Site icon Vistara News

Electric shock : ವಿದ್ಯುತ್‌ ಸರಿಪಡಿಸಲು ಹೋಗಿ ಸುಟ್ಟು ಕರಕಲಾದ ರೈತ

Electric shock

ಚಿಕ್ಕಮಗಳೂರು: ರೈತರೊಬ್ಬರು ತಾವೇ ವಿದ್ಯುತ್ ಸರಿಪಡಿಸಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ. ಕಂಬ ಏರಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ರೈತ ಸುಟ್ಟು (Electric shock) ಕರಕಲಾಗಿದ್ದಾರೆ. ಚಿಕ್ಕಮಗಳೂರಿನ (Chikkamagaluru News) ತರೀಕೆರೆ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.

ಮಂಜುನಾಥ್ (35) ಮೃತ ದುರ್ದೈವಿ. ಗಂಟೆ ಕಾಲ ವಿದ್ಯುತ್ ಇಲ್ಲದಿರುವುದನ್ನು ಕಂಡು ಸರಿಪಡಿಸಲು ಹೋಗಿದ್ದಾರೆ. ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡದೇ ಮಂಜುನಾಥ್‌ ತಾವೇ ವಿದ್ಯುತ್ ಸಮಸ್ಯೆ ಸರಿಪಡಿಸಲು ಹೋಗಿದ್ದಾರೆ. ವಿದ್ಯುತ್ ಕಂಬಕ್ಕೆ ಏರಿ ಸರಿಪಡಿಸುವಾಗ ಒಮ್ಮೆ ಕರೆಂಟ್‌ ಪಾಸಾಗಿದೆ.

ಕ್ಷಣಾರ್ಧದಲ್ಲೇ ಕರೆಂಟ್‌ ಶಾಕ್‌ ಹೊಡೆದು, ಮಂಜುನಾಥ್‌ ಸುಟ್ಟು ಕರಕಲಾಗಿದ್ದಾರೆ. ವಿದ್ಯುತ್ ಕಂಬದಲ್ಲೇ ಮೃತದೇಹವು ಸಿಲುಕಿದ್ದು, ಮೃತ ಕುಟುಂಬಸ್ಥರು ಹಾಗೂ ಸ್ಥಳೀಯರ ರೋಧನೆ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕಂಬದಲ್ಲಿ ಸಿಲುಕಿರುವ ಮೃತದೇಹವನ್ನು ಕೆಳಗಿಳಿಸು ತಯಾರಿಗೆ ಮುಂದಾಗಿದ್ದಾರೆ.

ಇದನ್ನೂ ಓದಿ: Misbehaviour : ಮಹಿಳೆಯರನ್ನು ಚುಡಾಯಿಸಿದ ಕಾಮುಕನ ಹಿಗ್ಗಾಮುಗ್ಗಾ ಥಳಿಸಿದ ಜನರು

ಪೆಟ್ಟಿಗೆ ಅಂಗಡಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

Fire tragedy : ಕಿಡಿಗೇಡಿಗಳಿಂದ ಪೆಟ್ಟಿಗೆ ಅಂಗಡಿಗೆ ಬೆಂಕಿ ಹೊತ್ತಿ ಉರಿದಿದ್ದು, ಪಕ್ಕದಲ್ಲಿದ್ದ ಐದಾರು ಅಂಗಡಿಗಳು ಸುಟ್ಟು ಭಸ್ಮವಾಗಿದೆ. ತುಮಕೂರಿನ ಪಾವಗಡ ತಾಲೂಕಿನ ನಿಡಗಲ್ ಹೋಬಳಿ ಮಂಗಳವಾಡದ ಅಂಬೇಡ್ಕರ್ ವೃತ್ತದ ಬಳಿ ಘಟನೆ ನಡೆದಿದೆ. ನಾಗರಾಜು ಎಂಬುವರಿಗೆ ಸೇರಿದ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಪಕ್ಕದಲ್ಲಿದ್ದ ಐದಾರು ಅಂಗಡಿಗಳಿಗೆ ಬೆಂಕಿ ಆವರಿಸಿಕೊಂಡು ಹೊತ್ತಿಉರಿದಿದೆ. ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಪಾವಗಡ ತಾಲೂಕಿನ ಅರಸಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಮೀನಿಗೆ ಬಂದ ರೈತನನ್ನು ಕೊಂದು ಹಾಕಿದ ಆನೆ

ಕೊಡಗು: ಕೊಡಗಿನಲ್ಲಿ (Kodagu News) ಕಾಡಾನೆ ದಾಳಿಯು (Elephant Attack) ಮುಂದುವರಿದಿದೆ. ಕಾಡಾನೆ ದಾಳಿಗೆ ಮತ್ತೊಬ್ಬ ಕೃಷಿಕ ಬಲಿಯಾಗಿದ್ದಾರೆ. ಹೊಸಗುತ್ತಿ ಗ್ರಾಮದ ಕಾಂತರಾಜು (45) ಮೃತ ದುರ್ದೈವಿ.

ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪದ ಹೊಸಗುತ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಂತುರಾಜು ಮನೆಯಿಂದ ಜಮೀನಿಗೆ ತೆರಳುವಾಗ ಕಾಡಾನೆ ದಾಳಿ ನಡೆಸಿದೆ. ಆನೆಯಿಂದ ತಪ್ಪಿಸಿಕೊಳ್ಳಲು ಆಗದೆ ಕಾಂತುರಾಜು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾಡು ಬಿಟ್ಟು ನಾಡಿಗೆ ಬಂದು ಹಾವಳಿ ಕೊಡುತ್ತಿರುವ ಕಾಡಾನೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version