Site icon Vistara News

Udupi Toilet Case: ನೇತ್ರಜ್ಯೋತಿ ಕಾಲೇಜಿಗೆ ಸಿಐಡಿ ಎಸ್‌ಪಿ ಭೇಟಿ; ಸಂತ್ರಸ್ತ ವಿದ್ಯಾರ್ಥಿನಿಯಿಂದ ಹೇಳಿಕೆ ದಾಖಲು

udupi Nethrajyothi College

ಉಡುಪಿ: ವಿದ್ಯಾರ್ಥಿನಿಯ ಶೌಚಾಲಯ ವಿಡಿಯೊ ಪ್ರಕರಣ (Udupi Toilet Case) ತನಿಖೆಗಾಗಿ ನಗರದ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿಗೆ ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜುಲೈ 18ರಂದು ನಡೆದ ಘಟನೆಯ ಬಗ್ಗೆ ಸಂತ್ರಸ್ತ ವಿದ್ಯಾರ್ಥಿನಿ, ಆಡಳಿತ ಮಂಡಳಿ, ಕಾಲೇಜಿನ ಸಿಬ್ಬಂದಿಯ ಹೇಳಿಕೆಗಳನ್ನು ಸಿಐಡಿ ತಂಡ ದಾಖಲಿಸಿಕೊಂಡಿದೆ.

ಗಮನ ಸೆಳೆದ ಗೊಂಬೆ

ಸಿಐಡಿ ತನಿಖೆ ವೇಳೆ ಕಾಣಿಸಿಕೊಂಡ ಪ್ಲ್ಯಾಸ್ಟಿಕ್ ಗೊಂಬೆ ಗಮನ ಸೆಳೆಯಿತು. ಕಾಲೇಜಿಗೆ ಗೊಂಬೆಯನ್ನು ತಂದು ಪ್ರಕರಣವನ್ನು ಸಿಐಡಿ ತಂಡ ಮರು ಸೃಷ್ಟಿ ಮಾಡಿತು. ಘಟನೆ ನಡೆದ ಶೌಚಾಲಯ, ಕಾಲೇಜಿನ ವರಾಂಡಾದಲ್ಲಿ ಮಹಜರು ಪ್ರಕ್ರಿಯೆ ನಡೆಸಲು ಗೊಂಬೆಯನ್ನು ಬಳಸಿಕೊಳ್ಳಲಾಯಿತು. ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ, ಡಿವೈಎಸ್‌ಪಿ ಅಂಜುಮಾಲಾ, ಮಹಿಳಾ ಸಿಬ್ಬಂದಿ ಸಮ್ಮುಖದಲ್ಲಿ ತನಿಖಾ ಪ್ರಕ್ರಿಯೆ ನಡೆಯಿತು.

ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು (Nethrajyothi Paramedical college) ವಿಡಿಯೋ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಹಸ್ತಾಂತರ (Case transferred to CID) ಮಾಡಿತ್ತು. ಹೀಗಾಗಿ ಉನ್ನತ ಮಟ್ಟದ ತನಿಖೆಗೆ ಸಿಐಡಿ ತಂಡ ನಗರಕ್ಕೆ ಭೇಟಿ ನೀಡಿದೆ.

ನೇತ್ರಜ್ಯೋತಿ ಪ್ಯಾರಾಮೆಡಿಕಲ್‌ ಕಾಲೇಜಿನ ದ್ವಿತೀಯ ಪಿಯುಸಿಯ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು (Three Muslim Students) ಪ್ರಥಮ ಪಿಯುಸಿಯ ಹಿಂದು ವಿದ್ಯಾರ್ಥಿನಿಯೊಬ್ಬಳ (Hindu student) ಟಾಯ್ಲೆಟ್‌ ಬಳಕೆಯ ದೃಶ್ಯವನ್ನು (Udupi Toilet case) ಚಿತ್ರೀಕರಿಸಿಕೊಂಡಿದ್ದಾರೆ ಎಂಬ ವಿವಾದ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ

ಇದನ್ನೂ ಓದಿ | Murder Case: ಹಾಸನದಲ್ಲಿ ಎಚ್.ಡಿ.ರೇವಣ್ಣ ಆಪ್ತ, ಗ್ರಾನೈಟ್ ಉದ್ಯಮಿಯ ಭೀಕರ ಹತ್ಯೆ

ಏನಿದು ಪ್ರಕರಣ?

