Site icon Vistara News

Murder Case: ಅಟ್ಟಾಡಿಸಿಕೊಂಡು ಬಂದು ಕಟಿಂಗ್‌ ಶಾಪ್‌ನೊಳಗೆ ಕತ್ತರಿಸಿ ಹಾಕಿದರು!

madan mmurdered

ಬೆಂಗಳೂರು: ಯುವಕನೊಬ್ಬನನ್ನು ಅಟ್ಟಾಡಿಸಿಕೊಂಡು ಬಂದ ಹಂತಕರು ಕಟ್ಟಿಂಗ್ ಶಾಪ್‌ನೊಳಗೆ ಆತನನ್ನು ಕೊಚ್ಚಿ ಕೊಲೆಗೈದ ಘಟನೆ (Murder Case) ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಮದನ್ (32) ಹತ್ಯೆಯಾದ ಯುವಕ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ. ಹಲವು ದಿನಗಳ ಹಿಂದೆ ಹೃತ್ವಿಕ್ ಎಂಬಾತನ ಮೇಲೆ ಈ ಮದನ್‌ ಹಲ್ಲೆ ಮಾಡಿದ್ದ. ಹಲ್ಲೆ ನಡೆಸಿದ ಬಳಿಕ ಚೆನ್ನೈನಲ್ಲಿ ತಲೆ ಮರೆಸಿಕೊಂಡಿದ್ದ. ಇದರಿಂದ ಮದನ್‌ ಮೇಲೆ ದ್ವೇಷವಿಟ್ಟುಕೊಂಡಿದ್ದ ಎದುರಾಳಿಗಳು ಆತನಿಗಾಗಿ ಹಲವು ದಿನಗಳಿಂದ ಕಾದುಕುಳಿತಿದ್ದರು. ರಾಮಮೂರ್ತಿನಗರದ ಮುಕುಟಮ್ಮ ದೇವಸ್ಥಾನ ಬಳಿ ಘಟನೆ ನಡೆದಿದೆ. 4-5 ಜನರ ತಂಡ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅಟ್ಟಾಡಿಸಿದೆ.

ಇಂದು ಮದನ್ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಇರುವ ವಿಚಾರ ತಿಳಿದು ಮಾರಕಾಸ್ತ್ರಗಳೊಂದಿಗೆ ಬಂದ ಹಂತಕರು ಮದನ್‌ನನ್ನು ಮುಖ್ಯ ರಸ್ತೆಯಲ್ಲಿ ತಡೆದು ಅಟ್ಯಾಕ್‌ ನಡೆಸಿದ್ದಾರೆ. ಹಂತಕರ ಕೈಯಿಂದ ತಪ್ಪಿಸಿಕೊಂಡು ಮದನ್ ಓಡಲು ಯತ್ನಿಸಿದ ವೇಳೆ ಕಿಲೋಮೀಟರ್‌ಗಳಷ್ಟು ದೂರ ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ಆರೋಪಿಗಳಿಂದ ತಪ್ಪಿಸಿಕೊಂದ ಮದನ್ ಒಂದು ಕಟ್ಟಿಂಗ್ ಶಾಪ್‌ ಒಳನುಗ್ಗಿದ್ದಾನೆ.

ಕೂಡಲೇ ಹಿಂಬದಿಯಿಂದ ಬಂದ ಆರೋಪಿಗಳು ಅಂಗಡಿ ಬಾಗಿಲು ಮುಚ್ಚಿ ಮನಸ್ಸೋ ಇಚ್ಚೆ ಮದನನನ್ನು ಕೊಚ್ಚಿಹಾಕಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾದ ಮದನ್ ಪ್ರಾಣ ಬಿಟ್ಟಿದ್ದಾನೆ. ಸ್ಥಳಕ್ಕೆ ‌ಬಂದ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ನಡುಬೀದಿಯಲ್ಲಿ ಸಾರ್ವಜನಿಕರ ಮುಂದೆ ನಡೆದ ಈ ದುಷ್ಕೃತ್ಯದಿಂದ ಬಾಣಸವಾಡಿ ಜನತೆ ಭಯಭೀತರಾಗಿದ್ದಾರೆ. ರೌಡಿಗಳು ಮಾರಕಾಯುಧ ಝಳಪಿಸುತ್ತ ಓಡಾಡುವುದು, ಎದುರಾಳಿಗಳನ್ನು ಕೊಚ್ಚಿ ಕೊಲ್ಲುವುದು ಸಾಮಾನ್ಯ ಎಂಬಂತಾಗಿದ್ದು, ಇವರನ್ನು ಮಟ್ಟ ಹಾಕಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Ganesha Festival : ಗಣೇಶ ಮೆರವಣಿಗೆ ವೇಳೆ ಭೀಕರ ಕೊಲೆ; ಇನ್ನು ಶೋಭಾಯಾತ್ರೆಗೆ ಅವಕಾಶ ಇಲ್ಲ

Exit mobile version