Site icon Vistara News

Pragya Singh Thakur | ಲವ್‌ ಜಿಹಾದ್‌ಗೆ ಹೆಣ್ಣು ಮಕ್ಕಳು ಬಲಿಯಾಗಬೇಡಿ, ಚಾಕುವನ್ನು ಹರಿತವಾಗಿಡಿ ಎಂದಿದ್ದ ಸಾಧ್ವಿ ವಿರುದ್ಧ ದೂರು

Pragya Singh Thakur

ಶಿವಮೊಗ್ಗ: ಭಾನುವಾರ (ಡಿ.೨೫) ಶಿವಮೊಗ್ಗದಲ್ಲಿ ಭೋಪಾಲ್‌ನ ಬಿಜೆಪಿ ಸಂಸದೆ‌ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ (Pragya Singh Thakur) ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದು, ಅವರ ವಿರುದ್ಧ ದೂರು ದಾಖಲು ಮಾಡುವಂತೆ ನವ ದೆಹಲಿ ಮೂಲದ ವ್ಯಕ್ತಿಯೊಬ್ಬರು ಟ್ವಿಟರ್‌ ಮೂಲಕ ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ ಅವರಿಗೆ ಮನವಿ ನೀಡಿದ್ದಾರೆ.

ದೆಹಲಿ ಮೂಲದ ತೆಹಸೀನ್​ ಪೂನಾವಾಲಾ ಎಂಬುವವರು ಟ್ವಿಟರ್‌ ಮೂಲಕ ದೂರು ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿವಮೊಗ್ಗ ಎಸ್‌ಪಿಗೆ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ತ್ರೈವಾರ್ಷಿಕ ಸಮ್ಮೇಳನದಲ್ಲಿ ಸುಮಾರು 45 ನಿಮಿಷ ಮಾತನಾಡಿದ್ದ ಸಾಧ್ವಿ ಅವರು, ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗಬಾರದು. ಲವ್ ಜಿಹಾದ್ ಮಾಡುವವರಿಗೆ ತಕ್ಕ ಉತ್ತರ ನೀಡಬೇಕು. ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕು. ಇದಕ್ಕಾಗಿ ಪ್ರತಿ ಮನೆಯಲ್ಲೂ ಶಸ್ತ್ರ ಇರಬೇಕು. ಮನೆಯಲ್ಲಿ ತರಕಾರಿ ಕೊಯ್ಯುವ ಚಾಕು ಕೂಡ ಹರಿತವಾಗಿ ಇಡಬೇಕು ಎಂಬಿತ್ಯಾದಿ ಮಾತುಗಳನ್ನು ಆಡಿದ್ದರು.

ಇದನ್ನೂ ಓದಿ | Teacher Transfer | ಶಿಕ್ಷಕರ ವರ್ಗಾವಣೆಗೆ ಅಂತಿಮ ಅಧಿಸೂಚನೆ; ವೇಳಾಪಟ್ಟಿ ಕೂಡ ಪ್ರಕಟ

ಸಾದ್ವಿ ಪ್ರಜ್ಞಾ ಸಿಂಗ್‌ ಅವರ ಈ ಹೇಳಿಕೆಯು ಉತ್ತರ ಭಾರತದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದೇ ವಿಚಾರವಾಗಿ ಈಗ ತೆಹಸೀನ್‌ ಅಸಮಾಧಾನ ಹೊರಹಾಕಿದ್ದು, ಸಾಧ್ವಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಾಮಾಜಿಕ ಸಾಸ್ಥ್ಯಕ್ಕೆ ಭಂಗ ತರುತ್ತಿದ್ದಾರೆ. ಸಾಧ್ವಿ ವಿರುದ್ಧ ಎಫ್​ಐಆರ್ ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೆ, u/s 153-A, 153-B, 268, 295-A, 298, 504, 508 inter alia of the Indian Penal Code, 1860 ಅಡಿಯಲ್ಲಿ ಎಫ್​ಐಆರ್ ಮಾಡುವಂತೆಯೂ ಮನವಿಯಲ್ಲಿ ಕೋರಲಾಗಿದೆ.

