Site icon Vistara News

Hindi Imposition : ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಕರವೇ; ಕಪ್ಪು ದಿನವನ್ನಾಗಿ ಆಚರಣೆ

Hindi Imposition

ಹಿಂದಿ ಹೇರಿಕೆ (Hindi Imposition) ವಿರುದ್ಧ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಜ್ಜಾಗಿದೆ. ಶನಿವಾರ ಹಿಂದಿ ದಿವಸ ಆಚರಣೆ ವಿರೋಧಿಸಿ ಪ್ರತಿಭಟನೆಗೆ ಕರೆಕೊಟ್ಟಿದ್ದಾರೆ. ಹಿಂದಿ ದಿವಸ್ ಆಚರಣೆ ಹೆಸರಲ್ಲಿ ಅನ್ಯಭಾಷಿಕರ ಮೇಲೆ ಹಿಂದಿ ಹೇರುವ ಹುನ್ನಾರ ಇದೆ. ಹಿಂದಿ ಹೇರಿಕೆ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಕರವೇ ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ಕರವೇಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್‌) ಕರವೇ ಅಧ್ಯಕ್ಷ ಟಿಎ ನಾರಾಯಣ ಗೌಡ ನೇತೃತ್ವದಲ್ಲಿ ಹಿಂದಿ ದಿವಸ್ ಅನ್ನು ಕರಾಳ ದಿನವನ್ನಾಗಿ ಆಚರಣೆ ಮಾಡಲಿದ್ದಾರೆ. ಭಾರತದಲ್ಲಿ 22 ಆಡಾಳಿತಾತ್ಮಕ‌ ಭಾಷೆಗಳು ಇವೆ. ಎಲ್ಲ ಭಾಷೆಗಳನ್ನು ಮಾತನಾಡುವುದರಿಂದ ಭಾರತ ದೇಶವಾಗಿದೆ. ಅಂತಹ ಎಲ್ಲಾ ಭಾಷೆಗಳನ್ನು ತುಳಿತ್ತಕ್ಕೆ ಒಳಪಡಿಸಲು, ಕೇಂದ್ರ ಸರ್ಕಾರ ಹಿಂದಿ ಸಪ್ತಾಹ, ಹಿಂದಿ ದಿವಸ್ ಅನ್ನುವ ಕಾರ್ಯಕ್ರಮಗಳನ್ನು ಮಾಡುತ್ತಿದೆ.

ದೇಶದ ಹಲವು ಉದ್ಯೋಗಗಳ ಪರಿಕ್ಷೆಯಲ್ಲಿ ಹಿಂದಿಯನ್ನು ಬಲವಂತವಾಗಿ ಹೇರಿದ್ದಾರೆ. ಈಗ ಹಿಂದಿ ದಿವಸ್ ಮೂಲಕ ನಮ್ಮ ಮೇಲೆ ಹೇರಿಕೆ ನಡೆಸುತ್ತಿದ್ದಾರೆ. ಬಲವಂತವಾಗಿ ಹೇರಿಕೆ ಮಾಡುವ ಮೂಲಕ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಾ. ಹೀಗಾಗಿ ಇಂದು ಹಿಂದಿ ಕಾರ್ಯಕ್ರಮವನ್ನು ಧಿಕ್ಕರಿಸಿ ನಾವು ಕಪ್ಪು ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಕರವೇ ನಾರಾಯಣ ಗೌಡ ಆಕ್ರೋಶ ಹೊರಹಾಕಿದರು.

ಪ್ರಾದೇಶಿಕ ಭಾಷೆಗಳನ್ನು ಮುಗಿಸುವ ಹುನ್ನಾರ

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕರವೇ ಕಾರ್ಯಕರ್ತರು ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೆಪ್ಟೆಂಬರ್ 14 ರಂದು ಎಲ್ಲಾ ರಾಜ್ಯಗಳಲ್ಲಿ ಹಿಂದಿ ದಿವಸ್ ಆಚರಿಸಲು ಹೊರಟಿದೆ. ದೇಶದಾದ್ಯಂತ ಹಿಂದಿ ದಿವಸ್, ಹಿಂದಿ ಸಪ್ತಾಹ ಆಚರಿಸಲು ಹೊರಟಿದೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವ ಅರಿವೇ ಇಲ್ಲ. ಕೋಟಿ ಕೋಟಿ ಖರ್ಚು ಮಾಡಿ ಹಿಂದಿಯನ್ನು ವೈಭವೀಕರಿಸಲಾಗುತ್ತಿದೆ. ದೇಶದಲ್ಲಿ ಅಧಿಕೃತ ರಾಷ್ಟ್ರ ಭಾಷೆ ಯಾವುದೂ ಇಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

ಪ್ರಾದೇಶಿಕ ಭಾಷೆಗಳನ್ನು ಮುಗಿಸಲು ಹುನ್ನಾರ ಮಾಡಿದ್ದಾರೆ. ಒಕ್ಕೂಟ, ಅಖಂಡ ಭಾರತ ಉಳಿಯಬೇಕಾದರೆ ಎಲ್ಲಾ ಭಾಷೆ , ಆಚಾರ ವಿಚಾರ ಉಳಿಯಬೇಕು. ಕೆಲವು ರಾಜ್ಯಗಳಲ್ಲಿ ಹಿಂದಿ ಭಾಷಿಕರ ಸಂಖ್ಯೆ ಜಾಸ್ತಿ ಇದೆ ಎಂಬ ಮಾತ್ರಕ್ಕೆ ಘೋಷಣೆ ಸರಿಯಲ್ಲ. ಇದು ಭಾರತ ಒಕ್ಕೂಟಕ್ಕೆ ಧಕ್ಕೆ ತರುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ ಭಾಷೆಯಿಂದಲೇ ವಿಭಜನೆ ಆಯ್ತು, ಇದನ್ನ ಮರೆಯಬಾರದು, ಹಿಂದಿ ಹೇರಿಕೆ ಒಪ್ಪಲ್ಲ. 2300 ವರ್ಷ ಇತಿಹಾಸ ಇರೋದು ಕನ್ನಡ ಭಾಷೆ ಹಾಗೂ ಹಿಂದಿಗೆ 650 ವರ್ಷ ಮಾತ್ರ ಇತಿಹಾಸ ಇದೆ. ಎಂಟು ಜ್ಞಾನಪೀಠ ಪ್ರಶಸ್ತಿ ಸಿಕ್ಕ ಕನ್ನಡ ರಾಷ್ಟ್ರ ಭಾಷೆ ಯಾಕಾಗಬಾರದು. ಇದು ಅಪಾಯಕಾರಿ ಅಂತಾ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇವೆ. ಹಿಂದಿ ಹೇರಿಕೆಯನ್ನ ವಾಪಾಸ್ ಪಡೆಯಬೇಕು ಅಂತಾ ಮೋದಿಗೆ ಆಗ್ರಹ ಮಾಡುತ್ತೇವೆ. ಇದನ್ನೂ ಮುಂದುವರೆಸಿದರೆ ಕರ್ನಾಟಕ ಪೂರ್ತಿ ಹೋರಾಟ ಮಾಡಲಾಗುತ್ತದೆ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version