Site icon Vistara News

Car Accident: ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಕಾರು ಡಿಕ್ಕಿ; ಸವಾರ ಸಾವು; ಚೇಸ್‌ ಮಾಡಿ ಚಾಲಕನ ಹಿಡಿದ ಸ್ಥಳೀಯರು

#image_title

ಮೈಸೂರು: ನಮ್ಮ ಪ್ರಾಣಕ್ಕೆ ಹೇಗೆ ಯಾವ ರೀತಿ ಕುತ್ತು ಬರುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಕಾರು ಡಿಕ್ಕಿ (Car Accident) ಹೊಡೆದಿದೆ. ಪರಿಣಾಮ ಬೈಕ್‌ ಮೇಲೆ ಕುಳಿತು ಜ್ಯೂಸ್ ಕುಡಿಯುತ್ತಿದ್ದ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಹಳ್ಳಿ ಗ್ರಾಮದಲ್ಲಿ ನಡೆದಿದೆ. ರವಿಕುಮಾರ್ ಮೃತ ದುರ್ದೈವಿ ಆಗಿದ್ದಾರೆ.

ಮೈಸೂರು- ತಿ.ನರಸೀಪುರ ರಸ್ತೆ ಮಾರ್ಗವಾಗಿ ಬಹಳ ವೇಗದಲ್ಲಿ ಬರುತ್ತಿದ್ದ ಕಾರೊಂದು ಸೀದಾ ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿ ಕುಳಿತಿದ್ದ ರವಿಕುಮಾರ್‌ ದೂರಕ್ಕೆ ಹಾರಿ ಬಿದ್ದಿದ್ದಾರೆ. ಈ ವೇಳೆ ತಲೆಗೆ ಗಂಭೀರವಾಗಿ ಗಾಯಗಳಾಗಿವೆ. ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೊಲೀಸ್ ಬಡಾವಣೆಯ ನಿವಾಸಿಯಾಗಿರುವ ರವಿಕುಮಾರ್ ಸಾವಿನ ಸುದ್ದಿ ಕೇಳಿ ಅಪಘಾತ ನಡೆದ ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇತ್ತ ಅಪಘಾತ ಮಾಡಿ ಎಸ್ಕೇಪ್‌ ಆಗಲು ಪ್ರಯತ್ನಿಸಿದ ಕಾರು ಚಾಲಕನನ್ನು ಸ್ಥಳೀಯರು ಚೇಸ್‌ ಮಾಡಿ ಹಿಡಿದಿದ್ದಾರೆ. ಆರೋಪಿ ಸಿದ್ದಾರ್ಥ ಎಂಬಾತನನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚಲಿಸುತ್ತಿದ್ದಾಗಲೇ ಟಯರ್‌ ಸ್ಫೋಟ; ಕಾರು ಪಲ್ಟಿಯಾಗಿ ನಾಲ್ವರ ಸ್ಥಿತಿ ಗಂಭೀರ

ವಿಜಯಪುರ: ಚಲಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡಿದ್ದು, ರಸ್ತೆ ಪಕ್ಕಕ್ಕೆ ಪಲ್ಟಿ (Road Accident) ಆಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಸಿಂದಗಿ ತಾಲೂಕಿನ ರಾಂಪುರ್ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.

ಕಾರಿನಲ್ಲಿದ್ದ ನಿಂಗಪ್ಪ ಕುಡಕಿ (75), ಪಾರ್ವತಿ ಕುಡಕಿ (60), ಸಿದ್ಧಾರೂಢ ಕುಡಕಿ (20) ಅಯ್ಯಪ್ಪ ಕುಡಕಿ (36) ಎಂಬುವವರು ಕಾರಿನಲ್ಲಿ ಬರುವಾಗ ಈ ದುರಂತ ನಡೆದಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದಾರೆ. ಕಾರಿನೊಳಗೆ ಸಿಲುಕಿ ನರಳಾಡುತ್ತಿದ್ದವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಯಂತ್ರಣ ತಪ್ಪಿ ಮನೆಯ ಮೇಲೆಯೇ ಉರುಳಿದ ಟ್ರ್ಯಾಕ್ಟರ್‌

ಚಿಕ್ಕಮಗಳೂರು: ಜಿಲ್ಲೆಯ ಬೆಟ್ಟದ ಭಾಗದಲ್ಲಿರುವ ಮನೆಗಳ ಮೇಲೆ ಕೆಲವೊಮ್ಮೆ ವಾಹನಗಳು ಉರುಳುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ ಸಾಮಾನ್ಯವಾಗಿದೆ. ರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಕೆಳಭಾಗದಲ್ಲಿರುವ ಮನೆಗಳ ಮೇಲೆ ಬೀಳುತ್ತವೆ. ಮಂಗಳವಾರವೂ ಶೃಂಗೇರಿ ತಾಲೂಕಿನ ಮಾರುತಿ ಬೆಟ್ಟ ಗ್ರಾಮದಲ್ಲಿ ಅಂತಹುದೇ ಒಂದು ಘಟನೆ ನಡೆದಿದೆ.

ಇದನ್ನೂ ಓದಿ: Konkan Railway: ಕೊಂಕಣ ರೈಲ್ವೆ ಮಾರ್ಗಗಳಿಗೆ ಮಾನ್ಸೂನ್ ವೇಳಾಪಟ್ಟಿ ಬಿಡುಗಡೆ; ಯಾವ ಸಮಯಕ್ಕೆ ಯಾವ ರೈಲು?

ಶೃಂಗೇರಿ ತಾಲೂಕಿನ ಮಾರುತಿ ಬೆಟ್ಟ ಗ್ರಾಮದ ತಿರುವಿನಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್‌ ಒಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿಬಿದ್ದಿದೆ. ಟ್ರ್ಯಾಕ್ಟರ್ ಬಿದ್ದ ರಭಸಕ್ಕೆ ಕಿರಣ್‌ ಎಂಬವರ ಮನೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯ ವೇಳೆ ಮನೆಯಲ್ಲಿ ಕಿರಣ್‌ ಅವರ ಪತ್ನಿ ಮತ್ತು ಮಗು ಇದ್ದರು. ಪತ್ನಿ ಅಡುಗೆ ಮನೆಯಲ್ಲಿದ್ದರೆ ಪುಟ್ಟ ಮಗು ಅಲ್ಲೇ ಆಟವಾಡುತ್ತಿತ್ತು. ಟ್ರ್ಯಾಕ್ಟರ್‌ ಬಿದ್ದ ರಭಸಕ್ಕೆ ಅಡುಗೆ ಮನೆಯ ಭಾಗವೂ ಸ್ವಲ್ಪ ಜಖಂ ಆಗಿದೆ. ಆದರೆ, ಅದೃಷ್ಟಕ್ಕೆ ತಾಯಿ ಮತ್ತು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ. ಮನೆಯಲ್ಲಿದ್ದ ಪೀಠೋಪಕರಣ, ವಿದ್ಯುತ್ ಉಪಕರಣಗಳು ನಾಶವಾಗಿವೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version