Site icon Vistara News

Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್‌ಬ್ರಾಂಡ್‌ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!

Chaitra Kundapura

ಬೆಂಗಳೂರು: ತನ್ನ ಬೆಂಕಿ ಕಾರುವ ಮಾತುಗಳು, ಅಬ್ಬರಿಸಿ ಬೊಬ್ಬಿರಿಯುವ ಶೈಲಿ, ಹಿಂದು ಪರ ವಿಚಾರ ಬಂದಾಗ ಎಗ್ಗಿಲ್ಲದೆ ಮುನ್ನುಗ್ಗುವ ಛಾತಿ, ಎಂಥವರನ್ನೂ ಎದುರು ಹಾಕಿಕೊಳ್ಳಬಲ್ಲ ತಾಕತ್ತು; ಇದು ಅಂದಾಜು 30ರ ಹರೆಯದ ಚೈತ್ರಾ ಕುಂದಾಪುರ (Chaitra Kundapura) ಎಂಬ ಫೈರ್‌ ಬ್ರಾಂಡ್‌ (Fire Brand) ಭಾಷಣಕಾರ್ತಿ ಬಗ್ಗೆ ಆಡಬಹುದಾದ ಪಾಸಿಟೀವ್‌ ಮಾತುಗಳು. ತಮ್ಮ ಭಾಷಣ ಮತ್ತು ವಿಡಿಯೊಗಳಿಂದ ಅವರು ರಾಜ್ಯದ ಬಹುತೇಕ ಕಡೆಗಳಲ್ಲಿ ಪರಿಚಿತ. ಆದರೆ ಈಗ ಆಕೆ ಸುದ್ದಿಯಾಗಿರುವುದು ಒಂದು ದೊಡ್ಡ ವಂಚನೆಯ ನೆಗೆಟಿವ್‌ ಪ್ರಕರಣದಲ್ಲಿ.

ಸದಾ ಹಣೆಯಲ್ಲಿ ತಿಲಕ, ಕೇಸರಿ ಶಾಲು ಹಾಕಿಕೊಂಡು ತಿರುಗಾಡುವ ಈ ಪೀಚು ದೇಹದ ಹುಡುಗಿಯೊಳಗಿನ ಅಗಾಧ ಧೈರ್ಯದ ಬಗ್ಗೆ ಜನ ಮಾತನಾಡಿಕೊಳ್ಳುವಂತಾಗಿತ್ತು. ಆದರೆ, ಈಗ ಇವಳೊಳಗೆ ಇಷ್ಟು ದೊಡ್ಡ ಕ್ರಿಮಿನಲ್‌ ವಂಚಕಿ (Criminal Fraud) ಇದ್ದಾಳಾ ಎಂದು ಮಾತನಾಡಿಕೊಳ್ಳುವಂತಾಗಿದೆ. ಬೆಂಗಳೂರಿನಲ್ಲಿರುವ ಬೈಂದೂರು ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚಿಸಿ ಸಿಕ್ಕಿಬಿದ್ದಿದ್ದಾಳೆ ಚೈತ್ರಾ ಕುಂದಾಪುರ.

ಹಾಗಿದ್ದರೆ ಈ ಚೈತ್ರಾ ಕುಂದಾಪುರ ನಿಜಕ್ಕೂ ಯಾರು? ಅವರ ಹಿನ್ನೆಲೆ ಏನು? ಅವರು ನಡೆದು ಬಂದ ದಾರಿ ಯಾವುದು? ಎನ್ನುವುದರ ಬಗ್ಗೆ ತಿಳಿಯೋಣ.

