Site icon Vistara News

Bengaluru Population | ಹತ್ತು ವರ್ಷದಲ್ಲಿ ಬೆಂಗಳೂರು ಜನಸಂಖ್ಯೆ ಡಬಲ್‌, ಸವಾಲುಗಳು ಅಧಿಕ: ಡಾ. ತ್ರಿಲೋಕಚಂದ್ರ

Bengaluru Population

ಬೆಂಗಳೂರು: ಈಗ 1.30 ಕೋಟಿ ಇರುವ ಬೆಂಗಳೂರು ಜನಸಂಖ್ಯೆಯು (Bengaluru Population) ಮುಂದಿನ ಹತ್ತು ವರ್ಷಗಳಲ್ಲಿ 2.50 ಕೋಟಿ ತಲುಪಲಿದೆ. ಅವೈಜ್ಞಾನಿಕ ನಗರೀಕರಣ ಮತ್ತು ಅತಿಕ್ರಮಣಗಳಿಂದಾಗಿ ನಮ್ಮ ಮುಂದೆ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳು ಬೃಹದಾಕಾರವಾಗಿವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಸಮಾವೇಶದ ಎರಡನೇ ದಿನವಾದ ಗುರುವಾರ ಅವರು ‘ಒನ್‌ ಹೆಲ್ತ್ ಮತ್ತು ಸಾಂಕ್ರಾಮಿಕಗಳ ತಡೆ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಜನಸಂಖ್ಯೆ ಹೆಚ್ಚಳ ಆಗುವುದರಿಂದ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ನಿರಂತರ ನಿಗಾ ವ್ಯವಸ್ಥೆ ಇರಬೇಕಾದ ಜರೂರಿದೆ. ಜನರು ಬೇರೆಬೇರೆ ಕಾರಣಗಳಿಂದ ನಗರಗಳತ್ತ ವಲಸೆ ಬರುತ್ತಲೇ ಇದ್ದಾರೆ. ಆದರೆ, ನಮ್ಮ ನಗರಗಳ ಧಾರಣಾಶಕ್ತಿ ಬರಿದಾಗಿದೆ. ಬೆಂಗಳೂರಿನಂತಹ ಬೃಹತ್‌ ನಗರಗಳಲ್ಲಿ ಜನರ ಆರೊಗ್ಯವನ್ನು ಕಾಪಾಡಬೇಕೆಂದರೆ ಸರಿಯಾದ ನೀತಿ ಮತ್ತು ಆಡಳಿತಗಳು ಪ್ರಮುಖವಾಗಿವೆ ಎಂದು ಅವರು ಎಚ್ಚರಿಸಿದರು.

ಆರೋಗ್ಯ ಎಂದರೆ ಕೇವಲ ಮನುಷ್ಯ ಕೇಂದ್ರಿತವಲ್ಲ. ನಾವು ಇದರಲ್ಲಿ ಪರಿಸರ, ಪ್ರಾಣಿ ಮತ್ತು ಅರಣ್ಯಗಳನ್ನು ಕೂಡ ಒಳಗೊಳ್ಳಬೇಕು. ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯ ಸೇರಿದಂತೆ ಹಲವು ಪ್ರಾಣಿಜನ್ಯ ರೋಗಗಳನ್ನು ಎದುರಿಸುತ್ತಿದ್ದೇವೆ. ಒಟ್ಟಾರೆಯಾಗಿ, ಹೀಗೆ ಪ್ರಾಣಿಗಳಿಂದ ಹಬ್ಬುವ ರೋಗಗಳ ಪ್ರಮಾಣ ಶೇ.75ರಷ್ಟಿದ್ದು, ಇದು ಕಳವಳಕಾರಿಯಾಗಿದೆ ಎಂದು ಅವರು ವಿವರಿಸಿದರು.

ನಮ್ಮ ನಗರಗಳಲ್ಲಿ ತ್ಯಾಜ್ಯ, ಮಾಲಿನ್ಯ, ಧೂಳು, ಇಂಗಾಲದ ಕಾರುವಿಕೆ ಎಲ್ಲವೂ ಮಿತಿ ಮೀರಿವೆ. ಇವುಗಳನ್ನು ಬಗೆಹರಿಸಲು ಎಷ್ಟೇ ಪ್ರಯತ್ನಪಟ್ಟರೂ ಅವು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇವು ಬಗೆಹರಿಯಬೇಕೆಂದರೆ ವಾರ್ಡ್ ಮತ್ತು ಸಮುದಾಯಗಳ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದೇ ಹೋದರೆ ನಾವು ದುಷ್ಪರಿಣಾಮಗಳಿಗೆ ಒಳಗಾಗಬೇಕಾಗುತ್ತದೆ ಎಂದು ಅವರು ನುಡಿದರು.

ಡಾ.ಫರಾ ಇಷ್ತಿಯಾಕ್‌ ಅವರು ಮಾತನಾಡಿ, ʼನಮ್ಮಲ್ಲಿರುವ ನಗರೀಕರಣದ ಸ್ವರೂಪವೇ ಹಲವು ಸಮಸ್ಯೆಗಳ ಮೂಲವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಆಧಾರದ ಮೇಲೆ ನಗರೀಕರಣದ ಸ್ವರೂಪವನ್ನೇ ಆಮೂಲಾಗ್ರವಾಗಿ ಬದಲಿಸಿಕೊಳ್ಳಬೇಕಾದ ತುರ್ತು ನಮ್ಮ ಎದುರಿಗಿದೆ. ಮುಖ್ಯವಾಗಿ ಎಲ್ಲ ನಗರಗಳಲ್ಲೂ ಅಲ್ಲಿರುವ ಕೆರೆಕಟ್ಟೆ ಮತ್ತು ಇನ್ನಿತರ ನೀರಿನ ಮೂಲಗಳನ್ನು ಸುಸ್ಥಿತಿಯಲ್ಲಿ ಸಂರಕ್ಷಿಸಿಕೊಳ್ಳಬೇಕುʼ ಎಂದು ಸಲಹೆ ನೀಡಿದರು.

ಇದನ್ನೂ ಓದಿ | BTS 2022 | ಬಾಹ್ಯಾಕಾಶ, ರಾಕೆಟ್‌ ಸೈನ್ಸ್‌ನಲ್ಲಿ ತೊಡಗಿಸಿಕೊಂಡ 100 ನವೋದ್ಯಮಗಳಿಗೆ ಇಸ್ರೊ ನೆರವು

Exit mobile version