Site icon Vistara News

ತೇಲುತ್ತಿದೆ ಕೆ.ಆರ್‌. ಪುರ: ಸಚಿವ ಭೈರತಿ ಬಸವರಾಜ್‌ ವಿರುದ್ಧ ಕುಮಾರಸ್ವಾಮಿ ಟೀಕಾಸ್ತ್ರ

kr pura rains 2022

ಬೆಂಗಳೂರು: ಸಿನಿಮಾ ದೃಶ್ಯದಲ್ಲಿ ನಾಯಿ ಸತ್ತಿದ್ದಕ್ಕೆ ಕಣ್ಣೀರಿಟ್ಟ ಮುಖ್ಯಮಂತ್ರಿಗಳಿಗೆ ಈಗ ಕಣ್ಣೀರು ಬರುತ್ತಿಲ್ಲ, ಯಾಕೆ? ಮಳೆಯಿಂದ ಆಗುತ್ತಿರುವ ಪ್ರತಿ ಸಾವಿಗೂ ಸರ್ಕಾರವೇ ನೇರ ಹೊಣೆ. ಕೆಆರ್ ಪುರ ವಿಧಾನಸಭಾ ಕ್ಷೇತ್ರವು ನಿರಂತರವಾಗಿ ಮಳೆಯ ಅವಾಂತರಕ್ಕೆ ತುತ್ತಾಗುತ್ತಿದ್ದು, ಎಲ್ಲೆಡೆ ರಾಜಕಾಲುವೆಗಳ ಒತ್ತುವರಿಯ ದೂರು ಕೇಳಿ ಬರುತ್ತಿದೆ ಎಂದು ಕೆ.ಆರ್‌. ಪುರ ಶಾಸಕ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸರಣಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಮೊಸಳೆ ಕಣ್ಣೀರಿನ ಈ ಸೋಗಿನ ಸರ್ಕಾರ ಸಾವಿನ ವ್ಯಾಪಾರ ಮಾಡುತ್ತಿದೆ. ಕೆ.ಆರ್. ಪುರ ವಿಧಾನಸಭಾ ಕ್ಷೇತ್ರವು ನಿರಂತರವಾಗಿ ಮಳೆಯ ಅವಾಂತರಕ್ಕೆ ತುತ್ತಾಗುತ್ತಿದೆ. ಎಲ್ಲೆಡೆ ರಾಜಕಾಲುವೆಗಳ ಒತ್ತುವರಿಯ ದೂರು ಕೇಳಿ ಬರುತ್ತಿದೆ. ಕಳೆದ 9 ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಕ್ಷೇತ್ರಕ್ಕೆ ಅನುದಾನ ಮಂಜೂರಾಗಿದ್ದರೂ ಅಭಿವೃದ್ಧಿ ಕೆಲಸಗಳು ಆಗಿಲ್ಲ.