ಸಾಧ್ವಿ ಹೇಳಿದ್ದೇನು?
ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗಬಾರದು. ಲವ್ ಜಿಹಾದ್ ಮಾಡುವವರಿಗೆ ತಕ್ಕ ಉತ್ತರ ನೀಡಬೇಕು. ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕು. ಇದಕ್ಕಾಗಿ ಪ್ರತಿ ಮನೆಯಲ್ಲೂ ಶಸ್ತ್ರ ಇರಬೇಕು. ಮನೆಯಲ್ಲಿ ತರಕಾರಿ ಕೊಯ್ಯುವ ಚಾಕು ಕೂಡ ಹರಿತವಾಗಿ ಇಡಬೇಕು. ಹೆಣ್ಣುಮಕ್ಕಳನ್ನು ತಿರುಗಾಡುವ ಆಟಂ ಬಾಂಬ್ ಮಾಡಬೇಕು. ಯಾರಾದರೂ ಅವರ ಶೀಲಕ್ಕೆ ಕೈ ಹಾಕಿದರೆ ಅಲ್ಲೇ ಉತ್ತರ ಕೊಡಬೇಕು. ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿ ಆಗಬಾರದು. ಅದಕ್ಕೆ ತಕ್ಕ ಉತ್ತರ ನಾವು ಕೊಡಬೇಕು. ದೇಶದ ರಕ್ಷಣೆಗೆ ನಾವೆಲ್ಲ ಸದಾ ಬದ್ಧರಾಗಿರಬೇಕು. ಇನ್ನು ಮುಂದೆ ಯಾವುದೇ ಲವ್‌ ಜಿಹಾದ್‌, ಅತ್ಯಾಚಾರ, ಅನಾಚಾರವಾಗಲು ನಾವು ಬಿಡಬಾರದು. ಪ್ರತಿ ಮನೆಯಲ್ಲಿ ಶಸ್ತ್ರ ಇಟ್ಟುಕೊಳ್ಳಬೇಕು. ಅದಕ್ಕೆ ಅಗತ್ಯ ಲೈಸೆನ್ಸ್ ಹೊಂದಬೇಕು.

ಇದನ್ನೂ ಓದಿ | Coronavirus | ದೇಶದಲ್ಲಿ ನಿಧಾನವಾಗಿ ಹೆಚ್ಚುತ್ತಿದೆಯಾ ಕೊರೊನಾ? ವಾರಗಳ ಲೆಕ್ಕಾಚಾರದಲ್ಲಿ ಕೋವಿಡ್​ ಕೇಸ್​​ನಲ್ಲಿ ಶೇ.11ರಷ್ಟು ಏರಿಕೆ

ನಾನು ಸಂಸದೆ, ಹಿಂದುಗಳ ಪರವಾಗಿ ಮಾತನಾಡುತ್ತೇನೆ, ಹಿಂದುಗಳ ರಕ್ಷಣೆಗಾಗಿ ಹೋರಾಡುತ್ತಿದ್ದೇನೆ. ಜೀವವಿರುವವರೆಗೂ ಸನಾತನ ರಕ್ಷಣೆಗೆ ಬದ್ಧ. ಇದಕ್ಕಾಗಿ ಜೀವ ಬೆದರಿಕೆಗಳು ಬರುತ್ತಲೇ ಇವೆ. ಬೆದರಿಕೆ ಹಾಕುವವರು ಒಮ್ಮೆ ನನ್ನ ಮುಂದೆ ಬರಲಿ, ಅವರಿಗೆ ಪ್ರಜ್ಞಾ ಸಿಂಗ್ ಏನೆಂದು ತೋರಿಸುತ್ತೇನೆ. ನಾರಿಶಕ್ತಿ ಏನೆಂದು ತೋರಿಸುತ್ತೇನೆ. ನಾವು ಹೆದರುವುದಿಲ್ಲ, ಹೆದರಿಸುತ್ತೇವೆ. ಈಗ ಸಾಯುವ ಸಮಯವಲ್ಲ, ಸಾಯಿಸುವ ಸಮಯ.

