Site icon Vistara News

Karnataka Bandh : ವಾಟಾಳ್‌ ನಾಗರಾಜ್‌ ಬುರ್ಕಾದಲ್ಲಿ ಪ್ರತ್ಯಕ್ಷ; ಸಿದ್ದರಾಮೇಶ್ವರ ವಿರುದ್ಧ ಕೆಂಡಾಮಂಡಲ

Vatal Nagaraj in burga

ಬೆಂಗಳೂರು: ಕಾವೇರಿ ನೀರು ಬಿಡುಗಡೆ (Cauvery water dispute) ವಿರುದ್ಧ ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿರುವ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮುಂದಾಳುವಾಗಿರುವ ಕನ್ನಡ ಚಳುವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ (Vatal Nagaraj) ಅವರು ಬುರ್ಕಾ ಧರಿಸಿ (Vatal Nagaraj appears in burqa) ಹೋರಾಟದ ಕಣಕ್ಕೆ ಇಳಿದಿದ್ದಾರೆ. ಇದರ ಜತೆಗೆ ಅವರು ಪ್ರತಿಭಟನಾನಿರತರನ್ನು ಬಂಧಿಸಿ ಫ್ರೀಡಂ ಪಾರ್ಕ್‌ಗೆ ಅಟ್ಟುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿದರು. ಸಿದ್ದರಾಮಯ್ಯ, ಪರಮೇಶ್ವರ್‌ ಮತ್ತು ಡಿಕೆಶಿ ಅವರನ್ನು ಸಿದ್ದರಾಮೇಶ್ವರ ಎಂದು ಕರೆದು ಅಣಕಿಸಿದರು.

ಶುಕ್ರವಾರ ತಮ್ಮ ನಿವಾಸದ ಬಳಿ ಬುರ್ಕಾ ಧರಿಸಿ, ಕೈಯಲ್ಲಿ ಬಿಂದಿಗೆ ಹಿಡಿದು ಪ್ರತ್ಯಕ್ಷರಾದ ಅವರು, ಬಂದ್‌ಗೆ ಸರಕಾರ ಅಸಹಕಾರ ವ್ಯಕ್ತಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʻʻಪೊಲೀಸರು ಬಂದ್‌, ಪ್ರತಿಭಟನೆ ಮಾಡದಂತೆ ಒತ್ತಡ ಹೇರುತ್ತಿದ್ದಾರೆ. ಇಡೀ ರಾಜ್ಯವೇ ಪೊಲೀಸ್‌ ರಾಜ್ಯವಾಗಿದೆ. ಪೊಲೀಸರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆʼʼ ಎಂದು ವಾಟಾಳ್‌ ಆಕ್ರೋಶ ವ್ಯಕ್ತಪಡಿಸಿದರು.

ʻʻಬೆಂಗಳೂರು ಒಂದಕ್ಕೆ‌ 50 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಇಡೀ ಕರ್ನಾಟಕಕ್ಕೆ ಲಕ್ಷಾಂತರ ಪೊಲೀಸ್ ಹಾಕಿ ಬಂದ್ ಮಾಡ್ತಿದ್ದಾರೆ. ನಾವು ಕಾವೇರಿ ಹೋರಾಟಕ್ಕೆ ಬಂದ್ ಮಾಡಿದ್ರೆ, ಸರ್ಕಾರ ಪೊಲೀಸ್ ಹಾಕಿ ಬಂದ್ ಮಾಡಿದೆ. ಅಷ್ಟಾದರೂ ಬಂದ್ ಇಡೀ ರಾಜ್ಯಾದ್ಯಂತ ಯಶಸ್ಸು ಕಂಡಿದೆ. ಇಡೀ ನಾಡಿನ ಜನತೆಯನ್ನು ಈ ಮೂಲಕ ಅಭಿನಂದಿಸ್ತೇನೆ. ಅವರ ಪ್ರೀತಿ ಅಭಿಮಾನಕ್ಕೆ ಆಭಾರಿ. ಅವರೆಲ್ಲ ಸೇರಿ ಅಖಂಡ ಕರ್ನಾಟಕ ಹೆಸರನ್ನು ಉಳಿಸಿದ್ದದಾರೆ, ಗೌರವ ತಂದಿದ್ದಾರೆʼʼ ಎಂದು ಹೇಳಿದರು.

