Site icon Vistara News

Contaminated Water : ಕಾವಾಡಿಗರ ಹಟ್ಟಿ ವಿಷಜಲ ದುರಂತಕ್ಕೆ 7ನೇ ಬಲಿ; ನಿಲ್ಲದ ಸಾವಿನ ಮೆರವಣಿಗೆ

seventh death in contaminated water case

ಚಿತ್ರದುರ್ಗ: ಜಿಲ್ಲೆಯ ಕಾವಾಡಿಗರಹಟ್ಟಿ ವಿಷ ಜಲ ದುರಂತ (Contaminated Water) ಪ್ರಕರಣದಲ್ಲಿ ಅಧಿಕೃತವಾಗಿ ಏಳನೇ ಜೀವ ಬಲಿಯಾಗಿದೆ.

ಈ ಪ್ರಕರಣದಲ್ಲಿ ಇದುವರೆಗೆ ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಮೃತಪಟ್ಟಿದ್ದರೆ, ತಾಯಿ ಗರ್ಭದೊಳಗೇ ಒಂದು ಮಗು ಕಣ್ಮುಚ್ಚಿದೆ.

ಜುಲೈ 30ರಂದು ಭಾನುವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ (Chitradurga News) ಕಾವಾಡಿಗರಹಟ್ಟಿಯ (Kawadigara Hatti) ಟ್ಯಾಂಕ್‌ನಿಂದ ಬಿಟ್ಟ ನೀರನ್ನು ಸೇವಿಸಿ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಇವರ ಪೈಕಿ ಹಟ್ಟಿಯ ನಿವಾಸಿಗಳಾದ ಮಂಜುಳಾ, ರಘು, ಪ್ರವೀಣ, ರುದ್ರಪ್ಪ ಮತ್ತು ಪಾರ್ವತಮ್ಮ ಎಂಬ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಜತೆಗೆ ರಘು ಅವರ ಸೋದರಿ ಉಷಾ ಅವರ ಹೊಟ್ಟೆಯಲ್ಲಿದ್ದ ಎಂಟು ತಿಂಗಳು 10 ದಿನದ ಮಗು ಕೂಡಾ ಮೃತಪಟ್ಟಿದ್ದಾದೆ

ಇದೀಗ ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಗ್ರಾಮದ ಕರಿಬಸಪ್ಪ(35) ಎಂಬವರು ವಾಂತಿ ಬೇಧಿಯಿಂದಾಗಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಏಳಕ್ಕೇರಿಯಾದಂತಾಗಿದೆ. ಇವರು ಜುಲೈ 30, 31ರಂದು ಕಾವಾಡಿಗರಹಟ್ಟಿಯ ಸಂಬಂಧಿಕರ ಮನೆಗೆ ತೆರಳಿದ್ದರು. ಆಗಸ್ಟ್‌ 1ರಂದು ಇವರು ಚಿತ್ರದುರ್ಗದ ಕೆಳಗೋಟೆ ಬಡಾವಣೆಗೆ ತೆರಳಿದ್ದರು. ಅಲ್ಲಿ ಅವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿತ್ತು.

ಚಿತ್ರದುರ್ಗ ಜಿಲ್ಲಾಸ್ಪತ್ರೆ, ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಾಗ ಭಾನುವಾರ ರಾತ್ರಿ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದಾರಿ ಮಧ್ಯೆಯೇ ಅವರು ಉಸಿರು ಕಳೆದುಕೊಂಡರು ಎಂದು ಮೃತ ಕರಿಬಸಪ್ಪ ಸಹೋದರ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್ ಗೆ ಈ ಬಗ್ಗೆ ಸಂಬಂಧಿಕರು ಮಾಹಿತಿ ನೀಡಿದ್ದು, ಸೂಕ್ತ ಪರಿಹಾರ ಕ್ರಮಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಡಿಹೆಚ್ಓ ಡಾ.ರಂಗನಾಥ್‌ ಭರವಸೆ ನೀಡಿದ್ದಾರೆ.

