Site icon Vistara News

Scheme vs Scam: ಜನಪರ ಸ್ಕೀಂ ಕೊಟ್ಟಿದ್ದು ಬಿಜೆಪಿ; ಸ್ಕ್ಯಾಮ್ ಕೊಟ್ಟಿದ್ದು ಕಾಂಗ್ರೆಸ್: ಸಿ.ಟಿ.ರವಿ ವಾಗ್ದಾಳಿ

CT Ravi

ಮಂಗಳೂರು: ಲೋಕತಂತ್ರಕ್ಕೆ- ಪ್ರಜಾಪ್ರಭುತ್ವಕ್ಕೆ ಬಲ ಕೊಟ್ಟವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಆದರೆ ವಿಪಕ್ಷ ನಾಯಕರು ಅವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ಲೇಷಿಸಿದರು (Scheme vs Scam).

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿ.ಟಿ. ರವಿ, ವಿಪಕ್ಷ ನಾಯಕರು ಅವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಅವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಕಾರಣಕ್ಕಾಗಿಯೇ ಎಲ್ಲ ವಿಪಕ್ಷ ನಾಯಕರು ಲೋಕತಂತ್ರ ಅಪಾಯದಲ್ಲಿದೆ ಎಂದು ಮಾತನಾಡುತ್ತಿದ್ದಾರೆ.

ವಂಶಪಾರಂಪರ್ಯ ರಾಜಕಾರಣ ಮಾಡುವವರು ಆತಂಕಕ್ಕೆ ಒಳಗಾಗಿದ್ದಾರೆ. ಅವರು ದುರ್ಬಲರಾಗುತ್ತಿದ್ದಾರೆ. ಇದು ಬಿಜೆಪಿಯ ಜನಪರ ಸ್ಕೀಂ ವರ್ಸಸ್ ಸ್ಕ್ಯಾಮ್ (ಹಗರಣ) ನಡುವಿನ ಆಡಳಿತ. ಜನಪರ ಸ್ಕೀಂಗಳನ್ನು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಪ್ರತಿನಿಧಿಸುತ್ತದೆ. ಯುಪಿಎ ಸರ್ಕಾರ, ಕಾಂಗ್ರೆಸ್ ಬೆಂಬಲಿತ ಸರ್ಕಾರವು ಸ್ಕ್ಯಾಮ್ ಅನ್ನು (ಹಗರಣ) ಪ್ರತಿನಿಧಿಸುತ್ತದೆ ಎಂದು ವಿಶ್ಲೇಷಿಸಿದರು.

ವಂಶಪಾರಂಪರ್ಯವನ್ನು ಪ್ರತಿನಿಧಿಸುವ ಕೆಲಸವನ್ನು ಕಾಂಗ್ರೆಸ್, ಆರ್‌ಜೆಡಿ, ಎನ್‍ಸಿಪಿ, ಸಮಾಜವಾದಿ ಪಕ್ಷಗಳು ಮಾಡಿವೆ. ಪ್ರಜಾಪ್ರಭುತ್ವದ ಆಶಯವನ್ನು ಪ್ರತಿನಿಧಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಜಾತಿವಾದವನ್ನು ಕಾಂಗ್ರೆಸ್ ಮತ್ತಿತರ ಪಕ್ಷಗಳು ಪ್ರತಿನಿಧಿಸಿದರೆ, ಬಿಜೆಪಿ ರಾಷ್ಟ್ರವಾದವನ್ನು ಪ್ರತಿನಿಧಿಸುತ್ತದೆ.

ಕಳೆದ 9 ವರ್ಷಗಳಲ್ಲಿ ಮೋದಿ ಅವರ ಆಡಳಿತದಲ್ಲಿ ಸಾಧನೆ ಎಂಬುದು ಅನುಭವವೇದ್ಯವಾಗಿದೆ. ಭಾರತಕ್ಕೆ ಜಾಗತಿಕವಾಗಿ ಮನ್ನಣೆ ಸಿಗುತ್ತಿದೆ. ಭಾರತೀಯರ ಪಾಸ್‍ಪೋರ್ಟಿಗೆ ಜಗತ್ತಿನಲ್ಲಿ ಗೌರವ ಬಂದಿದೆ. ಭಾರತದ ಬಡವರಿಗೆ ಬಲ ತುಂಬುವ ಕಾರ್ಯವನ್ನು ಮೋದಿಯವರ ಬಿಜೆಪಿ ಸರ್ಕಾರ ಮಾಡುತ್ತಿದೆ. ಈ ಎಲ್ಲ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದರು.

ಇದನ್ನೂ ಓದಿ: Opposition Meet: ಪಾಟ್ನಾದಲ್ಲಿ ನಾಳೆ ಪ್ರತಿಪಕ್ಷಗಳ ಸಭೆ; ಮೋದಿ ವಿರುದ್ಧ ತೊಡೆ ತಟ್ಟಿದ ನಾಯಕರು!

Exit mobile version