Site icon Vistara News

ಚಾಮರಾಜಪೇಟೆ ಮೈದಾನ | ಹೈಕೋರ್ಟ್‌ ತೀರ್ಪು ಪ್ರಶ್ನಿಸಿದ ವಕ್ಫ್‌ ಮಂಡಳಿ: ನಾಳೆ ಸುಪ್ರೀಂ ವಿಚಾರಣೆ

eidgah maidan

ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿದ ತೀರ್ಪು ಪ್ರಶ್ನಿಸಿ ವಕ್ಫ್‌ ಮಂಡಳಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂಕೋರ್ಟ್‌ ಒಪ್ಪಿದೆ. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಲು ಎಂದು ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟಿಸ್‌ ಉದಯ್‌ ಯು. ಲಲಿತ್‌ ಅವರು ಒಪ್ಪಿಗೆ ನೀಡಿದ್ದಾರೆ.

ಚಾಮರಾಜಪೇಟೆಯ ಈದ್ಗಾ ಮೈದಾನವೆಂದು ಹೇಳಲಾದ ಜಾಗದ ಬಗ್ಗೆ ಹಲವು ವರ್ಷಗಳಿಂದ ವಿವಾದ ನಡೆಯುತ್ತಿದ್ದು, ಈ ಬಾರಿ ಹೊಸ ತಿರುವನ್ನು ಪಡೆದಿದೆ. ಇದು ವಕ್ಫ್‌ ಬೋರ್ಡ್‌ಗೆ ಸೇರಿದ ಜಾಗ ಎಂಬ ಬಗ್ಗೆ ದಾಖಲೆಗಳಿಲ್ಲ. ಹೀಗಾಗಿ ಇದು ಸರಕಾರಿ ಜಾಗ ಎಂದು ಬಿಬಿಎಂಪಿ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದರು. ಇದೇ ಆಧಾರದಲ್ಲಿ ಚಾಮರಾಜ ಪೇಟೆ ಆಟದ ಮೈದಾನದಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವವನ್ನು ಈ ಬಾರಿ ಆಚರಿಸಲಾಗಿತ್ತು.

ಈ ನಡುವೆ, ಈ ಜಾಗ ವಕ್ಫ್‌ ಮಂಡಳಿಗೆ ಸೇರಿದ್ದಲ್ಲ. ಕಂದಾಯ ಇಲಾಖೆಗೆ ಸೇರಿದ್ದು ಎಂಬ ಜಂಟಿ ಆಯುಕ್ತರ ಆದೇಶ ಪ್ರಶ್ನಿಸಿ ಪ್ರಶ್ನಿಸಿ ವಕ್ಫ್‌ ಮಂಡಳಿ ಹೈಕೋರ್ಟ್‌ ಮೊರೆ ಹೊಕ್ಕಿತ್ತು. ಕಳೆದ ಗುರುವಾರ ನ್ಯಾ.ಹೇಮಂತ್ ಚಂದನ್‌ಗೌಡರ್ ಅವರ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತ್ತು. ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು, ವರ್ಷದಲ್ಲಿ ಎರಡು ಬಾರಿ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಬಹುದು. ಉಳಿದಂತೆ ಆಟದ ಮೈದಾನವಾಗಿ ಬಳಸಬಹುದು ಎಂದು ಸ್ಪಷ್ಟಪಡಿಸಿತ್ತು. ಈ ಮಧ್ಯಂತರ ಆದೇಶದ ಪ್ರಕಾರ ಗಣೇಶೋತ್ಸವಕ್ಕೆ ಅವಕಾಶ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಇದನ್ನು ಪ್ರಶ್ನಿಸಿ ಶುಕ್ರವಾರ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿತ್ತು.

ಹಂಗಾಮಿ ಸಿಜೆ ಅಲೋಕ್‌ ಅರಾಧೆ ನೇತೃತ್ವದ ಪೀಠವು ಮೇಲ್ಮನವಿಯ ವಿಚಾರಣೆಯನ್ನು ನಡೆಸಿ ಏಕ ಸದಸ್ಯ ಪೀಠದ ಆದೇಶವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡೇ ಒಂದು ಅಂಶವವನ್ನ ಬದಲಾಯಿಸಿತ್ತು. ಈ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಕಾರದ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿತ್ತು. ಇದರಿಂದ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ನೀಡಿದಂತಾಗಿದೆ.

ಸುಪ್ರೀಂಕೋರ್ಟ್‌ಗೆ ವಕ್ಫ್‌ ಮನವಿ
ಏಕಸದಸ್ಯ ಪೀಠದ ಆದೇಶವನ್ನು ಒಪ್ಪಿಕೊಂಡಿದ್ದ ವಕ್ಫ್‌ ಮಂಡಳಿ ದ್ವಿಸದಸ್ಯ ಪೀಠದ ಆದೇಶವನ್ನು ಮಾತ್ರ ಆಕ್ಷೇಪಿಸಿದೆ. ಸುಪ್ರೀಂಕೋರ್ಟ್‌ ನೀಡಿದ ಹಿಂದಿನ ಒಂದು ಆದೇಶದಂತೆ ಮೈದಾನ ತನಗೆ ಸೇರಿದ್ದು ಎಂದು ವಕ್ಫ್‌ ಮಂಡಳಿ ವಾದಿಸುತ್ತಿದೆ. ಈಗ ಹೈಕೋರ್ಟ್‌ ತೀರ್ಪಿನೊಂದಿಗೆ ಈ ವಿಚಾರವೂ ಸ್ಪಷ್ಟಗೊಳ್ಳುವ ನಿರೀಕ್ಷೆಯನ್ನೂ ವಕ್ಫ್‌ ಮಂಡಳಿ ಹೊಂದಿರುವಂತಿದೆ.

ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಕ್ಫ್‌ ಬೋರ್ಡ್‌ ಪರವಾಗಿ ಮನವಿ ಸಲ್ಲಿಸಿದ ಹಿರಿಯ ವಕೀಲ ಕಪಿಲ್‌ ಸಿಬಾಲ್‌ ಮೈದಾನದ ವಿಚಾರದಲ್ಲಿ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಯಾಗುವ ಅಪಾಯವಿರುವುದರಿಂದ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು. ಕಪಿಲ್‌ ಸಿಬಾಲ್‌ ಸಣ್ಣ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಉದಯ್‌ ಯು. ಲಲಿತ್‌ ಅವರು ಮಂಗಳವಾರಕ್ಕೆ ಲಿಸ್ಟ್‌ ಮಾಡುವಂತೆ ಸೂಚಿಸಿದರು.

ಇದನ್ನೂ ಓದಿ| ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಗ್ರೀನ್‌ ಸಿಗ್ನಲ್‌: ಸರಕಾರದ ವಿವೇಚನೆಗೆ ಬಿಟ್ಟದ್ದು ಎಂದ ಹೈಕೋರ್ಟ್‌

Exit mobile version