Site icon Vistara News

Car Accident: ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಮಗು ಸಾವು; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Car Accident

ಬೆಂಗಳೂರು: ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಎಚ್.ಎಸ್.ಆರ್‌. ಲೇಔಟ್‌ನ ಆಗರದಲ್ಲಿ ನಡೆದಿದೆ. ಅಪಘಾತದ (Car Accident) ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನ ಡೋರ್ ಬಳಿಯೇ ಮಗು ನಿಂತಿದ್ದನ್ನು ನೋಡದೆ ತಂದೆ ಮುಂದೆ ಸಾಗಿದ್ದರಿಂದ ದುರಂತ ನಡೆದಿದೆ.

ಒಂದೂವರೆ ವರ್ಷದ ಶೈಜಾ ಜನ್ನತ್ ಮೃತ ಮಗು. ಭಾನುವಾರ ರಾತ್ರಿ 11.30ಕ್ಕೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಬಂಧಿಗಳ ಮದುವೆ ಇದ್ದ ಕಾರಣ ಮಗುವಿನ ಕುಟುಂಬಸ್ಥರು ಚನ್ನಪಟ್ಟಣಕ್ಕೆ ಹೋಗಿದ್ದರು. ರಾತ್ರಿ ಹಿಂದಿರುಗಿದಾಗ ಮಗುವಿನ ತಂದೆ ಲಗೇಜ್‌ ತೆಗೆದು ಮನೆಯೊಳಗೆ ಇಡುತ್ತಿದ್ದರು. ಈ ವೇಳೆ ತಂದೆ ಹಿಂದೆಯೇ ಬಂದಿದ್ದ ಮಗು ಡೋರ್‌ ಬಳಿ ನಿಂತಿತ್ತು. ಅದನ್ನು ಗಮನಿಸದೇ ಕಾರು ಮುಂದೆ ಚಲಿಸಿದಾಗ ಮಗುವಿನ ಮೇಲೆ ಹರಿದಿದೆ. ಕಾರು ಹರಿದಿದ್ದರಿಂದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಎಚ್.ಎಸ್.ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Cake Tragedy: ಕೇಕ್‌ ತಿಂದು ಬಾಲಕಿ ಸಾವಿನ ಪ್ರಕರಣ; ಸಾವಿಗೆ ನಿಖರ ಕಾರಣ ಬಯಲು

ಪ್ರಿಯತಮೆಯ ಮದುವೆ ದಿನವೇ ಪ್ರಿಯತಮನ ರುಂಡ-ಮುಂಡ ಕಟ್‌; ಕೊಲೆಯೋ? ಆತ್ಮಹತ್ಯೆಯೋ?

Love Case

ಬೀದರ್: ಪ್ರಿಯತಮೆಯ ಮದುವೆ ದಿನವೇ ಪ್ರಿಯತಮ ಮಸಣ (love case) ಸೇರಿದ್ದಾನೆ. ರೈಲ್ವೆ ಹಳಿ ಮೇಲೆ ರುಂಡ-ಮುಂಡ ತುಂಡರಿಸಿ ಬಿದ್ದ ಸ್ಥಿತಿಯಲ್ಲಿ ಯುವಕನ ಶವ (dead body found) ಪತ್ತೆಯಾಗಿದೆ. ಬೀದರ್‌ ನಗರದ ಹೊರವಲಯದ ನೌಬಾದ್ ಹೈವೇ ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಬೀದರ್ ತಾಲೂಕಿನ ನಿಜಾಂಪೂರ್ ಗ್ರಾಮದ ವೆಂಕಟೇಶ ಕುಮಾರ್ (22) ಮೃತ ದುರ್ದೈವಿ.

ಬೀದರ್ ತಾಲೂಕಿನ ರಂಜೋಳ ಖೇಣಿ ಗ್ರಾಮದ ವೆಂಕಟೇಶ್‌ ನಿಜಾಂಪುರ ಗ್ರಾಮದ ಅಜ್ಜಿಯ‌ ಮನೆಯಲ್ಲಿ ವಾಸವಾಗಿದ್ದ. ಖಾಸಗಿ ಕಂಪನಿಯೊಂದರಲ್ಲಿ‌ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎರಡು ವರ್ಷಗಳಿಂದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಯುವತಿಯ ಮದುವೆ ದಿನವೇ ಯುವಕನ ಕೊಲೆ‌ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿ ಬೈಕ್ ಇದೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ಯುವತಿಯ ಕುಟುಂಬಸ್ಥರೇ ಕೊಲೆ ಮಾಡಿ, ರೈಲ್ವೆ ಟ್ರ್ಯಾಕ್‌ ಮೇಲೆ ಬಿಸಾಡಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನ್ಯೂಟೌನ್ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹುಡುಗಿಯ‌ ವಿಚಾರಕ್ಕೆ ಕೊಲೆಯಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ. ಹೀಗಾಗಿ ಈ ಆಯಾಮದಲ್ಲೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Exit mobile version