Site icon Vistara News

Murder case : ಚಿಕ್ಕಬಳ್ಳಾಪುರದಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

Murder Case

ಚಿಕ್ಕಬಳ್ಳಾಪುರ: ಇಲ್ಲಿನ ಬಾಗೇಪಲ್ಲಿ ಪಟ್ಟಣದ ಟಿಬಿ ಕ್ರಾಸ್ ಹೋಟೆಲ್ ಬಳಿ ವ್ಯಕ್ತಿಯೊಬ್ಬರ ಬರ್ಬರ (Murder case) ಹತ್ಯೆಯಾಗಿದೆ. ಆಂಧ್ರ ಮೂಲದ ವೆಂಕಟೇಶಪ್ಪ (55) ಕೊಲೆಯಾದವರು.

ಆಂಧ್ರದ ದೂಮಕೇತುಪಲ್ಲಿ ಗ್ರಾಮದ ನಿವಾಸಿ ವೆಂಕಟೇಶಪ್ಪರ ಕತ್ತು ಸೀಳಿ ಹಂತಕರು ಕೊಲೆ ಮಾಡಿದ್ದಾರೆ. ಹತ್ಯೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಎಸ್‌ಪಿ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಬಾಗೇಪಲ್ಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸಿದ್ದಾರೆ. ಚಿಕ್ಕಬಳ್ಳಾಪುರ‌ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Hasana News : ಹೊಳೆನರಸೀಪುರ ಲಕ್ಷ್ಮೀನರಸಿಂಹ ರಥೋತ್ಸವದಲ್ಲಿ ಕಾಲ್ತುಳಿತ; ಭವಾನಿ ರೇವಣ್ಣ ಮುಖಕ್ಕೆ ಬಿದ್ದ ಬಾಳೆಹಣ್ಣು

ಅಮ್ಮ-ಮಗನನ್ನು ಕ್ರೂರವಾಗಿ ಕೊಂದ ಫೇಸ್‌ಬುಕ್‌ ಗೆಳೆಯ; ವರ್ಷದ ನಂತರ ಸಿಕ್ಕಿಬಿದ್ದ

ವಿಜಯಪುರ: ಒಂದು ವರ್ಷದ ಹಿಂದೆ ನಡೆದಿದ್ದ ತಾಯಿ-ಮಗನ (Mother son murdered) ಕೊಲೆ ಕೇಸ್‌ ಅನ್ನು ವಿಜಯಪುರ ಪೊಲೀಸರು (vijayapura Double Murder) ಭೇದಿಸಿದ್ದಾರೆ. ಮೈಸೂರು ಮೂಲದ ಶೃತಿ ಹಾಗೂ ಆಕೆಯ 13 ವರ್ಷದ ಮಗ ರೋಹನ್ ಹತ್ಯೆಯಾಗಿದ್ದರು. ವಿಜಯಪುರದ ಸಾಗರ್ ನಾಯಕ್ ಎಂಬಾತ ಅತಿ ಕ್ರೂರವಾಗಿ ಕೊಂದು ಇಬ್ಬರ ಹೆಣಗಳನ್ನು ಬ್ಯಾಗ್‌ವೊಂದರಲ್ಲಿ ತುಂಬಿ ಬಾವಿಗೆ ಬಿಸಾಡಿದ್ದ. ಕಳೆದ 2023ರ ಮಾರ್ಚ್ 13ರಂದು ಡಬಲ್ ಮರ್ಡರ್ (Double Murder) ನಡೆದಿತ್ತು.

ಆರೋಪಿ ಸಾಗರ್ ನಾಯಕ್ ಮೈಸೂರಿನಲ್ಲಿದ್ದಾಗ ಫೇಸ್‌ಬುಕ್ ಮೂಲಕ ಶೃತಿ ಪರಿಚಯವಾಗಿತ್ತು. ವಿವಾಹಿತೆ ಜತೆಗಿನ ಪರಿಚಯವು ಪ್ರೀತಿಗೆ ತಿರುಗಿತ್ತು. ಆದರೆ ಕೆಲ ಸಮಯದ ನಂತರ ಆಕೆಯ ನಡತೆ ಮೇಲೆ ಸಂಶಯಗೊಂಡ ಸಾಗರ್‌, ಆಕೆಯಿಂದ ದೂರಾಗಿ ವಿಜಯಪುರಕ್ಕೆ ಬಂದಿದ್ದ.

ಆದರೆ ಸಾಗರ್‌ನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಶೃತಿ ಆತನನ್ನು ಬಿಟ್ಟು ಇರಲಾಗದೇ 2023ರ ಮಾರ್ಚ್‌ 13ರಂದು ಮಗ ರೋಹಿತ್‌ ಜತೆಗೆ ಲಗೇಜ್ ಸಮೇತ ವಿಜಯಪುರಕ್ಕೆ ಬಂದಿದ್ದಳು. ಹೀಗೆ ಬಂದ ಅಮ್ಮ-ಮಗನಿಗೆ ಖುದ್ದು ಸಾಗರ್‌ನೇ ಸಿಂದಗಿ ರಸ್ತೆಯ ಪೋರ್ ವೇ ಲಾಡ್ಜ್‌ವೊಂದರಲ್ಲಿ ಉಳಿಸಿದ್ದ.