ಕುಂದಾಪುರದ ತೆಕ್ಕಟ್ಟೆಯ ಹುಡುಗಿ

ಚೈತ್ರಾ ಕುಂದಾಪುರ ಆಕೆಯ ಹೆಸರಿನಲ್ಲಿರುವಂತೆಯೇ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ತೆಕ್ಕಟ್ಟೆಗಿಂತಲೂ ಒಳಗಿನ ಒಂದು ಪುಟ್ಟ ಊರಿನವರು. ತೆಕ್ಕಟ್ಟೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಪಡೆದು ಬಳಿಕ ಕುಂದಾಪುರದಲ್ಲಿ ಪದವಿ ವಿದ್ಯಾಭ್ಯಾಸ ಪಡೆದವರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಚೈತ್ರಾ ಟಿವಿ ನಿರೂಪಕಿಯಾಗಿ ಸಾಕಷ್ಟು ಗಮನ ಸೆಳೆದಿದ್ದರು. ಬೆಂಗಳೂರಿನ ಸಮಯ ನ್ಯೂಸ್‌ನಲ್ಲಿ ವೃತ್ತಿ ಬದುಕು ಆರಂಭಿಸಿದ ಆಕೆ ಬಳಿಕ ಉಡುಪಿಗೆ ಮರಳಿದ್ದರು. ಅಲ್ಲಿನ ಸ್ಪಂದನ ಟಿವಿ ನಿರೂಪಕಿಯಾಗಿ ಆ ಭಾಗದಲ್ಲಿ ಜನಪ್ರಿಯತೆ ಪಡೆದರು. ಮುಂದೆ ಮುಕ್ತ ನ್ಯೂಸ್‌ನಲ್ಲಿ ಕೆಲಸ ಮಾಡಿದರು. ಈ ನಡುವೆ, ಉದಯವಾಣಿ ದಿನಪತ್ರಿಕೆಯಲ್ಲೂ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ. ಇದೆಲ್ಲದರ ನಡುವೆ, ಉಡುಪಿಯ ಅಜ್ಜರಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವವೂ ಇದೆ. ನಿರೂಪಕಿ, ಪತ್ರಕರ್ತೆ, ಉಪನ್ಯಾಸಕಿಯಾದ ಆಕೆಗೆ ಯುವ ಮಾಧ್ಯಮ ಪ್ರಶಸ್ತಿಯೂ ಬಂದಿತ್ತು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ

ಕಾಲೇಜಿನಲ್ಲಿ ಓದುತ್ತಿರುವಾಗ ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಚೈತ್ರಾ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆಯಾಗುವ ಹಂತಕ್ಕೆ ಬೆಳೆದಿದ್ದರು. ಆಗಲೇ ಭಾಷಣಗಳ ಮೂಲಕ ಗಮನ ಸೆಳೆಯುತ್ತಿದ್ದ ಆಕೆ ನಾಯಕಿಯಾಗಿಯೂ ಹೆಸರಾಗಿದ್ದರು.

ಪ್ರಖರ ಹಿಂದುತ್ವದ ಪ್ರಬಲ ಪ್ರತಿಪಾದನೆ

ಪತ್ರಿಕೋದ್ಯಮ, ಟಿವಿ ನಿರೂಪಕಿಯ ಕೆಲಸಗಳನ್ನು ಮಾಡುತ್ತಾ ಗಮನ ಸೆಳೆದಿದ್ದ ಚೈತ್ರಾ ಕುಂದಾಪುರ ಕಳೆದ ಆರೇಳು ವರ್ಷಗಳಿಂದ ಫೈರ್‌ ಬ್ರಾಂಡ್‌ ಭಾಷಣಕಾರ್ತಿಯಾಗಿದ್ದಾರೆ. ಹಿಂದುತ್ವದ ವಿಚಾರಧಾರೆಗಳನ್ನು ಜನರಿಗೆ ಮುಟ್ಟುವಂತೆ, ಕೆಲವೊಮ್ಮೆ ಕೆರಳಿಸುವಂತೆ, ಪ್ರಚೋದನಾಕಾರಿಯಾಗಿ ಪ್ರತಿಪಾದಿಸುವ ಶೈಲಿ ಅವರದ್ದು. ಭಾಷಣಗಳಲ್ಲಿ ನೇರ ಸವಾಲು ಹಾಕುವ ಧೈರ್ಯವನ್ನೂ ತೋರುತ್ತಾರೆ.