ಮೃತಪಟ್ಟ ಇತರ ಐವರು ದುರ್ದೈವಿಗಳು

  1. ಮಂಜುಳಾ: ಕವಾಡಿಗರಹಟ್ಟಿಯಲ್ಲಿ ನಡೆದ ದುರಂತದಲ್ಲಿ ಮೊದಲು ಮೃತಪಟ್ಟಿದ್ದು ಮಂಜುಳಾ ಎಂಬ 27 ವರ್ಷದ ಯುವತಿ. ನೀರು ಕುಡಿದ ಬಳಿಕ ಅಸ್ವಸ್ಥಗೊಂಡ ಹಲವರಲ್ಲಿ ಆಕೆ ಒಬ್ಬರು. ಆದರೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
  2. ರಘು : ಕವಾಡಿಗರ ಹಟ್ಟಿಯ ರಘು (26) ಭಾನುವಾರ ದುರಂತ ನಡೆದ ದಿನ ರಾತ್ರಿ ಮನೆಯಲ್ಲಿ ಊಟ ಮಾಡಿ ಕೆಲಸದ ನಿಮಿತ್ತ ಬೆಂಗಳೂರು ಬಸ್‌ ಹತ್ತಿದ್ದರು. ಆದರೆ, ಬೆಳಗ್ಗೆ ಬೆಂಗಳೂರಿನಲ್ಲಿ ಇಳಿದಾಗ ವಾಂತಿ ಬೇಧಿ ಶುರುವಾಗಿತ್ತು. ಅಷ್ಟು ಹೊತ್ತಿಗೆ ಅವರಿಗೆ ಊರಿನಲ್ಲಿ ನಡೆದ ಘಟನಾವಳಿಗಳ ವಿವರ ದೊರಕಿತ್ತು. ಕೂಡಲೇ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿದರು. ಆದರೆ, ಅಲ್ಲೂ ಅವರ ಪ್ರಾಣ ಉಳಿಯಲಿಲ್ಲ.
  3. ಪ್ರವೀಣ್‌: ವಡ್ಡರಸಿದ್ದವ್ವನ ಹಳ್ಳಿಯ ಪ್ರವೀಣ್‌ ಕಲುಷಿತ ನೀರಿಗೆ ನಡೆದ ಮೂರನೇ ಬಲಿ. ಪ್ರವೀಣ್‌ ಅವರು ಭಾನುವಾರ ರಾತ್ರಿ ಕವಾಡಿಗರ ಹಟ್ಟಿಗೆ ಬಂದಿದ್ದು, ಅಲ್ಲಿ ನೀರು ಕುಡಿದಿದ್ದರು. ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಪ್ರಾಣ ಉಳಿಯಲಿಲ್ಲ.
  4. ರುದ್ರಪ್ಪ: ಕವಾಡಿಗರ ಹಟ್ಟಿ ನಿವಾಸಿ ರುದ್ರಪ್ಪ (57) ಅವರು ಶುಕ್ರವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಸಾವಿಗೀಡಾಗಿದ್ದಾರೆ. ಕಳೆದ ಮೂರು ದಿನದಿಂದ ಇವರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
  5. ಪಾರ್ವತಮ್ಮ: ಕವಾಡಿಗರ ಹಟ್ಟಿಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಪಾರ್ವತಮ್ಮ (60) ಅವರು ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಭಾನುವಾರ ಅಸ್ವಸ್ಥರಾಗಿದ್ದ ಪಾರ್ವತಮ್ಮ ಅವರು ಬಳಿಕ ಸ್ವಲ್ಪ ಗುಣಮುಖರಾಗಿ ಮನೆಗೆ ಹೋಗಿದ್ದರು. ಅವರು ಪಾರ್ಶ್ವ ವಾಯು ಪೀಡಿತರಾಗಿರುವುದರಿಂದ ಅವರಿಗೆ ಕಳೆದ ಮೂರು ದಿನಗಳಿಂದ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರ ಸಾವೂ ಸಂಭವಿಸಿದೆ.
  6. ದುರಂತದಲ್ಲಿ ಮೃತಪಟ್ಟ ರಘು ಅವರ ತಂಗಿ ಉಷಾ ಅವರು ಹೆರಿಗೆಗಾಗಿ ತವರಿಗೆ ಬಂದಿದ್ದರು. ಅವರಿಗೂ ಅನಾರೋಗ್ಯ ಕಾಡಿದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಹೊಟ್ಟೆಯಲ್ಲಿದ್ದ 8 ತಿಂಗಳು 10 ದಿನದ ಮಗುವಿನ ಹೃದಯ ಸ್ತಬ್ಧವಾಗಿತ್ತು.
  7. ಕರಿಬಸಪ್ಪ (35): ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಗ್ರಾಮದ ಕರಿಬಸಪ್ಪ ಅವರು ಜುಲೈ 30, 31ರಂದು ಕಾವಾಡಿಗರಹಟ್ಟಿಯ ಸಂಬಂಧಿಕರ ಮನೆಗೆ ಬಂದಿದ್ದರು.. ಆಗಸ್ಟ್‌ 1ರಂದು ಇವರು ಚಿತ್ರದುರ್ಗದ ಕೆಳಗೋಟೆ ಬಡಾವಣೆಗೆ ತೆರಳಿದ್ದರು. ಅಲ್ಲಿ ಅವರಿಗೆ ವಾಂತಿ ಬೇಧಿ ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದರು. ಆ. 7ರಂದು ಅವರು ಮೃತಪಟ್ಟಿದ್ದಾರೆ.

