Site icon Vistara News

Minister D Sudhakar : ಡಿ. ಸುಧಾಕರ್‌ ಮೇಲೆ ಜಾತಿ ನಿಂದನೆ ಕೇಸ್‌ ದಾಖಲಾಗಿದೆಯಾ ಎಂದು ಕೇಳಿದ ಸಿಎಂ!

D Sudhakar and CM Siddaramaiah

ಬೆಂಗಳೂರು: ದಲಿತರ ಆಸ್ತಿ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ (Property grabbing, assault and casteist slurs) ಆರೋಪದ ಅಡಿಯಲ್ಲಿ ಸಚಿವ ಡಿ. ಸುಧಾಕರ್‌ (Minister D Sudhakar)​ ಮೇಲೆ ದಾಖಲಾಗಿರುವ ಎಫ್‌ಐಆರ್‌ (FIR registered) ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಇಂಥ ಗುರುತರ ಆರೋಪ ಕೇಳಿಬಂದಿದ್ದು, ಇವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಬಸವರಾಜ ಬೊಮ್ಮಾಯಿ (Basavaraj Bommai) ಆಗ್ರಹಿಸಿದ್ದಾರೆ. ಆದರೆ, ಜಾತಿ ನಿಂದನೆ ಕೇಸ್‌ ದಾಖಲಾಗಿರುವ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸಚಿವ ಸುಧಾಕರ್ ಪುನರುಚ್ಛಾರ ಮಾಡಿದ್ದರೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister Dr G Parameshwara), ವರದಿ ಕೇಳಿದ್ದೇನೆ. ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ದಲಿತ ಸಮುದಾಯದ ಸುಬ್ಬಮ್ಮ ಎಂಬುವವರು ಯಲಹಂಕ ಠಾಣೆಯಲ್ಲಿ (Yelahanka Police Station) ನೀಡಿದ್ದ ದೂರಿನನ್ವಯ ಸಚಿವ ಡಿ. ಸುಧಾಕರ್‌ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಚಿವರ ವಿರುದ್ಧ ದೌರ್ಜನ್ಯ, ವಂಚನೆ ಮತ್ತು ಹಲ್ಲೆ ಆರೋಪದಡಿ ಅಟ್ರಾಸಿಟಿ ಆ್ಯಕ್ಟ್ (Atrocity Act) ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ. ಈ ಕೇಸ್ ಕೋರ್ಟ್‌ನಲ್ಲಿದೆ. ಹೀಗಿದ್ದಾಗಲೂ ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಈಗ ಸಚಿವರ ಮುಂದಿದೆ. ಆದರೆ, ಇದನ್ನು ಸಚಿವ ಡಿ. ಸುಧಾಕರ್‌ ನಿರಾಕರಣೆ ಮಾಡಿದ್ದಾರೆ. ಈಗ ಈ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಎಫ್‌ಐಆರ್‌ ಆಗಿರುವುದೇ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಸಚಿವ ಡಿ. ಸುಧಾಕರ್‌ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆಯಾ? ಅವರನ್ನು ಕರೆದು ಮಾತನಾಡುತ್ತೇನೆ‌. ಅವರ ಮೇಲೆ ಕೇಸ್ ರಿಜಿಸ್ಟರ್ ಆಗಿದೆ ಎಂಬುದನ್ನು ನಾನು ಪತ್ರಿಕೆಯಲ್ಲಿ ನೋಡಿದ್ದೇನೆ. ಏನಾಗಿದೆ ಎಂದು ಕರೆದು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Karnataka Politics : ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಜ್ಜು; ಬಿಎಸ್‌ವೈ ನೇತೃತ್ವದಲ್ಲಿ ಮಹತ್ವದ ಸಭೆ

ನೀವು ದಲಿತ ಉದ್ದಾರಕರಾ?; ಸಿಎಂಗೆ ಎಚ್‌ಡಿಕೆ ಪ್ರಶ್ನೆ

ಸಚಿವ ಡಿ. ಸುಧಾಕರ್‌ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಮಚ್ಚು, ಕತ್ತಿ ಹಿಡಿದು ಹೊರಟಿರುವವರನ್ನು ಸಚಿವರನ್ನಾಗಿ ಮಾಡಿದ್ದೀರ. ನೀವು ದಲಿತ ಉದ್ದಾರಕರಾ? ಎಂದು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಪ್ರಕರಣವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ದಲಿತ ಸಂಘಟನೆಗಳು ಹೋರಾಟ ಮಾಡಬೇಕು. ದಲಿತರ ಮೇಲೆ ಹಲ್ಲೆ, ಅವಹೇಳನ ಮಾಡಿರುವ ಸಚಿವರ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲು ಮಾಡಲಾಗಿದೆ. ಅವರ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕೇಸ್‌ ದಾಖಲು ಮಾಡಿದ ಅಧಿಕಾರಿಗಳನ್ನು ಈ ಸರ್ಕಾರ ಪ್ರಶ್ನೆ ಮಾಡಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ನಾನು ಯಾರ ವಿರುದ್ಧವೂ ಜಾತಿನಿಂದನೆ ಮಾಡಿಲ್ಲ: ಸಚಿವ ಡಿ. ಸುಧಾಕರ್