ಲವ್‌ ಜಿಹಾದ್‌, ಹಿಜಾಬ್‌ ಗಲಾಟೆ ವೇಳೆ ಸಖತ್‌ ಸೌಂಡ್‌

ಕರಾವಳಿಯಲ್ಲಿ ಕೇಳಿಬಂದ ಲವ್‌ ಜಿಹಾದ್‌ ಪ್ರಕರಣಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನೇ ಸಂಘಟಿಸಿದ್ದರು ಚೈತ್ರಾ ಕುಂದಾಪುರ. ಲವ್‌ ಜಿಹಾದ್‌ ಪ್ರಕರಣಗಳನ್ನು ಆಧರಿಸಿ ಆಕೆ ಬರೆದಿರುವ ಪ್ರೇಮಪಾಶ ಎನ್ನುವ ಕೃತಿ ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು. ಆಕೆ ಲವ್‌ ಜಿಹಾದ್‌ಗೆ ಒಳಗಾಗಿ ಹಿಂಸೆ ಅನುಭವಿಸಿ ಮರಳಿದ ಹಲವಾರು ಹೆಣ್ಣು ಮಕ್ಕಳ ಕತೆಗಳನ್ನು ಇಲ್ಲಿ ವರ್ಣರಂಜಿತವಾಗಿ ವಿವರಿಸಿದ್ದಾರೆ ಎನ್ನಲಾಗಿದೆ.

ಕಳೆದ 2021ರಲ್ಲಿ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ ಹಿಜಾಬ್‌ ಗಲಾಟೆ ಚೈತ್ರಾ ಕುಂದಾಪುರ ಅವರನ್ನು ಇನ್ನಷ್ಟು ಚಾಲ್ತಿಗೆ ಬರುವಂತೆ ಮಾಡಿತು. ಹಲವಾರು ಕಡೆಗಳಲ್ಲಿ ಅವರ ಪ್ರಖರ ಭಾಷಣಗಳು ಸುದ್ದಿ ಮಾಡಿದವು. ಇದರ ಜತೆಗೆ ಗೋ ಹತ್ಯೆ ವಿರುದ್ಧ ಧ್ವನಿ ಎತ್ತಿದ್ದಾರೆ.

ನಿಜವೆಂದರೆ, ಕಳೆದ ಕೆಲವು ಸಮಯದಿಂದ ಚೈತ್ರಾ ಕುಂದಾಪುರ ಕರಾವಳಿ ಭಾಗಕ್ಕಿಂತಲೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅಲ್ಲಿನ ಕೆಲವು ಸಂಘಟನೆಗಳು, ಸ್ವಾಮೀಜಿಗಳು, ರಾಜಕಾರಣಿಗಳು ಆಕೆಯ ಬೆಂಬಲಕ್ಕೆ ನಿಂತಿರುವುದು ಇದಕ್ಕೆ ಕಾರಣ. ಅಲ್ಲಿ ಆಕೆಯ ಹವಾ ಯಾವ ಪ್ರಮಾಣದಲ್ಲಿತ್ತು ಎಂದರೆ ಚೈತ್ರಾ ಕುಂದಾಪುರ ಭಾಷಣಕ್ಕೆ, ಆಗಮನಕ್ಕೆ ನಿರ್ಬಂಧ ವಿಧಿಸಿದ್ದ ಘಟನೆಗಳೂ ನಡೆದಿದ್ದವು.

