Site icon Vistara News

Kannada Movies | ಒಗ್ಗಟ್ಟಿಗೆ ಸಾಕ್ಷಿಯಾದ ಸ್ಯಾಂಡಲ್‌ವುಡ್‌; ಇದು ತಾರೆಗಳ ಸಮಾಗಮ!

Kannada Movies

ಯಶಸ್ವಿ ದೇವಾಡಿಗ, ಬೆಂಗಳೂರು
ಸ್ಯಾಂಡಲ್‌ವುಡ್‌ ವ್ಯಾಪ್ತಿ ವಿಸ್ತಾರಗೊಂಡಿದೆ. ಪ್ಯಾನ್‌ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿವೆ. ದೇಶ-ವಿದೇಶಗಳಲ್ಲಿ ಕನ್ನಡ ಚಲನಚಿತ್ರಗಳಿಗೆ (Kannada Movies) ಜನಮನ್ನಣೆ ಸಿಗುತ್ತಿವೆ. ಈ ನಡುವೆ ಚಂದನವನದಲ್ಲಿ ಸ್ಟಾರ್‌ ಇಸಂಗಳು ದೂರಾಗುತ್ತಿರುವ ಎಲ್ಲ ಸೂಚನೆಗಳೂ ಸ್ಪಷ್ಟವಾಗುತ್ತಿದ್ದು, ಒಬ್ಬರ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್‌ ನಟರು ಬೆನ್ನುತಟ್ಟುವ ಪರಿಪಾಠ ಆರಂಭವಾಗಿದೆ. ಈ ಮೂಲಕ ಸಿನಿಮಾ ಗೆಲ್ಲುತ್ತಿದೆ.

ಕೊರೊನಾ ನಂತರದ ದಿನಗಳಲ್ಲಿ ಸಾಕಷ್ಟು ಸಾಲು ಸಾಲು ಸಿನಿಮಾಗಳು ತೆರೆಗೆ ಅಪ್ಪಳಿಸಿವೆ. ಕೆಜಿಎಫ್‌ 2ರ ನಂತರ ಸಿನಿಮಾಗಳು ಒಂದರ ಮೇಲೊಂದು ಕಾಂಪಿಟೇಷನ್‌ನಲ್ಲಿ ಬಿಡುಗಡೆಗೊಂಡವು. ಒಟಿಟಿಗೆ ಮಾತ್ರ ಸೀಮಿತವಾಗಿದ್ದ ಪ್ರೇಕ್ಷಕರು ನಂತರದಲ್ಲಿ ಹಿಟ್‌ ಸಿನಿಮಾಗಳು ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಜನ ಸಹ ಥಿಯೇಟರ್‌ನತ್ತ ಮುಖ ಮಾಡುತ್ತಿದ್ದಾರೆ.

ಇದೀಗ ಸ್ಯಾಂಡಲ್‌ವುಡ್‌ ಸಿನಿಮಾಗಳ ಪ್ರಮೋಷನ್‌ ಭರದಿಂದ ಸಾಗಿದೆ. ಆದರೆ, ಈ ನಡುವೆ ಸೆಲೆಬ್ರಿಟಿಗಳು ತಮ್ಮ ಸಿನಿಮಾ ಮಾತ್ರವಲ್ಲದೆ ಇತರ ನಟ, ನಟಿಯರ ಸಿನಿಮಾಗಳನ್ನು ಪ್ರಮೋಟ್‌ ಮಾಡುವುದರ ಮೂಲಕ ಟ್ರೆಂಡ್‌ ಸೆಟ್ಟಿಂಗ್‌ಗೆ ನಾಂದಿ ಹಾಡುತ್ತಿದ್ದಾರೆ. ಸಿನಿಮಾಗಳ ಡೇಟ್‌ ಅನೌನ್ಸ್‌ ಆದ ಕೂಡಲೇ ಸೆಲೆಬ್ರಿಟಿಗಳು ತಮ್ಮ ಸೋಷಿಯಲ್‌ ಮೀಡಿಯಾ ಮೂಲಕ ಅವುಗಳ ಬಗ್ಗೆ ಮಾಹಿತಿ ಶೇರ್‌ ಮಾಡಿಕೊಂಡು, ಶುಭಾಶಯ ಕೋರುವ ಪರಿಪಾಠ ನಡೆಯುತ್ತಿದ್ದು, ಇಂತಹ ಹಲವಾರು ಉದಾಹರಣೆಗಳನ್ನು ಕಾಣಬಹುದಾಗಿದೆ.

