Site icon Vistara News

Eshwara Khandre : ನಗರ ಪ್ರದೇಶದ ಅನಧಿಕೃತ ಸ್ವತ್ತುಗಳಿಗೆ ಇನ್ನು ‘ಬಿ’ ಖಾತೆ?

B khata Eshwar Khandre

ಬೆಂಗಳೂರು: ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ನಗರಪಾಲಿಕೆ, ನಗರಸಭೆ ಮತ್ತು ಪುರಸಭೆಯ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳಲ್ಲಿ (Anauthorized layouts), ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣ ಮಾಡಿದ ಕಟ್ಟಡಗಳ ಮಾಲೀಕರು ಮೂಲಭೂತ ಸೌಲಭ್ಯ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬಿ ಖಾತೆ ಮಾನ್ಯತೆ ನೀಡಿ ನಿರ್ವಹಣಾ ಶುಲ್ಕ (maintenance fee) ವಿಧಿಸುವ ಕುರಿತಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಅಧ್ಯಕ್ಷತೆಯ ಉಪಸಮಿತಿಯಲ್ಲಿ ಚರ್ಚಿಸಲಾಯಿತು.

ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ /ನಗರ ಸ್ಥಳೀಯ ಸಂಸ್ಥೆಗಳಿಗೆ ಸಹ ವಿಸ್ತರಣೆ ಮಾಡುವ ಸಂಬಂಧ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ-ಬಾಧಕ ಪರಿಶೀಲಿಸಲು ಸೂಕ್ತ ತೀರ್ಮಾನ ಕೈಗೊಳ್ಳುವ ಸಲುವಾಗಿ ರಚಿಸಲಾಗಿರುವ ಉಪಸಮಿತಿಯ ಸಭೆ ಗುರುವಾರ ವಿಧಾನಸೌಧದ ಕೊಠಡಿ 313ರಲ್ಲಿ ನಡೆಯಿತು. ಈ ಸಭೆಯಲ್ಲಿ ಸಚಿವರುಗಳಾದ ಎಚ್.ಕೆ. ಪಾಟೀಲ್, ಕೃಷ್ಣಬೈರೇಗೌಡ, ರಹೀಂಖಾನ್ ಪಾಲ್ಗೊಂಡಿದ್ದರು.

ಅನಧಿಕೃತ ಆಸ್ತಿಗಳಿಗೆ ಈಗ ತೆರಿಗೆ ವಿಧಿಸುತ್ತಿಲ್ಲ

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಈಶ್ವರ ಖಂಡ್ರೆ, ಪ್ರಸ್ತುತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಸುಮಾರು 20.55 ಲಕ್ಷ ಅಧಿಕೃತ ಆಸ್ತಿಗಳಾಗಿದ್ದು ತೆರಿಗೆ ಪಾವತಿಸುತ್ತಿದ್ದರೆ, ಅನಧಿಕೃತವಾದ 34.35 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುತ್ತಿಲ್ಲ. ಆದರೆ ಆ ಎಲ್ಲ ಸ್ವತ್ತಿಗೂ ನೀರು, ರಸ್ತೆ, ವಿದ್ಯುತ್, ಬೀದಿ ದೀಪ, ಕಸ ವಿಲೇವಾರಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಆಸ್ತಿ ತೆರಿಗೆ ಸಂಗ್ರಹಣೆಯೇ ಮಾರ್ಗವಾಗಿದ್ದು, ಇಂತಹ ಅನಧಿಕೃತ ಕಟ್ಟಡಗಳಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ವಹಿಯಲ್ಲಿ ಖಾತೆ ನೀಡಿ ಆಸ್ತಿ ತೆರಿಗೆ ಸಂಗ್ರಹಿಸುವ ರೀತಿಯಲ್ಲೇ ದಂಡ ಸಹಿತ ಕಟ್ಟಡ ಕಂದಾಯ ಸಂಗ್ರಹಿಸಲು ಶಿಫಾರಸು ಮಾಡುವುದು ಈ ಉಪ ಸಮಿತಿ ಜವಾಬ್ದಾರಿಯಾಗಿದೆ ಎಂದರು.

ಕಾನೂನು ಬದ್ಧ ಮಾರ್ಗದಲ್ಲಿ ನಿವೇಶನ ಲಭಿಸಿದರೆ, ನಕ್ಷೆ ಮಂಜೂರಾತಿ ಪ್ರಕ್ರಿಯೆ ಸರಳವಾದರೆ ಅಕ್ರಮ ಬಡಾವಣೆ, ಕಟ್ಟಡ ನಿರ್ಮಾಣ ತಡೆಯಲು ಸಾಧ್ಯ. ಇನ್ನು ಮುಂದೆ ಅನಧಿಕೃತ ಬಡಾವಣೆ ತಲೆಎತ್ತದಂತೆ ತಡೆಯಲು ಆರ್.ಟಿ.ಸಿ.ಯ 11 ಕಾಲಂನಲ್ಲಿ ಅಕ್ರಮ ಬಡಾವಣೆ ಎಂದು ನಮೂದಿಸಿದರೆ, ಅದು ಉಪ ನೋಂದಣಾಧಿಕಾರಿಗಳಿಗೆ ಕಾವೇರಿ ತಂತ್ರಾಂಶದಲ್ಲಿ ನೇರ ಸಂಪರ್ಕಿತವಾಗುವಂತೆ ಮಾಡಿದರೆ ಇಂತಹ ಅಕ್ರಮ ಬಡಾವಣೆ ನಿವೇಶನಗಳ ಮಾರಾಟ ತಡೆಯಬಹುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸಲಹೆ ಮಾಡಿದರು.

