Site icon Vistara News

Criminal politics | ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಈಗ ಕೆಪಿಸಿಸಿ ಅಧ್ಯಕ್ಷ: ಬಿಜೆಪಿ ಚಾರ್ಜ್‌ಶೀಟ್‌

BJP VS DKS

ಬೆಂಗಳೂರು: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ರೌಡಿ ಜಗಳ (Criminal politics) ವಸ್ತುಶಃ ಬೀದಿಗೆ ಬಂದಿದೆ. ಎರಡೂ ಪಕ್ಷಗಳು ಪರಸ್ಪರ ಜಿದ್ದಿಗೆ ಬಿದ್ದಂತೆ ಮಾತಿನಲ್ಲೇ ಕತ್ತಿ ಮಸೆಯುತ್ತಿವೆ. ಕಾಂಗ್ರೆಸ್‌ ಪ್ರತಿಯೊಬ್ಬ ಬಿಜೆಪಿ ನಾಯಕ ಮತ್ತು ರೌಡಿಗಳ ಸಂಬಂಧವನ್ನು ಬೆಸೆದು ಗೇಲಿ ಮಾಡುತ್ತಿದೆ. ಜತೆಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗಲು ರೌಡಿಸಮ್ಮೇ ಪ್ರಧಾನ ಅರ್ಹತೆ ಎಂದೆಲ್ಲಾ ಅವಹೇಳನ ಮಾಡಲು ಶುರುಮಾಡಿದೆ. ಇದರಿಂದ ಗರಮ್‌ ಆಗಿರುವ ಬಿಜೆಪಿ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನೇ ಟಾರ್ಗೆಟ್‌ ಮಾಡಿದೆ.

ಎರಡೂ ಪಕ್ಷಗಳ ಟ್ವಿಟರ್‌ ಮತ್ತು ಫೇಸ್‌ ಬುಕ್‌ನ್ನು ಬಳಸಿಕೊಂಡು ಪರಸ್ಪರ ಮೂದಲಿಕೆಗೆ ಮುಂದಾಗಿವೆ. ಕಾಂಗ್ರೆಸ್‌ ಟ್ವಿಟರ್‌ ಮೂಲಕ ಸಿಎಂ ಬೊಮ್ಮಾಯಿ ಆದಿಯಾಗಿ ಎಲ್ಲರಿಗೂ ಪ್ರಶ್ನಾ ಬಾಣಗಳನ್ನು ಬಿಡುತ್ತಿದ್ದರೆ ಬಿಜೆಪಿ ಫೇಸ್‌ ಬುಕ್‌ ಮೂಲಕ ಕಾಲು ಕೆರೆದಿದೆ. ʻʻರೌಡಿಗಳ ಕಿಂಗ್ ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಡಿ. ಕೆ. ಶಿವಕುಮಾರ್ ಅವರನ್ನೇ ರಾಜ್ಯಾಧ್ಯಕ್ಷನನ್ನಾಗಿ ಮಾಡಿರೋ ಕಾಂಗ್ರೆಸ್‌ಗೆ ಬಿಜೆಪಿಯ ಬಗ್ಗೆ ಮಾತಾಡೋ ನೈತಿಕೆಯಿದೆಯಾ ಎಂದು ಪ್ರಶ್ನಿಸಿಕೊಳ್ಳಲಿʼʼ ಎಂದು ನೇರ ದಾಳಿ ಮಾಡಿದೆ.

ಬಿಜೆಪಿ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವ ಅಂಶಗಳು ಇಲ್ಲಿವೆ.
೧. ರೌಡಿಗಳ ಕಿಂಗ್ ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಡಿ.ಕೆ. ಶಿವಕುಮಾರ್ ಅವರನ್ನೇ ರಾಜ್ಯಾಧ್ಯಕ್ಷನನ್ನಾಗಿ ಮಾಡಿರೋ ಕಾಂಗ್ರೆಸ್‌ಗೆ ಬಿಜೆಪಿಯ ಬಗ್ಗೆ ಮಾತಾಡೋ ನೈತಿಕೆಯಿದೆಯಾ ಎಂದು ಪ್ರಶ್ನಿಸಿಕೊಳ್ಳಲಿ.
೨. ಅಧ್ಯಕ್ಷರಿಂದ ಆರಂಭವಾಗುವ ಇವರ ಕ್ರೂರ ಪಟ್ಟಿ ಮೊನ್ನೆ ಮೊನ್ನೆ ಬಾರಲ್ಲಿ ಅಮಾಯಕರಿಗೆ‌ ಹೊಡೆದ ಮರಿ ರೌಡಿ ಮಹಮ್ಮದ್ ನಲಪಾಡ್‌ವರೆಗೂ ಇದೆ.
೩. ರೌಡಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್ ಕುಖ್ಯಾತ ಕೊಲೆ‌ ಅರೋಪಿ ವಿನಯ್ ಕುಲಕರ್ಣಿ ಬಗ್ಗೆ ಮಾತಾಡಲ್ಲವೇಕೆ?
೪.”ಕೆ‌ಜೆ ಜಾರ್ಜೇ ನನ್ನ ಸಾವಿಗೆ ಕಾರಣ” ಎಂದು ಜೀವಬಿಟ್ಟ ಡಿವೈಎಸ್‌ಪಿ ಗಣಪತಿ ನೆನಪಿದೆಯೇ?

