Site icon Vistara News

Cauvery Water Dispute: ಕಾವೇರಿ ನೀರು ನಿಗದಿಗಿಂತ ಹೆಚ್ಚು ಹರಿಸಿದರೂ ತಮಿಳುನಾಡು ಆಕ್ಷೇಪ!

Cauvery Water Dispute

ಬೆಂಗಳೂರು: ನಿಗದಿಗಿಂತ ಹೆಚ್ಚು ಕಾವೇರಿ ನೀರು (Cauvery Water Dispute) ಹರಿಸಿದರೂ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿರುವುದು ಕಂಡುಬಂದಿದೆ. ನವ ದೆಹಲಿಯಲ್ಲಿ ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) 101ನೇ ಸಭೆಯಲ್ಲಿ ಕರ್ನಾಟಕದ ವಿರುದ್ಧ ತಮಿಳುನಾಡು ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಈ ಬಾರಿಯೂ ಕರ್ನಾಟಕವು ತನ್ನ ಜಲಾಶಯಗಳು ತುಂಬಿದ ನಂತರವಷ್ಟೇ ನೀರನ್ನು ಹರಿಸಿದೆ ಎಂದು ತಿಳಿಸಿದೆ.

ಆ.11ರಂದು ನಿಗದಿಪಡಿಸಿದ ನೀರಿನ ಹರಿವಾದ 56.73 ಟಿಎಂಸಿಗೆ ಬದಲಾಗಿ ಬಿಳಿಗುಂಡ್ಲುವಿನಲ್ಲಿ 153.802 ಟಿಎಂಸಿ ನೀರು ಹರಿದಿದೆ. ಬಿಳಿಗುಂಡ್ಲುವಿನಲ್ಲಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ಜಮೆ ಮಾಡಿಕೊಳ್ಳಬೇಕು. ಮುಂದಿನ ಮಾನ್ಸೂನ್ ತಿಂಗಳುಗಳಲ್ಲಿಯೂ ಒಳ್ಳೆಯ ಮಳೆಯ ನಿರೀಕ್ಷೆ ಇದ್ದು, ಎರಡೂ ರಾಜ್ಯದ ರೈತರು ಸಹ ಲಾಭ ಪಡೆದುಕೊಳ್ಳಬಹುದೆಂದು ಆಶಿಸುತ್ತೇವೆ ಎಂದು ಸಭೆಯಲ್ಲಿ ಕರ್ನಾಟಕ ತಿಳಿಸಿದೆ.

ಇದಕ್ಕೆ ತಮಿಳುನಾಡು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಬಿಳಿಗುಂಡ್ಲುವಿನಲ್ಲಿ ಹರಿದ ನೀರಿನ ಪ್ರಮಾಣವು ಕರ್ನಾಟಕದ ಜಲಾಶಯಗಳಲ್ಲಿನ ಹೆಚ್ಚುವರಿ ನೀರಿನ ಪ್ರಮಾಣವಾಗಿರುತ್ತದೆ. ಈ ಬಾರಿಯೂ ಕರ್ನಾಟಕ ರಾಜ್ಯವು ತನ್ನ ಜಲಾಶಯಗಳು ತುಂಬಿದ ನಂತರವಷ್ಟೇ ನೀರನ್ನು ಹರಿಸಿದೆ ಎಂದು ತಿಳಿಸಿದ್ದಾರೆ.

    1992ರ ಏ.3ರ ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ಒಂದು ವಾರದಲ್ಲಿ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ ಕೊರತೆ ಉಂಟಾದಲ್ಲಿ, ಅದನ್ನು ಮುಂಬರುವ ವಾರಗಳಲ್ಲಿ ಹರಿಸಬೇಕು. ಆದ್ದರಿಂದ, ಕರ್ನಾಟಕ ರಾಜ್ಯವು ತನ್ನ ಜಲಾಶಯಗಳು ಭರ್ತಿ ಆಗುವವರೆಗೆ ನಿರೀಕ್ಷಿಸಿ ಹೆಚ್ಚುವರಿ ನೀರನ್ನು ಹರಿಸಲು ಕಾಯುವ ಹಾಗಿಲ್ಲ ಎಂದು ತಮಿಳುನಾಡು ಅಧಿಕಾರಿಗಳು ಹೇಳಿದ್ದಾರೆ.

