Site icon Vistara News

EWS Reservation | ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ಶೇ.10 ಮೀಸಲಾತಿ ಆಶಾಕಿರಣ ಎಂದ ಸಿಎಂ ಬೊಮ್ಮಾಯಿ

EWS Reservation

ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 103ನೇ ಸಂವಿಧಾನ ತಿದ್ದುಪಡಿಗೆ ಸರ್ವೋಚ್ಚ ನ್ಯಾಯಾಲಯ 3:2 ಅನುಪಾತದಲ್ಲಿ ಬಹುಮತದ ತೀರ್ಪನ್ನು ನೀಡಿದ್ದು, ಇದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10 ಮೀಸಲಾತಿ ಕಲ್ಪಿಸಲಿದ್ದು, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ(EWS Reservation) ಜನರಿಗೆ ಆಶಾಕಿರಣವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಬೈಂದೂರಿನಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿ, ಯಾವುದೇ ಮೀಸಲಾತಿಯಿಲ್ಲದೇ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಸಮುದಾಯಗಳಿಗೆ ದೊರೆತಿರುವ ಈ ಅವಕಾಶವನ್ನು ಬಳಸಿಕೊಂಡು ಸಮುದಾಯಗಳು ಅಭಿವೃದ್ಧಿಯನ್ನು ಹೊಂದಲು ಈ ತೀರ್ಪು ಅನುಕೂಲ ಕಲ್ಪಿಸಲಿದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ ಜಾರಿಯಾಗುತ್ತಿರುವ ಈ ಸಂವಿಧಾನದ ತಿದ್ದುಪಡಿ ನಮಗೆಲ್ಲಾ ಸಂತೋಷವನ್ನು ತಂದಿದೆ ಎಂದರು.

ಇದನ್ನೂ ಓದಿ | EWS Reservation | 10% ಮೀಸಲಾತಿ ನೀಡಿರುವುದು ಸಾಮಾಜಿಕ ನ್ಯಾಯದ ಸಂಕೇತ, ಬಿ.ಎಲ್‌. ಸಂತೋಷ್‌ ಸಂತಸ

ಭಾರತ ಅಭಿವೃದ್ಧಿಯಾಗುತ್ತಿದ್ದು, ಅದರ ಜತೆಗೆ ಯುವಜನರ ಆಶೋತ್ತರಗಳೂ ಹೆಚ್ಚುತ್ತಿವೆ. ಎಲ್ಲ ರಂಗದಲ್ಲಿಯೂ ಮುಂದೆ ಬಂದು ಸ್ವಾವಲಂಬನೆಯ ಬದುಕು ಬದುಕುವ ಜನರ ಆಶಯಕ್ಕೆ ಸ್ಪಂದಿಸಲಾಗಿದೆ. ತಾಂತ್ರಿಕ ಮತ್ತು ಸಂವಿಧಾನಾತ್ಮಕವಾದ ಎಲ್ಲ ಅಂಶಗಳನ್ನು ಪರಿಶೀಲಿಸಿ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಈ ತೀರ್ಪನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಶಾಲೆಗಳಲ್ಲಿ ಧ್ಯಾನದ ಬಗ್ಗೆ ಪರಿಶೀಲಿಸಿ ತೀರ್ಮಾನ
ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಅಭ್ಯಾಸ ಮಾಡಿಸುವ ಅಪಸ್ವರ ಏಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾವುದೇ ಒಳ್ಳೆಯ ಕ್ರಮ ತೆಗೆದುಕೊಳ್ಳಬೇಕಾದರೆ ಅದರ ಪರ ಮತ್ತು ವಿರೋಧ ಅಭಿಪ್ರಾಯಗಳು ಸಹಜ. ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಅಡಕೆ ಬೆಳೆ ರೋಗಕ್ಕೆ ಔಷಧ ಸಿಂಪಡನೆಗೆ ಕ್ರಮ
ಅಡಕೆ ಬೆಳೆಯುವ ಕೃಷಿಕರ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿ, ಅಡಕೆ ಬೆಳೆಯಲ್ಲಿ ಬಿಳಿಚುಕ್ಕೆ ರೋಗ ಕಾಣಿಸಿಕೊಳ್ಳುತ್ತಿದ್ದು, ಕೃಷಿಕರು ಆತಂಕದಲ್ಲಿದ್ದಾರೆ. ಈ ರೋಗದ ಬಗ್ಗೆ ಕೃಷಿ ವಿಶ್ಯವಿದ್ಯಾಲಯ ಹಾಗೂ ಕೇಂದ್ರ ಸರ್ಕಾರದ ತಂಡ ಪರಿಶೀಲಿಸುತ್ತಿದ್ದು, ವೈಜ್ಞಾನಿಕವಾದ ಕಾರಣವನ್ನು ಪತ್ತೆ ಹಚ್ಚಿ, ಅದನ್ನು ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ರೋಗ ಹರಡದಂತೆ ವಿಜ್ಞಾನಿಗಳು ತಿಳಿಸಿರುವ ಔಷಧ ಸಿಂಪಡಣೆ ಕಾರ್ಯಕ್ಕೆ ಸರ್ಕಾರ ಸಹಕಾರ ನೀಡಲಿದೆ. ಮೂಲರೋಗವನ್ನು ಪತ್ತೆಹಚ್ಚಿ , ಅದರ ನಿವಾರಣೆಗೆ ಔಷಧ ಸಿಂಪಡಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಖರೀದಿ ಕೇಂದ್ರಕ್ಕೆ ಶೀಘ್ರ ಕ್ರಮ
ಕರಾವಳಿ ಭಾಗದಲ್ಲಿ ಕುಚಲಕ್ಕಿಯನ್ನು ಪಡಿತರದಲ್ಲಿ ವಿತರಿಸಲು ರೈತರಿಂದ ಕುಚಲಕ್ಕಿಯನ್ನು ಖರೀದಿಸಲು ಖರೀದಿ ಕೇಂದ್ರವನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು

ಇದನ್ನೂ ಓದಿ | power to fishermen | ಮೀನುಗಾರರ ದೋಣಿ ಮೇಲ್ದರ್ಜೆಗೇರಿಸಲು ಸಹಾಯಧನ: ಸಿಎಂ ಬಸವರಾಜ ಬೊಮ್ಮಾಯಿ

Exit mobile version