Site icon Vistara News

Loksabha 2024: ಲೋಕಸಭೆಯಲ್ಲೂ ಬಿಜೆಪಿಯನ್ನು ಸೋಲಿಸಲು ʼಭೀಮ ಸಂಕಲ್ಪʼ: ನಗಾರಿ ಬಾರಿಸಿದ ಸಿದ್ದರಾಮಯ್ಯ

Siddaramaiah Townhall

#image_title

ಬೆಂಗಳೂರು: ವಿಗ್ರಹ ಇಟ್ಟುಕೊಂಡು ವಿಚಾರಗಳನ್ನು ಕೊಲ್ಲುವುದು ಬಿಜೆಪಿ ಪರಿವಾರದ ಚಾಳಿ. ಸಂವಿಧಾನ ವಿರೋಧಿಸುವ ಬಿಜೆಪಿ ಚುನಾವಣೆಗಾಗಿ ಅಂಬೇಡ್ಕರ್ ಪ್ರತಿಮೆಯನ್ನು ಇಟ್ಟುಕೊಂಡು ಡ್ರಾಮಾ ಮಾಡುತ್ತಿದೆ. ಲೋಕಸಭೆ ಚುನಾವಣೆಯಲ್ಲೂ (Loksabha 2024) ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಕಾರ್ಯನಿರ್ವಹಿಸಿದ ರಾಜ್ಯದ ವಿವಿಧ ದಲಿತ ಸಂಘಟನೆಗಳು ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ‘ಭೀಮ ಸಂಕಲ್ಪ’ ಸಮಾವೇಶದಲ್ಲಿ ಲೋಕಸಭೆಯಲ್ಲಿ ಬಿಜೆಪಿಯನ್ನು ಸೋಲಿಸುವ ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರು ಸಂವಿಧಾನ ಜಾರಿಗೊಳ್ಳುವ ಹಿಂದಿನ ದಿನ ಐತಿಹಾಸಿಕ ಭಾಷಣ ಮಾಡುತ್ತಾ, “ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕದಿದ್ದರೆ ಈ ಸ್ವಾತಂತ್ರ್ಯ ಸೌಧವನ್ನು ದೇಶದ ಜನರೇ ಧ್ವಂಸ ಮಾಡುತ್ತಾರೆ” ಎಂದು ಎಚ್ಚರಿಸಿದ್ದರು. ಜಾತಿ ಸಮಾಜಕ್ಕೆ ಚಲನೆ ಇರುವುದಿಲ್ಲ. ಚಾಲನೆ ಬರಬೇಕಾದರೆ ಸಂವಿಧಾನಬದ್ದವಾದ ಜಾತ್ಯತೀತ ಮೌಲ್ಯಗಳು ಜಾರಿಯಾಗಿ ಶೋಷಿತ ಸಮುದಾಯಗಳಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಈ ಅವಕಾಶಗಳನ್ನು ಕಲ್ಪಿಸುವುದೇ ನನ್ನ ರಾಜಕೀಯ ಬದ್ಧತೆ ಎಂದರು.

ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಾಗಲಿ, ಪ್ರಧಾನಿ ಮೋದಿ ಅವರಾಗಲಿ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತರು. ಆದರೆ, ನಾವು-ನೀವು ಸುಮ್ಮನೆ ಕೂರಲಿಲ್ಲ. ಸಂವಿಧಾನ ಬದಲಾಯಿಸಲು ಬಂದವರನ್ನೇ ನಾವು-ನೀವು ಬದಲಾಯಿಸಿದ್ದೀವಿ. ಇದು 2024 ರಲ್ಲೂ ಪ್ರತಿಧ್ವನಿಸಬೇಕು, ಮರುಕಳಿಸಬೇಕು ಎಂದು ಕರೆ ನೀಡಿದರು.

