Site icon Vistara News

Elephant Attack: 15 ಲಕ್ಷ ರೂ. ಪರಿಹಾರ ತಿರಸ್ಕರಿಸಿದ ಕೇರಳ ಕಟುಂಬ; ಬಿಜೆಪಿ ವಿರೋಧಿಸಿದ್ದೇ ಕಾರಣ ಎಂದ ಖಂಡ್ರೆ

Elephant Attack Rs 15 lakh recovered from Kerala family rejection of compensation Khandre blames BJP oppose

ಚಾಮರಾಜನಗರ: ಕರ್ನಾಟಕದ ಆನೆ ದಾಳಿಯಿಂದ (Elephant Attack) ಕೇರಳದ ವಯನಾಡು ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಘೋಷಿಸಿದ್ದ 15 ಲಕ್ಷ ರೂಪಾಯಿ ಪರಿಹಾರದ ಹಣವನ್ನು ಸ್ವೀಕಾರ ಮಾಡಲು ಸಂತ್ರಸ್ತನ ಕುಟುಂಬವು ನಿರಾಕರಿಸಿದೆ. ಬಿಜೆಪಿ (BJP Karnataka) ಇದಕ್ಕೆ ವಿರೋಧ ಮಾಡಿದ್ದರಿಂದ ಆ ಕುಟುಂಬದವರು ಪರಿಹಾರದ ಹಣವನ್ನು ಸ್ವೀಕಾರ ಮಾಡಲಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar khandre) ಹೇಳಿದ್ದಾರೆ.

ಬಂಡೀಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಈಚೆಗೆ ಕರ್ನಾಟಕದ ಕಾಡಾನೆಯು ಕೇರಳದ ವಯನಾಡಿನ ಅಜೀಶ್‌ ಎಂಬುವವರ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಈ ಪ್ರಕರಣದಲ್ಲಿ ಮಾನವೀಯ ನೆಲೆಯಲ್ಲಿ ನಮ್ಮ ಕಾಂಗ್ರೆಸ್‌ ಸರ್ಕಾರವು ಮೃತನ ಕುಟುಂಬಕ್ಕೆ 15 ಲಕ್ಷ ‌ರೂಪಾಯಿ ಪರಿಹಾರವನ್ನು ಘೋಷಿಸಿದ್ದೆವು. ಆದರೆ, ಪರಿಹಾರ ನೀಡಲು ಬಿಜೆಪಿ ವಿರೋಧ ಮಾಡಿತ್ತು. ಬಿಜೆಪಿ ವಿರೋಧ ಮಾಡಿದ್ದರಿಂದ ನಮಗೆ ಪರಿಹಾರ ಬೇಕಿಲ್ಲ ಎಂದು ಈಗ ಸಂತ್ರಸ್ತನ ಕುಟುಂಬ ತಿರಸ್ಕರಿಸಿದೆ ಎಂದು ಹೇಳಿದರು.

ಬಂಡೀಪುರದಲ್ಲಿ ಕರ್ನಾಟಕ, ಕೇರಳ ಅರಣ್ಯ ಸಚಿವರ ಸಭೆ

ವನ್ಯಜೀವಿ ಸಂಘರ್ಷ, ಕಳ್ಳ ಬೇಟೆ ತಡೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಒಗ್ಗೂಡಿ ಶ್ರಮಿಸಲು ತೀರ್ಮಾನಿಸಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ಸ್ವಾಗತ ಕೇಂದ್ರದ ಬಳಿ ನಿರ್ಮಿಸಲಾಗಿದ್ದ ಸಭಾಂಗಣದಲ್ಲಿ ಕೇರಳದ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಅವರೊಂದಿಗೆ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಪ್ರಥಮ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಇದು ಕೇಂದ್ರ ಸರ್ಕಾರದ ಆದೇಶದ ಮೇಲೆ ನಡೆಯುತ್ತಿರುವ ಸಭೆಯಲ್ಲ ಬದಲಾಗಿ, ದಕ್ಷಿಣದ ಮೂರು ರಾಜ್ಯಗಳ ಕಳಕಳಿ ಮತ್ತು ಸ್ವಯಂ ಪ್ರಯತ್ನದ ಫಲವಾದ ಸಭೆಯಾಗಿದೆ ಎಂದು ತಿಳಿಸಿದರು.

