Site icon Vistara News

Doctor death : ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ನಿಗೂಢ ಸಾವು; ಪಕ್ಕದಲ್ಲೇ ಸಿರಿಂಜ್‌ ಪತ್ತೆ!

Kollegala doctor death

ಚಾಮರಾಜನಗರ: ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ (Kollegala Government Hospital) ಅರಿವಳಿಕೆ ತಜ್ಞರಾಗಿರುವ (Anesthesia expert) ಜನಪ್ರಿಯ ವೈದ್ಯೆ ಡಾ. ಸಿಂಧುಜಾ- Dr Sindhuja (28) ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ.

ಚೆನ್ನೈ ಮೂಲದವರಾಗಿರುವ ಸಿಂಧುಜಾ ಅವರು ಕಳೆದ ಕೆಲವು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ವರ್ಷದ ಹಿಂದಷ್ಟೇ ತನ್ನ ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಗಿಸಿ ಸರ್ಕಾರಿ ಉದ್ಯೋಗ ಪಡೆದಿರುವ ಅವರು ಕೊಳ್ಳೆಗಾಲ ಪಟ್ಟಣದಲ್ಲಿ ಮನೆಯೊಂದರಲ್ಲಿ ಬಾಡಿಗೆಗೆ ಇದ್ದರು.

ಜನರೊಂದಿಗೆ ಉತ್ತಮ ರೀತಿಯಲ್ಲಿ ಬೆರೆಯುತ್ತಿದ್ದ ಅವರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದರು. ಶುಕ್ರವಾರ ಕರ್ನಾಟಕ ಬಂದ್‌ ಆಗಿದ್ದರೂ ಆಸ್ಪತ್ರೆಗೆ ಬರಬೇಕಾಗಿತ್ತು. ಆಸ್ಪತ್ರೆ ಸೇವೆಗಳಿಗೆ ರಜೆ ಇರಲಿಲ್ಲ. ಆದರೆ, ಸಮಯ ಕಳೆದರೂ ಬಾರದೆ ಇದ್ದಾಗ ಆಸ್ಪತ್ರೆ ಸಿಬ್ಬಂದಿ ಫೋನ್‌ ಮಾಡಿದ್ದಾರೆ.

ಆದರೆ, ಫೋನ್‌ ಎತ್ತದೆ ಇದ್ದಾಗ ಆಸ್ಪತ್ರೆಯ ಸಿಬ್ಬಂದಿ ಮನೆಗೆ ಹೋಗಿ ನೋಡಿದ್ದಾರೆ. ಮನೆಯ ಕಿಟಕಿ ಮೂಲಕ ಗಮನಿಸಿದಾಗ ಆಕೆ ನೆಲದಲ್ಲಿ ಮಲಗಿರುವುದು ಕಂಡುಬಂತು. ಕೂಡಲೇ ಪೊಲೀಸರಿಗೆ ತಿಳಿಸಿ ಒಳಗೆ ಪ್ರವೇಶಿಸಿ ನೋಡಿದಾಗ ಅವರು ಮೃತಪಟ್ಟಿರುವುದು ಕಂಡುಬಂತು.

ನೆಲಕ್ಕೆ ಮುಖ ಮಾಡಿ ಬಿದ್ದುಕೊಂಡಂತಿರುವ ಸಿಂಧುಜ ಅವರ ಸಾವಿಗೆ ಏನು ಕಾರಣ ಎಂಬ ಬಗ್ಗೆ ಸದ್ಯಕ್ಕೆ ತಿಳಿದುಬಂದಿಲ್ಲ. ಅವರ ದೇಹದ ಪಕ್ಕದಲ್ಲಿ ಒಂದು ಸಿರಿಂಜ್‌ ಕಂಡುಬಂದಿದೆ.