ಕಾಶ್ಮೀರ ಭಾರತ ದೇಶದ ಶಿರ. ಅದನ್ನು ಕತ್ತರಿಸಲು ಬಿಡುವುದಿಲ್ಲ. ಈ ಭೂಮಿ ನಮ್ಮ ತಾಯಿ, ಜೀವಿಸುವುದಾದರೆ ಭಾರತ ಮಾತೆಯ ಮಕ್ಕಳಾಗಿ ಇರಬೇಕು. ನಾವೆಲ್ಲ ಹುಟ್ಟಿನಿಂದಲೇ ಹಿಂದು ಆಗಿರುತ್ತೇವೆ. ಕೆಲವರಿಗೆ ಹಿಂದು ಪರಿಭಾಷೆ ಈಗ ನೆನಪಾಗುತ್ತಿದೆ. ಅವರಿಗೆ ಅದರ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಜನರು ಧರ್ಮದ ಜತೆಗಿದ್ದಾರೆ, ಹೀಗಾಗಿ ನನ್ನನ್ನು ಮತ್ತೆ ಗೆಲ್ಲಿಸಿದರು. ಮೋದಿಯವರು ಈ ದೇಶದ ಬಗ್ಗೆ ಸಮರ್ಪಣಾಭಾವ ಹೊಂದಿದ್ದಾರೆ. ಗೋಧ್ರಾ ಹತ್ಯಾಕಾಂಡದ ವಿಷಯದಲ್ಲಿ ಮೋದಿ ಸಾಕಷ್ಟು ಸಂಕಟ ಅನುಭವಿಸಿದರು. ಅಮೆರಿಕ ವೀಸಾ ಕೊಟ್ಟಿರಲಿಲ್ಲ. ದೇಶದ ಮೇಲೆ ದಾಳಿಯಾದರೆ ಹಿಂದಿನ ಆಡಳಿತ ಪಾಕಿಸ್ತಾನದ ವಿರುದ್ಧ ಮಾತನಾಡುತ್ತಿರಲಿಲ್ಲ. ಈಗ ನಮ್ಮ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತಿದೆ ಎಂದರು.

ಶಿವಮೊಗ್ಗದಲ್ಲಿ ಆತಂಕ ಮನೆಮಾಡಿದೆ. ಆದರೆ ಅದರಲ್ಲೂ ತುಷ್ಟೀಕರಣ ನಡೆಯುತ್ತಿದೆ. ನಾವು ಅತಿಥಿ ದೇವೋಭವ ಎನ್ನುತ್ತೇವೆ. ಆದರೆ ಅತಿಥಿ ಯಜಮಾನನಾದರೆ ಸುಮ್ಮನಿರುವುದಿಲ್ಲ. ಒಂದು ವೇಳೆ ಹಿಂದು ಉಗ್ರವಾದಿ ಆಗಿದ್ದಿದ್ದರೆ ಆ ಮಾತು ಹೇಳಿದವರ ಯಾರ ಮುಖವೂ ಕಾಣುತ್ತಿರಲಿಲ್ಲ. ದೇಶದಲ್ಲಿ ವಾಸಿಸಲು ಕಷ್ಟ ಎಂದು ಕೆಲ ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಅವರಿಗೆ ಇಲ್ಲಿ ಇರಲು ಹೇಳಿದವರು ಯಾರು ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Ghol fish | ಉಡುಪಿಯಲ್ಲಿ ಬಲೆಗೆ ಬಿತ್ತು 2 ಲಕ್ಷ ರೂ. ಬೆಲೆಯ ಮೀನು!

ಮಿಷನರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಡಿ. ಅಂತಹವರು ಮುಂದೆ ವೃದ್ಧಾಶ್ರಮಕ್ಕೆ ಹೋಗಬೇಕಾಗುತ್ತದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಗೀತೋಪದೇಶ, ರಾಮಾಯಣ, ಹನುಮಾನ್ ಚಾಲಿಸಾ ಕಲಿಸಬೇಕು ಎಂದು ಕರೆ ನೀಡಿದರು. ದೇಶದಲ್ಲಿ ಅಚ್ಛೇ ದಿನ ಬಂದಿದೆ. ದೇಶದಲ್ಲಿ ಭವ್ಯ ಮಂದಿರಗಳು ನಿರ್ಮಾಣಗೊಳ್ಳುತ್ತಿವೆ. ಪ್ರಭು ರಾಮಚಂದ್ರನ ದೇಗುಲ ನಿರ್ಮಾಣವಾಗುತ್ತಿದೆ. ಕಾಶಿಯ ಜ್ಞಾನವಾಪಿ ಮಸೀದಿಯಲ್ಲೂ ಮಹಾದೇವನ ದೇಗುಲವಿದೆ. ಕೋರ್ಟ್‌ನಲ್ಲೂ ಇದಕ್ಕೆ ನ್ಯಾಯ ಸಿಗುತ್ತದೆ. ಹೀಗಾಗಿ ವಿರೋಧಿಗಳು ತಳಮಳಗೊಂಡಿದ್ದಾರೆ. ಭಾರತ ವಿಶ್ವಗುರುವಾಗುವ ಕಾಲ ಸನ್ನಿಹಿತವಾಗಿದೆ ಎಂದರು.