ಫೇಸ್‌ಬುಕ್‌ ಗೆಳೆಯನ ಹಿಂದೆ ಬಿದ್ದು ಕೊಲೆಯಾದ ಶೃತಿ ಹಾಗೂ ಆಕೆಯ ಮಗ ರೋಹಿತ್‌

ಆ ದಿನ ಲಾಡ್ಜ್‌ಗೆ ಬಂದಿದ್ದ ಸಾಗರ್‌, ಶೃತಿ ಜತೆಗೆ ಗಲಾಟೆ ಮಾಡಿಕೊಂಡಿದ್ದ. ಸಿಟ್ಟಲ್ಲಿ ಆಕೆಯ ಕುತ್ತಿಗೆ ಹಿಸುಕಿ ಕೊಂದು ಹಾಕಿದ್ದ. ಬಳಿಕ ರೋಹಿತ್‌ ಕೊಲೆಗೆ ಸಾಕ್ಷಿಯಾಗುತ್ತಾನೆ ಎಂದು ಆತಂಕಗೊಂಡ ಸಾಗರ್‌, ಅವನನ್ನು ಕೊಲೆ ಮಾಡಿದ್ದ. ಶೃತಿ ಮೈಸೂರಿನಿಂದ ತಂದಿದ್ದ ಲಗೇಜ್‌ನಲ್ಲಿಯೇ ಅವರ ಹೆಣಗಳನ್ನು ಪ್ಯಾಕ್ ಮಾಡಿ ಮಹಾರಾಷ್ಟ್ರ ಗಡಿಯ ಸಿದ್ದಾಪುರ ಗ್ರಾಮದ ಹೊರವಲಯದಲ್ಲಿದ್ದ ಬಾವಿಯಲ್ಲಿ ಬಿಸಾಡಿ, ಅಲ್ಲಿಂದ್ದ ಕಾಲ್ಕಿತ್ತಿದ್ದ.

ಇದನ್ನೂ ಓದಿ: Dead Body found : ಕ್ಯಾಂಪ್‌ ಪೊಲೀಸ್‌ ಠಾಣೆ ಆವರಣದಲ್ಲೇ ಇತ್ತು ಕೊಳೆತ ಶವ!

ಬಾವಿಯಲ್ಲಿ ತೇಲಿ ಬಂದಿತ್ತು ಬ್ಯಾಗ್‌

ಇತ್ತ ವಾರದ ಬಳಿಕ ಬಾವಿಯಲ್ಲಿ ಬ್ಯಾಗ್‌ಗಳು ತೇಲಿ ಬಂದಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಬಂದಿದ್ದ ತ್ರಿಕೋಟ ಪೊಲೀಸರು ಪರಿಶೀಲನೆ ನಡೆಸಿದಾಗ, ತಾಯಿ- ಮಗನ ಶವ ಪತ್ತೆಯಾಗಿದ್ದವು. ಆದರೆ ಕೊಳೆತ ಸ್ಥಿತಿಯಲ್ಲಿ ಶವಗಳು ಸಿಕ್ಕಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ. ಇತ್ತ ಯಾವುದೇ ಕ್ಲೂ ಇಲ್ಲದ ಪ್ರಕರಣವಾಗಿ ಹಾಗೇ ಉಳಿದಿತ್ತು.

ಬಾವಿಯಲ್ಲಿ ತೇಲಿ ಬಂದಿದ್ದ ಬ್ಯಾಗ್‌ ಅನ್ನು ಹೊರತೆಗೆದಿದ್ದ ಪೊಲೀಸರು

ಈ ನಡುವೆ ಕಳೆದ ಫೆಬ್ರವರಿಯಲ್ಲಿ ಶೃತಿ ಸಂಬಂಧಿಕರು ಮೈಸೂರಿನಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರು. ಮೈಸೂರು ಮಿಸ್ಸಿಂಗ್ ಕೇಸ್ ಹಾಗೂ ವಿಜಯಪುರದಲ್ಲಿ ನಡೆದ ಡಬಲ್ ಮರ್ಡರ್ ಕೇಸ್‌ನಲ್ಲಿ ಸಿಕ್ಕ ವಸ್ತುಗಳಿಗೆ ಸಾಮ್ಯತೆ ಇತ್ತು. ಶೃತಿ ಸಂಬಂಧಿಕರು ಮೃತದೇಹಗಳನ್ನು ಗುರುತಿಸಿದ್ದರು. ಇದರ ಜಾಡು ಹಿಡಿದು ಶೃತಿಯ ಕಾಲ್‌ ಲಿಸ್ಟ್‌ ತೆರೆದಾಗ ಸಾಗರ್‌ ಸಿಕ್ಕಿಬಿದಿದ್ದ.

ಬಳಿಕ ಪ್ರಕರಣ ಸಂಬಂಧ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲವನ್ನೂ ಬಾಯ್ಬಿಟ್ಟಿದ್ದ. ಕೊಲೆ ಮಾಡಿ ಏನು ಗೊತ್ತಿಲ್ಲದಂತೆ ಆರಾಮಾಗಿದ್ದ ಸಾಗರ್‌ ವರ್ಷದ ಬಳಿಕ ಸಿಕ್ಕಿಬಿದ್ದಿದ್ದಾನೆ. ಗ್ರಾಮೀಣ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version