Site icon Vistara News

1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ರಾಜ್ಯ; ಮೇಲ್ವಿಚಾರಣೆಗೆ ಸಮಿತಿ ರಚನೆ ಎಂದ ಸಿಎಂ ಬೊಮ್ಮಾಯಿ

1 ಟ್ರಿಲಿಯನ್

ಬೆಂಗಳೂರು: ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ತಲುಪಲು ರಾಜ್ಯದಿಂದ 1 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು, ಇದರ ಮೇಲ್ವಿಚಾರಣೆಗೆ ಸರ್ಕಾರದ ಮುಖ್ಯಕಾರ್ಯದರ್ಶಿ, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಉದ್ಯಮಿ ಮೋಹನ್ ದಾಸ್ ಪೈ, ಎಫ್‌ಐಸಿಸಿಐ ಮತ್ತು ಮೆಕೆನ್ಸಿಯ ಪ್ರತಿನಿಧಿಗಳನ್ನು ಒಳಗೊಂಡ ಗುಂಪು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಯೋಜನಾ ಇಲಾಖೆಯ ಕರ್ನಾಟಕ ಆರ್ಥಿಕ ಸಮೀಕ್ಷೆ 2021-22 ರ ಆಧಾರದ ಮೇಲೆ ಹೆಚ್ಚಿನ ವಿಶ್ಲೇಷಣೆಯೊಂದಿಗೆ ಮೋಹನ್‌ದಾಸ್ ಪೈ ಮತ್ತು ನಿಶಾ ಹೊಳ್ಳ ಅವರು ರಚಿಸಿರುವ ಕರ್ನಾಟಕ: ಎ ಟ್ರಿಲಿಯನ್‌ ಡಾಲರ್‌ ಜಿಡಿಪಿ ವಿಶನ್( “Karnataka: A $1 Trillion GDP Vision”) ಎಂಬ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಇದನ್ನೂ ಓದಿ | ವಿಸ್ತಾರ Explainer | ಮಳೆ ಅನಾಹುತ, ರಸ್ತೆ ಗುಂಡಿ: ಬೆಂಗಳೂರಿನ ಪ್ರತಿಷ್ಠೆ ರಾಷ್ಟ್ರ ಮಟ್ಟದಲ್ಲಿ ಬೀದಿಪಾಲು

2025ರ ವೇಳೆಗೆ 1 ಟ್ರಿಲಿಯನ್ ಯುಎಸ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿಯೊಂದಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ಮೌಲ್ಯಮಾಪನವನ್ನು ಈ ಗುಂಪು ಮಾಡಲಿದೆ. ಈ ಕ್ರಿಯಾ ಯೋಜನೆಯ ಪ್ರಗತಿಯ ಮೇಲ್ವಿಚಾರಣೆಯನ್ನು ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಫಲಿತಾಂಶ ಆಧಾರಿತ ಉದ್ದೇಶಿತ ಬಜೆಟ್‌ಗೆ ಅನುಕೂಲವಾಗುವಂತೆ 2022ರ ಡಿಸೆಂಬರ್‌ನೊಳಗೆ ಕ್ರಿಯಾ ಯೋಜನೆ ಸಿದ್ಧವಾಗಲಿದೆ. ಕರ್ನಾಟಕದಿಂದ ಒಂದು ಟ್ರಿಲಿಯನ್ ಕೊಡುಗೆಯೊಂದಿಗೆ 5 ಟ್ರಿಲಿಯನ್ ಭಾರತದ ಗುರಿಗೆ ನಾವು ಹೊಂದಿಕೊಳ್ಳಬೇಕು. ಬೆಳವಣಿಗೆಯ ದರಗಳನ್ನು ಹೆಚ್ಚಿಸಲು ಮಂಗಳೂರು ಬಂದರು ವಿಸ್ತರಣೆಗಾಗಿ ಅಗಾಧ ಸಂಭಾವ್ಯತೆಯನ್ನು ಪರಿಗಣಿಸಿ ಕರಾವಳಿ ಕಾರಿಡಾರ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದರ ಮೂಲಕ ರಫ್ತನ್ನು ಹೆಚ್ಚಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಮೂಲಸೌಕರ್ಯ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವಿದೆ. ಜತೆಗೆ ಅಭಿವೃದ್ಧಿಯನ್ನು ಉತ್ತೇಜಿಸಲು ಜನರ ಆರ್ಥಿಕ ಸಾಮರ್ಥ್ಯಗಳನ್ನು ಹೆಚ್ಚಿಸಬೇಕಾಗಿದೆ. ಕೈಗಾರಿಕಾ, ಕೃಷಿ ಮತ್ತು ಸೇವಾ ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಕೈಗಾರಿಕಾ ವಲಯದ ಸಾಮರ್ಥ್ಯವನ್ನು ಹೆಚ್ಚಿಸುವುದರ ಮೂಲಕ ಕೃಷಿ ಮತ್ತು ಸೇವಾ ವಲಯದ ಬೆಳವಣಿಗೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ಕೈಗಾರಿಕೆ ಮತ್ತು ಖಾಸಗಿ ವಲಯಗಳೆರಡೂ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಸಲಹೆ ನೀಡಿದ ಅವರು, ಕ್ರಿಯಾ ಯೋಜನೆಯು ಈ ಎಲ್ಲ ಅಂಶಗಳನ್ನು ಒಳಗೊಂಡಿರಬೇಕು ಎಂದು ಸಲಹೆ ನೀಡಿದರು.

ಕೃತಿಯ ಲೇಖಕರಾದ ಟಿ.ವಿ. ಮೋಹನ್‌ದಾಸ್ ಪೈ, ನಿಶಾ ಹೊಳ್ಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ | ಸಹಕಾರ ಸಂಘಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ: ಕೆಂದ್ರ, ರಾಜ್ಯ ಸರ್ಕಾರಕ್ಕೆ ಜಿ.ಟಿ. ದೇವೇಗೌಡ ಮನವಿ

Exit mobile version