Site icon Vistara News

Karnataka Election: ಬಹುಮತ ಇಲ್ಲದೆ ಅಧಿಕಾರ ಕಟ್ಟಿಕೊಂಡವರು ನಾವು, ಈ ಬಾರಿ ಬಿಜೆಪಿ ಸರ್ಕಾರ ಖಚಿತ: ಬಿ.ಎಲ್.ಸಂತೋಷ್

B L Santhosh says Adjustment politics between HD Kumaraswamy and DK Shivakumar

ಶಿವಮೊಗ್ಗ: ಬರೀ ಶಿವಮೊಗ್ಗ ಅಲ್ಲ ಎಲ್ಲಾ ಕಡೆ ಬಿಜೆಪಿಯನ್ನು ಗೆಲ್ಲಿಸಬೇಕು. ಸಂಪೂರ್ಣ ಮೆಜಾರಿಟಿಗೆ ಪಕ್ಷವನ್ನು ಕರೆದುಕೊಂಡು ಹೋಗಬೇಕು. ಎಷ್ಟೇ ಸರ್ವೇ ಆಗಲಿ, ನಮ್ಮ ಕಾರ್ಯಕರ್ತರ ಸರ್ವೆ ನಮ್ಮ ಹತ್ತಿರ ಇದೆ. ನಾವು ಸಂಪೂರ್ಣ ಬಹುಮತ ಇಲ್ಲದೇ ಅಧಿಕಾರ ಕಟ್ಟಿಕೊಂಡವರು. ಈ ಬಾರಿ ಅಧಿಕಾರಕ್ಕೆ (Karnataka Election) ಬಂದೇ ಬರುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಾಮರಸ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಇಂತಹ ಹತ್ತಾರು ಚುನಾವಣೆ ಎದುರಿಸುವ, ಪಕ್ಷದ ಗೆಲುವಿಗೆ ಸಹಾಯಕರಾಗಿರುವ ಕಾರ್ಯಕರ್ತರಿಗೆ ಏನು ಮಾಡಿದರೆ ಗೆಲ್ಲುತ್ತದೆ ಎಂಬುವುದು ಗೊತ್ತಿದೆ. ಭದ್ರಾವತಿಯೂ ಗೆಲ್ಲಬೇಕು ಎಲ್ಲ ಕ್ಷೇತ್ರಗಳೂ ಗೆಲ್ಲಬೇಕು. 110 ಸೀಟ್‌ ಬಂದರೂ ಕಷ್ಟ. ಹೀಗಾಗಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಬೇಕು. ಕಾಂಗ್ರೆಸ್, ಮೀಡಿಯಾದವರು ಹತ್ತು ಸರ್ವೇ ಮಾಡಲಿ, ನಮ್ಮ ಹತ್ತಿರ ಸರ್ವೇ ಇದೆ. ಬಿಜೆಪಿ ಜನರ ಬೆಂಬಲ ಇದೆ ಎಂಬುವುದಕ್ಕೆ ಶನಿವಾರ ಪ್ರಧಾನಿ ರೋಡ್ ಶೋದಲ್ಲಿ ಸೇರಿದ ಜನರೇ ಸಾಕ್ಷಿ ಎಂದು ಹೇಳಿದರು.

ಫಸ್ಟ್ ರ‍್ಯಾಂಕ್ ಬರುತ್ತೇವೆ ಎಂದು ಸುಮ್ಮನೆ ಕೂರಂಗಿಲ್ಲ, ಇನ್ನೂ ಓದಬೇಕು. ಕಳೆದ ಒಂಬತ್ತು ವರ್ಷಗಳ ಕೇಂದ್ರ ಸರ್ಕಾರದ ರಿಪೋರ್ಟ್ ಕಾರ್ಡ್ ಇದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬೇಕಾಗಿಲ್ಲ. ಸುಡಾನ್‌ನಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಆಪರೇಷನ್ ಕಾವೇರಿ ಮೂಲಕ ಸ್ವದೇಶಕ್ಕೆ ಕರೆತರಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಟ್ವೀಟ್ ಮಾಡಿ ಧನ್ಯವಾದ ಹೇಳಲಿಲ್ಲ, ಒಳ್ಳೆಯ ಕೆಲಸಕ್ಕೆ ಧನ್ಯವಾದ ಹೇಳುವುದೂ ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ | Karnataka Election 2023: ಕಾಂಗ್ರೆಸ್, ಜೆಡಿಎಸ್‌ಗೆ ಕರ್ನಾಟಕ ಎಟಿಎಂ; ಬಿಜೆಪಿಗೆ ಅಭಿವೃದ್ಧಿ ಮುಖ್ಯ ಎಂದ ಪ್ರಧಾನಿ ಮೋದಿ

2008ರ ಭಾಗ್ಯಲಕ್ಷ್ಮಿ ಯೋಜನೆಯ ಅನುದಾನ 2023ಕ್ಕೆ ಕ್ಕೆ ಬರುತ್ತಿದೆ. ಸಣ್ಣ ರೈತರ ಖಾತೆಗೆ ಪ್ರತಿ ವರ್ಷ 10 ಸಾವಿರ ರೂಪಾಯಿ ಜಮಾ ಆಗುತ್ತಿದೆ. ದೇಶದಲ್ಲಿ ಎಲ್ಲ ಜನರಿಗೆ ಉಚಿತ ವ್ಯಾಕ್ಸಿನ್ ಕೊಟ್ಟ ಹೆಗ್ಗಳಿಕೆ ಮೋದಿ ಸರ್ಕಾರಕ್ಕಿದ್ದು, ಯಾರ ಲೆಟರ್ ಇಲ್ಲದೇ ಬಡವರಿಗೂ ನಮ್ಮ ಸರ್ಕಾರದಲ್ಲಿ ವ್ಯಾಕ್ಸಿನ್ ಸಿಕ್ಕಿದೆ ಎಂದ ಅವರು, ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳಾಗಬೇಕು ಎಂದರೆ ಬಿಜೆಪಿಗೆ ಸಂಪೂರ್ಣ ಬಹುಮತ ಬರಬೇಕು ಎಂದು ಹೇಳಿದರು.

