Site icon Vistara News

Gruha Lakshmi Scheme : ಜು. 19ಕ್ಕೆ ಗೃಹಲಕ್ಷ್ಮಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಬರಲ್ಲ ಹೈಕಮಾಂಡ್

Laxmi Hebbalkar CM Siddaramaiah and Gruha Lakshmi Scheme

ಬೆಂಗಳೂರು: ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯಲ್ಲೊಂದಾದ (Congress Guarantee) ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಜಾರಿ ಸಂಬಂಧ ಅರ್ಜಿ ಸಲ್ಲಿಕೆಗೆ ಕೊನೆಗೂ ಮುಹೂರ್ತ‌ ನಿಗದಿಯಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜುಲೈ 19ರ ಸಂಜೆ 5.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಹೇಳಿದರು.

ಈ ಮೊದಲು ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಜುಲೈ 17ರಂದು ಸಂಜೆ 5 ಗಂಟೆಗೆ ಇದಕ್ಕೆ ಚಾಲನೆ ನೀಡಲಿದ್ದಾರೆ. ಅವರಿಗೆ ಈ ಸಂಬಂಧ ಸಮಯ ಕೇಳಿ ಪತ್ರವನ್ನು ಬರೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು. ಆದರೆ, ಈಗ ಹೈಕಮಾಂಡ್‌ ನಾಯಕರು ಈ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂದು ಹೇಳಿದ್ದಾರೆ. ಸರ್ಕಾರಿ ಯೋಜನೆ ಇದಾಗಿದ್ದರಿಂದ ರಾಜ್ಯ ನಾಯಕರ ಮನವಿಯನ್ನು ಹೈಕಮಾಂಡ್ (Congress high command) ತಿರಸ್ಕಾರ ಮಾಡಿದೆ.

ಇದನ್ನೂ ಓದಿ: Viral News : ಹಿಂದು ದೇವತೆಗಳಿಗೆ ಸೂ.. ಮಗನ್‌ ಎಂದು ಪೋಸ್ಟ್ ಮಾಡಿದ ಸ್ವಾಭಿಮಾನಿ ಸ್ವಾಮಿ!‌

ಆಗಸ್ಟ್‌ 16 ಅಥವಾ 17ರಿಂದ ಖಾತೆಗೆ ಹಣ ಸಂದಾಯ

ಇದಕ್ಕೂ ಮೊದಲು ವಿಧಾನಸೌಧದಲ್ಲಿ ಶನಿವಾರ (ಜುಲೈ 15) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಫಲಾನುಭವಿಗಳ ಖಾತೆಗೆ ಹಣ ಹಾಕುವ ಬಗ್ಗೆ ಈಗಾಗಲೇ ತಿಳಿಸಿದಂತೆ ಆಗಸ್ಟ್‌ 16 ಅಥವಾ 17ರಿಂದ ಖಾತೆಗೆ ಹಣ ಸಂದಾಯ ಮಾಡಲು ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ಈ ಯೋಜನೆ ಅರ್ಜಿಯು ಕರ್ನಾಟಕ ಒನ್‌ (Karnataka One), ಗ್ರಾಮ ಒನ್‌‌ (Grama One) ಹಾಗೂ ಬಾಪೂಜಿ ಸೇವಾ ಕೇಂದ್ರ (Bapuji Seva Kendra) ಗಳಲ್ಲಿ ಪಡೆಯಬಹುದಾಗಿದೆ. ಎಪಿಎಲ್‌, ಬಿಪಿಎಲ್‌, ಅಂತ್ಯೋದಯ ಕಾರ್ಡ್‌ (APL BPL and Antyodaya Card) ಇದ್ದವರು ಇದರ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.

ಫಲಾನುಭವಿಯಾದವರು ಅವರ ಹಾಗೂ ಪತಿಯ ಆಧಾರ್‌ ಕಾರ್ಡ್ (Aadhar Card) ಅನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದು. ಆದರೆ, ಪತಿಯು ಜಿಎಸ್‌ಟಿ ಅಥವಾ ಐಟಿ ರಿಟರ್ನ್‌ ಮಾಡುವವರಾಗಿರಬಾರದು ಎಂದು ಇದೇ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು.

ಆಧಾರ್‌ ಕಾರ್ಡ್‌ ಲಿಂಕ್‌ ಆಗದಿದ್ದರೆ?