ವನ್ಯಜೀವಿಗಳಿಗೆ ರಾಜ್ಯದ ಗಡಿಯ ಮಿತಿ ಇಲ್ಲ

ವನ್ಯ ಜೀವಿಗಳು ಸ್ವಚ್ಛಂದವಾಗಿ ಒಂದು ಕಾಡಿನಿಂದ ಮತ್ತೊಂದಕ್ಕೆ ಸಂಚರಿಸುತ್ತವೆ. ಹಲವಾರು ಶತಮಾನಗಳಿಂದ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ನಡುವೆ ಆನೆಗಳು ಮುಕ್ತವಾಗಿ ಓಡಾಡುತ್ತಿದ್ದು, ಯಾವುದೇ ವನ್ಯ ಜೀವಿಗೆ ರಾಜ್ಯದ ಗಡಿಯ ಮಿತಿ ಇರುವುದಿಲ್ಲ. ಆನೆ ಕಾರಿಡಾರ್ ಇದೆ. ಹುಲಿಗಳು ಕೂಡ ಒಂದು ಕಾಡಿನಿಂದ ಮತ್ತೊಂದಕ್ಕೆ ಹೋಗುತ್ತವೆ. ಈ ವನ್ಯಜೀವಿಗಳಿಂದ ಯಾವುದೇ ರಾಜ್ಯದಲ್ಲಿ ಅಮೂಲ್ಯ ಜೀವ ಅಥವಾ ಬೆಳೆ ಹಾನಿ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದ್ದು ಶೀಘ್ರದಲ್ಲೇ ಇದಕ್ಕೆ ಒಂದು ಮೂರ್ತ ರೂಪ ನೀಡಲಾಗುವುದು ಎಂದು ಹೇಳಿದರು.

ದಿವಂಗತ ಪ್ರಧಾನಿ ಇಂದಿರಾಗಾಂಧೀ ಅವರು ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಒತ್ತು ನೀಡಿ, ಕಾಯಿದೆಗಳನ್ನು ಜಾರಿಗೆ ತಂದರು. ನಂತರದ ಎಲ್ಲ ಸರ್ಕಾರಗಳೂ ವನ ಮತ್ತು ವನ್ಯಜೀವಿ ಸಂಪತ್ತಿನ ರಕ್ಷಣೆಗೆ ಒತ್ತು ನೀಡಿದ ಫಲವಾಗಿ ಇಂದು ಅರಣ್ಯ ಸಂರಕ್ಷಣೆಯೂ ಆಗಿದೆ, ವನ್ಯಜೀವಿಗಳ ಸಂತತಿಯಲ್ಲೂ ಹೆಚ್ಚಳವಾಗಿದೆ ಎಂದರು.
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ದಕ್ಷಿಣದ ಈ ಮೂರೂ ರಾಜ್ಯಗಳಲ್ಲಿರುವ ಉತ್ತಮ ರೂಢಿಗಳನ್ನು ಅಳವಡಿಸಿಕೊಂಡು ಪ್ರಕೃತಿ ಪರಿಸರ ಉಳಿಸಲು ಪರಸ್ಪರ ಸಹಯೋಗ ನೀಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ಅರಣ್ಯ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳನ್ನು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೂರೂ ರಾಜ್ಯಗಳು ಉತ್ತಮವಾಗಿ ಮಾಡುತ್ತಿವೆ. ಹೀಗಾಗಿಯೇ ಈ ಮೂರೂ ರಾಜ್ಯಗಳಲ್ಲಿ ವನ್ಯ ಜೀವಿಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಪ್ರಯತ್ನಗಳನ್ನು ಮುಂದುವರಿಸುವುದು ನಿರ್ಣಾಯಕ ಎಂದು ಈಶ್ವರ ಖಂಡ್ರೆ ಹೇಳಿದರು.