ಸಂಪೂರ್ಣ ಬಹುಮತ ಬರದಿದ್ದರಿಂದ ಯಡಿಯೂರಪ್ಪನವರು ಆಡಳಿತ ನಡೆಸುವುದು ಕಷ್ಟವಾಯಿತು. ಸಂಪೂರ್ಣ ಬಹುಮತ ಬಂದಿದ್ದರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಬಹುಮತ ಇಲ್ಲದಿದ್ದರೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ತೆಗೆಯಲು ಆಗುತ್ತಿರಲಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ಮೇಲಿದ್ದ 1500 ಕೇಸ್‌ ವಾಪಸ್ ಪಡೆಯಿತು. ಮತ್ತೆ ಅವರು ಬರಬೇಕಾ? ಸಿದ್ದರಾಮಯ್ಯ ಕಾಲದಲ್ಲಿ ರುದ್ರೇಶ್, ಶರತ್ ಮಡಿವಾಳ ಹತ್ಯೆ ಆಯಿತು. ಹೀಗಾಗಿ ಸಂಸ್ಕೃತಿ, ದೇಶ ಉಳಿಯಲು ಹಾಗೂ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | Karnataka Election 2023: ಶೀಘ್ರವೇ ನನಗೆ ಬೈಯುವುದರಲ್ಲಿ ಕಾಂಗ್ರೆಸಿಗರು ಶತಕ ಬಾರಿಸಲಿದ್ದಾರೆ; ಪ್ರಧಾನಿ ಮೋದಿ

ತ್ರಿಪುರ, ಅರುಣಾಚಲ, ಅಸ್ಸಾಂ, ಮಣಿಪುರದಲ್ಲಿ ಸಂಪೂರ್ಣ ಅಧಿಕಾರ ಪಡೆದು ನಮ್ಮದೇ ಬಿಜೆಪಿ ‌ಮುಖ್ಯಮಂತ್ರಿಗಳಿದ್ದಾರೆ. ಪ್ರತಿ ಮನೆಯಲ್ಲಿ ತಿರಂಗಾ ಹಾರಿಸಿದ್ದಾರೆ. ರಾಜ್ಯದಲ್ಲಿ ಪ್ರತಿ‌ಮನೆಯಲ್ಲಿ ದೇಶಭಕ್ತರು ಇದ್ದಾರೆ ಎಂದ ಬಿ.ಎಲ್‌. ಸಂತೋಷ್‌ ಅವರು, ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಯಾವ ಜಾತಿಗೂ ಬಿಜೆಪಿ ಸರ್ಕಾರ ಮೋಸ ಮಾಡಿಲ್ಲ. ಆದರೆ, ಎಸ್‌ಸಿ ಒಳ ಮೀಸಲಾತಿ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಶೇ.4 ಮೀಸಲಾತಿ ಕೊಟ್ಟಿದ್ದರು. ಹಿಂದುಗಳಿಗೆ ಅಂತ ಮೀಸಲಾತಿ ಎಲ್ಲೂ ಇಲ್ಲ. ಕಾಂಗ್ರೆಸ್, ಜೆಡಿಎಸ್‌ನವರು ಈವರೆಗೆ ತುಷ್ಟೀಕರಣ ಮಾಡಿದ್ದರು. ಆ ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ಕಿತ್ತು ಹಾಕಿದ್ದು, ಮುಸ್ಲಿಮರನ್ನು ಆರ್ಥಿಕ ದುರ್ಬಲ ವರ್ಗಗಳ ಪಟ್ಟಿಗೆ ವರ್ಗಾಯಿಸಲಾಗಿದೆ. ಕೇವಲ 104 ಸ್ಥಾನ ಇದ್ದೇ ಹೀಗೆ ಮಾಡಿದೆವು. ಇನ್ನು 123 ಸೀಟ್‌ ಬಂದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ | Karnataka Election 2023: ದಿಲ್ಲಿ ಕುಟುಂಬದ ಮುಂದೆ ಅಡ್ಡಡ್ಡ ಬೀಳುತ್ತಾರೆ ಕಾಂಗ್ರೆಸ್ ನಾಯಕರು; ಪ್ರಧಾನಿ ಮೋದಿ ಲೇವಡಿ

ಬಿಜೆಪಿ ಮನೆಯೊಳಗೆ ಅವಿಶ್ವಾಸ ಮೂಡಿಸಲು ಆಗಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲೆ ಮತದಿಂದ ಬಿಜೆಪಿ ಗೆಲ್ಲಬೇಕು. ಈಶ್ವರಪ್ಪನವರಿಗಿಂತ ಹೆಚ್ಚು ಅಂತರದಿಂದ ಚನ್ನಬಸಪ್ಪರನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ, ಭಾನುಪ್ರಕಾಶ್ ಮತ್ತಿತರರು ಭಾಗಿಯಾಗಿದ್ದರು.

Exit mobile version