Site icon Vistara News

World Heart Day: ಹೃದಯ ಕವಾಟ ಅಸ್ವಸ್ಥತೆ ಹೊಂದಿರುವ ರೋಗಿಗಳ ಪಾಲಿಗೆ ನವೀನ ತಂತ್ರಜ್ಞಾನಗಳು ವರದಾನ

Innovative technologies have revolutionized patients with heart valve disorder

ಬೆಂಗಳೂರು: ಭಾರತದಲ್ಲಿ ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಸರ್ವರ ಹೃದಯ ಆರೋಗ್ಯ ಸುಧಾರಣೆಗಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಬೇಕಾದ ಪ್ರಾಮುಖ್ಯತೆ ಇತ್ತೀಚೆಗೆ ಹೆಚ್ಚುತ್ತಿದೆ. ಈ ವರ್ಷದ ವಿಶ್ವ ಹೃದಯ ದಿನವನ್ನು (World Heart Day) – “ಕ್ರಿಯಾಶೀಲರಾಗಿ ಹೃದಯವನ್ನು ಬಳಸಿ” ಎಂಬ ವಿಷಯಾಧಾರಿತವಾಗಿ ಆಚರಿಸಲಾಗುತ್ತಿದೆ. ಇದು ತಮ್ಮ ಹೃದಯದ ಆರೋಗ್ಯ ಮೇಲ್ವಿಚಾರಣೆಗಾಗಿ ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಲು ಜನರನ್ನು ಪ್ರೋತ್ಸಾಹಿಸುತ್ತದೆ. ʻನಾರಾಯಣ ಇನ್ಸ್‌ಟಿಟ್ಯೂಟ್‌ ಆಫ್ ಕಾರ್ಡಿಯಾಕ್ ಸೈನ್ಸಸ್‌ʼನ ಹಿರಿಯ ಸಲಹೆಗಾರರಾದ ಡಾ.ಸಂಜಯ್ ಮೆಹ್ರೋತ್ರ ಅವರು ಸಹ ತಮ್ಮ ಮಾತುಗಳಲ್ಲಿ ಇದನ್ನೇ ಒತ್ತಿ ಹೇಳಿದರು.

ಹೃದಯರಕ್ತನಾಳದ ಕಾಯಿಲೆಗಳು ಹೃದಯ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಹಲವಾರು ಪರಿಸ್ಥಿತಿಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ʻಕರೋನರಿ ಆರ್ಟಿಲರಿ ಡಿಸೀಜ್‌ʼ(ಹೃದಯದ ಧಮನಿಗಳಲ್ಲಿ ಕೊಬ್ಬು ಶೇಖರಣೆಯಿಂದ ಅಡಚಣೆ), ಹೃದಯ ವೈಫಲ್ಯ, ʻಅರಿಥ್ಮಿಯಾಸ್ʼ (ಅನಿಯಮಿತ ಹೃದಯಬಡಿತ) ಮತ್ತು ʻಅಯೋರ್ಟಿಕ್ ಸ್ಟೆನೋಸಿಸ್‌ʼನಂತಹ ಹೃದಯ ಕವಾಟ ಕಾಯಿಲೆಗಳು ಸೇರಿವೆ. ಇವುಗಳ ಪ್ರತಿ ಕಾಯಿಲೆಯ ವಿಧವೂ ಎದೆ ನೋವು, ಉಸಿರಾಟದ ತೊಂದರೆ ಮತ್ತು ಆಯಾಸದಂತಹ ತನ್ನದೇ ಆದ ಸವಾಲುಗಳು ಮತ್ತು ರೋಗಲಕ್ಷಣಗಳನ್ನು ಒಳಗೊಂಡಿರುತ್ತದೆ. ಈ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಯೋಚಿತ ರೋಗಪತ್ತೆ ಮತ್ತು ಚಿಕಿತ್ಸೆ ನಿರ್ಣಾಯಕವಾಗಿದೆ.