ವನ್ಯಜೀವಿಗಳ ಮತ್ತು ಜನಸಂಖ್ಯೆಯ ಹೆಚ್ಚಳದಿಂದ ವಸತಿ ಪ್ರದೇಶಗಳು ಅರಣ್ಯದಂಚಿಗೆ ಬರುತ್ತಿರುವ ಕಾರಣ ವನ್ಯಜೀವಿ-ಮಾನವ ಸಂಘರ್ಷ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ನಿಟ್ಟಿನಲ್ಲಿ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಹೀಗಾಗಿ ಕಾಡಿನಂಚಿನ ವಸತಿ ಪ್ರದೇಶಗಳ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಆನೆ ದಾಳಿ ತಡೆಗೆ ಕ್ರಮ

ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳನ್ನು ಮಾಡಬೇಕಾಗಿದೆ. ಕರ್ನಾಟಕದಲ್ಲಿ ಆನೆಗಳು ನಾಡಿಗೆ ಬಾರದಂತೆ ತಡೆಯಲು ಆನೆ ಕಂದಕ ನಿರ್ಮಿಸಲಾಗುತ್ತಿದೆ, ಸೌರ ಬೇಲಿ ಅಳವಡಿಸಲಾಗುತ್ತಿದೆ. ಜತೆಗೆ ರೈಲ್ವೆ ಬ್ಯಾರಿಕೇಡ್ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾನವ-ಪ್ರಾಣಿ ಸಂಘರ್ಷವನ್ನು ನಿರ್ವಹಿಸಲು ಜಂಟಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್ಒಪಿ) ಅಳವಡಿಸಿಕೊಳ್ಳಲು ಪ್ರಸ್ತಾಪಿಸಿದ ಸಚಿವ ಈಶ್ವರ ಖಂಡ್ರೆ, ವಿವಿಧ ಇಲಾಖೆಗಳ ನಡುವೆ ಸಹಯೋಗ ಈ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ ಎಂದರು.

ತಮಿಳುನಾಡಿನ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೂ ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಮೂರೂ ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗಿರುವ ಉತ್ತಮ ರೂಢಿಗಳ ಕುರಿತಂತೆ ಚರ್ಚಿಸಿ, ಜ್ಞಾನ ವಿನಿಮಯ ಮಾಡಲಾಯಿತು. ಜತೆಗೆ ಹೊಸ ಅನ್ವೇಷಣೆಗಳ ಬಗ್ಗೆಯೂ ಚರ್ಚಿಸಲಾಯಿತು ಎಂದರು.

ವನ್ಯಜೀವಿ -ಮಾನವ ಸಂಘರ್ಷ ಮತ್ತು ಕಳ್ಳಬೇಟೆ ತಡೆ, ಕಾಡ್ಗಿಚ್ಚು ನಿಯಂತ್ರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಗತ್ಯವಿದೆ. ಈ ಬಗ್ಗೆಯೂ ಸಭೆಯಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮೂರೂ ರಾಜ್ಯಗಳ ನಡುವೆ ನಡೆಯುವ ಸಭೆಗಳಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುವುದು. ಜೊತೆಗೆ ಸನ್ನಾ ಮತ್ತು ಲಾಂಟನಾ ಕಳೆಯ ಸಮಸ್ಯೆಯ ನಿವಾರಣೆಗೂ ಸಹಯೋಗ ಅಗತ್ಯವಾಗಿದ್ದು, ತಂತ್ರಜ್ಞಾನ ಅಳವಡಿಕೆ ಮತ್ತು ಕಳೆ ನಾಶಕ್ಕೆ ಒಂದು ಸಲಹಾ ಸಮಿತಿ ರಚಿಸಲು ಪ್ರಸ್ತಾಪಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಇದನ್ನೂ ಓದಿ: Water Crisis: ಹೊಂದಾಣಿಕೆಗಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರ; ಆರ್‌. ಅಶೋಕ್‌ ವಾಗ್ದಾಳಿ

