Site icon Vistara News

Cabinet meeting : ಒಂದೇ ಲಕ್ಷ ಕೊಟ್ರೆ ಸಾಕು, ಬಡವರಿಗೆ ಮನೆ; ಇದು ಕಾಂಗ್ರೆಸ್‌ನ 6ನೇ ಗ್ಯಾರಂಟಿ

Zameer ahmad Khan

ಬೆಂಗಳೂರು: ಪ್ರಧಾನ‌ ಮಂತ್ರಿ ಆವಾಸ್‌ ಯೋಜನೆಯಡಿ (Pradhana Mantri Awas Yojana) ಬಡವರಿಗೆ ಮನೆ ಹಂಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ (State Government) ನಿರ್ಧರಿಸಿದ್ದು, ಫಲಾನುಭವಿಗಳು (Beneficiaries) ಕೇವಲ ಒಂದು ಲಕ್ಷ ರೂ.ಯನ್ನು ಪಾವತಿಸಿ ಮನೆಯನ್ನು ಪಡೆಯಬಹುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmad Khan) ಹೇಳಿದ್ದಾರೆ.

ಗುರುವಾರ ನಡೆದ ಮಹತ್ವದ ಸಂಪುಟ ಸಭೆಯ (Cabinet Meeting) ಬಳಿಕ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಎಚ್‌.ಕೆ. ಪಾಟೀಲ್‌ ಅವರ ಉಪಸ್ಥಿತಿಯಲ್ಲಿ ವಸತಿ ಸಚಿವ ಜಮೀರ್‌ ಖಾನ್‌ ಅವರು ಈ ಘೋಷಣೆಯನ್ನು ಮಾಡಿದರು. ಇದು ಕಾಂಗ್ರೆಸ್‌ ಚುನಾವಣೆಗೆ ಮುನ್ನ ಘೋಷಿಸದೇ ಇರುವ ಆರನೇ ಗ್ಯಾರಂಟಿ ಎಂದು ಪರಿಗಣಿಸಬಹುದು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸಿ ಇದನ್ನು ಪ್ರಕಟಿಸಲಾಯಿತು. ಹಾಗಿದ್ದರೆ ಈ ಯೋಜನೆಯ ಬಗ್ಗೆ ಸಚಿವ ಜಮೀರ್‌ ಖಾನ್‌ ಹೇಳಿದ್ದೇನು?

  1. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 2015ರಲ್ಲಿ 1,80,253 ಮನೆಗಳು ಮಂಜೂರಾಗಿದ್ದವು.
  2. ಆದರೆ, 2015ರಿಂದ 2023ರ ವರೆಗೂ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಒಂದೇ ಒಂದು ಮನೆಯನ್ನು ಕೊಡಲು ಸಾಧ್ಯವಾಗಿಲ್ಲ.
  3. 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇದ್ದಾಗ ಪ್ರತಿ ವರ್ಷವೂ ಒಂದಷ್ಟು ಮನೆಗಳಿಗೆ ಮಂಜೂರಾತಿ ನೀಡಲಾಗಿತ್ತು. 2018ರಿಂದ ಒಂದೇ ಒಂದು ಮನೆಯನ್ನು ಮಂಜೂರಾತಿ ನೀಡಲಾಗಿಲ್ಲ.
  4. ಆವಾಸ್‌ ಯೋಜನೆಯ ಪ್ರಕಾರ ಫಲಾನುಭವಿಗಳು 4.5 ಲಕ್ಷ ರೂ. ಪಾವತಿಸಬೇಕು. ಕೇಂದ್ರ ಸರಕಾರ 1.5 ಲಕ್ಷ ರೂ. ನೀಡುತ್ತದೆ, ರಾಜ್ಯ ಸರಕಾರ ಒಂದು ಲಕ್ಷ ರೂ. ನೀಡಬೇಕು.
  5. ಆದರೆ, ರಾಜ್ಯ ಸರ್ಕಾರ ಇದುವರೆಗೂ ತನ್ನ ಪಾಲಿನ ಹಣ ಬಿಡುಗಡೆ ಮಾಡಿಲ್ಲ. ಜತೆಗೆ ಹಲವಾರು ಫಲಾನುಭವಿಗಳು 4.5 ಲಕ್ಷ ರೂ. ಕಟ್ಟಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.

