Site icon Vistara News

BJP Karnataka: ಬಿಬಿಎಂಪಿಯನ್ನು ATM ಮಾಡುತ್ತಿದ್ದಾರೆ; ಇದು ನಾಲ್ಕೇ ದಿನದ ಸರ್ಕಾರ: ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು

BJP Leaders PC Mohan S Raghu R Ashok Ravisubramanya Sureshkumar

#image_title

ಬೆಂಗಳೂರು: ಬಿಬಿಎಂಪಿಯನ್ನು ಎಟಿಎಂ ಮಾಡಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಆರೋಪಿಸಿದರು. ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದನ್ನು ಆಕ್ಷೇಪಿಸಿ ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಮಹಾನಗರಪಾಲಿಕೆಯನ್ನು ಕಾಂಗ್ರೆಸ್ ಕಚೇರಿ ಮಾಡಲು ಕಾಂಗ್ರೆಸ್ ಪಕ್ಷದವರು, ಸಚಿವರಾದ ಡಿ.ಕೆ.ಶಿವಕುಮಾರ್, ಜಾರ್ಜ್, ಜಮೀರ್ ಮತ್ತಿತರರು ಹೊರಟಿದ್ದಾರೆ. ನಮ್ಮ ಸಂಸದರಾದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ತೇಜಸ್ವಿ ಸೂರ್ಯ ಅವರನ್ನು ಕರೆಯದೆ ಯಾವುದೋ ರಾಜ್ಯದಿಂದ ಚುನಾಯಿತರಾದ ಸುರ್ಜೆವಾಲರನ್ನು ಕರೆದು ಸಭೆ ನಡೆಸಿದ್ದಾರೆ.

ವಾರ್ಡ್ ವಿಂಗಡಣೆ, ಅಭಿವೃದ್ಧಿ, ಚುನಾವಣೆ, ಮೀಸಲಾತಿ, ವಾರ್ಡ್‍ಗಳಿಗೆ ಅನುದಾನ ಮತ್ತಿತರ ವಿಚಾರಗಳ ಕುರಿತು ಅವರು ಚರ್ಚಿಸುವುದಾದರೆ ಯಾಕೆ ಮತದಾನ ಬೇಕು? ಯಾಕೆ ಚುನಾಯಿತ ಪ್ರತಿನಿಧಿಗಳು ಬೇಕು? ಯಾರು ಸಭೆ ಮಾಡಬೇಕೆಂದು ಸರ್ಕಾರದ ಮಾರ್ಗದರ್ಶಿ ಸೂತ್ರಗಳಿವೆ. ಅದು ಕನ್ನಡದಲ್ಲೇ ಇದೆ. ‘ಆಯಾ ಸಮಿತಿಯ ಕಾರ್ಯವ್ಯಾಪ್ತಿಗೆ ಒಳಪಟ್ಟು ಸಮೀಕ್ಷಣಾ ಸಭೆಗಳನ್ನು ನಡೆಸಬಹುದು. ಇದನ್ನು ಹೊರತುಪಡಿಸಿ ಶಾಸಕರೇ ಆಗಲಿ; ಇತರ ಖಾಸಗಿ ಪ್ರಮುಖರೇ ಆಗಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮೀಕ್ಷಾ ಸಭೆಗಳನ್ನು ನಡೆಸುವಂತಿಲ್ಲ. ವಿರೋಧ ಪಕ್ಷದ ನಾಯಕರಿಗೂ ಸಹ ಅಧಿಕಾರಿಗಳ ಸಭೆ ನಡೆಸುವ ಅವಕಾಶ ಇಲ್ಲ’ ಎಂದು ಆದೇಶದಲ್ಲಿದೆ.

