Site icon Vistara News

Murder Case : ಅನೈತಿಕ ಸಂಬಂಧಕ್ಕೆ ಅಡ್ಡಿ; ಪತ್ನಿಯನ್ನು ರಾಗಿಮುದ್ದೆಯಲ್ಲಿ ಸೈನೈಡ್‌ ಬೆರೆಸಿ ಕೊಂದ!

Darshan Shwetha Murder Case

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ (Lab Technician) ದರ್ಶನ್‌ನ ಪತ್ನಿ ಶ್ವೇತಾ ಅವರ ಸಾವಿಗೆ (Murder Case) ಸಂಬಂಧಿಸಿ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. ಮೊದಲು ಇದೊಂದು ಹೃದಯಾಘಾತ ಎಂದು ಹೇಳಲಾಗಿದ್ದರೆ, ಬಳಿಕ ಗಂಡನೇ ವಿಷದ ಇಂಜೆಕ್ಷನ್‌ ಚುಚ್ಚಿ ಕೊಂದಿದ್ದಾನೆ ಎಂಬುದು ಬಯಲಾಯಿತು. ಇದೀಗ ಅದಕ್ಕಿಂತಲೂ ಭೀಕರವಾದ ಸತ್ಯ ಬಯಲಾಗಿದೆ. ಅದೇನೆಂದರೆ ದರ್ಶನ್‌ ತನ್ನ ಪತ್ನಿಯನ್ನು ಕೊಂದಿದ್ದು ವಿಷದ ಇಂಜೆಕ್ಷನ್‌ ಚುಚ್ಚಿ ಅಲ್ಲ, ಬದಲಾಗಿ ರಾಗಿ ಮುದ್ದೆಯಲ್ಲಿ ಸೈನೈಡ್‌ ಬೆರೆಸಿ (murder by mixing cyanide in Ragi ball) ಕೊಲೆ ಮಾಡಿದ್ದಾನೆ ಎನ್ನುವುದು ಮರಣೋತ್ತರ ಪರೀಕ್ಷೆ ಮತ್ತು ಪೊಲೀಸ್‌ ವಿಚಾರಣೆಯಲ್ಲಿ ಬಯಲಾಗಿದೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿರುವ ದರ್ಶನ್‌ ಮನೆಗೆ ನಾಲ್ಕು ದಿನಗಳ ಹಿಂದೆ ಶ್ವೇತಾ (31) ಬಂದಿದ್ದರು. ಆಕೆ ಆರೋಗ್ಯವಾಗಿಯೇ ಇದ್ದರು. ಆದರೆ, ಒಮ್ಮಿಂದೊಮ್ಮೆಗೇ ಮೃತಪಟ್ಟಿದ್ದು, ಆಕೆಯ ಪತಿ ಮನೆಯವರು ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ದರ್ಶನ್‌ ಹೇಳಿದ್ದ. ಇದರಿಂದ ಅನುಮಾನಗೊಂಡ ತಾಯಿ ಮನೆಯವರು ಅಂತ್ಯಕ್ರಿಯೆಯನ್ನು ತಡೆದು ತನಿಖೆಗೆ ಒತ್ತಾಯಿಸಿದ್ದರು. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿ ಶ್ವೇತಾಳ ಮರಣೋತ್ತರ ಪರೀಕ್ಷೆ ನಡೆದಾಗ ಮೃತದೇಹದಲ್ಲಿ ವಿಷದ ಅಂಶ ಪತ್ತೆಯಾಗಿತ್ತು. ಹೀಗಾಗಿ ಇದು ಇಂಜೆಕ್ಷನ್‌ ಮೂಲಕ ವಿಷ ನೀಡಿ ಮಾಡಿದ ಕೊಲೆ ಎನ್ನುವುದು ಮೊದಲ ನೋಟಕ್ಕೆ ಬಯಲಾಗಿತ್ತು. ಆದರೆ, ಪೊಲೀಸರ ವಿಚಾರಣೆಯ ವೇಳೆ ಕಂಡುಬಂದ ಸತ್ಯವೇ ಬೇರೆ.

dharshan and shwetha

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ

ದರ್ಶನ್‌ ಮತ್ತು ಶ್ವೇತಾ ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆಯೇ ಅವರು ಮದುವೆಯಾಗಿ ಸುಮಾರು ಎರಡು ವರ್ಷ ಮನೆಯಿಂದಲೇ ದೂರವಿದ್ದರು. ಕೆಲವು ವರ್ಷಗಳಿಂದ ಎಲ್ಲವೂ ಇತ್ಯರ್ಥವಾಗಿ ಕೌಟುಂಬಿಕ ಸಂಬಂಧ ಸರಿಯಾಗಿತ್ತು.

