Site icon Vistara News

Murder Case: ಪ್ರವಾಸಿ ತಾಣ ದೇವರಮನೆ ಗುಡ್ಡದಲ್ಲಿ ಹೆಣ; ಗಾಂಜಾ ಗ್ಯಾಂಗ್‌ನಿಂದ ಕೊಲೆ

devaramane gudda murder

#image_title

ಚಿಕ್ಕಮಗಳೂರು: ಮೂಡಿಗೆರೆ ಸಮೀಪದ ಪ್ರವಾಸಿ ತಾಣವಾಗಿರುವ (Tourist Place) ದೇವರಮನೆ ಗುಡ್ಡದಲ್ಲಿ ಹೆಣವೊಂದು (Murder case) ಪತ್ತೆಯಾಗಿದ್ದು, ಅದರ ಹಿಂದಿನ ನಿಗೂಢತೆ ಬಯಲಾಗಿದೆ. ಗಾಂಜಾ ವ್ಯವಹಾರದಲ್ಲಿ (Ganja Mafia) ತೊಡಗಿದ್ದ ಗುಂಪು ವ್ಯವಹಾರಕ್ಕೆ ಸಂಬಂಧಿಸಿದ ಜಗಳದಲ್ಲಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ಹೆಣವನ್ನು ದೇವರಮನೆ ಗುಡ್ಡದಲ್ಲಿ (Devaramane gudda) ಎಸೆದು ಪರಾರಿಯಾಗಿದೆ ಎನ್ನಲಾಗಿದೆ. ಕೊಲೆ ಮಾಡಿ ನಾಪತ್ತೆಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಜೂನ್ 8ರಂದು ದೇವರಮನೆ ಸಮೀಪ ಹೆಣವೊಂದು ಪತ್ತೆಯಾಗಿತ್ತು. ರಸ್ತೆ ಬದಿಯ ಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಶವದ ಬೆನ್ನು ಹತ್ತಿದ ಪೊಲೀಸರಿಗೆ ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಮಹಮ್ಮದ್ ಸಾವದ್ ಎಂಬಾತನ ಶವ ಎಂದು ತಿಳಿದುಬಂದಿತ್ತು.

ದುಷ್ಕರ್ಮಿಗಳು ಕೊಲೆ ಮಾಡಿ ಮೂಡಿಗೆರೆಯ ದೇವರಮನೆ ಗುಡ್ಡದಲ್ಲಿ ಹೆಣ ಎಸೆದು ಪರಾರಿಯಾಗಿದ್ದಾರೆ ಎನ್ನುವುದು ಪೊಲೀಸರ ಶಂಕೆಯಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದಾಗ ಮೃತಪಟ್ಟ ಮಹಮ್ಮದ್‌ ಸಾವದ್‌ ಮಾದಕ ವ್ಯಸನಿ ಮತ್ತು ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದವನು ಎನ್ನುವುದು ತಿಳಿದುಬಂದಿತ್ತು. ಇದರ ಆಧಾರದಲ್ಲಿ ಮಾದಕ ವಸ್ತು ಸರಬರಾಜು ಮಾಡುವ ಗ್ಯಾಂಗ್‌ಗಳನ್ನೇ ಗುರಿಯಾಗಿಟ್ಟುಕೊಂಡು ತನಿಖೆ ನಡೆಸಿದರು.

ಮಾದಕವಸ್ತು ಮಾರಾಟದ ಗ್ಯಾಂಗ್ ನಿಂದಲೇ ಕೊಲೆಗೀಡಾಗಿರಬಹುದು ಎಂಬ ಅನುಮಾನ ನಿಜವಾಗಿದ್ದು, ಪೊಲೀಸರ ಪ್ರಾಥಮಿಕ ತನಿಖೆಯಿಂದ ಕೊಲೆ ಸತ್ಯಾಂಶ ಬಯಲಾಯಿತು. ಇದರ ಅನುಸಾರ ಬಂಟ್ವಾಳ ಮೂಲದ ಆರೋಪಿಗಳ ರಿಜ್ವಾನ್ ಮತ್ತು ಝೈನುಲ್ಲಾ ಎಂಬವರನ್ನು ಬಂಧಿಸಲಾಗಿದೆ.

ಈ ಮೂವರ ಮಧ್ಯೆ ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿ ಜಗಳ ನಡೆದಿದ್ದು, ಆರೋಪಿಗಳು ಸಾವದ್‌ನನ್ನು ಕೊಂದು ಶವವನ್ನು ದೇವರ ಮನೆ ಗುಡ್ಡದ ಬಳಿ ಎಸೆದು ಪರಾರಿಯಾಗಿದ್ದರು.

ಇದೀಗ ಬಣಕಲ್ ಪೊಲೀಸರು ಆರೋಪಿಗಳನ್ನು ಬಂಧಿಸಿ ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಚಾಕಲೇಟ್‌ ಕೊಡಿಸುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ

ರಾಯಚೂರು: ಚಾಕಲೇಟ್‌ ಕೊಡಿಸುವುದಾಗಿ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರಿನ ಸಿಂಧನೂರು ತಾಲೂಕಿನ ಆರ್.ಎಚ್ ಕ್ಯಾಂಪ್ 3ರಲ್ಲಿ ಘಟನೆ ನಡೆದಿದೆ. 11 ವರ್ಷದ ಬಾಲಕಿಯ ಮೇಲೆ ಸಪನ್ ಮಂಡಲ್ (52) ಎಂಬ ಕಾಮುಕ ಅತ್ಯಾಚಾರ ಎಸಗಿದ್ದಾನೆ.

ಬಾಲಕಿಯ ಮನೆಯ ಪಕ್ಕದಲ್ಲೇ ವಾಸವಿದ್ದ ಆರೋಪಿ ಚಾಕಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದಿದ್ದ. ಸ್ಕೂಟರ್‌ನಲ್ಲಿ ಕರೆದೊಯ್ದು, ಊರ ಹೊರಗಿನ ಜಮೀನಿನಲ್ಲಿ ಅತ್ಯಾಚಾರ ಎಸಗಿದ್ದ. ಬಾಲಕಿ ಕಣ್ಣೀರು ಹಾಕುತ್ತಾ ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ.

ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿರುವ ಸಂತ್ರಸ್ತ ಬಾಲಕಿಯ ಪೋಷಕರಿಂದ ಸಪನ್ ಮಂಡಲ ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ದಾಖಲು ಬಳಿಕ ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Murder Case: ಶ್ರೀರಂಗಪಟ್ಟಣದಲ್ಲಿ ಹೃದಯ ವಿದ್ರಾವಕ ಘಟನೆ, ತಂದೆಯಿಂದಲೇ ಮಕ್ಕಳ ಕೊಲೆ

Exit mobile version