Site icon Vistara News

Murder Case : ಮೈ ತಾಗಿದ್ದಕ್ಕೆ ಕಿರಿಕ್‌; ಯುವಕನ ಅಟ್ಟಾಡಿಸಿ ಕೊಂದವರನ್ನು ಜೈಲಿಗೆ ಅಟ್ಟಿದ ಪೊಲೀಸರು

murder case of a youth in Byatarayanapura Police arrest accused

ಬೆಂಗಳೂರು: ಇತ್ತೀಚಿಗಂತೂ ಕ್ಷುಲ್ಲಕ ವಿಚಾರಕ್ಕೆಲ್ಲ ಕೊಲೆಗಳು ನಡೆದುಹೋಗುತ್ತಿವೆ. ಶಿವರಾತ್ರಿಯಂದು ನೃತ್ಯ ಮಾಡುವಾಗ ಮೈ ತಾಗದ್ದಕ್ಕೆ ಯುವಕನೊಬ್ಬ ಬರ್ಬರವಾಗಿ ಕೊಲೆಯಾಗಿ (Murder Case) ಹೋಗಿದ್ದ. ಇದೀಗ ಬ್ಯಾಟರಾಯನಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಚೇತನ್, ರಂಗಾ, ಪವನ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರು ಯೋಗೇಶ್ (23) ಎಂಬಾತನನ್ನು ಅಟ್ಟಾಡಿಸಿ ಕೊಂದಿದ್ದರು. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಟ್ಟಾಡಿಸಿ ಕೊಂದಿದ್ದರು ಹಂತಕರು

ಮಾರ್ಚ್‌ 8ರ ಮಹಾ ಶಿವರಾತ್ರಿ ಹಬ್ಬದಂದು ಆ ಏರಿಯಾದಲ್ಲಿ ಎಲ್ಲ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಂದು ಅವಲಹಳ್ಳಿಯ ಮುನೇಶ್ವರ ಬ್ಲಾಕ್ ಸಮೀಪದ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲೂ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೂರಾರು ಮಂದಿ ಜಮಾಯಿಸಿದ್ದರು. ಯುವಕರೆಲ್ಲ ಸೇರಿ ಕುಣಿದು ಕುಪ್ಪಳಿಸುತ್ತಿದ್ದರು.

ಪಕ್ಕದ ಏರಿಯಾದಲ್ಲಿ ಬೈಕ್ ವಾಷಿಂಗ್ ಕೆಲಸ ಮಾಡಿಕೊಂಡಿದ್ದ ಯೋಗೇಶ್ ಕೂಡ ಅಲ್ಲಿಗೆ ಬಂದಿದ್ದ. ಆ ಸಮಯದಲ್ಲಿ ಕುಣಿಯುವಾಗ ಮತ್ತೊಂದು ಯುವಕರ ಗ್ಯಾಂಗ್‌ಗೆ ಮೈ ತಾಗಿತ್ತು. ಈ ವೇಳೆ ಯುವಕರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯೇ ನಡೆದುಹೋಗಿತ್ತು. ಗಲಾಟೆ ತಾರಕೇರುತ್ತಿದ್ದಂತೆ ಯೋಗೇಶ್ ಅಲ್ಲಿಂದ ಕಾಲ್ಕಿತ್ತಿದ್ದ.

ಇದನ್ನೂ ಓದಿ: Murder Case : ನೀನು ನನಗೆ ಬೇಕೆಬೇಕು ಎಂದು ಮಂಚಕ್ಕೆ ಕರೆದ; ಬಾರದಿದ್ದಕ್ಕೆ ಅವಳನ್ನು ಕೊಂದುಬಿಟ್ಟ

ಆದರೂ ಬಿಡದ ಹಂತಕರ ಗ್ಯಾಂಗ್‌ ಸಿಟ್ಟಾಗಿ ಯೋಗೇಶ್‌ನನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಜೀವ ಉಳಿಸಿಕೊಳ್ಳಲು ಯೋಗೇಶ್‌ ಮನೆಯೊಂದರ ಕಾಂಪೌಂಡ್ ಹಾರಿದ್ದ. ಆಗ ನಾಲ್ವರು ಹಂತಕರು ದಾಳಿ ಮಾಡಿ ಚಾಕುವಿನಿಂದ ಯೋಗೀಶ್‌ಗೆ ಸಿಕ್ಕಸಿಕ್ಕ ಕಡೆಗಳಲ್ಲಿ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದಿದ್ದರು.

ಮರುದಿನ ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೊದಮೊದಲು ಕಾಂಪೌಂಡ್‌ನಲ್ಲಿಟ್ಟಿದ್ದ ಗ್ಲಾಸ್ ಚುರು ಚುಚ್ಚಿದ್ದರಿಂದಲೇ ಯುವಕ ಮೃತಪಟ್ಟಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದರು. ಆದರೆ ಪೊಲೀಸರ ತನಿಖೆಯನ್ನು ಇದು ಆಕಸ್ಮಿಕವಲ್ಲ, ಕೊಲೆ ಎಂದು ಗೊತ್ತಾಗಿತ್ತು. ಕೊಲೆ ಮಾಡಿ ಆರಾಮಾಗಿ ಇದ್ದ ಹಂತಕರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version