    ಕರ್ನಾಟಕವು ಹೆಚ್ಚುವರಿ ನೀರು ಹರಿಸಿರುವುದರಿಂದ ಕಾವೇರಿ ಜಲ ನಿಯಂತ್ರಣ ಸಮಿತಿಯಲ್ಲಿ (CWRC) ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಯಾವುದೇ ರೀತಿಯ ನಿರ್ಣಯ, ಆದೇಶ ಮಾಡದೆ ಸಭೆಯು ಮುಕ್ತಾಯಗೊಂಡಿದೆ.

    ಇದನ್ನೂ ಓದಿ | Government Employees: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಆ.17ರಂದು ವಿಶೇಷ ಸಾಂದರ್ಭಿಕ ರಜೆ

    ಗೇಟ್‌ ರಿಪೇರಿಗಾಗಿ 60 ಟಿಎಂಸಿ ನೀರು ಖಾಲಿ, 8 ಜಿಲ್ಲೆಗಳ ರೈತರಿಗೆ ನೀರಿಲ್ಲ!

    ವಿಜಯನಗರ: ಹೊಸಪೇಟೆಯ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರೆಸ್ಟ್‌ ಗೇಟ್ ಮುರಿದಿರುವುದು (Crest Gate Crash) ಮಳೆಗಾಲ ಮುಗಿಯುವ ಮುನ್ನವೇ ಕಲ್ಯಾಣ ಕರ್ನಾಟಕ (Kalyana Karntaka) ಭಾಗದ ಅನ್ನದಾತರಿಗೆ (Farmers) ಶಾಕ್ ನೀಡಿದೆ. ಕ್ರೆಸ್ಟ್‌ ಗೇಟ್‌ ಮುರಿದುದರಿಂದ ಸುಮಾರು 15 ಟಿಎಂಸಿಯಷ್ಟು (TMC) ನೀರು ಹರಿದುಹೋಗಿದ್ದು, ಭರ್ತಿಯಾಗಿದ್ದ ಜಲಾಶಯ ಅಷ್ಟರ ಮಟ್ಟಿಗೆ ಈಗ ಖಾಲಿಯಾಗಿದೆ. ಇದರ ಪರಿಣಾಮ ಮೂರು ರಾಜ್ಯಗಳ 8 ಜಿಲ್ಲೆಗಳ ಲಕ್ಷಾಂತರ ರೈತರು ತಮ್ಮ ಎರಡು ಬೆಳೆಗಳನ್ನು ಕಳೆದುಕೊಳ್ಳುವ ಅನುಮಾನ ಮೂಡಿದೆ.

    ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ಒಟ್ಟು ಹನ್ನೆರಡು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮೂರು ರಾಜ್ಯದ 8 ಜಿಲ್ಲೆಗಳಿಗೆ ಆಸರೆ ಆಗಿರುವ ತುಂಗಭದ್ರಾ ಜಲಾಶಯ ಕಲ್ಯಾಣ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ‌, ರಾಯಚೂರು, ಆಂಧ್ರ ಪ್ರದೇಶದ ಕರ್ನೂಲ್, ಅನಂತಪುರ, ಕಡಪ, ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಗಳಿಗೆ ಜೀವನಾಡಿ.

    ಈ ಬಾರಿ ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಅಷ್ಟಾಗಿ ಮಳೆ ಆಗಿಲ್ಲ. ಆದರೆ ಡ್ಯಾಂ ತುಂಬಿದ್ದರಿಂದ ಕಾಲುವೆ ನೀರು ನಂಬಿಕೊಂಡು ರೈತು ಬಿತ್ತನೆ ಮಾಡಿದ್ದಾರೆ. ಬಳ್ಳಾರಿಯಲ್ಲಿ 70 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಲಾಗಿದೆ. 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ.