ಹಲವು ವೇದಿಕೆಯಲ್ಲಿ ಸ್ಯಾಂಡಲ್‌ವುಡ್‌ ತಾರೆಗಳ ಸಮಾಗಮ

UI ಸಿನಿಮಾ

ಈ ಹಿಂದೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಯುಐ ಚಿತ್ರದ ಮುಹೂರ್ತದಲ್ಲಿ ಹಲವು ನಟರು ಭಾಗಿಯಾಗಿದ್ದರು. ನಟ ಕಿಚ್ಚ ಸುದೀಪ್‌ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ಶಿವರಾಜ್‌ಕುಮಾರ್‌ ಕ್ಯಾಮರಾ ಆನ್‌ ಮಾಡಿದ್ದರು. ಡಾಲಿ ಧನಂಜಯ, ವಸಿಷ್ಠ ಸಿಂಹ, ಕಬ್ಜ ನಿರ್ದೇಶಕ ಆರ್‌. ಚಂದ್ರು ಸಹ ಮುಹೂರ್ತದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು.

ಇದನ್ನೂ ಓದಿ | Liger | ಲೈಗರ್ ಸಿನಿಮಾದ ಥೀಮ್ ಸಾಂಗ್ ರಿಲೀಸ್‌: ಸಖತ್‌ ಮಾಸ್‌ ಸಾಂಗ್‌ ಎಂದ ಫ್ಯಾನ್ಸ್‌

ವಿಕ್ರಾಂತ್‌ ರೋಣ

ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ವಿಕ್ರಾಂತ್‌ ರೋಣ (Vikrant Rona Movie) ಟ್ರೈಲರ್‌ ಲಾಂಚ್‌ ಇವೆಂಟ್‌ನಲ್ಲಿಯೂ ಕನ್ನಡ ಚಿತ್ರರಂಗದ ನಟ-ನಟಿಯರು ಭಾಗಿಯಾಗಿದ್ದರು. ವಿಶೇಷವಾಗಿ ಇವೆಂಟ್‌ನಲ್ಲಿ ರವಿಚಂದ್ರನ್‌ ಹಾಗೂ ಶಿವಣ್ಣ ಮುಖ್ಯ ಅತಿಥಿಗಳಾಗಿದ್ದು, ರವಿಚಂದ್ರನ್‌ ವೇದಿಕೆ ಮೇಲೆ ಬರುವಾಗ ಕಿಚ್ಚ ಸುದೀಪ್‌ ಅವರನ್ನು ಕರೆದುಕೊಂಡು ವೇದಿಕೆ ಮೇಲೆ ಬಂದಿದ್ದರು. ಟ್ರೈಲರ್‌ ಲಾಂಚ್‌ ವೇಳೆ ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ, ಡಾಲಿ ಧನಂಜಯ್‌ ಹಾಗೂ ಅರವಿಂದ್‌ ರಮೇಶ್‌ ಸೇರಿದಂತೆ ಹಲವು ನಟರು ಭಾಗಿಯಾಗಿದ್ದರು.

ಗಾಳಿಪಟ-2

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಗಾಳಿಪಟ-2 (Gaalipata 2) ರಾಜ್ಯಾದ್ಯಂತ ಆಗಸ್ಟ್‌ 12ರಂದು ತೆರೆಗೆ ಬರಲು ಸಜ್ಜಾಗಿದೆ. ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್ ಆಯೋಜನೆ ಮಾಡಿದ್ದು, ‘ಕರುನಾಡ ಚಕ್ರವರ್ತಿ’ ಶಿವರಾಜ್‌ಕುಮಾರ್, ‘ರಿಯಲ್ ಸ್ಟಾರ್’ ಉಪೇಂದ್ರ , ರಮೇಶ್ ಅರವಿಂದ್ ಸೇರಿದಂತೆ ಅನೇಕರು ಸಮಾರಂಭದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದರು. ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಅವರು ʻಪ್ರೀತಿ ಪುಸ್ತಕದ ಬದನೆಕಾಯಿ, ಸ್ನೇಹ ಪುಸ್ತಕದ ಬೆಂಡೆಕಾಯಿʼ ಡೈಲಾಗ್ ಹೇಳಿ ರಂಜಿಸಿದ್ದರು.