ಬಡವರ ಮನೆ ವಿಚಾರದಲ್ಲಿ ಮಾನವೀಯತೆ ಇರಲಿ

ಇ ಖಾತಾ ಆಧಾರದ ಮೇಲೆ ಮಾತ್ರ ನೋಂದಣಿ ಆಗಬೇಕು. ತಮ್ಮ ನಿವೇಶನಕ್ಕಿಂತ ಹೆಚ್ಚಿನ ಅಳತೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಯಾರೇ ಕಟ್ಟಡ ನಿರ್ಮಿಸಿದ್ದರೆ ಖಾತೆಯಲ್ಲಿ ಮಾಲೀಕರ ಹೆಸರು ಮತ್ತು ಸರ್ಕಾರ ಎಂದು ನಮೂದಾಗುವಂತೆ ಮಾಡಬೇಕು ಮತ್ತು ಬಡವರು, ದಲಿತರು, ದುರ್ಬಲರು ಕಟ್ಟಿರುವ ಮನೆಗಳ ವಿಚಾರದಲ್ಲಿ ತೆರಿಗೆ ವಿಧಿಸುವಾಗ ಮಾನವೀಯತೆಯನ್ನೂ ತೋರಬೇಕು ಎಂಬ ಸಲಹೆ ನೀಡಿದರು ಹಿರಿಯ ಸಚಿವ ಎಚ್.ಕೆ. ಪಾಟೀಲ್.

ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಈಶ್ವರ ಖಂಡ್ರೆ, ಅಕ್ರಮ-ಸಕ್ರಮ ಯೋಜನೆ ಜಾರಿ ಮಾಡಲು ಪ್ರಸಕ್ತ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ಇದು ಸುಪ್ರೀಂಕೋರ್ಟ್ ನಲ್ಲಿದೆ. ಇನ್ನು ಮುಂದೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಆಸ್ಪದ ನೀಡುವುದಿಲ್ಲ. ಈಗಾಗಲೇ ಹತ್ತಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಮನೆಗಳಿಗೆ ದಂಡ ವಿಧಿಸಿ ಸಕ್ರಮಗೊಳಿಸುವ ಕುರಿತಂತೆ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

2011ರ ಜನಗಣತಿಯಂತೆ ರಾಜ್ಯದಲ್ಲಿ ಸುಮಾರು 6.11 ಕೋಟಿ ಜನಸಂಖ್ಯೆ ಇದ್ದು, ಈ ಪೈಕಿ ಶೇ.39ರಷ್ಟು ಜನರು ನಗರ ಪ್ರದೇಶದಲ್ಲಿ ವಾಸ ಮಾಡುತ್ತಾರೆ. ಕಳೆದ 12 ವರ್ಷದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಳವಾಗಿದೆ. ನಗರ ಪಾಲಿಕೆ, ನಗರಸಭೆ, ಪುರಸಭೆಗಳಿಗೆ ಈ ಎಲ್ಲ ವಸತಿ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಸವಾಲಾಗಿದ್ದು, ಅವುಗಳಿಗೆ ಆರ್ಥಿಕ ಬಲ ನೀಡಲು ಅನಧಿಕೃತ ಕಟ್ಟಡಗಳಿಗೂ ನಿರ್ವಹಣಾ ಶುಲ್ಕ ವಿಧಿಸುವ ಅಗತ್ಯವನ್ನು ಈಶ್ವರ ಖಂಡ್ರೆ ಪ್ರತಿಪಾದಿಸಿದರು.

ಸಭೆಯಲ್ಲಿ ಹಾಜರಿದ್ದ ಹಿರಿಯ ಅಧಿಕಾರಿಗಳಾದ ಮುನೀಶ್ ಮೌದ್ಗಿಲ್, ನಿತೇಶ್ ಅವರಿಗೆ ಒಂದು ವಾರದೊಳಗೆ ಅನಧಿಕೃತ ಕಟ್ಟಡಗಳಿಗೆ ನಿರ್ವಹಣಾ ಶುಲ್ಕ ರೂಪದಲ್ಲಿ ತೆರಿಗೆ ವಿಧಿಸುವ, ಬಡಾವಣೆಯ ಮಂಜೂರಾತಿ, ನಕ್ಷೆ ಮಂಜೂರಾತಿ ಪ್ರಕ್ರಿಯೆಯನ್ನು ಸರಳೀಕರಿಸುವ ಮತ್ತು ನಕ್ಷೆ ಉಲ್ಲಂಘಿಸಿ ಅಥವಾ ನಕ್ಷೆ ಮಂಜೂರಾತಿಯೇ ಇಲ್ಲದ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಹಾಕುವ ಕುರಿತಂತೆ ಕರಡು ಸಿದ್ಧಪಡಿಸಿ ಮುಂದಿನ ಗುರುವಾರ ಸಭೆಯಲ್ಲಿ ಮಂಡಿಸುವಂತೆ ಸೂಚಿಸಲಾಯಿತು.

Exit mobile version