Site icon Vistara News

Murder Case: ಪ್ರತಿದಿನವೂ ಅಕ್ಕನನ್ನು ಪೀಡಿಸುತ್ತಿದ್ದ ತಮ್ಮ; ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಬಾವ

Man kills cobrother in Bangalore

ಬೆಂಗಳೂರು: ಅವನು 26 ವರ್ಷದ ಯುವಕ. ಕುಡಿಯುವ ಖಯಾಲಿ ಹೊಂದಿದ್ದ ಆತ ಹಣಕ್ಕಾಗಿ ಅಕ್ಕನನ್ನೇ ಪೀಡಿಸುತ್ತಿದ್ದ. ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಿದ್ದ. ಆತನ ಪೀಡೆಯನ್ನು ತಾಳಲಾರದೆ ಇದೀಗ ಅಕ್ಕನ ಗಂಡನೇ (Man kills co-brother for harassing wife) ಅವನನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ (Murder Case) ಮಾಡಿದ್ದಾನೆ.

ಇದು ಬೆಂಗಳೂರಿನ ದೊಡ್ಡಬಾಣಸವಾಡಿಯ ಕಾಲೋನಿಯಲ್ಲಿ ಮಧ್ಯಾಹ್ನ ನಡೆದಿರುವ ಭೀಕರ ಘಟನೆ. ಅಜಯ್‌ ಎಂಬ ಯುವಕನನ್ನು ಆತನ ಬಾವ ಕೊಲೆ ಮಾಡಿದ್ದಲ್ಲದೆ, ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ಕೊಲೆಯನ್ನು ಒಪ್ಪಿಕೊಂಡಿದ್ದಾನೆ.

ಅಜಯ್‌ ಸದಾ ಕುಡಿತದ ಗುಂಗಿನಲ್ಲೇ ಇರುತ್ತಿದ್ದ ಎನ್ನಲಾಗಿದೆ. ಸಣ್ಣ ಪುಟ್ಟ ಕೆಲಸ ಮಾಡಿದರೂ ಬಂದ ಹಣವನ್ನು ಕುಡಿದು ಮುಗಿಸುತ್ತಿದ್ದ. ಹೀಗಾಗಿ ಪ್ರತಿ ದಿನ ಅಕ್ಕನ ಮನೆಗೆ ಹೋಗಿ ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ಕೊಡದೆ ಇದ್ದರೆ ಅಕ್ಕ ಮತ್ತು ಬಾವನಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸುತಿದ್ದ. ರೌಡಿಯಂತೆ ವರ್ತಿಸುತ್ತಿದ್ದ

ಇದನ್ನೆಲ್ಲ ಕಂಡ ಬಾವ ನಿಜಕ್ಕೂ ರೋಸಿ ಹೋಗಿದ್ದರು. ಪ್ರತಿನಿತ್ಯ ತಮ್ಮನ ಕಿರುಕುಳಕ್ಕೆ ಬೇಸತ್ತು ಮನೆಗೆ ಬರಬೇಡ ಎಂದು ಅಕ್ಕ ತಾಕೀತು ಮಾಡಿದ್ದರು. ಆದರೆ, ಅದ್ಯಾವುದನ್ನೂ ಕೇರ್‌ ಮಾಡದ ಆತ ಶನಿವಾರ ಮತ್ತೆ ಅಕ್ಕನ ಮನೆಗೆ ಹೋಗಿದ್ದ. ಕುಡಿದು ಮತ್ತೇರಿಸಿಕೊಂಡು ಹೋಗಿದ್ದ ಆತ ಅಕ್ಕನನ್ನು ಹಣಕ್ಕಾಗಿ ಪೀಡಿಸಿದ್ದ. ಇದನ್ನೆಲ್ಲ ನೋಡುತ್ತಿದ್ದ ಭಾವನಿಗೆ ಸಿಟ್ಟು ನೆತ್ತಿಗೇರಿ ಆತನ ತಲೆಯ ಮೇಲೆ ದೊಡ್ಡ ಕಲ್ಲೊಂದನ್ನು ಎತ್ತಿ ಹಾಕಿದ.

ಇದನ್ನೂ ಓದಿ : Murder Case : ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ; ಪತ್ನಿಗೆ ಕತ್ತಿ ಬೀಸಿ ಕೊಂದ ಪತಿ

ಕಲ್ಲಿನ ಏಟಿಗೆ ತಲೆ ಒಡೆದು ಹೋಗಿದ್ದು ಅಲ್ಲೇ ಪ್ರಾಣ ಬಿಟ್ಟಿದ್ದಾನೆ. ಬಾವ ಸ್ವಲ್ಪವೂ ವಿಚಲಿತನಾಗದೆ ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ಎಲ್ಲ ವಿಚಾರಗಳನ್ನು ವಿವರಿಸಿದ್ದಾನೆ ಮತ್ತು ಕೊಲೆ ಮಾಡಿದ್ದನ್ನು ಒಪ್ಪಿ ಶರಣಾಗತನಾಗಿದ್ದಾನೆ.

ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಮೃತ ಅಜಯ್ ಮೇಲೆ ಹಲಸೂರು ಹಾಗೂ ಬಾಣಸವಾಡಿ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನದ ಕೇಸ್‌ಗಳಿವೆ.

Exit mobile version