ಕರಾವಳಿಯಲ್ಲಿ ಆಕೆಗೆ ದೊಡ್ಡ ಬೆಂಬಲ ಇರಲಿಲ್ಲ

ಚೈತ್ರಾ ಕುಂದಾಪುರ ಅವರನ್ನು ಕರಾವಳಿಯ ಫೈರ್‌ ಬ್ರಾಂಡ್‌ ನಾಯಕಿ ಎಂದೇ ಗುರುತಿಸಲಾಗುತ್ತದೆಯಾದರೂ ಇತ್ತೀಚಿನ ವರ್ಷಗಳಲ್ಲಿ ಆಕೆಯ ಪ್ರಭಾವ ಅಷ್ಟಕ್ಕಷ್ಟೆ. ಯಾವ ಹಿಂದೂ ಸಂಘಟನೆಗಳು ಆಕೆಗೆ ತೀರಾ ಬೆಂಬಲವಾಗಿ ನಿಂತಿಲ್ಲ. ರಾಜಕಾರಣಿಗಳೂ ತುಂಬ ಹಚ್ಚಿಕೊಂಡಿಲ್ಲ. ಆದರೆ, ತನ್ನದೇ ಆದ ಕೂಟವನ್ನು ಕಟ್ಟಿಕೊಂಡು ಚೈತ್ರಾ ಮುನ್ನಡೆಯುತ್ತಿದ್ದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪೂಜೆ, ಪುನಸ್ಕಾರಗಳ ವಿಚಾರದಲ್ಲಿ ವಿವಾದ ಎದ್ದಾಗ ಚೈತ್ರಾ ಕುಂದಾಪುರ ಒಂದು ಗುಂಪಿನೊಂದಿಗೆ ಗುರುತಿಸಿಕೊಂಡು ಪ್ರಚೋದನಾಕಾರಿಯಾಗಿ ಮಾತನಾಡಿದ್ದರು. ಅದು ಸ್ಥಳೀಯ ಹಿಂದೂ ಮುಖಂಡರನ್ನು ಕೆರಳಿಸಿತ್ತು. ಒಂದು ಹಂತದಲ್ಲಿ ಈ ಜಗಳ ಸುಬ್ರಹ್ಮಣ್ಯಕ್ಕೆ ಬಾ ನೋಡಿಕೊಳ್ಳುತ್ತೇವೆ ಎನ್ನುವ ಮಟ್ಟವನ್ನೂ ತಲುಪಿತ್ತು. ಆಗ ಅಲ್ಲಿನ ಹಿಂದೂ ಜಾಗರಣ ವೇದಿಕೆ ನಾಯಕರೇ ಆಕೆಯನ್ನು ಹಿಮ್ಮೆಟ್ಟಿಸಿದ್ದರು. ಒಂದು ದೊಡ್ಡ ಗ್ಯಾಂಗ್‌ ಕಟ್ಟಿಕೊಂಡು ಬಂದಿದ್ದ ಚೈತ್ರಾ ಕುಂದಾಪುರ ಅವರನ್ನು ಎಳೆದುಕೊಂಡು ಹೋಗಿ ಜೈಲಿಗೆ ಹಾಕಿದ ಸನ್ನಿವೇಶಗಳು ದಾಖಲಾಗಿದ್ದವು. ಅದಾದ ಬಳಿಕ ಆಕೆಯ ಪ್ರಭಾವ ಈ ಭಾಗದಲ್ಲಿ ತಗ್ಗಿತ್ತು.

