Site icon Vistara News

Bangalore bandh: ಆತ್ಮಹತ್ಯೆ ಯತ್ನ, ಶವದಂತೆ ಮಲಗಿ ಪ್ರತಿಭಟನೆ, ರಕ್ತದಲ್ಲಿ ಕಾವೇರಿ, ಒಳಉಡುಪಿನಲ್ಲಿ ಹೋರಾಟ!

Cauvery High drama at Freedom park

ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ ಬೆಂಗಳೂರು ಬಂದ್‌ (Bangalore Bandh) ಹೋರಾಟದ ಕಿಚ್ಚಿನ ಜತೆಗೆ ಹಲವಾರು ಹೈಡ್ರಾಮಾಗಳಿಗೆ (High drama) ಸಾಕ್ಷಿಯಾಗಿದೆ. ಜಲಸಂರಕ್ಷಣಾ ಸಮಿತಿ (Jala Samrakshana Samiti) ಕರೆ ನೀಡಿದ ಬಂದ್‌ನ ಪ್ರಧಾನ ಪ್ರತಿಭಟನೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park) ನಡೆಯುತ್ತಿದೆ. ಅಲ್ಲಿ ಹಲವಾರು ಹೈಡ್ರಾಮಾಗಳು ನಡೆಯುತ್ತಿವೆ.

ಬೆಂಗಳೂರಿನ ನಾನಾ ಭಾಗಗಳಲ್ಲಿ ಸಂಘಟನೆಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲಿ ಪೊಲೀಸರು ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ಫ್ರೀಡಂ ಪಾರ್ಕ್‌ಗೆ ತಂದು ಬಿಡಲಾಗುತ್ತಿದೆ. ಅಲ್ಲಿ ಇಡೀ ದಿನ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಪ್ರತಿಭಟನಾಕಾರ

ಫ್ರೀಡಂ ಪಾರ್ಕ್‌ನ ಬಳಿ ಪ್ರತಿಭಟನಾಕಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಹಸಿರು ಹಾಲು ಹಾಕಿದ್ದ ವ್ಯಕ್ತಿ ಶಾಲಿನಿಂದಲೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಈ ನಡುವೆ, ಕಾರ್ಯಕರ್ತರು ಕೂಡಾ ಆತನ ರಕ್ಷಣೆಗೆ ಬಂದರು. ಈತ ನಿಜಕ್ಕೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದನೇ? ಅಥವಾ ಡ್ರಾಮಾ ಸೃಷ್ಟಿ ಮಾಡಿದನೇ ಎನ್ನುವುದು ಸ್ಪಷ್ಟವಾಗಿಲ್ಲ.

ಶವದಂತೆ ಮಲಗಿ ಪ್ರತಿಭಟನೆ

ಫ್ರೀಡಂ ಪಾರ್ಕ್‌ನಲ್ಲಿ ಕನ್ನಡ ಪರ ಸಂಘಟನೆಗಳು ಶವದಂತೆ ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ರೈತರನ್ನು ಶವದಂತೆ ನೋಡುತ್ತಿದೆ ಎಂದು ಬಿಂಬಿಸಲು ಶವದಂತೆ ಮಲಗಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಸರಕಾರವೇ ಸತ್ತು ಮಲಗಿದೆ ಎಂಬುದರ ಸಂಕೇತವೂ ಇದಾಗಿದೆ.

ಈ ನಡುವೆ, ಕೆಲವು ಪ್ರತಿಭಟನಾಕಾರರು ಬಟ್ಟೆ ಬಿಚ್ಚಿ ಒಳ ಉಡುಪಿನಲ್ಲಿ ಪ್ರತಿಭಟನೆ ನಡೆಸಲು ಮುಂದಾದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ಸಿಗಲಿಲ್ಲ.

ರಕ್ತದಲ್ಲಿ ಕಾವೇರಿ ನಮ್ಮದು ಎಂದು ಬರೆದ ಹೋರಾಟಗಾರರು

ಈ ನಡುವೆ, ಕೆಲವು ಪ್ರತಿಭಟನಾಕಾರರು ʻʻರಕ್ತ ಕೊಟ್ಟೇವು ನೀರು ಬಿಡಲ್ಲʼʼ ಎಂದು ಘೋಷಣೆ ಕೂಗಿದರು. ರಕ್ತದಿಂದಲೇ ನೆಲದಲ್ಲಿ ಕಾವೇರಿ ನಮ್ಮದು ಎಂದು ಬರೆದರು. ತಮ್ಮ ಬಟ್ಟೆಗಳಲ್ಲೂ ಕಾವೇರಿ ನಮ್ಮದು ಎಂದು ಬರೆದುಕೊಂಡರು.

ಕೆಆರ್‌ಎಸ್‌ ಡ್ಯಾಂಗೂ ಜಿಗಿಯೋಕೂ ಸಿದ್ದ

ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಕರ್ನಾಟಕ ಬಂದ್ ಆಗೋದರ ಒಳಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ಇಲ್ಲದಿದ್ದರೆ KRS ಡ್ಯಾಂ ಗೆ ಜಿಗಿಯೋಕು ಸಿದ್ಧ ಎಂದು ಘೋಷಣೆ ಕೂಗಿದರು. ಪ್ರಾಣ ಕೊಡ್ತೀವಿ ಆದ್ರೆ ಕಾವೇರಿ ಬಿಡಲ್ಲ ಅಂತಾ ಪ್ರತಿಭಟನಾಕಾರರು ಕಿಚ್ಚು ತೋರ್ಪಡಿಸಿದರು.

ಮಸಿ ಬಳಿಯಲು ಬಂದವರು ಪೊಲೀಸರ ವಶಕ್ಕೆ

ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಮ್ಮ ಕರವೇ ಸಂಘಟನೆಯ 30 ಜನರು ಪ್ರತಿಭಟನೆಗೆ ಮುಂದಾದರು. ಆದರೆ, ಪೊಲೀಸರು ಅವರನ್ನು ತಡೆದರು.

ನಮ್ಮ ಕರವೇಯ ಜಯರಾಜ್ ನಾಯ್ಡು ನೇತೃತ್ವದಲ್ಲಿ ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದು, ಅವರನ್ನು ಪೊಲೀಸರು ಮನವೊಲಿಸಿ ಕಳಹಿಸಿದರು. ಅವರ ಜತೆ ಆಸರೆ ಫೌಂಡೇಷನ್‌ ಆಶ್ರಮದವರೂ ಇದ್ದಾರೆ. ಇವರು ತಮಿಳುನಾಡು ಬಸ್‌ಗಳಿಗೆ ಕಪ್ಪು ಮಸಿ ಬಳಿಯಲು ಬಂದಿದ್ದರು.

ಇದನ್ನೂ ಓದಿ: Bangalore Bandh : 13 ವಿಮಾನ ಸಂಚಾರ ಕ್ಯಾನ್ಸಲ್‌, ಮೆಟ್ರೋ ಫುಲ್‌ ಖಾಲಿ, ಬಿಎಂಟಿಸಿ ಬಸ್‌ಗಳಿವೆ, ಜನರೇ ಇಲ್ಲ

Exit mobile version