Site icon Vistara News

KSOU Scam: ಕೆಎಸ್‌ಒಯು ಹಗರಣದ ತನಿಖೆಗೆ ಸಿಬಿಐ ಎಂಟ್ರಿ

Karnataka State Open University

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಸೇರಿ ಹಲವು ಅಧಿಕಾರಿಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಗರಣದ (KSOU Scam) ತನಿಖೆಗೆ ಸಿಬಿಐ ಎಂಟ್ರಿ ನೀಡಿದ್ದು, 2009-10 ಮತ್ತು 2015-16ರ ಸಾಲಿನ ನಡುವಿನ ಅವಧಿಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸಲು ಸಿಬಿಐ ಮುಂದಾಗಿದೆ.

ದೇಶಾದ್ಯಂತ ಔಟ್ ರೀಚ್ ಸೆಂಟರ್‌ಗಳ ಸಹಭಾಗಿತ್ವದಲ್ಲಿ 250 ಕೋಟಿ ರೂ. ಹಗರಣ ನಡೆದಿತ್ತು. 2010ರಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ನಂತರ ಬಂದ ಡಾ.ಎಂ.ಜಿ.‌ಕೃಷ್ಣನ್ ಅವಧಿಯಲ್ಲಿ ಹಗರಣ ನಡೆದಿತ್ತು. ಇಬ್ಬರು ಕುಲಪತಿಗಳ ಅವಧಿಯಲ್ಲಿ ನಡೆದಿದ್ದ ಅಕ್ರಮ ಈಗ ಸಿಬಿಐ ಅಂಗಳಕ್ಕೆ ತಲುಪಿದೆ. ಹೀಗಾಗಿ ಇಬ್ಬರ ಅವಧಿಯ ಕುಲಸಚಿವರು, ಹಣಕಾಸು ಅಧಿಕಾರಿಗಳು ಲೆಕ್ಕ ಪರಿಶೋಧಕರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ | Assembly Session: ಪುನೀತ್‌ ಕೆರೆಹಳ್ಳಿ ಮೇಲೆ ಡೌಟ್ ಇದ್ದಿದ್ದಕ್ಕೆ ನೋಟಿಸ್‌: ಪೂಜೆಗೆ ಪರ್ಮಿಷನ್‌ ಬೇಡ ಎಂದ ಸರ್ಕಾರ

ಹಗರಣದ ಬಗ್ಗೆ ಸಿಬಿಐ ತನಿಖೆ ಮಾಡುವಂತೆ ಕುಲಪತಿ ವಿದ್ಯಾಶಂಕರ್ ಅವಧಿಯಲ್ಲಿ ವ್ಯವಸ್ಥಾಪನಾ ಮಂಡಳಿ ಶಿಫಾರಸು ಮಾಡಿತು. ಏಪ್ರಿಲ್ ತಿಂಗಳಲ್ಲಿ ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿತ್ತು. ನಂತರ ರಾಜ್ಯಪಾಲರಿಂದ ಸಿಬಿಐ ತನಿಖೆಗೆ ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಇದೀಗ ಸರ್ಕಾರದಿಂದ ಇಡೀ ಹಗರಣದ ತನಿಖೆ ಸಿಬಿಐಗೆ ಹಸ್ತಾಂತರವಾಗಿದೆ.

ದೇಶಾದ್ಯಂತ ನೂರಾರು ಔಟ್ ರೀಚ್ ಸೆಂಟರ್‌ಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಕ್ಸ್‌ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿತ್ತು. ಆದರೆ, ಅಂಕಪಟ್ಟಿ ಮುದ್ರಣದಲ್ಲಿ ಭಾರಿ ಅಕ್ರಮ ನಡೆದಿತ್ತು. ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ರೂ. ಹಣ ಪಡೆದು ಬೇಕಾಬಿಟ್ಠಿ ಮಾರ್ಕ್ಸ್ ಕಾರ್ಡ್‌ಗಳನ್ನು ಹಂಚಲಾಗಿತ್ತು. ಔಟ್ ರೀಚ್ ಸೆಂಟರ್‌ಗಳ ಮಾರ್ಕ್ಸ್ ಕಾರ್ಡ್‌ಗಳಿಗೆ ನಿರ್ದಿಷ್ಟ ಮೌಲ್ಯಮಾಪನವಿಲ್ಲದೆ ಮುಕ್ತ ವಿವಿ ಮಾನ್ಯತೆ ನೀಡುತ್ತಾ ಬಂದಿತ್ತು. ಅದೇ ರೀತಿ ತನ್ನ‌ ವ್ಯಾಪ್ತಿ ಮೀರಿ ತಾಂತ್ರಿಕ ಹಾಗೂ ವೈದ್ಯಕೀಯ ಕೋರ್ಸ್‌ಗಳನ್ನು ಮುಕ್ತ ವಿವಿ ಆರಂಭಿಸಿತ್ತು.

ಇದನ್ನೂ ಓದಿ | Matrimony Sites : ಮ್ಯಾಟ್ರಿಮೊನಿ ವರನ ಬಗ್ಗೆ ಇರಲಿ ಎಚ್ಚರ; ಆತನಿಗೆ ಡಜನ್‌ ಮದುವೆ ಆಗಿರಬಹುದು!

ವ್ಯಾಪ್ತಿ ಮೀರಿ ಕೋರ್ಸ್‌ಗಳನ್ನು ಆರಂಭಿಸಿದ್ದಕ್ಕೆ ಮುಕ್ತ ವಿವಿ ಮೂರು ವರ್ಷ ಮಾನ್ಯತೆ ಕಳೆದುಕೊಂಡಿತ್ತು. ಈಗ ಸಿಬಿಐ ತನಿಖೆಯಿಂದ ಮುಕ್ತ‌ ವಿವಿ ಮಾಜಿ ಕುಲಪತಿ, ಅಧಿಕಾರಿಗಳಿಗೆ ಭಾರಿ ಸಂಕಷ್ಟ ಎದುರಾಗಿದೆ.

Exit mobile version