ನಾನು ಯಾರ ವಿರುದ್ಧವೂ ಜಾತಿನಿಂದನೆ ಮಾಡಿಲ್ಲ. ಹಲವು ವರ್ಷಗಳಿಂದ ನಮ್ಮ ಕಂಪನಿಗೆ ಸಂಬಂಧಪಟ್ಟ ಜಮೀನು ಇದೆ. ಅಲ್ಲಿಯ ಜನರ ಪರಿಚಯವೇ ಇಲ್ಲ. ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ಯಾರಿಂದ ಅಂತ ಗೊತ್ತಿಲ್ಲ. ಆದರೆ ಕಾನೂನು ಇದೆ, ಕ್ರಮ ಕೈಗೊಳ್ಳಲಿ. ಕಾನೂನು ಎಲ್ಲರಿಗೂ ಒಂದೇ. ಬೇಕಿದ್ದರೆ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿ. 2006ರಲ್ಲೂ ಹೀಗೆ ಮಾಡಿದ್ದರು. ಇವರಿಗೆ ಕೋರ್ಟ್ ಛೀಮಾರಿ ಹಾಕಿತ್ತು. ಒಂದೂವರೆ ಎಕರೆ ಜಮೀನು ನಮ್ಮ ಕಂಪನಿಗೆ ಸೇರಿದ್ದಾಗಿದೆ. ನಾನು ರಸ್ತೆ ಒತ್ತುವರಿ ಮಾಡಿದ್ದರೆ ಕೋರ್ಟ್‌ಗೆ ಹೋಗಲಿ. ನನ್ನ ತಪ್ಪು ಇದ್ದರೆ ಕ್ರಮ ಜರುಗಿಸಲಿ ಎಂದು ಸಚಿವ ಡಿ. ಸುಧಾಕರ್‌ ಸ್ಪಷ್ಟನೆ ನೀಡಿದ್ದಾರೆ.‌

ಎರಡು ಎಫ್ಐಆರ್ ಬಗ್ಗೆ ನನಗೆ ಮಾಹಿತಿ ಇಲ್ಲ. ಜಾತಿ ನಿಂದನೆ ಪ್ರಕರಣದಲ್ಲಿ ಎಫ್ಐಆರ್ ಆಗಿದೆ. ನಾನು ಮುಖತಃ ಅವರನ್ನು ಭೇಟಿ ಮಾಡಿಲ್ಲ. ಇಬ್ಬರು ಮುಖಾಮುಖಿಯಾಗದೆ ಅದು ಹೇಗೆ ಜಾತಿ ನಿಂದನೆ ಆಗುತ್ತದೆ ಅನ್ನೋದು ಗೊತ್ತಿಲ್ಲ. ನಾನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಕೇಸ್ ಬಗ್ಗೆ ವಿವರಣೆ ನೀಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದೇನೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ನಾನು ಇದ್ದವನು. 2008ರಲ್ಲಿ ಇಂತಹ ಆರೋಪ ಬಂದಾಗ ಅವರು ನನ್ನ ಜತೆ ಇದ್ದರು. ಆ ಕೇಸ್ ಏನಾಯಿತು ಅನ್ನೋದು ಅವರಿಗೂ ಗೊತ್ತಿದೆ. ಈಗಲೂ ಬೊಮ್ಮಾಯಿ ಸಾಹೇಬರು ಕೇಸ್ ತಿಳಿದು ಮಾತನಾಡಲಿ. ನಾನು ತಪ್ಪು ಮಾಡಿಲ್ಲ. ರಾಜೀನಾಮೆ ಕೊಡುವ ಪ್ರಶ್ನೆ ಬರಲ್ಲ. ನಾನು ತಪ್ಪು ಮಾಡದಿರುವುದರಿಂದ ಹೆದರುವ ಅವಶ್ಯಕತೆ ನನಗೆ ಇಲ್ಲ. ಇದರ ಹಿಂದೆ ಕೆಲವರ ಕುಮ್ಮಕ್ಕು ಇದೆ ಎಂದು ಡಿ. ಸುಧಾಕರ್‌ ಹೇಳಿದ್ದಾರೆ.