    ಆದರೆ ಗೇಟ್ ರಿಪೇರಿಗಾಗಿ 60 TMC ನೀರನ್ನು ಅಣೆಕಟ್ಟಿನಿಂದ ಖಾಲಿ ಮಾಡುವ ಅನಿವಾರ್ಯತೆ ಇದೆ. 105 TMC ಸಾಮರ್ಥ್ಯದ TB ಡ್ಯಾಂನಲ್ಲಿ 20 ಅಡಿ ನೀರು ಕುಗ್ಗಿಸಿ 60 TMCಯಷ್ಟು ನೀರನ್ನು‌ ಅಧಿಕಾರಿಗಳು ಖಾಲಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ ಮಳೆ ಪ್ರಮಾಣ ಕುಗ್ಗಬಹುದು. ಹೀಗಾಗಿ ಖಾಲಿಯಾದ 60 ಟಿಎಂಸಿ ನೀರನ್ನು ಮತ್ತೆ ತುಂಬಿಸುವುದು ಕಷ್ಟಸಾಧ್ಯ. ಬೇಸಿಗೆಯಲ್ಲಿ ನಿರ್ವಹಣೆಗಾಗಿ ಡ್ಯಾಂ ತುಂಬಿಸುವುದು ಅಧಿಕಾರಿಗಳಿಗೆ ಸವಾಲು ಆಗುತ್ತದೆ. ಸೆಪ್ಟೆಂಬರ್ ಬಳಿಕ ಕಾಲುವೆ ನೀರು ಕೈಕೊಟ್ಟರೆ ಬೆಳೆಗಳು ಬಾಡುತ್ತವೆ. ಹೀಗಾಗಿ ಈ ಬಾರಿ ಬೆಳೆಗಳಿಗೆ‌ ಡ್ಯಾಂ ನೀರು ಸಿಗುವುದೇ ಅನುಮಾನ ಎಂಬಂತಾಗಿದೆ.

    ಎರಡನೇ ಬೆಳೆಗಿಂತ ಮೊದಲ ಬೆಳೆಗಾದರೂ ಸರಿಯಾಗಿ ನೀರು ಸಿಗುವುದೇ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. 60 ಟಿಎಂಸಿ ನೀರು ಖಾಲಿಯಾದ್ರೆ ಡ್ಯಾಂನಲ್ಲಿ ಉಳಿಯುವುದು ಕೇವಲ 45 ಟಿಎಂಸಿ ನೀರು ಮಾತ್ರ. ಇದರಲ್ಲಿ ಆಂಧ್ರಪ್ರದೇಶದ ಕೋಟಾ ಕೂಡಾ ಇದೆ. ಹೀಗಾಗಿ ಕರ್ನಾಟಕ ಕೋಟಾ ಉಳಿಯುವುದು ಕೇವಲ ಇಪ್ಪತ್ತೈದು ಟಿಎಂಸಿ ನೀರು. ಇದರಲ್ಲಿಯೇ ಕುಡಿಯುವ ನೀರಿಗೆ ಹೆಚ್ಚಿನ ನೀರು ಇಟ್ಟುಕೊಳ್ಳುವುದರಿಂದ ರೈತರಿಗೆ ಇದೀಗ ಬೆಳೆಗೆ ನೀರು ಸಿಗುತ್ತಾ ಇಲ್ಲವೋ ಅನ್ನೋ ಆತಂಕ ಎದುರಾಗಿದೆ.

    ಇದನ್ನೂ ಓದಿ | Lakshmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಅಹವಾಲು ಸಲ್ಲಿಸಲು ಸಾಲುಸಾಲು ಜನ

    ತುಂಗಭದ್ರಾ ಜಲಾಶಯದ ನೀರಿನ ಮೇಲೆಯೇ ನಾಲ್ಕು ಜಿಲ್ಲೆಗಳ ಅನೇಕ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಡ್ಯಾಂನಲ್ಲಿರೋ ನೀರು ಖಾಲಿಯಾದ್ರೆ ಕುಡಿಯುವ ನೀರಿಗೆ ಕೂಡಾ ತತ್ವಾರವಾಗುತ್ತದೆ. ಕಳೆದ ಬೇಸಿಗೆಯಲ್ಲಿ ಅನೇಕ ಕಡೆ ಕುಡಿಯಲು ಕೂಡಾ ನೀರು ಬಿಡದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಡ್ಯಾಂ ಖಾಲಿಯಾಗುತ್ತಿರುವುದರಿಂದ ಬೇಸಿಗೆಯಲ್ಲಿ ಈ ಬಾರಿ ಕೂಡಾ ತತ್ವಾರವಾಗೋ ಸಾಧ್ಯತೆ ಹೆಚ್ಚಾಗಿದೆ.

      Exit mobile version