Site icon Vistara News

Blast in Bengaluru: ಗೃಹ ಸಚಿವರೇ ನೀವು ಅನ್‌ಫಿಟ್‌! ರಾಜೀನಾಮೆ ಕೊಟ್ಟು ಹೊರಡಿ ಎಂದ ಬಿಜೆಪಿ

Blast in Bengaluru BJP demands resignation of Home Minister Dr Parameshwara

ಬೆಂಗಳೂರು: ವೈಟ್‌ಫೀಲ್ಡ್‌ನ (Whitefield) ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೆ (Blast in Bengaluru) ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ಘಟಕವು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ. ಗೃಹ ಸಚಿವ ಸ್ಥಾನಕ್ಕೆ ನೀವು ಅನ್‌ಫಿಟ್‌ ಆಗಿದ್ದು, ಕೂಡಲೇ ರಾಜೀನಾಮೆ ಕೊಡಿ ಎಂದು “ResignParameshwar” ಹ್ಯಾಷ್‌ಟ್ಯಾಗ್‌ನಡಿ ಕಿಡಿಕಾರಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕವು, ರಾಜ್ಯದಲ್ಲಿ ಈ ಹಿಂದೆ ನಡೆದಿರುವ ಹಲವು ಪ್ರಕರಣಗಳನ್ನು ಉಲ್ಲೇಖಿಸಿ, ಈಗ ನಡೆದಿರುವ “ಪಾಕಿಸ್ತಾನ್‌ ಜಿಂದಾಬಾದ್‌” ಪ್ರಕರಣದಲ್ಲಿನ ಹೇಳಿಕೆಯನ್ನು ಆಧರಿಸಿ ವಾಗ್ದಾಳಿ ನಡೆಸಿದೆ.

ಬಿಜೆಪಿ ಪೋಸ್ಟ್‌ನಲ್ಲೇನಿದೆ?

“ಬಂಧಿತ ಉಗ್ರನನ್ನು ಈಗಲೇ ಭಯೋತ್ಪಾದಕರು ಎನ್ನಲಾಗದು ಎನ್ನುವ ಮೂಲಕ ಅಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಕ್ಲೀನ್‌ಚಿಟ್‌ ಕೊಡುವುದಕ್ಕೆ ಮುಂದಾಗಿದ್ದರು.

ಇಡೀ ದೇಶವೇ ಕೇಳುವಂತೆ ವಿಧಾನಸೌಧದಲ್ಲೇ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ್ದ ದೇಶ ದ್ರೋಹಿಗಳನ್ನು ರಕ್ಷಣೆ ಮಾಡಲು ಸದನದಲ್ಲಿ ತನಿಖೆಗೆ ಮೊದಲೇ ಕ್ಲೀನ್‌ಚಿಟ್‌ ಕೊಟ್ಟಿದ್ದಾರೆ ಅಪ್ರಬುದ್ಧ ಗೃಹ ಸಚಿವರು.

ಉಡುಪಿ ಕಾಲೇಜಿನ ಘಟನೆಯನ್ನು ಮಕ್ಕಳಾಟ ಎನ್ನುವುದು, ಪಿಎಫ್‌ಐ ಗಲಭೆಕೋರರನ್ನು ಅಮಾಯಕರು ಎನ್ನುವುದು ನೋಡಿದರೆ ಪರಮೇಶ್ವರ್‌ ಅವರು ಗೃಹ ಸಚಿವ ಸ್ಥಾನಕ್ಕೆ ಅನ್‌ಫಿಟ್‌.

ಭಯೋತ್ಪಾದಕರು, ದೇಶ ದ್ರೋಹಿಗಳ ವಿರುದ್ಧ ಮೃದು ಧೋರಣೆ ತೋರಿಸುತ್ತಿರುವುದಾದರೂ ಏಕೆ?

ಮಾನ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರೇ, ನಿಮಗೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ, ದಯವಿಟ್ಟು ರಾಜೀನಾಮೆ ಕೊಟ್ಟು ಹೊರಡಿ” ಎಂದು ಬಿಜೆಪಿ ಆಕ್ರೋಶವನ್ನು ಹೊರಹಾಕಿದೆ.

ಬಾಂಬ್‌ ಬ್ಲಾಸ್ಟ್ ಕೇಸ್‌ ತನಿಖೆ NIA ಹೆಗಲಿಗೆ? ಇಂದೇ ಹಸ್ತಾಂತರ!

ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಸ್ಫೋಟ ಪ್ರಕರಣವನ್ನು (Blast in Bengaluru) ಸಿಸಿಬಿಯಿಂದ ಎನ್‌ಐಎಗೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು (ಭಾನುವಾರ) ಸಂಜೆ ಅಧಿಕೃತವಾಗಿ ವರ್ಗಾವಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. .

ಈಗಾಗಲೇ ಕೇಸ್ ಬಗ್ಗೆ ನಗರ ಪೊಲೀಸರಿಂದ ಎನ್‌ಐಎ ಮಾಹಿತಿಯನ್ನು ಪಡೆದುಕೊಂಡಿದೆ. ಅಲ್ಲದೆ, ಈ ಬ್ಲಾಸ್ಟ್‌ ಅನ್ನು ವ್ಯವಸ್ಥಿತವಾಗಿ ಮಾಡಲಾಗಿದ್ದು, ಎಲ್ಲಿಯೂ ಸಹ ಹೆಚ್ಚಿನ ಚಹರೆಯಾಗಲಿ, ಸುಳಿವನ್ನಾಗಲೀ ಬಿಡದಂತೆ ಪ್ಲ್ಯಾನ್‌ ಮಾಡಿ ಬ್ಲಾಸ್ಟ್‌ ಮಾಡಲಾಗಿದೆ. ಜತೆಗೆ ಇದು ಒಬ್ಬ ಕೃತ್ಯವಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರ ಹಿಂದೆ ಒಂದು ಜಾಲವೇ ಇದ್ದು, ಆ ಬಗ್ಗೆ ತನಿಖೆ ನಡೆಸಬೇಕಿದೆ. ಅಲ್ಲದೆ, ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಬಳಸಿದ ವಸ್ತುಗಳಿಗೂ, ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಬಳಕೆ ಮಾಡಲಾಗಿರುವ ವಸ್ತುಗಳಿಗೂ ಸಾಮ್ಯತೆ ಇರುವುದರಿಂದ ತನಿಖೆ ಬೇರೆ ದಿಕ್ಕಿನಲ್ಲೇ ಸಾಗಬೇಕಿದೆ. ಹೀಗಾಗಿ ಎನ್‌ಐಎ ಮಧ್ಯಪ್ರವೇಶ ಮಾಡಿದೆ. ತನಿಖೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Blast in Bengaluru: ಸರಣಿ ಸ್ಫೋಟದ ಪ್ರಯೋಗಾರ್ಥ ರಾಮೇಶ್ವರಂ ಕೆಫೆ ಬ್ಲಾಸ್ಟ್? ಸರ್ಕಾರದ ವಿರುದ್ಧ ಗುಡುಗಿದ ಸಿ.ಟಿ.ರವಿ

ಇದರ ಹಿಂದೆ ಉಗ್ರರ ಕೈವಾಡ ಇದೆಯೇ? ಅಥವಾ ವೈಯಕ್ತಿಕ ದ್ವೇಷಕ್ಕೆ ಮಾಡಲಾಗಿದೆಯೇ? ಇಲ್ಲವೇ ಬೇರೆ ಯಾವ ಕಾರಣಕ್ಕೆ ಯಾರು ಮಾಡಿರಬಹುದು ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಯಬೇಕು. ಇನ್ನು ಬಾಂಬ್‌ ಸ್ಫೋಟದಂತಹ ಪ್ರಕರಣಗಳಲ್ಲಿ ಹಲವು ತನಿಖೆಗಳನ್ನು ನಡೆಸಿರುವ ಎನ್‌ಐಎ ಜವಾಬ್ದಾರಿ ವಹಿಸಿಕೊಂಡರೆ ಜಾಲವನ್ನು ಭೇದಿಸುವುದು ಮತ್ತಷ್ಟು ಸುಲಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆಯೇ ರಾಮೇಶ್ವರಂ ಬಾಂಬ್‌ ಬ್ಲಾಸ್ಟ್‌ ಪ್ರಕರಣವನ್ನು ಸಿಸಿಬಿಯಿಂದ ಎನ್‌ಐಎಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಈ ಮೊದಲು ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಸಿಸಿಬಿಯಿಂದ ಎನ್‌ಐಎಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.

Exit mobile version