ಕಾಂಗ್ರೆಸ್‌ನಲ್ಲಿ ದರೋಡೆಕೋರರೂ ಇದ್ದಾರೆ!
೫. ಕಾಂಗ್ರೆಸ್‌ನಲ್ಲಿ ರೌಡಿಗಳು ಮಾತ್ರವಲ್ಲ ದರೋಡೆಕೋರರೂ ಇದ್ದಾರೆ. 2011 ರಲ್ಲಿ ಜಮೀರ್ ಅಹ್ಮದ್ ವಿರುದ್ಧ ದರೋಡೆ ಪ್ರಕರಣ ದಾಖಲಾಗಿ ವಾರೆಂಟ್ ನೀಡಲಾಗಿತ್ತು. ಎಲ್ಲಿ ತಮ್ಮ ಮನೆ ದರೋಡೆ ಮಾಡಿಬಿಟ್ರೆ ಎಂದು ಗ್ಯಾಂಗ್‌ ಲೀಡರ್ ಡಿ.ಕೆ. ಶಿವಕುಮಾರ್ ಸುಮ್ಮನಿದ್ದಾರೆಯೇ?
೬. ಪಿಎಸ್‌ಐ ಟಿ.ಆರ್‌. ಶ್ರೀನಿವಾಸ್‌ರನ್ನು ಸಾರ್ವಜನಿಕವಾಗಿ ಅವಮಾನಿಸುವುದರ ಜೊತೆಗೆ ಜೀವ ಬೆದರಿಕೆಯೂ ಹಾಕ್ತಾರೆ ನಿಮ್ಮ ಡಿ.ಕೆ. ಸುರೇಶ್.
೭. ಎಲ್ಲ ಬಿಡ್ರೀ, ಬೆಂಗಳೂರಿನ ಸಕಲ ರೌಡಿಗಳನ್ನೂ ಪೋಷಿಸಿ, ಪ್ರೋತ್ಸಾಹಿಸುತ್ತಿರುವ ಮಹಾನ್ ನಾಯಕ ರಾಮಲಿಂಗ ರೆಡ್ಡಿ ಪ್ರತಿ ಸಲ‌ ಎಲೆಕ್ಷೆನ್‌ನಲ್ಲಿ ಗೆಲ್ಲುತ್ತಿರುವುದೇ ರೌಡಿಗಳ ಕೃಪೆಯಿಂದ ಎಂಬುದು ಇಡೀ ಲೋಕಕ್ಕೇ ಗೊತ್ತು. ಬೇಕಾದ್ರೆ ರೌಡಿ ನಾಗನ ಜೊತೆ ರೆಡ್ಡಿ ಸಾಹೇಬರ ಸಂಬಂಧವೇನು ಎಂಬುದನ್ನು ಮಾಧ್ಯಮಗಳೇ ಬಿಚ್ಚಿಟ್ಟಿದ್ದಾವೆ ನೋಡಿ.
೮. ಇನ್ನು ಸೌಮ್ಯಾ ರೆಡ್ಡಿಯವರು ಹೇಗೆ ಗೆದ್ದರು ಎಂಬುದನ್ನು ನಾವು ಹೇಳಲು ಹೋಗುವುದಿಲ್ಲ ಬಿಡಿ.

ಸೋಲಿನ ಸರದಾರ ಬಿ.ಕೆ. ಹರಿಪ್ರಸಾದ್
‌೯. ಕೊತ್ವಾಲನ ರೈಟ್‌ಹ್ಯಾಂಡಾಗಿ ಡಿಕೆಶಿ ಇದ್ದರೆ ಲೆಫ್ಟ್‌ಹ್ಯಾಂಡಲ್ಲಿ ನಿಂತವರೇ ನಮ್ಮ ನಿಮ್ಮೆಲ್ಲರ ಸೋಲಿನ ಸರದಾರ ಬಿ.ಕೆ. ಹರಿಪ್ರಸಾದ್. ರೌಡಿಗಳಿಂದ ಇವರು ಈಗಲೂ ಸೆಲ್ಯೂಟ್ ಹೊಡೆಯುವಷ್ಟು ಹವಾ ಇಟ್ಟಿದ್ದಾರೆ ಎಂಬುದು ಹಳೆ‌ ವಿಷಯ.
೧೦. ರೌಡಿಗಳು, ಕಳ್ಳರು, ಕೊಲೆಗಾರರು, ದರೋಡೆಕೋರರು, ಭ್ರಷ್ಟಾಚಾರಿಗಳೇ ನಾಯಕರಾಗಿರೋ ಕಾಂಗ್ರೆಸ್ ರೌಡಿ‌ ರಾಜ್ಯದ ಬಗ್ಗೆ ಭಾಷಣ ಬಿಗಿಯುತ್ತಿರುವುದು, ಅಲ್ಲೆಲ್ಲೋ ಇರುವ ಅಲ್‌ಖೈದಾದವನು ಶಾಂತಿಯ ಸಂದೇಶ ಸಾರಿದಷ್ಟೇ ಅದಕ್ಕೆ ಪ್ರಾಮುಖ್ಯತೆ. ಭಯದಿಂದ ಅಣ್ಣಾ ಎಂದು ಕರೆಸಿಕೊಳ್ಳುವ ಡಿಕೆಶಿ ಪಟಾಲಮ್ಮಿನಿಂದ ಬಿಜೆಪಿಗೆ ಪಾಠ ಬೇಕಾಗಿಲ್ಲ.

ಇದನ್ನೂ ಓದಿ | Criminal politics | ರೌಡಿ ಪಾಲಿಟಿಕ್ಸ್‌ ಅಭಿಯಾನ ತೀವ್ರ: ಬಿಜೆಪಿಯನ್ನು ಗೇಲಿ ಮಾಡಲು ವೆಬ್‌ಸೈಟ್‌ ತೆರೆದ ಕಾಂಗ್ರೆಸ್‌

Exit mobile version