ಜನರು ಇಷ್ಟೊಂದು ಸಹಕಾರ ನೀಡಿದರೂ ಸರ್ಕಾರ ಮಾತ್ರ ಅರ್ಥ ಮಾಡಿಕೊಳ್ಳಲಿಲ್ಲ. ಎಲ್ಲೆಂದ್ರಲ್ಲಿ ಬಂಧನ ಮಾಡ್ತಿದ್ದಾರೆ. ತ.ನಾ ಪೊಲೀಸರು ಕೂಡಾ ರಸ್ತೆಯಲ್ಲಿ ತಡೆಯುತ್ತಿದ್ದಾರೆ. ನಮ್ಮ‌ ಪೊಲೀಸರು ನಮ್ಮನ್ನೇ ಬಂಧನ ಮಾಡ್ತಿದ್ದಾರೆ ಎಂದು ಆಕ್ರೋಶದಿಂದ ಹೇಳಿದರು.

ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ

ʻʻನಮ್ಮಲ್ಲಿ ಅನೇಕರು ಹೋರಾಟದ ಹಿನ್ನೆಲೆ ಇದ್ದಾರೆ. ಒಂದು ಕಾರಣ ಇಟ್ಟುಕೊಂಡು ಹೋರಾಡುತ್ತಿದ್ದಾರೆ. ನಮ್ಮ ಕರವೇಯ ಪ್ರವೀಣ್ ಶೆಟ್ಟಿ ಅವರನ್ನು ಬಂಧನ ಮಾಡಿದ್ದಾರೆ. 144 ಸೆಕ್ಷನ್ ಹಾಕಿ ಮೆರವಣಿಗೆ ತಡೆಯುತ್ತಿದ್ದಾರೆ. ಇದನ್ನ ಪೊಲೀಸ್ ರಾಜ್ಯ ಮಾಡಿರೋದು ಸರಿಯಲ್ಲ. ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ, ಪರಮೇಶ್ವರ್‌, ಡಿ.ಕೆ. ಶಿವಕುಮಾರ್‌ ಮೇಲೆ ಫುಲ್‌ ಗರಂ

ʻʻಸಿಎಂ ಸಿದ್ದರಾಮಯ್ಯ ಅವರು ಹೀಗೆ ಮಾಡಬಾರದಿತ್ತು. ನಾವು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಬೇಕಂತೆ. ಟೌನ್‌ ಹಾಲ್‌ ಪರಿಸರದಲ್ಲಿ ಮಾಡಬಾರದಂತೆ. ಫ್ರೀಡಮ್ ಪಾರ್ಕಿನಲ್ಲಿ ಮಾತ್ರ ಮಾಡಿದ್ರೆ ಮಡೀನಾ, ಟೌನ್ ಹಾಲ್ ನಿಂದ ಮಾಡಿದ್ರೆ ಆಗಲ್ವಾ.? ವಿಶ್ವಸಂಸ್ಥೆ ನಿಮಗೆ ಪರವಾನಗಿ ನೀಡಿದೆಯಾ? ಟೌನ್ ಹಾಲ್ ಮುಂದೆ ಮೆರವಣಿಗೆ ಮಾಡಿದ್ರೆ ಕಾನೂನು.! ಫ್ರೀಡಂ ಪಾರ್ಕಿನಲ್ಲಿ ಏನ್ ಬೇಕಾದ್ರೂ ಮಾಡಬಹುದಾ.?ʼʼ ಎಂದು ಕೇಳಿದರು.