ಆಧಾರ್‌ ಲಿಂಕ್‌ ಇಲ್ಲದವರು ಬೇರೆ ಪಾಸ್‌ ಬುಕ್‌ (Bank Passbook) ಅನ್ನು ತೆಗೆದುಕೊಂಡು ಹೋಗಬಹುದು. ಆ ಪಾಸ್‌ ಬುಕ್‌ ಅನ್ನು ನಾವು ಸಾಫ್ಟ್‌ವೇರ್‌ನಲ್ಲಿ ಅಪ್ಲೋಡ್‌ ಮಾಡುತ್ತೇವೆ. ಅದು ತಹಸೀಲ್ದಾರ್‌, ಸಿಇಒ ಅವರ ಬಳಿಗೆ ಅನುಮತಿಗೆ ಹೋಗುತ್ತದೆ. ಅಲ್ಲಿ ಪರಿಶೀಲನೆಯಾಗಿ ಅವರವರ ಮನೆಗಳಿಗೆ ಅನುಮತಿಯ ಪ್ರಮಾಣ ಪತ್ರವನ್ನು ತಲುಪಿಸುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು.

ಆಧಾರ್‌ ಕಾರ್ಡ್‌ ಲಿಂಕ್‌ ಇರುವ ಮೊಬೈಲ್‌ ಅನ್ನು ತೆಗೆದುಕೊಂಡು ಹೋಗಬೇಕು. ಪಾಸ್‌ ಬುಕ್‌ ಮತ್ತು ರೇಷನ್‌ ಕಾರ್ಡ್‌ನಲ್ಲಿ ಒಂದೇ ಹೆಸರು ಇರಬೇಕು. ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಲು ಯಾವುದೇ ಕಾಲ ಮಿತಿ ಇಲ್ಲ. 1.28 ಕೋಟಿ ಕುಟುಂಬದವರು ಈ ಯೋಜನೆಗೆ ಅರ್ಹರಿರುತ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು.

ಸಮಯ, ಸ್ಥಳ ನಿಗದಿ

ಸಮಯ, ಸ್ಥಳ, ದಿನಾಂಕವನ್ನು ನಿಗದಿ ಮಾಡಲಾಗುವುದು. ಆ ನಿಗದಿತ ಸಮಯಕ್ಕೆ ಹೋಗಬೇಕಾಗುತ್ತದೆ. ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಸಮಯವನ್ನು ನಿಗದಿ ಪಡಿಸಲಾಗುತ್ತದೆ. ಒಂದು ವೇಳೆ ನಿಗದಿತ ಸಮಯಕ್ಕೆ ಹೋಗಲು ಆಗದೇ ಇದ್ದವರಿಗೆ ಸಂಜೆ 5 ಗಂಟೆ ನಂತರ ಹೋಗಲು ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು.

ಪ್ರಜಾಪ್ರತಿನಿಧಿಗಳ (Prajapratinidhi) ನೇಮಕ, ಇವರಿಗೆ ದುಡ್ಡು ಕೊಡಬೇಡಿ

1 ಸಾವಿರ ಜನಸಂಖ್ಯೆಯಿದ್ದ ಕಡೆಗೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡುತ್ತಿದ್ದೇವೆ. ಇವರಲ್ಲಿ ಒಬ್ಬರು ಮಹಿಳೆ ಮತ್ತು ಒಬ್ಬ ಪುರುಷ ಪ್ರಜಾಪ್ರತಿನಿಧಿಗಳು ಇರುತ್ತಾರೆ. ಇದು ಸಂಪೂರ್ಣ ಉಚಿತವಾಗಿರಲಿದೆ. ಮಧ್ಯವರ್ತಿಗಳು ಕಂಡು ಬಂದರೆ, ಪ್ರಜಾಪ್ರತಿನಿಧಿಗಳ ಸಹಿತ ಯಾರೇ ದುಡ್ಡು ಕೇಳಿದರೂ ದೂರು ಕೊಡಿ. ಅಂಥವರ ಮೇಲೆ ನಾವು ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು.

ಇದನ್ನೂ ಓದಿ: Puneeth Rajkumar : ಪುನೀತ್‌ ಅಭಿಮಾನಕ್ಕಾಗಿ ಸೈಕಲ್‌ನಲ್ಲಿ ದೇಶ ಪರ್ಯಟನೆ ಮಾಡುತ್ತಿರುವ ತಮಿಳಿಗ!

8147500500 ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಮಾಡಿ

8147500500 ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ (Mobile SMS) ಮಾಡುವುದರ ಮೂಲಕ ಯಾವುದೇ ಸಮಸ್ಯೆಗಳನ್ನು ಕೇಳಬಹುದು.

Exit mobile version