ಜುಲೈ 18ರಂದು ನಡೆದ ಈ ಘಟನೆಯು ಆಗಲೇ ಕಾಲೇಜು ಮಟ್ಟದಲ್ಲಿ ಸುದ್ದಿಯಾಗಿತ್ತು. ವಿಷಯವನ್ನು ತಿಳಿದ ಆಡಳಿತ ಮಂಡಳಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಸಂತ್ರಸ್ತೆಯನ್ನು ಕರೆಸಿ ವಿಚಾರಣೆ ನಡೆಸಿತ್ತು. ಆದರೆ ಸಂತ್ರಸ್ತ ವಿದ್ಯಾರ್ಥಿನಿ ತಾನು ಕೂಡಲೇ ಮೊಬೈಲ್‌ ತೆಗೆದುಕೊಂಡು ವಿಡಿಯೊ ಡಿಲೀಟ್‌ ಮಾಡಿದ್ದಾಗಿ ಹೇಳಿದ್ದಳು ಮತ್ತು ಇದು ತಮಾಷೆಗೆ ಮಾಡಿದ ರ‍್ಯಾಗಿಂಗ್‌ ಆಗಿರುವುದರಿಂದ ಬೆಳೆಸುವುದು ಬೇಡ ಎಂಬ ಅಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸಿದ್ದಳು. ಆದರೂ ಆಡಳಿತ ಮಂಡಳಿ ಈ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ಹಾಗೂ ನಡೆದ ಘಟನಾವಳಿಗಳ ವಿವರವನ್ನು ಮಲ್ಪೆ ಪೊಲೀಸರಿಗೆ ನೀಡಿದ್ದರು. ಜತೆಗೆ ಮೊಬೈಲ್‌ ಕೂಡಾ ಹಸ್ತಾಂತರಿಸಲಾಗಿತ್ತು. ಆದರೆ, ಇದು ಕಾಲೇಜು ಮಟ್ಟದಲ್ಲೇ ಇತ್ಯರ್ಥಗೊಂಡ ವಿಷಯವಾಗಿದ್ದರಿಂದ ಪೊಲೀಸರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಆದರೆ, ಯಾವಾಗ ಉಡುಪಿ ಮೂಲದ ಹಿಂದು ಮಾನವ ಹಕ್ಕುಗಳ ಪರ ಕಾರ್ಯಕರ್ತೆ ರಶ್ಮಿ ಸಾಮಂತ್‌ ಅವರು ಧ್ವನಿ ಎತ್ತಿದರೋ ಆಗ ಈ ವಿಷಯ ಮತ್ತೆ ಹೊಸ ತಿರುವನ್ನು ಪಡೆದುಕೊಂಡಿತು. ಅದುವರೆಗೆ ಪ್ರಕರಣದ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದ ಬಿಜೆಪಿ ಬಳಿಕ ರೊಚ್ಚಿಗೆದ್ದು ಪ್ರತಿಭಟನೆಗಳನ್ನು ನಡೆಸಿತು. ಈ ಹುಡುಗಿಯರಿಗೆ ಬೇರೆ ಬೇರೆ ಸಂಘಟನೆಗಳ ಜತೆಗೆ ಸಂಪರ್ಕವಿದೆ. ಅವರು ಇದೇ ರೀತಿ ಫೋಟೊಗಳನ್ನು ತೆಗದು ಈ ಹಿಂದೆಯೂ ಕಳುಹಿಸಿದ್ದಾರೆ. ಫೋಟೊ ತೆಗೆದ ಬಳಿಕ ಮೊಬೈಲ್‌ಗಳೇ ಎಕ್ಸ್‌ಚೇಂಜ್‌ ಆಗುತ್ತವೆ ಎಂಬ ಸುದ್ದಿಗಳು ಹರಡಿದ್ದವು. ಅದರೆ, ಉಡುಪಿ ಪೊಲೀಸರು ಆ ರೀತಿಯಾಗಿ ವಿಡಿಯೊ ಹಂಚಿಕೆ ನಡೆದಿಲ್ಲ. ಎಲ್ಲಾದರೂ ಇದ್ದರೆ ಪೊಲೀಸರ ಗಮನಕ್ಕೆ ತರಬಹುದು ಎಂದು ಹೇಳಿದ್ದರು. ಅದಕ್ಕೆ ಯಾರೂ ಸ್ಪಂದಿಸಿರಲಿಲ್ಲ.

ಇದನ್ನೂ ಓದಿ | Murder Case : ಅವನಿಗೆ ಕೊಲೆ ಮಾಡಿದ್ದೇ ನೆನಪಿಲ್ಲ, ಕಾರಣ ಮೊದಲೇ ಗೊತ್ತಿಲ್ಲ! ಕಲ್ಲಿನೊಂದಿಗೆ ಠಾಣೆಗೆ ಬಂದವನ ಡೆಡ್ಲಿ ಕತೆ!

ಈ ನಡುವೆ, ಪ್ರಕರಣದ ತನಿಖೆಯನ್ನು ಮಲ್ಪೆ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಶೆಟ್ಟಿ ಅವರ ಹೆಗಲಿನಿಂದ ಕುಂದಾಪುರ ಡಿವೈಎಸ್‌ಪಿ ಚೆಲುವರಾಜು ಅವರಿಗೆ ಹಸ್ತಾಂತರಿಸಲಾಗಿತ್ತು. ಆದರೆ, ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಪ್ರಕರಣವನ್ನು ಎಸ್‌ಐಟಿಗೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು. ಸಿಎಂ ಮುಖ್ಯಮಂತ್ರಿ ಆದಿಯಾಗಿ ಸರ್ಕಾರದ ಸಚಿವರು ಒಪ್ಪಿರಲಿಲ್ಲ. ಇತ್ತ ಬಿಜೆಪಿ ಪ್ರಕರಣದ ಎಸ್‌ಐಟಿ ತನಿಖೆ ಆಗ್ರಹಿಸಿ ರಾಜ್ಯಪಾಲರಿಗೂ ಮನವಿ ಸಲ್ಲಿಸಿತ್ತು. ಆದರೆ, ಭಾರಿ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣದ ತನಿಖೆ ಹೊಣೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿದೆ.

Exit mobile version