ಈ ಹಿಂದೆ ದುರ್ಗಾಮಾತಾ ಕಾರ್ಯಕ್ರಮಕ್ಕಾಗಿ ಉಡುಪಿಗೆ ಹೋಗಬೇಕಿತ್ತು. ಆದರೆ ಪೊಲೀಸರ ದೌರ್ಜನ್ಯದಿಂದ ದೇಹ ಸ್ಪಂದಿಸಲಿಲ್ಲ. ಆದರೆ ಈ ಕಾರ್ಯಕ್ರಮಕ್ಕೆ ಬರಲೇಬೇಕೆಂಬ ಹಠದಿಂದ ಬಂದಿದ್ದೇನೆ. ಜನ್ಮ ಕೊಟ್ಟ ಭೂಮಿಯ ಋಣ ನಾವೆಲ್ಲ ತೀರಿಸಲೇಬೇಕು. ಶಿವಮೊಗ್ಗದ ನೆಲ, ರಾಜ್ಯ, ದೇಶಕ್ಕಾಗಿ ತನ್ಮ ಪ್ರಾಣ ತ್ಯಾಗ ಮಾಡಿದವರ ಆತ್ಮ ಧನ್ಯವಾಗಲಿ. ನಾವು ಜೀವ ಕೊಡಲೂ ಸಿದ್ಧ, ತೆಗೆಯಲೂ ಸಿದ್ಧ ಎಂದು ನಮ್ಮ ಧರ್ಮಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗಾಗಿ ನನ್ನ ನಮನ. ಹತ್ಯೆಗೀಡಾದ ಹಿಂದು ಕಾರ್ಯಕರ್ತರಾದ ವಿಶ್ವನಾಥ ಶೆಟ್ಟಿ, ಶಿವಮೂರ್ತಿ, ಗೋವಿಂದ ರಾಜ್, ಗೋಕುಲ್, ಹರ್ಷ, ಪ್ರವೀಣ್ ನೆಟ್ಟಾರ್, ಪ್ರಶಾಂತ್ ಪೂಜಾರಿ, ರುದ್ರೇಶ್, ಸೌಮ್ಯ ಭಟ್ ಮತ್ತಿತರರನ್ನು ಸ್ಮರಣೀಯ.

ಈ ಹಿಂದೆ ಒಂದೇ ಪಕ್ಷವಿತ್ತು. ನಂತರ ರಾಷ್ಟ್ರಭಕ್ತ ಪಕ್ಷ ಸ್ಥಾಪನೆಯಾಯಿತು. ಏಕರೂಪ ನಾಗರಿಕ ಸಂಹಿತೆ ಬರಬೇಕು. ಜನಸಂಖ್ಯೆ ನಿಯಂತ್ರಣ ಆಗಲೇಬೇಕು. ಆರೋಗ್ಯ ಪೂರ್ಣ ಸಮಾಜಕ್ಕೆ ಇದು ಅಗತ್ಯ. ಆದರೆ ಇದಕ್ಕೂ ಕೆಲವರು ವಿರೋಧ ಮಾಡುತ್ತಿದ್ದಾರೆ. ಹಿಂದು ರಾಷ್ಟ್ರ ನಿರ್ಮಾಣ ಆಗಲೇಬೇಕು. ಶಿವಾಜಿಯ ರಣನೀತಿ ಬಳಸುವಾಗ ಹಿಂದೆ ಸರಿಯಬಾರದು ಎಂದು ಸಾದ್ವಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ | Boxing Nationals | ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್; ಚಿನ್ನ ಗೆದ್ದ ನಿಖತ್ ಜರೀನ್​, ಲವ್ಲಿನಾ ಬೊರ್ಗೊಹೇನ್

Exit mobile version