Innovative technologies have revolutionized patients with heart valve disorder

“ಇತ್ತೀಚೆಗೆ, ನಾನು ಅನಿಲ್ (ಹೆಸರು ಬದಲಾಯಿಸಲಾಗಿದೆ) ಎಂಬ ಹಿರಿಯ ವ್ಯಕ್ತಿಗೆ ಚಿಕಿತ್ಸೆ ನೀಡಿದೆ. ಅವರು ಈ ಹಿಂದೆ ತುಂಬಾ ಸಕ್ರಿಯರಾಗಿದ್ದರು, ಉತ್ತಮ ಆರೋಗ್ಯವನ್ನು ಹೊಂದಿದ್ದರು. ಆದಾಗ್ಯೂ, ತೋಟಗಾರಿಕೆ ಮತ್ತು ಮನೆಯ ಸುತ್ತಲೂ ನಡೆಯುವಂತಹ ಸರಳ ಚಟುವಟಿಕೆಗಳ ಸಮಯದಲ್ಲೂ ಅವರಿಗೆ ಉಸಿರಾಟದ ತೊಂದರೆ ಆರಂಭವಾಯಿತು. ಮಲಗಿರುವಾಗ ಉಸಿರಾಟದ ತೊಂದರೆಯಿಂದಾಗಿ ನಿದ್ರೆ ಮಾಡಲು ಹೆಣಗಾಡುವ ಮಟ್ಟಕ್ಕೆ ಅವರ ಸ್ಥಿತಿ ಹದಗೆಟ್ಟಿತು. ಒಂದು ದಿನ, ಅವರು ಮೆಟ್ಟಿಲುಗಳನ್ನು ಇಳಿಯುವಾಗ ಕುಸಿದುಬಿದ್ದರು. ಆಸ್ಪತ್ರೆಗೆ ದಾಖಲಿಸಿದ ನಂತರ, ಅನಿಲ್ ಅವರಿಗೆ ʻಅಯೋರ್ಟಿಕ್ ಸ್ಟೆನೋಸಿಸ್ʼ ಇರುವುದು ಪತ್ತೆಯಾಯಿತು.

ಇದು ಹೃದಯದ ಕವಾಟಗಳ ಪೈಕಿ ಒಂದು ಕವಾಟವು ಕಿರಿದಾಗುವ ಸ್ಥಿತಿ. ಹೃದಯದ ಕಾರ್ಯವನ್ನು ಪೂರ್ವ ಸ್ಥಿತಿಗೆ ಪುನಃಸ್ಥಾಪಿಸಲು, ಅನಿಲ್ ಅವರು ʻಟ್ರಾನ್ಸ್ ಕ್ಯಾಥೆಟರ್ ಅಯೋರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ʼ(ಟಿಎವಿಐ) ಎಂಬ ಕಾರ್ಯವಿಧಾನಕ್ಕೆ ಒಳಗಾದರು. ಗಮನಾರ್ಹ ವಿಷಯವೆಂದರೆ, ಮರುದಿನವೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ಶೀಘ್ರದಲ್ಲೇ ತಮ್ಮ ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಿದರು,” ಎಂದು ನಾರಾಯಣ ಇನ್ಸ್‌ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್‌ʼನ ಹಿರಿಯ ಸಲಹೆಗಾರ ಡಾ.ಸಂಜಯ್ ಮೆಹ್ರೋತ್ರ ವಿವರಿಸಿದರು.

ʻಅಯೋರ್ಟಿಕ್ ಸ್ಟೆನೋಸಿಸ್ʼ(ಎಎಸ್) ಸಮಸ್ಯೆಗೆ ಚಿಕಿತ್ಸೆಯು ಅದರ ತೀವ್ರತೆ ಮತ್ತು ರೋಗಲಕ್ಷಣಗಳನ್ನು ಅವಲಂಬಿಸಿರುತ್ತದೆ. ಲಕ್ಷಣರಹಿತ ಅಥವಾ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ, ತೊಡಕುಗಳ ಅಪಾಯವನ್ನು ಕಡಿಮೆ ಮಾಡಲು ವೈದ್ಯರು ಔಷಧ ಅಥವಾ ಜೀವನಶೈಲಿ ಬದಲಾವಣೆಗಳನ್ನು ಶಿಫಾರಸು ಮಾಡಬಹುದು. ಆಗಾಗ್ಗೆ ವೈದ್ಯರ ಭೇಟಿ ಮತ್ತು ಪರೀಕ್ಷೆಗಳ ಮೂಲಕ ನಿಯಮಿತ ಮೇಲ್ವಿಚಾರಣೆಗೆ ಸಲಹೆ ನೀಡಬಹುದು.

