Site icon Vistara News

Bangalore Bandh : ಶುಕ್ರವಾರ ಇಡೀ ಕರ್ನಾಟಕ ಬಂದ್‌; ಸೆಕ್ಷನ್‌ 144 ಹಾಕಿದ್ರೆ ಹುಷಾರ್‌ ಎಂದು ಗುಡುಗಿದ ವಾಟಾಳ್‌

Vataka Nagaraj Karnataka Bandh

ಬೆಂಗಳೂರು: ಮಂಗಳವಾರ ನಡೆದ ಬೆಂಗಳೂರು ಬಂದ್‌ನ್ನು (Bangalore Bandh) ಸರ್ಕಾರ ಪೊಲೀಸ್‌ ಬಲ ಪ್ರಯೋಗದ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಆದರೆ ಸೆಪ್ಟೆಂಬರ್‌ 29ರಂದು ನಡೆಯಲಿರುವ ಕನ್ನಡದ ಒಕ್ಕೂಟ ಕರೆ ನೀಡಿರುವ ಅಖಿಲ ಕರ್ನಾಟಕ ಬಂದ್‌ನ್ನು (Karnataka Bandh) ತಡೆಯಲು ಯತ್ನಿಸಿದರೆ ಹುಷಾರ್‌ ಎಂದು ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌ (Vatal Nagaraj) ಸರ್ಕಾರವನ್ನು ಎಚ್ಚರಿಸಿದ್ದಾರೆ.

ಅವರು ಮಂಗಳವಾರ ನಡೆದ ಬೆಂಗಳೂರು ಬಂದ್‌ ನಡುವೆಯೇ ತಮ್ಮ ತಂಡವನ್ನು ಕೂಡಿಕೊಂಡು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆದರೆ, ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಇದೂ ಸೇರಿದಂತೆ ಹೋರಾಟಗಾರರ ಹಕ್ಕನ್ನು ಕಸಿಯಲಾಗಿದೆ ಎಂದು ಅವರು ಸಂಜೆ ಆಪಾದಿಸಿದರು.

ರಾಜ್ಯ ಸರ್ಕಾರ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ವಿಧಿಸಿ ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಮಾರ್ಗ ಕಂಡುಕೊಂಡಿದೆ. ಆದರೆ, ಶುಕ್ರವಾರ ಈ ತಂತ್ರವನ್ನು ಪ್ರಯೋಗಿಸಿದರೆ ಎಚ್ಚರಿಕೆ ಎಂದು ಹೇಳಿದರು ವಾಟಾಳ್‌ ನಾಗರಾಜ್‌

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿರುದ್ಧ ಸೆ. 27ರ ಬುಧವಾರ ಕನ್ನಡ ಪರ ಸಂಘಟನೆಗಳು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಪ್ರತಿಭಟನೆ ನಡೆಸಲಿವೆ. ಶುಕ್ರವಾರ ಸಂಪೂರ್ಣ ಕರ್ನಾಟಕ ಬಂದ್‌ ಆಗಲಿದೆ ಎಂದು ಅವರು ಹೇಳಿದರು. ವಾಟಾಳ್ ನಾಗರಾಜ್, ಕನ್ನಡ ಹೋರಾಟಗಾರರ ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್ ಸೇರಿದಂತೆ 50ಕ್ಕೂ ಅಧಿಕ ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಲಾಗಿದೆ.

ಇದನ್ನೂ ಓದಿ: Bangalore Bandh : ಬೆಂಗಳೂರು ಬಂದ್‌ ಸಕ್ಸಸ್‌; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ

ಶುಕ್ರವಾರ ಏನಿರುತ್ತೆ ಏನಿರಲ್ಲ: ವಾಟಾಳ್‌ ಕೊಟ್ಟ ಲಿಸ್ಟ್‌

-ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ಬಸ್, ಓಲಾ, ಉಬರ್, ಟ್ಯಾಕ್ಸಿ, ಆಟೋ ಗೂಡ್ಸ್ ವಾಹನ ಸೇವೆ ಇರುವುದಿಲ್ಲ
-ಶುಕ್ರವಾರ ಮಾಲ್, ಹೋಟೆಲ್, ರೆಸ್ಟೊರೆಂಟ್, ಮಾಲ್, ಮಲ್ಟಿಪ್ಲೆಕ್ಸ್
-ಯಶವಂತಪುರ, ದಾಸನಪುರ ಎಪಿಎಂಸಿ ಮಾರುಕಟ್ಟೆ, ಕೆ.ಆರ್‌ ಮಾರ್ಕೆಟ್‌ ಬಂದ್‌
– ಅಂಗಡಿ ಮಳಿಗೆಗಳು, ಕೈಗಾರಿಕೆಗಳು ಬಂದ್.

ವಾಟಾಳ್‌ ನಾಗರಾಜ್‌ ನೇತೃತ್ವದ ಬಂದ್‌ಗೆ ಮಂಗಳವಾರದ ಬಂದ್‌ಗೆ ಕರೆ ಕೊಟ್ಟ ಸಂಘಟನೆಗಳಲ್ಲದೆ ಹೋಟೆಲ್‌ ಅಸೋಸಿಯೇಷನ್‌, ಓಲಾ ಊಬರ್‌ ಚಾಲಕರ ಸಂಘಟನೆ, ಆದರ್ಶ ಆಟೋ ಸಂಘಟನೆಗಳು ಬೆಂಬಲ ನೀಡಿವೆ. ಹೀಗಾಗಿ ಬಂದ್ ಇನ್ನಷ್ಟು ಪ್ರಖವಾಗುವ ನಿರೀಕ್ಷೆ ಇದೆ. ಆದರೆ, ರಾಜ್ಯದ ಎಲ್ಲ ಭಾಗಗಳಲ್ಲಿ ಯಶಸ್ವಿಯಾಗುವುದು ಡೌಟ್‌. ಕರಾವಳಿ, ಉತ್ತರ ಕರ್ನಾಟಕದಲ್ಲಿ ಕಾವೇರಿ ಹೋರಾಟದ ಕಾವು ಅಷ್ಟಾಗಿ ತಟ್ಟುವುದಿಲ್ಲ. ಆದರೆ, ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಭಾಗದಲ್ಲಿ ಹೆಚ್ಚು ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ಮಧ್ಯ ಪ್ರವೇಶಕ್ಕೆ ಆಗ್ರಹ

ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯದ ಸಂಸದರು ಸಂಪೂರ್ಣ ನಾಯಪತ್ತೆಯಾಗಿದ್ದಾರೆ. ಅವರಿಗೆ ಕಾವೇರಿ ನೀರು ಬೇಡ್ವಾ ಎಂದು ಕೇಳಿದರು. ಶುಕ್ರವಾರ ಸಂಪೂರ್ಣ ಬಂದ್‌ಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.

Exit mobile version