Site icon Vistara News

DK Shivakumar | ಉಗ್ರರಿಗೆ ಬೆಂಬಲ ನೀಡುವ ಕಾಂಗ್ರೆಸ್‌ ವಿರುದ್ಧ ಡಿ.19, 20, 21ರಂದು ಬಿಜೆಪಿ ಪ್ರತಿಭಟನೆ

BJP VS DKS

ಬೆಂಗಳೂರು: ಉಗ್ರರಿಗೆ ಬೆಂಬಲ ನೀಡುವ ಕಾಂಗ್ರೆಸ್‌ ವಿರುದ್ಧ ಮತ್ತು ಅದರ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ. ಡಿ. ೧೯, ೨೦, ೨೧ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಹೇಳಿದರು.

ʻʻಭಯೋತ್ಪಾದಕರನ್ನು ರಕ್ಷಣೆ ಮಾಡುವಂತಹ ವಿರೋಧ ಪಕ್ಷ ನಮ್ಮ ರಾಜ್ಯದಲ್ಲಿದೆ. ಈ ಹಿಂದೆ ಆಡಳಿತದಲ್ಲಿದ್ದಾಗ ಭಯೋತ್ಪಾದಕರನ್ನು ರಕ್ಷಿಸುವಂತಹ, ಭಯೋತ್ಪಾದಕರ‌ ವಿರುದ್ಧದ ಕೇಸ್‌ಗಳನ್ನು ತೆಗೆದುಹಾಕುವ ಕೆಲಸವಾಗಿದೆʼʼ ಎಂದು ಹೇಳಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಸೇರಿಕೊಂಡು ʻಉಗ್ರ ಭಾಗ್ಯ, ಪಿಎಫ್‌ಐ ಭಾಗ್ಯ, ಟಿಪ್ಪು ಭಾಗ್ಯ ಎಲ್ಲವನ್ನೂ ನೀಡಿದ್ದಾರೆʼʼ ಎಂದರು.

ʻʻಮಂಗಳೂರಿನಲ್ಲಿ ಆಗಿರುವ ಕುಕ್ಕರ್ ಬಾಂಬ್ ಬ್ಲಾಸ್ಟ್ ಬಗ್ಗೆ ಡಿಕೆಶಿ ಪ್ರಶ್ನೆ ಮಾಡಿದ್ದಾರೆ. ಕುಕ್ಕರ್‌ನಲ್ಲಿ ಬಾಂಬ್‌ ಇಟ್ಟು ಬ್ಲಾಸ್ಟ್‌ ಮಾಡೋದು ಪ್ರಪಂಚದಾದ್ಯಂತ ಇದೆ. ಕುಕ್ಕರ್‌ ಬ್ಲಾಸ್ಟ್‌ ನಿಜವಾಗಿಯೂ ಪೂರ್ಣ ಪ್ರಮಾಣದಲ್ಲಿ ಆಗಿದ್ದರೆ ದೊಡ್ಡ ಜೀವ ಹಾನಿಯಾಗಿರುತ್ತಿತ್ತು ಎಂದು ಪೋಲಿಸರೇ ಹೇಳಿದ್ದಾರೆ. ಉಗ್ರ ಶಾರಿಕ್‌ ಹೊಂದಿರುವ ನೆಟ್ವರ್ಕನ್ನೂ ಪೊಲೀಸರು ಬಯಲು ಮಾಡಿದ್ದಾರೆ. ಹೀಗಾಗಿಯೇ ಡಿ.ಕೆ ಶಿವಕುಮಾರ್ ಅವರಿಗೆ ಗಾಬರಿಯಾಗಿದೆ. ಬಹುಶಃ ಆ ನೆಟ್ವರ್ಕ್‌ನಲ್ಲಿ ಕಾಂಗ್ರೆಸ್‌ನವರೂ ಇರಬೇಕುʼʼ ಎಂದು ಹೇಳಿದರು ರವಿಕುಮಾರ್‌.

ʻʻಎನ್‌ಐಎ ಮತ್ತು ರಾಜ್ಯ ಪೋಲಿಸ್ ಇಲಾಖೆ ಘಟನೆಯ ಪೂರ್ಣ ತನಿಖೆಯನ್ನು ಮಾಡುತ್ತಿದೆ. ವೋಟಿನ ಗಂಟಿನ ಆಸೆಯಿಂದ ಡಿಕೆಶಿ ಈ ರೀತಿ ಮಾತನಾಡುವುದನ್ನು ನಿಲ್ಲಿಸಬೇಕು. ಭಯೋತ್ಪಾದಕರನ್ನು ಭಯೋತ್ಪಾದಕರೆಂದು ಕರೆಯುವ ಧಮ್ ತೋರಿಸಿ, ಇಲ್ಲವಾದರೆ ತೆಪ್ಪಗಿರಿʼʼ ಎಂದು ರವಿಕುಮಾರ್‌ ಛೇಡಿಸಿದರು.

ಇದನ್ನೂ ಓದಿ | DK Shivakumar | ಡಿಕೆಶಿ ಕುಕ್ಕರ್‌ ಬಾಂಬ್‌ ಹೇಳಿಕೆಗೆ ಕೊನೆಗೂ ಸಿಕ್ತು ಬೆಂಬಲ, ಸಮರ್ಥನೆಗೆ ನಿಂತ ಪ್ರಿಯಾಂಕ್‌ ಖರ್ಗೆ

Exit mobile version