕಿಕ್ ಏರುತ್ತಿದ್ದಂತೆ ಮಾತು ರಾಜಕೀಯದ ಕಡೆ ಹೊರಳಿತ್ತು. ಸ್ನೇಹಿತರು ಕಾಂಗ್ರೆಸ್ ಪಕ್ಷದ ಪರವಾಗಿ ಮಾತಾಡಿದ್ದರೆ, ರಂಗನಾಥ್‌ ಬಿಜೆಪಿಯ ಪರವಾಗಿ ವಾದ ಮಾಡಿದ್ದ. ಮಾತಿಗೆ ಮಾತು ಬೆಳೆದು, ಬಿಜೆಪಿ ಪರವಾಗಿ ಮಾತಾಡ್ತಿಯಾ ಎಂದು ಬಿಯರ್ ಬಾಟಲ್‌ನಲ್ಲಿ ಕುತ್ತಿಗೆ ಹಾಗು ತಲೆಗೆ ಹೊಡೆದಿದ್ದರು. ತೀವ್ರ ರಕ್ತಸ್ರಾವ ಹಿನ್ನಲೆಯಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ರಂಗನಾಥ್‌ನನ್ನು ದಾಖಲು ಮಾಡಲಾಗಿದೆ. ಹಲ್ಲೆ ಸಂಬಂಧ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: Crime News: ಕೆಆರ್‌ಎಸ್‌ ಹಿನ್ನೀರಿನಲ್ಲಿ ಯುವತಿಯ ಸುಟ್ಟ ಶವ ಪತ್ತೆ, ಸಜೀವ ದಹನ?

Exit mobile version