ತ್ರಿವಿಕ್ರಮ ಸಿನಿಮಾ

ಕ್ರೇಜಿ ಪುತ್ರನ ಚೊಚ್ಚಲ ಸಿನಿಮಾದ ಗ್ರ್ಯಾಂಡ್‌ ವೇದಿಕೆಯಲ್ಲಿ ವಿಕ್ರಮ್ ಅಲಿಯಾಸ್ ತ್ರಿವಿಕ್ರಮ ಸಿನಿಮಾ (Trivikrama Movie) ಪ್ರೀ ರಿಲೀಸ್ ಇವೆಂಟ್‌ ಲಾಂಚ್‌ಗೆ ಸ್ಯಾಂಡಲ್‌ವುಡ್‌ ದಂಡೇ ಬಂದಿತ್ತು. ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌, ಡಾಲಿ ಧನಂಜಯ್‌, ನಿರ್ದೇಶಕ ಪ್ರೇಮ್‌, ರಕ್ಷಿತಾ ಪ್ರೇಮ್‌, ಶರಣ್‌, ನೀನಾಸಂ ಸತೀಶ್‌, ಲೂಸ್ ಮಾದ ಯೋಗಿ, ಅಜೇಯ್‌ ರಾವ್‌, ಡಾರ್ಲಿಂಗ್‌ ಕೃಷ್ಣ, ತಾರಾ, ಶೃತಿ, ವಸಿಷ್ಠ ಸಿಂಹ, ನಿಶ್ವಿಕಾ ನಾಯ್ಡು ಹಾಗೂ ಮನುರಂಜನ್‌ ಸೇರಿದಂತೆ ಇನ್ನೂ ಹಲವರು ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಭಾಗಿಯಾಗಿದ್ದರು. ಅಲ್ಲದೆ ಹಲವಾರು ಪೋಸ್ಟರ್‌ ಹಾಗೂ ಟ್ರೈಲರ್‌ ಮತ್ತು ಹೊಸ ತಂಡಗಳಿಗೆ ಸ್ಯಾಂಡಲ್‌ವುಡ್‌ ತಾರಾ ವರ್ಗ ಸಾಥ್‌ ನೀಡುತ್ತಿದೆ.

ಇದನ್ನೂ ಓದಿ | Kangana Ranaut | ಎಮರ್ಜೆನ್ಸಿ ಸಿನಿಮಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಆಗಿ ಶ್ರೇಯಸ್ ತಲ್ಪಾಡೆ

ಹೀಗೆ ಇತ್ತೀಚೆಗೆ ಹಲವಾರು ದೊಡ್ಡ ದೊಡ್ಡ ನಾಯಕರು ಸೇರಿದಂತೆ ಹೊಸ ಸಿನಿಮಾಗಳಿಗೂ ಬೆನ್ನುತಟ್ಟಿ ಪ್ರೋತ್ಸಾಹ ನೀಡುವ ಮೂಲಕ ಸ್ಯಾಂಡಲ್‌ವುಡ್‌ ನಟರು ಔದಾರ್ಯವನ್ನು ತೋರುವುದಲ್ಲದೆ, ಇತರರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ. ಈ ಕಾರಣದಿಂದ ಕನ್ನಡ ಸಿನಿಮಾ ಜಗತ್ತು ಮತ್ತಷ್ಟು ಬೆಳೆಯಲು ಪೂರಕ ವಾತಾವರಣಕ್ಕೆ ಸಾಕ್ಷಿಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

Exit mobile version