ಅಂಥ ಸಭೆಗಳನ್ನು ನಡೆಸಲು ಸಚಿವರಿಗೆ, ಅಧಿಕಾರಿಗಳಿಗೆ ಅವಕಾಶ ಇದೆ. ಇವರು ಯಾವ ಸಚಿವರು? ಕೆಡಿಪಿ ಸಭೆ ನಡೆಸುವ ಉಸ್ತುವಾರಿಯನ್ನೂ ಇವರಿಗೆ ಕೊಟ್ಟಿಲ್ಲ. ಇವರಿಗೆ ಇಲ್ಲಿನ ಕಾಂಗ್ರೆಸ್ ನಾಯಕರ ಮೇಲೆ ವಿಶ್ವಾಸ ಇಲ್ಲದಂತಿದೆ. ಬೆಂಗಳೂರನ್ನು ಎಟಿಎಂ ಮಾಡಿಕೊಳ್ಳಲು ನೇರವಾಗಿ ಇವರೇ ಫೀಲ್ಡಿಗೆ ಇಳಿದಿದ್ದಾರೆ ಎಂದು ಟೀಕಿಸಿದರು.

ನರೇಂದ್ರ ಮೋದಿ, ಅಮಿತ್ ಶಾ ಅವರು ಹೇಳಿದಂತೆ ಕಾಂಗ್ರೆಸ್‌ ಪಕ್ಷವು ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಹೊರಟಿದೆ. ಮುಖ್ಯ ಕುರ್ಚಿಯಲ್ಲಿ ಕುಳಿತು ಅಧಿಕಾರಿಗಳಿಗೆ ಸುರ್ಜೆವಾಲಾ ಸೂಚನೆ ಕೊಟ್ಟಿದ್ದಾರೆ. 28 ಶಾಸಕರು, 4 ಸಂಸದರಿಗೆ ಬೆಲೆ ಇಲ್ಲವೇ? ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.

ನಿಯೋಗದಲ್ಲಿ ಮಾಜಿ ಸಚಿವ ಸುರೇಶ್‍ಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕರಾದ ಕೆ.ಸಿ.ರಾಮಮೂರ್ತಿ, ಎಂ.ಕೃಷ್ಣಪ್ಪ, ರಘು, ರವಿಸುಬ್ರಹ್ಮಣ್ಯ ಮತ್ತಿತರರು ಇದ್ದರು.

ಇರೋದು ನಾಲ್ಕೇ ದಿನ..
ಕಾಂಗ್ರೆಸ್‍ಗೆ ಪಕ್ಷಕ್ಕೆ ಅಧಿಕಾರದ ಮದ, ಪಿತ್ತ ತಲೆಗೇರಿದೆ. ಇರೋದು ನಾಲ್ಕೇ ದಿನ. ಯಾರೂ ಪರ್ಮನೆಂಟಲ್ಲ. ಕಾಂಗ್ರೆಸ್ ಪಕ್ಷ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಆರ್. ಅಶೋಕ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಸಭೆ ನಡೆಸಿದ್ದಕ್ಕೆ ದಾಖಲೆಗಳಿವೆ. ಸುಮ್ಮನೆ ಬಂದು ಹೋದರು ಎನ್ನಲು ಇದೇನು ನಾಟಕದ ಕಂಪೆನಿಯೇ? ಕರ್ನಾಟಕದ ಎಟಿಎಂ ಆರಂಭವಾಗಿದೆ. ಕರ್ನಾಟಕ ಇನ್ಮೇಲೆ ದಿವಾಳಿ ಆಗಲಿದೆ. ಇನ್ಮೇಲೆ ಏನೇ ಮಾಡಲು ಆಗದಿದ್ದರೂ ಕೇಂದ್ರ ಸರಕಾರದತ್ತ ತೋರಿಸುತ್ತಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.ಉತ್ತರಿಸಿದರು.

ಇದನ್ನೂ ಓದಿ: Karnataka Politics: ಈಗಲೇ ಎಷ್ಟುಬೇಕೋ ಕುಡಿದುಬಿಡಿ: ಎಣ್ಣೆ ಹೊಡೆಯೋರಿಗೆ ಆರ್‌. ಅಶೋಕ್‌ ಟಿಪ್ಸ್‌

Exit mobile version