ದರ್ಶನ್‌ ಮತ್ತು ಶ್ವೇತಾ ಸೇರಿ ಬೆಂಗಳೂರಿನ ಕೊಡಿಗೆಹಳ್ಳಿ ಬಳಿ ಟ್ರೂ ಮೆಡಿಕ್ಸ್ ಲ್ಯಾಬ್ ನಡೆಸುತ್ತಿದ್ದರು. ಈ ನಡುವೆ ಮದುವೆಯಾಗಿ ಒಂದು ಮಗುವನ್ನು ಪಡೆದ ಬಳಿಕ ಗಂಡನಿಂದ ಬೇರಾದ ಸಹೋದ್ಯೋಗಿ ಮಹಿಳೆಯೊಬ್ಬಳ ಜತೆಗೆ ದರ್ಶನ್‌ ಅನೈತಿಕ ಸಂಬಂಧ ಶುರು ಮಾಡಿದ್ದ. ಕಷ್ಟಕ್ಕೆ ಸ್ಪಂದಿಸುವ ಹೆಸರಿನಲ್ಲಿ ಸಂಧಿಸಿದ ಅವರಿಬ್ಬರು ಅನೈತಿಕ ಸಂಬಂಧವನ್ನು ಮುಂದುವರಿಸಿದ್ದರು. ಪ್ರೀತಿಸಿ ಮದುವೆ ಆಗಿದ್ದ ಶ್ವೇತಾಳನ್ನೇ ಯಾಮಾರಿಸಿ ವಿವಾಹಿತೆಯ ಮೋಹಕ್ಕೆ ಸಿಲುಕಿದ್ದ ದರ್ಶನ್‌.

ಈ ವಿಷಯ ತಿಳಿದ ಶ್ವೇತಾ, ಪತಿ ದರ್ಶನ್‌ನಿಂದ ಆದ ಮೋಸಕ್ಕೆ ನೊಂದಿದ್ದಳು. ದರ್ಶನ್‌ನನ್ನು ಕೇಳಿದಾಗ ಆತ ಈ ಸಂಬಂಧವನ್ನು ಕೊನೆಗೊಳಿಸುವುದಾಗಿ ಮಾತು ಕೊಟ್ಟಿದ್ದ. ಆದರೆ, ಪದೇಪದೆ ವಿವಾಹಿತೆಯೊಂದಿಗೆ ಮಾತಾಡುವುದು, ಮಸೇಜ್‌ ಮಾಡುವುದು, ಹೊರಗೆ ಸುತ್ತಾಡುವುದು ಶ್ವೇತಾಕ್ಕೆ ಗೊತ್ತಾಗಿತ್ತು. ಕೊನೆಗೆ ಒಂದು ದಿನ ಶ್ವೇತಾ, ದರ್ಶನ್‌ ಹಾಗೂ ಅನೈತಿಕ ಸಂಬಂಧ ಹೊಂದಿದ್ದ ಅಶ್ವಿನಿಯನ್ನು ಮನೆಗೆ ಕರೆಸಿ ಬುದ್ಧಿ ಮಾತನ್ನು ಹೇಳಿ ದೂರ ಇರುವಂತೆ ಹೇಳಿದ್ದಳು. ಆದರೆ, ಕಳೆದ ಸೋಮವಾರ ಅಶ್ವಿನಿ ಮತ್ತೆ ದರ್ಶನ್‌ ಜತೆ ಸಂಪರ್ಕ ಮಾಡಿದ್ದನ್ನು ಕಂಡು ಶ್ವೇತಾ ಬೇಜಾರು ಮಾಡಿಕೊಂಡಿದ್ದಳು ಮತ್ತು ಅಶ್ವಿನಿಗೆ ಕರೆ ಮಾಡಿ ಎಚ್ಚರಿಸಿದ್ದಳು. ಆಕೆ ಸಂಪರ್ಕ ಮಾಡಿದ್ದಕ್ಕೆ ಕಾರಣಗಳನ್ನು ಹೇಳಿ ತಾನು ಯಾವ ಕಾರಣಕ್ಕೂ ಸಂಬಂಧ ಮುಂದುವರಿಸುವುದಿಲ್ಲ ಎಂದಿದ್ದಳು.

ಆದರೆ, ಅದೇ ರಾತ್ರಿ ಇಲ್ಲಿ ದೇವವೃಂದ ಗ್ರಾಮದಲ್ಲಿ ದರ್ಶನ್‌ ತನ್ನ ಪತ್ನಿಯ ಕೊಲೆಗೆ ಸ್ಕೆಚ್‌ ಹಾಕಿದ್ದ. ಅಕ್ರಮ ಸಂಬಂಧದ ಹೆಸರಿನಲ್ಲಿ ತನ್ನ ಮಾನ ತೆಗೆದಿದ್ದಾಳೆ ಎಂಬ ಸಿಟ್ಟು, ಗೆಳತಿಯನ್ನು ದೂರ ಮಾಡಿದ ಆಕ್ರೋಶದಲ್ಲಿದ್ದ ಆತ ಊರಿನ ಮನೆಯಲ್ಲೇ ಕೊಲೆ ಮಾಡಲು ಪ್ಲ್ಯಾನ್‌ ಮಾಡಿದ್ದ.