ಸಹಯೋಗದ ಉಪಕ್ರಮಗಳು

  1. ಹಂಚಿಕೆಯ ಹೊಣೆಗಾರಿಕೆ ಸಮ್ಮತಿ: ವನ್ಯಜೀವಿಗಳ ಆವಾಸಸ್ಥಾನಗಳನ್ನು ಗುರುತಿಸುವುದು ಮತ್ತು ವಿಸ್ತರಿಸುತ್ತಿರುವುದು. ವಿಸ್ತರಣೆಯಾಗುತ್ತಿರುವ ವಸತಿ ಪ್ರದೇಶಗಳ ನಡುವೆಯೂ ಅರಣ್ಯ ಸಂರಕ್ಷಿಸುವ ಬದ್ಧತೆ.
  2. ಸಹಯೋಗದ ಚಾರ್ಟರ್: ಗಡಿಗಳನ್ನು ಮೀರಿ, ಮಾನವ-ಪ್ರಾಣಿ ಸಂಘರ್ಷಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಹೃತ್ಪೂರ್ವಕ ಪ್ರತಿಜ್ಞೆ.
  3. ಕಾರ್ಯತಂತ್ರದ ಸಮನ್ವಯ: ತಡೆರಹಿತ ಸಹಯೋಗ, ರಚನಾತ್ಮಕ ಮಾಹಿತಿಯ ಹಂಚಿಕೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ಸವಾಲುಗಳ ವಿರುದ್ಧ ಜಂಟಿ ಪ್ರಯತ್ನ.
  4. ಸಂಪನ್ಮೂಲ ವಿನಿಮಯ ಕಾರ್ಯಕ್ರಮ: ಸಮನ್ವಯತೆಯನ್ನು ಸಂಕೇತಿಸುವ ಈ ಕಾರ್ಯಕ್ರಮವು ನಿರ್ಣಾಯಕ ಸಂಪನ್ಮೂಲಗಳು, ಪರಿಣತಿ ಮತ್ತು ಜ್ಞಾನದ ವಿನಿಮಯವನ್ನು ಸುಗಮಗೊಳಿಸುತ್ತದೆ.
  5. ವನ್ಯಜೀವಿ ಸಂಖ್ಯೆಯ ಅಂದಾಜು ಮತ್ತು ಜಂಟಿ ಕಾರ್ಯಾಚರಣೆಗಳು: ವನ್ಯಜೀವಿಗಳ ಸಂಖ್ಯೆಯ ಆಧಾರದ ಮೇಲೆ ಮತ್ತು ಸಂಘಟಿತ ಕಾರ್ಯಾಚರಣೆಗಳ ಮೂಲಕ ಮಾಹಿತಿ ಆಧಾರಿತವಾಗಿ ನಿರ್ಧಾರ ತೆಗೆದುಕೊಳ್ಳುವುದು.
  6. ಸಲಹಾ ಮಂಡಳಿ: ವನ್ಯಜೀವಿ ಸಂರಕ್ಷಣಾ ತಜ್ಞರನ್ನು ಒಳಗೊಂಡು, ಸಂಘರ್ಷ ನಿರ್ವಹಣಾ ತಂತ್ರಗಳನ್ನು ಹೆಚ್ಚಿಸಲು ಅಮೂಲ್ಯವಾದ ಒಳನೋಟಗಳನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಸಲಹಾ ಮಂಡಳಿ ರಚಿಸುವ ಪ್ರಸ್ತಾಪ.
  7. ವಿಮರ್ಶೆ ಮತ್ತು ಹೊಂದಾಣಿಕೆ: ಸುಸ್ಥಿರ ಉತ್ಕೃಷ್ಟತೆ ಮತ್ತು ವಿಕಸನಗೊಳ್ಳುತ್ತಿರುವ ಜವಾಬ್ದಾರಿಗಳಿಗೆ ಹೊಂದಿಕೊಳ್ಳುವಿಕೆಗಾಗಿ ಆಡಳಿತದಲ್ಲಿ ನಿಯಮಿತ ಪರಾಮರ್ಶೆ.
  8. ಭವಿಷ್ಯದ ಹಂಚಿಕೆಯ ದೃಷ್ಟಿಕೋನ: ಮಾನವ ಮತ್ತು ವನ್ಯಜೀವಿಗಳು ಸಾಮರಸ್ಯದಿಂದ ಸಹಬಾಳ್ವೆ ನಡೆಸುವ ಜವಾಬ್ದಾರಿಯುತ ಸಂರಕ್ಷಣೆಯ ಪರಂಪರೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಆಡಳಿತಾತ್ಮಕ ಗಡಿಗಳನ್ನು ಮೀರಿದ ಹಂಚಿಕೆಯ ದೃಷ್ಟಿಕೋನವನ್ನು ಈ ಚಾರ್ಟರ್ ಒಳಗೊಂಡಿದೆ.

ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಪಿಸಿಸಿಎಫ್), ಅರಣ್ಯ ಪಡೆ ಮುಖ್ಯಸ್ಥರು, ಮುಖ್ಯ ವನ್ಯಜೀವಿ ವಾರ್ಡನ್ಗಳು ಮತ್ತು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಇತರ ಅಧಿಕಾರಿಗಳು ಸೇರಿದಂತೆ ಗಣ್ಯ ಗಣ್ಯರು ಉಪಸ್ಥಿತರಿದ್ದರು.

Exit mobile version