ಇದನ್ನೂ ಓದಿ: ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

ಹಾಗಿದ್ದರೆ ಈಗ ಸರ್ಕಾರ ಮಾಡುವುದೇನು?

ಹೊಸ ಯೋಜನೆಯ ಪ್ರಕಾರ ರಾಜ್ಯ ಸರ್ಕಾರ 500 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಹಣ ಬಿಡುಗಡೆಗೆ ಒಪ್ಪಿದ್ದಾರೆ ಎಂದು ಜಮೀರ್‌ ಖಾನ್‌ ಹೇಳಿದರು.

ಈಗ ಮನೆ ಪಡೆಯುವ ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಕಟ್ಟಿದರೆ ಸಾಕು. ಕೇಂದ್ರ ಸರ್ಕಾರ ಒಂದುವರೆ ಲಕ್ಷವನ್ನು ಕೊಡುತ್ತದೆಯಾದರೂ ಈ ಮೊತ್ತವನ್ನು ಅದು ಜಿಎಸ್ಟಿ ಮೂಲಕ ಮರಳಿ ಪಡೆಯುತ್ತದೆ ಎಂದು ಜಮೀರ್‌ ಖಾನ್‌ ಹೇಳಿದರು.

ಮನೆಗಳನ್ನು ಪೂರ್ಣಗೊಳಿಸಲು ಎಷ್ಟು ಹಣ ಬೇಕು?

ರಾಜ್ಯದಲ್ಲಿ 1.8 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿವೆ. ಇದೀಗ ಇವುಗಳನ್ನು ಪೂರ್ಣಗೊಳಿಸಲು 6,170 ಕೋಟಿ ರೂ ಬೇಕಾಗಿದೆ. ಇದರ ಪೈಕಿ 5,403 ಕೋಟಿ ಫಲಾನುಭವಿಗಳ ಮೂಲಕ ಬರಬೇಕಿದೆ.

ರಾಜ್ಯ ಸರ್ಕಾರ ಈಗ 500 ಕೋಟಿ ರೂ. ಬಿಡುಗಡೆ ಮಾಡಿದರೆ, ಅಂತಿಮ ಹಂತದಲ್ಲಿರುವ 48,760 ಮನೆಗಳನ್ನು ಪೂರ್ಣಗೊಳಿಸಬಹುದು ಎಂದು ಅವರು ಹೇಳಿದರು. ಮುಂದಿನ ಹಂತದಲ್ಲಿ ಮತ್ತೊಂದು ಕಂತಿನ ಹಣ ಕೊಡಲು ಸಿಎಂ ಒಪ್ಪಿದ್ದಾರೆ ಎಂದು ಹೇಳಿದರು ಜಮೀರ್‌ ಖಾನ್‌.

ಫಲಾನುಭವಿಗಳು ಈಗ 1 ಲಕ್ಷ ಪಾವತಿಸಿದ ಬಳಿಕ ಮುಂದೆ ಉಳಿದ ಮೊತ್ತವನ್ನು ಪಾವತಿಸಬೇಕೇ ಬೇಡವೇ? ಪಾವತಿಸಬೇಕು ಎಂದಾದರೆ ಅದಕ್ಕೆ ಎಷ್ಟು ಸಮಯಾವಕಾಶ ಇರುತ್ತದೆ ಎಂಬ ಅಂಶಗಳನ್ನು ಜಮೀರ್‌ ಮುಂದೆ ಸ್ಪಷ್ಟಪಡಬೇಕಾಗಿದೆ.

Exit mobile version