ಪ್ರಕರಣದ ಬಗ್ಗೆ ವರದಿ ಕೇಳಿದ್ದೇನೆ: ಪರಮೇಶ್ವರ್

ಪ್ರಕರಣದ ಬಗ್ಗೆ ವರದಿ ಕೇಳಿದ್ದೇನೆ.‌ ಅಧಿಕಾರಿಗಳಿಗೆ ಬ್ರೀಫಿಂಗ್ ಕೊಡಲು‌ ಹೇಳಿದ್ದೇನೆ. ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ. ವಿಷಯ ಏನು ಅಂತ ರಿಪೋರ್ಟ್ ಪಡೆಯಬೇಕು. ರಿಪೋರ್ಟ್ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಸಚಿವರ ವಜಾಕ್ಕೆ ಬಿಜೆಪಿ ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್‌, ಅವರು ಹೇಳುವುದನ್ನು ಬೇಡ ಎಂದು ಹೇಳಲು ಆಗುವುದಿಲ್ಲ. ಪ್ರತಿಪಕ್ಷಗಳಿಗೆ ಕೇಳುವುದೇ ಸ್ವಭಾವ ಎಂದು ಹೇಳಿದರು.

ಮೊದಲು ಸುಧಾಕರ್ ರಾಜೀನಾಮೆ ನೀಡಬೇಕು‌: ಬೊಮ್ಮಾಯಿ

ಸಚಿವ ಡಿ. ಸುಧಾಕರ್ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಖಾಸಗಿ ಜೀವನದಲ್ಲೂ ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಚಿವರು ಮತ್ತು ಬೆಂಬಲಿಗರ ವರ್ತನೆ ತಪ್ಪು. ಈ ವಿಚಾರದಲ್ಲಿ ಪೊಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೇ ಕೆಲಸ ಮಾಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಡಿ. ಸುಧಾಕರ್‌ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ಇದು‌. ಅಟ್ರಾಸಿಟಿ ಪ್ರಕರಣ ಸಾಬೀತಾದರೆ, ಮೊದಲು ಸುಧಾಕರ್ ರಾಜೀನಾಮೆ ನೀಡಬೇಕು‌. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಮಾನ್ಯ ಆರೋಪಿಗಳನ್ನು ಹೇಗೆ ಠಾಣೆಯಲ್ಲಿ ಕರೆಸಿ ವಿಚಾರಣೆ ನಡೆಸುತ್ತಾರೋ, ಹಾಗೇ ವಿಚಾರಣೆ ಮಾಡಬೇಕು ಎಂಬುದಾಗಿ ಯಲಹಂಕ ಪೊಲೀಸರನ್ನು ನಾನು ಒತ್ತಾಯಿಸುತ್ತೇನೆ. ಅಟ್ರಾಸಿಟಿ ಪ್ರಕರಣ ಎಂದಾದರೆ ಮೊದಲು ಸಚಿವ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ನೀಡಬೇಕು‌ ಎಂದು ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: CM Siddaramaiah : ಯೋಗೇಶನಂತೆ ನಾನೂ ಶಿಕ್ಷಣದಿಂದ ವಂಚಿತನಾಗಿದ್ದೆ ಎಂದ ಸಿದ್ದರಾಮಯ್ಯ; ಹಾಗಿದ್ದರೆ ಯೋಗೇಶ ಯಾರು?

ಸುಧಾಕರ್‌ರನ್ನು ಹಿಡಿದು ಒಳಗೆ ಹಾಕಬೇಕು: ಸದಾನಂದ ಗೌಡ

ಅಟ್ರಾಸಿಟಿ ಕೇಸ್ ಬಗ್ಗೆ ನನಗೆ ಗೊತ್ತಿದೆ. ಸಣ್ಣ ಪುಟ್ಟ ವ್ಯಕ್ತಿ ಮೇಲೆ ಅಟ್ರಾಸಿಟಿ ಬಂದ ತಕ್ಷಣ ಹಿಡಿದು ಒಳಗೆ ಹಾಕಲಾಗುತ್ತದೆ. ಸುಧಾಕರ್ ಅವರನ್ನೂ ಹಿಡಿದು ಒಳಗೆ ಹಾಕಬೇಕು. ವಿಚಾರಣೆ ಮಾಡಿ ನಂತರ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ ಪರ ಎಂದು ಹೇಳುತ್ತಾರೆ. ಆದರೆ, ಈ ರೀತಿ ಅನ್ಯಾಯ ಮಾಡಿದವರ ರಕ್ಷಣೆ ಮಾಡುತ್ತಾರೆ ಎಂದು ಮಾಜಿ ಸಿಎಂ, ಸಂಸದ ಸದಾನಂದ ಗೌಡ ಹೇಳಿದರು.

Exit mobile version