Site icon Vistara News

BJP JDS alliance : ಜೆಡಿಎಸ್‌ಗೆ ಕಾಂಗ್ರೆಸ್‌ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ

HD Devegowda Press meet for BJP JDS alliance

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS alliance) ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಅಧಿಕೃತವಾಗಿ ಮಾತನಾಡಿದ್ದಾರೆ. ಮೈತ್ರಿ ಹಿಂದಿನ ಉದ್ದೇಶ ಏನು ಎಂಬುದನ್ನು ಹೇಳಿದ್ದಾರೆ. ಅಲ್ಲದೆ, ಮುಸ್ಲಿಂ ಮುಖಂಡರನ್ನು (Muslim leaders) ಜೆಡಿಎಸ್‌ ತೊರೆಯುತ್ತಿರುವ ಬಗ್ಗೆ ಪ್ರಸ್ತಾಪ ಮಾಡುತ್ತಾ, ಮುಸ್ಲಿಂ ನಾಯಕರನ್ನು ಕಾಂಗ್ರೆಸ್‌ ಸೋಲಿಸಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಪಕ್ಷದ ಬಿ ಟಿಂ ಜೆಡಿಎಸ್‌ ಎಂದು ಹೇಳುವವರು ಮೊದಲು ತಾವೇನು ಮಾಡಿದ್ದಾರೆಂಬುದನ್ನು ನೋಡಬೇಕು. ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಸರ್ಕಾರವನ್ನು ಕೆಡವಿದ್ದು ಯಾರು ಎಂಬುದನ್ನು ಚರ್ಚೆ ಮಾಡೋಣ ಎಂದು ಪಂಥಾಹ್ವಾನ ನೀಡಿದ್ದಾರೆ. ಜತೆಗೆ ಕಾಂಗ್ರೆಸ್‌ ಮಾಡಿರುವ ಮೋಸದ ಬಗ್ಗೆ 100 ಕಾರಣಗಳನ್ನು ಹೇಳುವೆ ಎಂದು ದೇವೇಗೌಡರು ಗುಡುಗಿದ್ದಾರೆ. ಇದಕ್ಕೆಲ್ಲ ವಿ ಡೋಂಟ್‌ ಕೇರ್‌ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ರಾಜ್ಯಸಭೆಯಲ್ಲಿ ಫಾರೂಕ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೆ, ಯಾರು ಸೋತರು? 8 ಜನ ನಾಯಕರನ್ನು ಕರೆದುಕೊಂಡು ಹೋದಿರಿ. ಅಲ್ಪಸಂಖ್ಯಾತರನ್ನು ಆ ದಿನ ಸೋಲಿಸಿದ್ದು ಯಾರು? ಜೆಡಿಎಸ್‌ಗೆ ಕಾಂಗ್ರೆಸ್ ಮೋಸ ಮಾಡಿರುವ 100 ಉದಾಹರಣೆಗಳನ್ನು ಕೊಡುತ್ತೇನೆ. ಕಾಂಗ್ರೆಸ್ ಹಲವಾರು ಬಾರಿ ಬ್ಲಂಡರ್ ಮಾಡಿದೆ. ನೀವು ಜಾತ್ಯತೀತ ಬಗ್ಗೆ ಮಾತನಾಡುತ್ತಿರಾ? ನಾವು ಯಾವುದಕ್ಕೂ ಕೇರ್ ಮಾಡಲ್ಲ ಎಂದು ಹೇಳಿದರು.

ಅಮಿತ್‌ ಶಾ ಜತೆ ಮೈತ್ರಿ ಚರ್ಚೆ ಮಾಡಿದ್ದೇನೆ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಭಾರತೀಯ ಜನತಾ ಪಾರ್ಟಿಯ ಜತೆ ಹೋಗಬೇಕಾದರೆ, ನಾನು ಮೊದಲು ಗೃಹ ಸಚಿವ ಅಮಿತ್‌ ಶಾ (Home Minister Amit Shah) ಅವರ ಜತೆ ಚರ್ಚೆ ಮಾಡಿದ್ದೆ. ನಾವು ಕಳೆದ 60 ವರ್ಷದಿಂದ ಯಾವುದೇ ಸಮಯಕ್ಕೆ ಅನ್ಯಾಯವಾಗಲು ಬಿಟ್ಟಿಲ್ಲ. ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ಸರ್ಕಾರದಲ್ಲಿದ್ದ 17 ಜನರು ಶಾಸಕರನ್ನು ಮುಂಬೈಗೆ ಕರೆಸಿಕೊಂಡವರು ಯಾರು? ಇದೆಲ್ಲವೂ ಚರ್ಚೆಯಾಗಲಿ, ಚರ್ಚೆ ಮಾಡೋಣ. ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿದ್ದು ಯಾರು? ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದಕ್ಕೆ ಅವಕಾಶ ಮಾಡಿದ ಬಗ್ಗೆ ಚರ್ಚೆ ಮಾಡೋಣ. ಯಾರು ಇದಕ್ಕೆ ಜವಾಬ್ದಾರಿ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದರು.

ಎಚ್‌ಡಿಕೆಯನ್ನು ಸಿಎಂ ಮಾಡುವಂತೆ ಒತ್ತಾಯ ಮಾಡಿದ್ದು ಯಾರು?

ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಬೇಕೆಂದು ಯಾರು ಬಂದಿದ್ದು? ನನಗೆ ಅವರನ್ನೇ ಸಿಎಂ ಮಾಡುವಂತೆ ಒತ್ತಾಯ ಮಾಡಿದರು. ಯಾವ ಕಾರಣಕ್ಕೂ ನಿಮ್ಮ ಸಹವಾಸ ಬೇಡ ಅಂತಾ ಹೇಳಿದ್ದೆ. ರಾತ್ರಿ 12 ಗಂಟೆಗೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಇವತ್ತು ಬಿಜೆಪಿ ಜತೆ ಸಂಬಂಧ ಯಾಕೆ ಬೆಳೆಸಿದ್ದೀರಿ ಎಂದು ಮಾಧ್ಯಮಗಳಲ್ಲಿ ಕೇಳುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: Weather report : ಇನ್ನೆರಡು ದಿನ ಉತ್ತರ ಕರ್ನಾಟಕದ 7 ಜಿಲ್ಲೆ ಸೇರಿ ಕರಾವಳಿಯಲ್ಲಿ ಭಾರಿ ಮಳೆ

ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ?

ನಾನು ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ರಾಜಕೀಯ ಮಾಡಿಲ್ಲ. ರಾಹುಲ್ ಗಾಂಧಿ ಕೈಯಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಮ್ ಅಂತ ಹೇಳಿಸಿದರು. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಾಗ ಏನ್ ಮಾಡಿದ್ರು ಅಂತ ನಾನು ನೋಡಲಿಲ್ವಾ? ಈಗ ಮೈತ್ರಿ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ? ನಾನು 10 ವರ್ಷದಲ್ಲಿ ಮೊದಲ ಬಾರಿ ಮೈತ್ರಿ ಬಗ್ಗೆ ಮಾತನಾಡಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.

Exit mobile version