ಸಿಂಧುಜ ಅವರು ಸ್ವಲ್ಪ ಸ್ಥೂಲ ಕಾಯ ಹೊಂದಿದ್ದಾರೆ. ಹೀಗಾಗಿ ಹೃದಯಾಘಾತದ ಸಮಸ್ಯೆ ಏನಾದರೂ ಕಾಡಿರಬಹುದಾ ಎಂಬ ಸಂಶಯವಿದೆ. ಆಕೆ ಮಲಗಿಕೊಂಡಿರುವ ಸ್ಥಿತಿ ನೋಡಿದರೆ ತುಂಬಾ ಯಾತನೆಯಿಂದ ಎದೆ ಹಿಡಿದುಕೊಂಡು ಬಿದ್ದಂತೆ ಕಾಣುತ್ತಿದೆ. ನೋವನ್ನು ತಡೆಯಲಾಗದೆ ಎದೆ ಹಿಡಿದುಕೊಂಡು ಕವುಚಿ ಮಲಗಿದಂತೆ ಅವರ ದೇಹ ಸ್ಥಿತಿ ಕಂಡುಬಂದಿದೆ.

Kollegala doctor death

ಆದರೆ, ಪಕ್ಕದಲ್ಲಿ ಸಿರಂಜ್‌ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರು ನೋವನ್ನು ತಡೆದುಕೊಳ್ಳಲು ಸಾಧ್ಯವಾಗದೆ ನೋವಿನ ಇಂಜೆಕ್ಷನ್‌ ಏನಾದರೂ ತೆಗೆದುಕೊಂಡಿರಬಹುದಾ ಎನ್ನುವ ಸಂಶಯವೂ ಅದರಲ್ಲೊಂದು.

ಅದರ ಜತೆಗೆ ಸಿರಂಜ್‌ ಮೂಲಕ ಯಾವ ಔಷಧ ತೆಗೆದುಕೊಂಡರು. ಔಷಧ ಬಿಟ್ಟು ಬೇರೇನಾದರೂ ತೆಗೆದುಕೊಂಡರಾ? ವಿಷ ಚುಚ್ಚಿಕೊಂಡರಾ? ಡ್ರಗ್ಸ್‌ ಸೇವನೆಯ ಸಮಸ್ಯೆ ಇದೆಯಾ ಎಂಬೆಲ್ಲ ಸಂಶಯಗಳು ಕಾಡಿವೆ. ಕೊಳ್ಳೇಗಾಲ ಪೊಲೀಸರು ಸಿರಂಜ್‌ ಸೇರಿದಂತೆ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ತಪಾಸಣೆಗೆ ಕಳುಹಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Animal Love : ಗಾಯದಿಂದ ನಡೆಯಲಾಗದೆ ಕಣ್ಣೀರು ಹಾಕುತ್ತಿದ್ದ ಆನೆಗೆ ಚಪ್ಪಲಿ ಹೊಲಿದ ಡಾಕ್ಟರ್‌; ಯಾರೀ ದೇವತಾ ಮನುಷ್ಯ?

ಸಿಂಧುಜ ಅವರು ಅವಿವಾಹಿತೆ ಎಂದು ತಿಳಿದುಬಂದಿದ್ದು, ಹೆತ್ತವರು ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಇದೀಗ ಅವರ ಹೆತ್ತವರಿಗೆ ಮಾಹಿತಿ ನೀಡಲಾಗಿದೆ. ಅವರು ಆಗಮಿಸಿದ ಬಳಿಕ ಶವವನ್ನು ಬಿಟ್ಟುಕೊಡುವ ಸಾಧ್ಯತೆ ಇದೆ.

ಅಂತೂ ಜನಾನುರಾಗಿಯಾಗಿದ್ದ, ಸಹಾಯ ಮಾಡುತ್ತಿದ್ದ, ಯಾವುದೇ ಕೆಟ್ಟ ಅಭ್ಯಾಸಗಳು ಮೇಲ್ನೋಟಕ್ಕೆ ಇಲ್ಲದಿದ್ದ ಡಾಕ್ಟರ್‌ಗೆ ಒಮ್ಮಿಂದೊಮ್ಮೆಗೆ ಏನಾಯಿತು ಎಂದು ಕೊಳ್ಳೇಗಾಲದ ಜನರು ಮಾತನಾಡುತ್ತಿದ್ದಾರೆ. ಇದು ಹೃದಯಾಘಾತ ಎನ್ನುವುದು ಹೆಚ್ಚಿನವರ ಅಭಿಮತ.

ಪೊಲೀಸರು ಮತ್ತು ವೈದ್ಯರು ಮುಂದಿನ ವಿಚಾರಗಳನ್ನು ಗಮನಿಸಿ ತನಿಖೆ ನಡೆಸಬೇಕಾಗಿದೆ.

Exit mobile version