Site icon Vistara News

Road Accident : ಮಗುವಿನ ಮೇಲೆ ಹರಿದ ಲಾರಿ; ಕಟುಕ ಚಾಲಕ ಪರಾರಿ

Road Accident

ದೊಡ್ಡಬಳ್ಳಾಪುರ: ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ (Road Accident) ಪರಿಣಾಮ ಮೂರು ವರ್ಷದ ಮಗು ಸ್ಥಳದಲ್ಲಿಯೇ ಮೃತ ಪಟ್ಟಿದೆ. ಧನ್ವಿತ್ (3) ಮೃತ ದುರ್ದೈವಿ. ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ಆಂಜನೇಯ, ಮಮತ ಎಂಬುವವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪಾಪುರ ಮೂಲದ ಆಂಜನೇಯ ಕುಟುಂಬ ಸಮೇತ ಬೈಕ್‌ನಲ್ಲಿ ದೇವಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿದ್ದವರು ಹಾರಿ ರಸ್ತೆ ಬದಿಗೆ ಬಿದ್ದಿದ್ದಾರೆ.

ಬಾಲಕ ಧನ್ವಿತ್‌ ಮೇಲೆ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಅಪಘಾತ ಮಾಡಿ ಲಾರಿಯನ್ನು ಒಂದು ಕಿಲೋ ಮೀಟರ್ ದೂರದಲ್ಲಿ ನಿಲ್ಲಿಸಿ, ಸ್ಥಳದಿಂದ ಚಾಲಕ ಪರಾರಿ ಆಗಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಚಾಲಕನಿಗಾಗಿ ಹುಡುಕಾಟ ನಡೆದಿದೆ.

ಇದನ್ನೂ ಓದಿ: Actor Darshan: ದರ್ಶನ್‌ ಪ್ರಕರಣ; ಶಿವಣ್ಣನ ವಿರುದ್ಧ ಪ್ರಶಾಂತ್‌ ಸಂಬರಗಿ ಆಕ್ರೋಶ!

ಹಿಟ್‌ ಆ್ಯಂಡ್‌ ರನ್‌ಗೆ ಯುವತಿ ಸ್ಪಾಟ್‌ ಡೆತ್‌;‌ ಆರೋಪಿಯ ಬೆನ್ನತ್ತಿದ ಪೊಲೀಸರು

ಕೋಲಾರ: ಅಪರಿಚಿತ ವಾಹನ ಡಿಕ್ಕಿಯಾಗಿ (Road Accident) ವಿಸ್ಟ್ರಾನ್ ಕಂಪನಿಯ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ. ಕೋಲಾರ ಹೊರವಲಯದ ಪವನ್ ಕಾಲೇಜು ಬಳಿ ಘಟನೆ ನಡೆದಿದೆ. ರೂಪಾ (22) ಮೃತ ದುರ್ದೈವಿ.

ಶ್ರೀನಿವಾಸಪುರ ಮೂಲದ‌ ರೂಪಾ ರಾತ್ರಿ ಪಾಳಿ ಕೆಲಸಕ್ಕೆ ತೆರಳುತ್ತಿದ್ದಳು. ಹೆದ್ದಾರಿ ದಾಟುವಾಗ ಅಪರಿಚಿತ ವಾಹನವೊಂದು ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ರೂಪಾಳಿಗೆ ತೀವ್ರ ರಕ್ತಸ್ರಾವಗೊಂಡು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ರೂಪಾ ಮೃತಪಟ್ಟಿದ್ದಾರೆ.

ಇನ್ನೂ ಅಪಘಾತದ ನಂತರ ಚಾಲಕ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಕೋಲಾರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿ ಪರಾರಿ ಆಗಿರುವ ಸವಾರನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

road Accident

ಬೈಕ್‌ ಹಾಗೂ ಟಿಟಿ ಡಿಕ್ಕಿ

ಬೈಕ್‌ ಹಾಗೂ ಟಿಟಿ ನಡುವೆ ಅಪಘಾತ ಸಂಭವಿಸಿದ್ದು, ಟೆಂಪೊ ಟ್ರಾವೆಲರ್ ಪಲ್ಟಿಯಾಗಿದೆ. ಬೆಂಗಳೂರಿನ ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಬಳಿ ಘಟನೆ ನಡೆದಿದೆ.

ಟಿಟಿ ವಾಹನ ಚಾಲಕ ಹಾಗೂ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಡ್ಡ ಬಂದ ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ಟಿಟಿ ವಾಹನ ಪಲ್ಟಿ ಹೊಡೆದಿದೆ. ದೊಡ್ಡಬಳ್ಳಾಪುರಕ್ಕೆ ಕಾರ್ಮಿಕರನ್ನು ಡ್ರಾಪ್ ಮಾಡಿ ಟೆಂಪೋ ಟ್ರಾವೆಲರ್‌ನಲ್ಲಿ ತೆರಳುತ್ತಿತ್ತು. ಡಿವೈಡರ್ ಬಳಿ ಏಕಾಏಕಿ ಬೈಕ್ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version