ಗ್ಯಾರಂಟಿಗಳನ್ನು ವಿಫಲಗೊಳಿಸಲು ಬಿಜೆಪಿ ಹುನ್ನಾರ
ದೇಶದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದೆ ವಂಚಿಸಿದ ಬಿಜೆಪಿ, ನುಡಿದಂತೆ ನಡೆದ ನಮ್ಮನ್ನು ಟೀಕಿಸುತ್ತಿದೆ. ಬಡವರ- ಮಧ್ಯಮ ವರ್ಗದವರ ಕಲ್ಯಾಣಕ್ಕೆ ನಾವು ನೀಡಿರುವ ಗ್ಯಾರಂಟಿಗಳನ್ನು ವಿಫಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ ಸುಳ್ಳುಗಳನ್ನು ಹೊಸೆದು, ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ನಾಡಿನ ಶೇ85 ಕ್ಕೂ ಹೆಚ್ಚು ಜನರಿಗೆ ತಲುಪುತ್ತದೆ. ಉಳಿದವು ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ತಲುಪುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್‌
ಭೀಮ‌ಸಂಕಲ್ಪ ಪವಿತ್ರವಾದ ಐತಿಹಾಸಿಕ ಸಮಾರಂಭ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು. ನಾನು ವಿದ್ಯಾರ್ಥಿ ನಾಯಕನಿಂದಾಗ ನೋಡ್ತಿದ್ದಿನಿ, ನಿಮ್ಮ ಹೋರಾಟ ರಸ್ತೆಯಲಿ ಜನರ ಮಧ್ಯೆ ಇರುತ್ತೆ. ನಾವೆಲ್ಲಾ ಖುರ್ಚಿಗಾಗಿ ಕಿತ್ತಾಡುತ್ತಾ ಇರುತ್ತೇವೆ. ನಮಗೂ ನಿಮಗೂ ಇರುವಂತಹ ವ್ಯತ್ಯಾಸ ಇದೇ. ಬಾಬಾ ಸಾಹೇಬ್ ಅವರ ದೀಕ್ಷೆ ಉಳಿಸಿ ಕೊಳ್ಳುವುದಕ್ಕೆ ಹೋರಾಟ ಮಾಡುವುದಾಗಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡುವಾಗ ಹೇಳಿದ್ದೆ.

11 ಸಾವಿರ ಪಂಚಾಯಿತಿಗಳಿಗೆ ಆನ್ ಲೈನ್ ಆಫ್ ಲೈನ್ ನಲ್ಲಿ ಸಂವಿಧಾನ ಪೀಠಿಕೆ ಓದಿಸಿದ್ದೆ. ಸಂವಿದಾನವೇ ನಮ್ಮ ಭಗವದ್ಗೀತೆ, ಕುರ್‌ಆನ್‌, ಬೈಬಲ್. ನಾವು ನೂರಾರು ದೇವರುಗಳನ್ನ ಪೂಜೆ ಮಾಡುತ್ತೇವೆ. ಧರ್ಮ ಯಾವುದಾದರು ತತ್ವ ಒಂದೇ ಕರ್ಮ ಯಾವುದಾದರು ನಿಷ್ಠೆ ಒಂದೇ. ರಾಮನ ತಂದೆ ದಶರಥ ಮಹಾರಾಜ ಅವರ ವಿಗ್ರಹ ಇಲ್ಲ. ರಾಮನ ಬಂಟ ಆಂಜನೇಯ ವಿಗ್ರಹ ಎಲ್ಲ ಕಡೆ ಇದೆ. ಇದು ಸಮಾಜದ ಪರ ಹೋರಾಟ ಮಾಡಿದ್ದನ್ನು ತೋರಿಸುತ್ತದೆ ಎಂದರು.

ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಸ್ತಾಪಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಈ ಹಿಂದೆ ಹಲವು ಧೀಮಂತ ನಾಯಕರು ಎಐಸಿಸಿ ಸ್ಥಾನದಲ್ಲಿದ್ರು. ಈಗ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಭ್ರಷ್ಟಾ ಸರ್ಕಾರವನ್ನು ನಾವು ಓಡಿಸಿದ್ದೇವೆ. ಫೈನಲ್ ಗೋಲ್ ನೀವು ಹೊಡೆದಿದ್ದೀರ. ಇದು ಲೋಕಸಭಾ ಚುನಾವಣೆಗೂ ಇರಬೇಕು ಎಂದು ದಲಿತ ಸಮುದಾಯದ ಬೆಂಬಲವನ್ನು ಕೋರಿದರು.

ಮೊದಲ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾವು ಎಸ್‌ಸಿಎಸ್‌ಟಿ ಸಮುದಾಯದವರಿಗೆ ಅನೇಕ ಬದಲಾವಣೆ ಕಾರ್ಯಕ್ರಮ ಜಾರಿಗೆ ತಂದಿದ್ದೆವು. 30 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಇಟ್ಟಿದ್ದೆವು. ಸರ್ಕಾರದಲ್ಲಿ ಎಲ್ಲರಿಗೂ ಒಳ್ಳೆ ಖಾತೆ ಕೊಟ್ಟಿದ್ದೇವೆ. ಇದನ್ನು ಎಲ್ಲರೂ ನೆನಪಲ್ಲಿ ಇಟ್ಟುಕೊಳ್ಳಬೇಕು. ಇದನ್ನ ಮುಂದಕ್ಕೂ ಉಳಿಸಿಕೊಳ್ತೀವಿ. ಸಚಿವರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ ಅದನ್ನ ಉಳಿಸಿಕೊಳ್ಳಬೇಕು. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Bengaluru Rain: ಡಿಕೆಶಿ ಅಪಾರ್ಟ್‌ಮೆಂಟ್ ಆದರೂ ಬುಲ್ಡೋಜರ್‌ ಪಕ್ಕಾ: ಡಿಸಿಎಂ ಡಿ.ಕೆ. ಶಿವಕುಮಾರ್‌ ಖಡಕ್‌ ಮಾತು

Exit mobile version