ಇದನ್ನೂ ಓದಿ | ರಾಷ್ಟ್ರಪತಿ ಪದವಿಗೆ ದೇವೇಗೌಡರು ಆಸಕ್ತಿ ತೋರಿಸಿಲ್ಲ: ಎಚ್‌.ಡಿ. ಕುಮಾರಸ್ವಾಮಿ

ಒಂದು ತಿಂಗಳ ಹಿಂದೆ ಸುರಿದ ಮಳೆಯಿಂದ ಕೆ.ಅರ್. ಪುರ ವಿಧಾನಸಭೆ ಕ್ಷೇತ್ರ ಸ್ವಿಮ್ಮಿಂಗ್ ಪೂಲ್ ಆಗಿತ್ತು. ಸಾಯಿ ಲೇಔಟ್ ನೀರಿನಲ್ಲಿ ತೇಲಿ ಬೆಂಗಳೂರಿನ ಹೆಗ್ಗಳಿಕೆಯನ್ನೇ ಅಣಕಿಸಿತ್ತು. ಇವತ್ತೂ ಅಂಥವೇ ದೃಶ್ಯಗಳು ಆ ಕ್ಷೇತ್ರದಲ್ಲಿ ಮರುಕಳಿಸಿವೆ. ರಾಜಕಾಲುವೆಯಲ್ಲಿ ನತದೃಷ್ಟ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ಗೋಡೆ ಕುಸಿದು ಮಹಿಳೆಯೊಬ್ಬರು ಅಸುನೀಗಿದ್ದಾರೆ. ಕಳೆದ ತಿಂಗಳು ಸುರಿದ ಮಳೆಯಿಂದ ತತ್ತರಿಸಿದ ಕೆ.ಆರ್. ಪುರದಲ್ಲಿ ಭಾರೀ ಹಾನಿ ಆಗಿದ್ದರೂ ಸ್ಥಳೀಯ ಶಾಸಕರೂ ಆಗಿರುವ ನಗರಾಭಿವೃದ್ಧಿ ಸಚಿವರು ಮತ್ತು ಬಿಬಿಎಂಪಿ ತಿಂಗಳಾದರೂ ಎಚ್ಚೆತ್ತುಕೊಂಡಿಲ್ಲ!! ಯಾಕೆ?

ಎಸ್.ಆರ್. ಲೇಔಟ್‌ನಲ್ಲಿನ ಅಪಾರ್ಟ್‌ಮೆಂಟ್‌ಗಳ ಜಲಾವೃತವಾಗಿದೆ. ನೆಲಮಹಡಿ ಸಂಪೂರ್ಣ ಜಲಾವೃತವಾಗಿ, 100 ಕಾರು, 300 ಬೈಕುಗಳು ತೇಲಿವೆ. ನಿವಾಸಿಗಳು ಹೊರ ಬರಲಾಗದೆ ಮನೆಗಳಲ್ಲೇ ಬಂಧಿಗಳಾಗಿದ್ದಾರೆ. ಕೆ.ಆರ್. ಪುರ ಕ್ಷೇತ್ರದಲ್ಲಿ ಬಹುತೇಕ ಅಪಾರ್ಟ್‌ಮೆಂಟ್‌ಗಳ ಹಣೆಬರಹ ಇಷ್ಟೇ ಆಗಿದೆ.

ಕೆ.ಆರ್. ಪುರದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಗೆ ಮಳೆನೀರು ನುಗ್ಗಿ ದಾಖಲೆಗಳು ಸಂಪೂರ್ಣ ನಾಶವಾಗಿವೆ. ಕಂಪ್ಯೂಟರ್‌ಗಳು ನೀರುಪಾಲಾಗಿ, ಈ ಸಾಲಿನ ಎಸ್‌ಎಸ್‌ಎಲ್‌ಸಿ ಮಕ್ಕಳ ದಾಖಲೆಗಳು ಒತ್ತುವರಿ ಆಗಿರುವ ರಾಜಕಾಲುವೆ ಪಾಲಾಗಿವೆ. ಇದು ಬಿಜೆಪಿ ಸರ್ಕಾರದ ವೈಖರಿ!? ಮೇ ಮಳೆಯಲ್ಲಿ ಎರಡು ದಿನ ಜಪಾನ್ ಸುನಾಮಿ ದೃಶ್ಯಗಳನ್ನು ನೆನಪಿಸಿದ ರಾಮಮೂರ್ತಿ ನಗರದ ಚರ್ಚ್ ಮುಂದಿನ ಮುಖ್ಯರಸ್ತೆ ರಾತ್ರಿಯೂ ಪ್ರವಾಹಾವೃತ ಆಗಿತ್ತು. ಒಂದೆಡೆ ರಾಜಕಾಲುವೆಗಳ ಭಕ್ಷಕರನ್ನು ರಕ್ಷಣೆ ಮಾಡುತ್ತಾ, ಇನ್ನೊಂದೆಡೆ ಸಾಂತ್ವನದ ನಾಟಕ ಆಡಿದರೆ ಗೊತ್ತಾಗುವುದಿಲ್ಲವೇ ?