ʻʻಸಚಿವರ ಬಗ್ಗೆ ವಯಕ್ತಿಕವಾಗಿ ಮಾತನಾಡಬಾರದು. ಆದರೂ ಅವರನ್ನು ಪ್ರಶ್ನೆ ಮಾಡಬೇಕಾಗಿದೆ. ಅವರೇನು ಪಾಳೇಗಾರರಾ.? ಮಾನ್ಯ ಗೃಹಮಂತ್ರಿ ಅವರೇ ಯಾವತ್ತು ಹೋರಾಟ ಮಾಡಿದ್ದೀರಿ ನೀವು.? ಪರಮೇಶ್ವರ ದೇವರಾ ನೀವು.? ಶಿವಕುಮಾರ್ ನೀವು ದೇವರ ಮಗ. ಒಂದು ಕಡೆ ಪರಮೇಶ್ವರ. ಮತ್ತೊಂದು ಕಡೆ ಅವರ ಮಗ ಶಿವಕುಮಾರ.! ಇದರ ನಡುವೆ ಸಿದ್ದರಾಮೇಶ್ವರ.!ʼʼ ಎಂದು ಆಕ್ರೋಶದಿಂದ ಹೇಳಿದರು.

ಇದು ಬುರ್ಕಾನೋ, ನ್ಯಾಯದೇವತೆನೋ?

ನಾನು ಇವತ್ತು ವಿಶೇಷ ಬಟ್ಟೆ ತೊಟ್ಟು ಬಂದಿದ್ದೇನೆ. ನಾನು ತೊಟ್ಟಿರೋದನ್ನು ಬುರ್ಕಾ ಅಂತಾಲಾದ್ರೂ ಕರೆಯಬಹುದು. ಅಥವಾ ನ್ಯಾಯ ದೇವತೆ ಅಂತಾಲಾದ್ರೂ ಕರೆಯಬಹುದು. ಇದು ವಿಶೇಷವಾದ ಉಡುಪು. ನಾನು ವಿಭಿನ್ನವಾಗಿ ಹೋರಾಟ ಮಾಡ್ತಿದ್ದೇನೆ. ಹಾಗಾಗಿ ನಾನು ಹೊರಗೆ ಕಾಣಲಿಲ್ಲ. ಬುರ್ಕಾ ಮಹಿಳೆಯರ ವಿಶೇಷ. ಬುರ್ಕಾ ಧರಿಸಿ ಖಾಲಿ ಕೊಡ ಹಿಡಿದ ದೃಶ್ಯ, ಮಹಿಳೆಯರ ಸಂಕಟ. ಇನ್ನೊಂದು ನ್ಯಾಯ ದೇಗುಲದ ದೇವತೆ. ಇನ್ನೊಂದು ಕಡೆ ಯೋಚಿಸಿದರೆ ಇದು ಮಹಿಳೆಯರಿಗೆ ಮಾನ್ಯತೆ‌. 33% ಮಹಿಳೆಯರಿಗೆ ಮಾನ್ಯತೆ ಎಂದು ತಮ್ಮ ವಿಶೇಷ ದಿರಸಿನ ಬಗ್ಗೆ ವಿವರಣೆ ನೀಡಿದರು.

ನನ್ನನ್ನು ಹೇಗೆ ಬಂಧನ ಮಾಡ್ತೀರಿ ಪರಮೇಶ್ವರ?

ʻʻಪರಮೇಶ್ವರ ಅವರು ನನ್ನನ್ನೂ ಬಂಧಿಸಲು ರೆಡಿ ಮಾಡಿದ್ದಾರೆ. ಬಂದ್ ಮಾಡಲು ಅವಕಾಶ ಕೊಡೋದಿಲ್ಲ ತಿದ್ದಾರೆ ಪರಮೇಶ್ವರ. ಪರಮೇಶ್ವರ ಅವಕಾಶ ಕೊಡದಿರಲು ನೀವು ಯಾರು.?ʼʼ ಎಂದು ಕೇಳಿದ ಅವರು, ನಮ್ಮ ಬಂದ್‌ ಪ್ರಧಾನಿ ಮೋದಿಗೆ ತಿಳಿಯಲಿ, ದೇಶಕ್ಕೆ ತಿಳಿಯಲಿ ಎಂದರು.

ಇದನ್ನೂ ಓದಿ: ಯಾರ‍್ರೀ ಈ ವಾಟಾಳ್‌ ನಾಗರಾಜ್?‌ ಅವರು ಹೇಳಿದ್ರೂಂತ ನಾವ್ಯಾಕೆ ಬಂದ್‌ ಮಾಡ್ಬೇಕು?

Exit mobile version