    ಇದನ್ನೂ ಓದಿ: Contaminated Water : ವಿಷ ಜಲದಿಂದ ಮೃತಪಟ್ಟವರ 5 ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ; ತಕ್ಷಣವೇ FD ಇಡಲು ಧಾವಂತ!

ಇನ್ನೂ ಪತ್ತೆಯಾಗದ ವಿಷದ ಮೂಲ

ಘಟನೆ ನಡೆದು ಒಂಬತ್ತು ದಿನವಾದರೂ ಕಾವಾಡಿಗರಹಟ್ಟಿಯ ದುರಂತದ ಮೂಲ ಯಾವುದು ಎನ್ನುವುದು ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಸಂಶಯಿತ ಆರೋಪಿ ನೀರುಗಂಟಿ ಸುರೇಶ್‌ ಮತ್ತು ಎಂಜಿನಿಯರ್‌ಗಳ ಸಹಿತ ಐದು ಮಂದಿಯನ್ನು ಅಮಾನತು ಮಾಡಲಾಗಿದೆ. ನೀರಿನ ಪರೀಕ್ಷಾ ವರದಿಗಳು ಒಂದೊಂದು ಒಂದೊಂದು ಕಥೆ ಹೇಳುತ್ತಿವೆ. ಯಾವುದೂ ನಿರ್ದಿಷ್ಟ ಕಾರಣವನ್ನು ಹೇಳುತ್ತಿಲ್ಲ.

ಲಿಂಗಾಯತರಾಗಿರು ಸುರೇಶ್‌ ಅವರ ಮಗಳನ್ನು ಕಾವಾಡಿಗರ ಹಟ್ಟಿಯ ದಲಿತ ಯುವಕ ಪ್ರೀತಿಸಿ ಮದುವೆಯಾದ ದ್ವೇಷದಲ್ಲಿ ಅವರು ನೀರಿಗೆ ವಿಷ ಬೆರೆಸಿದ್ದರು ಎಂಬ ಆರೋಪವಿದ್ದು, ಈ ಬಗ್ಗೆ ಇನ್ನೂ ತನಿಖೆ ನಡೆದಿಲ್ಲ. ರಾಜ್ಯದ ಆರೋಗ್ಯ ಸಚಿವ ದಿನೇಶ್‌ ಗುಂಡೂ ರಾವ್‌ ಅವರು ಆಗಸ್ಟ್‌ 5ರಂದು ಕಾವಾಡಿಗರಹಟ್ಟಿಗೆ ಭೇಟಿ ನೀಡಿ, ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಿದ್ದರು.

Exit mobile version