ಕುಮಾರಸ್ವಾಮಿ ಟ್ವೀಟ್‌ ಮಾಡಿರುವ ಕೆ.ಆರ್.ಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೃಶ್ಯ

ಕಳೆದ 9 ವರ್ಷಗಳಿಂದ ಕೆ.ಆರ್. ಪುರ ಕ್ಷೇತ್ರಕ್ಕೆ ಅನುದಾನ ಹೊಳೆಯಂತೆ ಹರಿದಿದೆ. ಆ ಹಣವೆಲ್ಲ ಯಾವ ರಾಜಕಾಲುವೆಯ ಮೂಲಕ ಯಾರ ಜೇಬು ಸೇರಿತು? ಕಾಗದದ ಮೇಲಷ್ಟೇ ಕಾಮಗಾರಿಗಳ ಕರಡಿ ಕುಣಿತ ಕಾಣುತ್ತಿದೆ. ಆ ಹಣಕ್ಕೆ ಲೆಕ್ಕ ಎಲ್ಲಿ? ನಮಗೆ ನಿಮ್ಮ ಪರಿಹಾರ ಬೇಡ, ರಾಜಕಾಲುವೆ ಸಮಸ್ಯೆ ಬಗೆಹರಿಸಿ ಎಂದು ಸ್ಥಳೀಯರು ಸಚಿವರಿಗೆ ಬೆಳಗ್ಗೆಯೇ ಮಂಗಳಾರತಿ ಮಾಡಿದ್ದಾರೆ. ಆ ಸಚಿವರಿಗೆ ಅನುದಾನದ ಮೇಲಿರುವ ಅಕ್ಕರೆ ಜನರ ಮೇಲೆ ಇಲ್ಲ. ಬೇಜವಾಬ್ದಾರಿ ಬಿಬಿಎಂಪಿಗೆ ನ್ಯಾಯಾಲಯ ಛೀಮಾರಿ ಹಾಕಿದರೂ, ಅದಕ್ಕೆ ನಾಚಿಕೆ ಇಲ್ಲ.

ಆಕ್ರೋಶಗೊಂಡ ಜನರು ಸಚಿವರಿಗೆ ಚಳಿ ಬಿಡಿಸಿದ್ದಾರೆ. ಅವರ ಜತೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಜನರಿಗೆ ಧಮ್ಕಿ ಹಾಕಿದ್ದಾರೆ. ಜನರ ಕೆಲಸ ಮಾಡದ ಸಚಿವರಿಗೆ ಇಂಥ ಧಿಮಾಕಿನ ಪ್ರವೃತ್ತಿ ಅಗತ್ಯವೇ? ಅಧಿಕಾರ ಕೊಟ್ಟ ಜನರ ಮುಂದೆಯೇ ಅಹಂಕಾರವೇ? ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಯುವಕ ಆಡಳಿತದ ಅಸಡ್ಡೆಗೆ ಬಲಿಯಾಗಿದ್ದಾನೆ. ಸಿಲಿಕಾನ್ ಸಿಟಿ ಸುರಕ್ಷಿತವಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ರಾಜಕಾಲುವೆಗೆ ಬಲಿಯಾದ ಯುವಕನಿಗೆ ಸೂಕ್ತ ಪರಿಹಾರ ನೀಡಬೇಕು ಎಂದಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದಿರುವ ಕುಮಾರಸ್ವಾಮಿ, ಮುಖ್ಯಮಂತ್ರಿಗಳು ಇಡೀ ಕೆ.ಆರ್. ಪುರವನ್ನು ಸುತ್ತಿ, ಎಲ್ಲ ಸಮಸ್ಯೆಗಳಿಗೆ ತುರ್ತು ಪರಿಹಾರ ಕಂಡುಕೊಳ್ಳಬೇಕು. 9 ವರ್ಷದಿಂದ ಆ ಕ್ಷೆತ್ರಕ್ಕೆ ನೀಡಿರುವ ಅನುದಾನ, ಮತ್ತದರ ಬಳಕೆಯ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರಲ್ಲಿ ಭಾರಿ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿಹೋದ ಯುವಕ, ಗೋಡೆ ಕುಸಿದು ಮಹಿಳೆ ಬಲಿ

Exit mobile version