ವಂಚನೆಯ ಪ್ರಕರಣದೊಂದಿಗೆ ಮತ್ತೆ ಸುದ್ದಿಯಾದ ಚೈತ್ರಾ

ಇಂಥ ಹಿನ್ನೆಲೆಯ ಚೈತ್ರಾ ಕುಂದಾಪುರ ಈಗ ಸುದ್ದಿಯಾಗಿರುವುದು ಒಂದು ವಂಚನೆಯ ಪ್ರಕರಣದಲ್ಲಿ. ಬೆಂಗಳೂರಿನ ಉದ್ಯಮಿ ಗೋವಿಂದ ಪೂಜಾರಿ ಅವರು ಸಮಾಜ ಸೇವಕರಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತರಾಗಿದ್ದರು. ಹಿತೈಷಿಗಳ ಸಲಹೆ ಮೇರೆಗೆ ಅವರು ಚೈತ್ರಾ ಕುಂದಾಪುರ ಅವರನ್ನು ಸಂಪರ್ಕಿಸಿದ್ದರು. ತನಗೆ ಬಿಜೆಪಿ, ಆರೆಸ್ಸೆಸ್‌ನ ಉನ್ನತ ಮಟ್ಟದ ನಾಯಕರ ಸಂಪರ್ಕ ಇರುವುದಾಗಿ ಹೇಳಿಕೊಳ್ಳುತ್ತಿರುವ ಚೈತ್ರಾ ಕುಂದಾಪುರ ಮತ್ತು ತಂಡದವರು ಈ ಮನವಿಯನ್ನು ದುಡ್ಡು ಮಾಡುವ ದಂಧೆಯಾಗಿ ಪರಿವರ್ತಿಸಲು ಪ್ಲ್ಯಾನ್‌ ಮಾಡಿಕೊಂಡರು. ಈ ರೀತಿ ಟಿಕೆಟ್‌ ಗಿಟ್ಟಿಸಿಕೊಳ್ಳಲು ಆರೆಸ್ಸೆಸ್‌ನ ಉನ್ನತ ನಾಯಕರು, ಬಿಜೆಪಿ ಉನ್ನತ ನಾಯಕರು ಸ್ವಾಮೀಜಿಗಳ ಶಿಫಾರಸು ಬೇಕು ಎಂಬ ಸಬೂಬು ನೀಡಿದರು. ಚಿಕ್ಕಮಗಳೂರಿನಲ್ಲಿ ಒಬ್ಬ ನಕಲಿ ಆರ್‌ಎಸ್‌ಎಸ್‌ ಪ್ರಚಾರಕನನ್ನು ಸೃಷ್ಟಿ ಮಾಡಿದರು. ಒಬ್ಬ ನಕಲಿ ಬಿಜೆಪಿ ರಾಷ್ಟ್ರೀಯ ನಾಯಕನನ್ನು ಸೃಷ್ಟಿಸಿದರು. ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿಯ ಹಿರೇಹಡಗಲಿ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಅವರನ್ನು ಬಳಸಿಕೊಂಡರು. ಹೀಗೆ ಮೂವರು ವ್ಯಕ್ತಿಗಳ ಮೂಲಕ ಗೋವಿಂದ ಪೂಜಾರಿ ಅವರಿಂದ ಒಟ್ಟು 5 ಕೋಟಿ ರೂ. ವಸೂಲಿ ಮಾಡಿದರು. ಟಿಕೆಟ್‌ ಸಿಗದೆ ಕಂಗಾಲಾದ ಗೋವಿಂದ ಪೂಜಾರಿ ಅವರು ತಾವೇ ಸ್ವಯಂ ತನಿಖೆ ನಡೆಸಿದಾಗ ವಂಚನೆಯ ಎಲ್ಲ ಜಾಲಗಳು ಬಯಲಾದವು. ಈಗ ಚೈತ್ರಾ ಕುಂದಾಪುರ ಮತ್ತು ಗಗನ್‌ ಕಡೂರು ಪ್ರಮುಖ ಆಪಾದಿತರಾಗಿ ಸಿಕ್ಕಿ ಬಿದ್ದಿದ್ದಾರೆ.

ಆಕೆಯ ಅಬ್ಬರದ ಮಾತು ಕೇಳಿ ರೋಮಾಂಚಿತರಾಗಿದ್ದವರು ಜನ ಹೀಗೂ ಇರ್ತಾರಾ ಎಂದು ಅಚ್ಚರಿಪಡುತ್ತಿದ್ದಾರೆ.

ಇದನ್ನೂ ಓದಿ: Chaithra Kundapura : ಅಬ್ಬಾ ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್‌ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!

Exit mobile version