ಅವನ ಪ್ಲ್ಯಾನ್‌ನಂತೆಯೇ ಶ್ವೇತಾ ಮಂಗಳವಾರ ಬೆಳಗ್ಗೆ ಸತ್ತು ಬಿದ್ದಿದ್ದಳು. ಬೆಳಗ್ಗೆ ಎದ್ದವನೇ ಅಯ್ಯೋ ಶ್ವೇತಾಳಿಗೆ ಹೃದಯಾಘಾತವಾಗಿದೆ ಎಂದು ನಾಟಕವಾಡಿದ. ಶ್ವೇತಾಳ ಮನೆಯವರಿಗೂ ಕರೆ ಮಾಡಿ ತಿಳಿಸಿದ. ಅವರೆಲ್ಲರೂ ಬಂದು ನೋಡಿದಾಗ ಅಷ್ಟು ಹೊತ್ತಿಗೆ ಅಂತ್ಯಕ್ರಿಯೆ ಎಲ್ಲ ಸಿದ್ಧತೆಗಳು ನಡೆದಿದ್ದವು.

ಅಲ್ಲಿ ದರ್ಶನ್‌ನ ಅವಸರ ಮತ್ತು ಸಂಶಯಾಸ್ಪದ ನಡೆ ತಾಯಿ ಮನೆಯವರಿಗೆ ಸಂಶಯ ಮೂಡಿಸಿತು. ಅವರು ಇದರ ಬಗ್ಗೆ ತನಿಖೆಯಾಗಿ ನಂತರ ಅಂತ್ಯಕ್ರಿಯೆ ನಡೆಸೋಣ ಎಂದು ಹೇಳಿದರು. ಹಾಗೆ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು. ಮರಣೋತ್ತರ ಪರೀಕ್ಷೆ ವೇಳೆ ಸಾವು ಸಂಭವಿಸಿದ್ದು ಹೃದಯಾಘಾತದಿಂದಲ್ಲ, ವಿಷದಿಂದ ಎನ್ನುವುದು ಗೊತ್ತಾಯಿತು. ಇದರೊಂದಿಗೆ ದರ್ಶನ್‌ ಕೊಲೆ ಮಾಡಿದ್ದಕ್ಕೆ ಮೊದಲ ಸಾಕ್ಷ್ಯ ಸಿಕ್ಕಿತ್ತು.

ಈ ನಡುವೆ, ಪೊಲೀಸರು ದರ್ಶನ್‌ನ ವಿಚಾರಣೆ ನಡೆಸಿದಾಗ ಇನ್ನಷ್ಟು ಸತ್ಯಗಳು ಬಯಲಾದವು.

ಇದನ್ನೂ ಓದಿ: Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್​​

ಅನೈತಿಕ ಸಂಬಂಧಕ್ಕೆ ಅಡ್ಡಲಾಗಿದ್ದ ಹೆಂಡತಿಯನ್ನು ಕೊಲ್ಲಬೇಕು ಎಂದು ಮೊದಲೇ ಪ್ಲ್ಯಾನ್‌ ಮಾಡಿಕೊಂಡಿದ್ದ ದರ್ಶನ್‌, ಸೋಮವಾರ ರಾತ್ರಿ ಊಟದಲ್ಲಿ ಸೈನೈಡ್ ಬೆರೆಸಿದ್ದ. ರಾತ್ರಿಯೇ ಶ್ವೇತಾ ಸಾವನ್ನಪ್ಪಿದ್ದಳು. ಆದರೆ, ಸಾವು ಹೇಗೆ ಸಂಭವಿಸಿತು ಎಂದು ಯಾರಾದರೂ ಕೇಳಿದರೆ ಉತ್ತರ ಬೇಕಲ್ಲ ಎಂದು ಭಾವಿಸಿದ ಆತ ಕೈಗೆ ಸಿರಿಂಜ್‌ನಿಂದ ಇಂಜೆಕ್ಷನ್‌ ಚುಚ್ಚಿದ.

ಸಿರಿಂಜ್ ನಿಂದ ಇಂಜೆಕ್ಟ್ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ಲಾನ್ ಮಾಡಿದ. ಆದರೆ, ಬೆಳಗಾಗುವ ಹೊತ್ತಿಗೆ ಏನೋ ಪ್ಲ್ಯಾನ್‌ ಉಲ್ಟಾ ಆಗಿಬಿಟ್ಟರೆ ಎಂದು ಹಾರ್ಟ್ ಅಟ್ಯಾಕ್ ಎಂದು ನಾಟಕ ಮಾಡಿದ್ದ. ಆದರೆ, ತವರು ಮನೆಯವರಿಗೆ ಸಂಶಯ ಬಂದು ಪ್ರಕರಣ ಹೊರ ತಿರುವು ಪಡೆಯಿತು. ಸಹೋದ್ಯೋಗಿಯ ಪ್ರೀತಿಯ ಬಲೆಯಲ್ಲಿ ಬಿದ್ದು ದರ್ಶನ್‌ ಆಕೆಯನ್ನೇ ಕೊಲೆ ಮಾಡಿದ್ದ!

Exit mobile version