ಇದನ್ನೂ ಓದಿ: Breast cancer : ಸ್ತನ ಕ್ಯಾನ್ಸರ್‌ ರೋಗಿಗೆ ರೊಬೋಟ್‌ ನೆರವಿನಿಂದ ತನ್ನದೆ ದೇಹದ ಮತ್ತೊಂದು ಭಾಗ ಬಳಸಿ ಸ್ತನ ಪುನರ್‌ ನಿರ್ಮಾಣ; ಫೋರ್ಟಿಸ್‌ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ

ಆದಾಗ್ಯೂ, ತೀವ್ರವಾದ ʻಎಎಸ್ʼ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ತಾಂತ್ರಿಕ ಪ್ರಗತಿಗಳು ಕಳೆದ ದಶಕದಲ್ಲಿ ʻಟಿಎವಿಐʼ ಅನ್ನು ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸಿವೆ. ಕಡಿಮೆ ಸಮಯ ಆಸ್ಪತ್ರೆಯಲ್ಲಿ ಉಳಿಯುವುದು, ಕಡಿಮೆ ನೋವು, ಕಡಿಮೆ ರಕ್ತ ನಷ್ಟ, ಕಡಿಮೆ ಸೋಂಕುಗಳು ಮತ್ತು ಕ್ಷಿಪ್ರ ಚೇತರಿಕೆಯಂತಹ ಪ್ರಯೋಜನಗಳನ್ನು ನೀಡುತ್ತವೆ. ಕಾರ್ಯವಿಧಾನದ ಮರುದಿನ ರೋಗಿಗಳು ಸಾಮಾನ್ಯವಾಗಿ ತಮ್ಮ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು. ಸಂಶೋಧಕರು ಕವಾಟಗಳನ್ನು ಹೆಚ್ಚು ಕಾಲ ಉಳಿಯುವಂತೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಕಿರಿಯ ವ್ಯಕ್ತಿಗಳು ಸೇರಿದಂತೆ ಹೆಚ್ಚಿನ ರೋಗಿಗಳಿಗೆ ʻಟಿಎವಿಐʼ ಆಯ್ಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲೂ ಕೆಲಸ ನಡೆಯುತ್ತಿದೆ.

ವೈದ್ಯಕೀಯ ಆರೈಕೆಯಲ್ಲಿ ಎಷ್ಟೆಲ್ಲಾ ಪ್ರಗತಿಯ ಹೊರತಾಗಿಯೂ, ಯುವ ಜನರಲ್ಲಿ ಹೃದಯರಕ್ತನಾಳದ ಕಾಯಿಲೆಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಈ ಹೆಚ್ಚುತ್ತಿರುವ ಹೃದ್ರೋಗದ ವ್ಯಾಪ್ತಿಯು ನಿರಂತರ ಜಾಗರೂಕತೆ ಮತ್ತು ತಡೆಗಟ್ಟುವ ಕ್ರಮಗಳ ಅಗತ್ಯವನ್ನು ಒತ್ತಿಹೇಳುತ್ತದೆ. ಹೃದಯರಕ್ತನಾಳದ ಕಾಯಿಲೆಗಳು ಮತ್ತು ಆರಂಭಿಕ ಮಧ್ಯಸ್ಥಿಕೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ವಿಶೇಷವಾಗಿ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಅಪಾಯದ ಅಂಶಗಳನ್ನು ಹೊಂದಿರುವವರಿಗೆ ನಿಯಮಿತ ಪರೀಕ್ಷೆ ಮತ್ತು ತಪಾಸಣೆಗಳು ಅತ್ಯಗತ್ಯ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version