Site icon Vistara News

Road Accident : ತರೀಕೆರೆ ಖಾಸಗಿ ಬಸ್‌ ಅಟ್ಟಹಾಸದಲ್ಲಿ ಗಾಯಗೊಂಡಿದ್ದ ಒಬ್ಬ ಬಾಲಕಿ ಮೃತ್ಯು, ಇನ್ನೊಬ್ಬಳು ಗಂಭೀರ

girl death in tarikere accident

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ (Chikkamagaluru News) ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್‌ನಲ್ಲಿ ಬಸ್‌ ಒಂದು ಯದ್ವಾತದ್ವಾ ಅಟ್ಟಹಾಸ ಮಾಡಿದ (Road accident) ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬಾಕೆ ಮೃತಪಟ್ಟಿದ್ದರೆ (One girl student death), ಇನ್ನೊಬ್ಬಳ ಸ್ಥಿತಿಯೂ ಗಂಭೀರವಾಗಿದೆ.

ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್‌ನಲ್ಲಿ ಬಸ್‌ ಒಮ್ಮಿಂದೊಮ್ಮೆಗೇ ಮಾರ್ಗದ ಬದಿಯಲ್ಲಿ ನಿಂತಿದ್ದ ಮಕ್ಕಳ ಮೇಲೆ ನುಗ್ಗಿದ್ದು, ಈ ಘಟನೆಯಲ್ಲಿ ತುಳಸಿ (15) ಮತ್ತು ನಿವೇದಿತ (14) ಎಂಬವರು ತೀವ್ರವಾಗಿ ಗಾಯಗೊಂಡಿದ್ದರು. ಇವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ, ತುಳಸಿ ಮಾತ್ರ ಅಷ್ಟು ಹೊತ್ತಿಗಾಗಲೇ ಪ್ರಾಣ ಕಳೆದುಕೊಂಡಿದ್ದಾಳೆ. ನಿವೇದಿತಾಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿವೇದಿತಾ

ಗುರುವಾರ ಬೆಳಗ್ಗೆ ಈ ದುರ್ಘಟನೆ ನಡೆದಿದ್ದು, ವಿಪರೀತ ವೇಗದಲ್ಲಿ ಸಾಗುತ್ತಿದ್ದ ಬಸ್‌ (Overspeading bus) ಒಂದು ನಿಯಂತ್ರಣ ತಪ್ಪಿ ಬಸ್‌ಗಾಗಿ ಕಾಯುತ್ತಿದ್ದ ಮಕ್ಕಳ (Bus Rams into Children) ಮೇಲೆಯೇ ಹರಿದಿತ್ತು. ಒಮ್ಮಿಂದೊಮ್ಮೆಗೇ ನುಗ್ಗಿದ ಬಸ್ಸಿನಡಿ ಸಿಲುಕಿದ ಮಕ್ಕಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರೆ ಉಳಿದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕುಟುಂಬಿಕರ ಕಣ್ಣೀರು

ಮಕ್ಕಳು ಶಾಲೆಗೆ ಹೋಗುವುದಕ್ಕಾಗಿ ಬಸ್‌ ನಿಲ್ದಾಣದ ಬಳಿ ನಿಂತಿದ್ದರು. ಆಗ ಎಂಡಿಎಸ್‌ ಎಂಡ್‌ ಸನ್ಸ್‌ ಕಂಪನಿಗೆ ಸೇರಿದ ಖಾಸಗಿ ಬಸ್‌ ಎಂದಿನಂತೆ ಬಂದಿತ್ತು. ಆದರೆ, ಅತಿಯಾದ ವೇಗದಲ್ಲಿದ್ದ ಪರಿಣಾಮವಾಗಿ ಮಕ್ಕಳ ಎದುರು ನಿಲ್ಲಬೇಕಾಗಿದ್ದ ಬಸ್‌ ಅವರ ಮೇಲೆಯೇ ಹರಿದಿದೆ.

ಕೊನೆಗೆ ಈ ಬಸ್‌ ಪಕ್ಕದ ಮನೆಗಳತ್ತ ಧಾವಿಸಿದ್ದು ಡಿಕ್ಕಿಯ ರಭಸಕ್ಕೆ ಮನೆಯ ಮುಂಭಾಗದ ಚಾವಣಿ ಸಂಪೂರ್ಣ ಹಾನಿಯಾಗಿದೆ. ನಿಯಂತ್ರಣ ತಪ್ಪಿದ ಬಸ್ ಕಂಡು ರಸ್ತೆ ಬದಿ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿದ್ದರು.

ಈ ಭಾಗದಲ್ಲಿ ಖಾಸಗಿ ಬಸ್‌ಗಳು ವಿಪರೀತ ವೇಗದಿಂದ ಸಂಚರಿಸುತ್ತಿದ್ದು, ಇದರ ಬಗ್ಗೆ ಈಗಾಗಲೇ ಹಲವು ಬಾರಿ ದೂರು ನೀಡಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: Murder Case : ಲಿವಿಂಗ್‌ ಟುಗೆದರ್‌ನಲ್ಲಿದ್ದ ಪ್ರಿಯಕರನ ಎದೆಗೆ ಚಾಕುವಿನಿಂದ ಇರಿದು ಕೊಂದ ಮಹಿಳೆ! ಇವಳೆಂಥಾ ಹಂತಕಿ!

ವಾಹನಗಳ ಧಾವಂತಕ್ಕೆ ಮಕ್ಕಳ ಸಾಲು ಸಾಲು ಸಾವು

ಬುಧವಾರವಷ್ಟೇ ಬೆಂಗಳೂರಿನ ಹೊರವಲಯದ ದೊಡ್ಡ ಬಳ್ಳಾಪುರದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಪುಟ್ಟ ಮಗುವೊಂದನ್ನು (Child dead) ಟ್ರ್ಯಾಕ್ಟರ್‌ ಬಲಿ ಪಡೆದಿತ್ತು. ದೊಡ್ಡಬಳ್ಳಾಪುರದ ಡಿಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಘಟನೆಯಲ್ಲಿ ಮೃತಪಟ್ಟ ಮಗುವಿನ ಹೆಸರು ದರ್ಶನ್‌. ಕೇವಲ ಮೂರು ವರ್ಷ. ತೀವ್ರವಾಗಿ ಗಾಯಗೊಂಡ ಮಗು ಮತ್ತು ಅಜ್ಜಿ ಇಬ್ಬರನ್ನೂ ಸಮೀಪದ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿತ್ತು.

ಕೆಲವು ವಾರಗಳ ಹಿಂದೆ ಮಂಡ್ಯದ ಗೊಲ್ಲರ ದೊಡ್ಡಿಯಲ್ಲಿ ಟ್ಯೂಷನ್‌ ಮುಗಿಸಿ ಮರಳುತ್ತಿದ್ದ ಐವರು ಮಕ್ಕಳ ಮೇಲೆ ಟಾಟಾ ಏಸ್‌ ವಾಹನವೊಂದು ಹರಿದು ನಾಲ್ವರು ಮೃತಪಟ್ಟಿದ್ದರು.

Exit mobile version