Site icon Vistara News

Karnataka Election 2023: ಆಸ್ಪತ್ರೆ ಬೆಡ್‌ನಿಂದಲೇ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಚುನಾವಣಾ ಪ್ರಚಾರ

Congress candidate Baburao Chinchansur campaigns from hospital Karnataka Election 2023 updates

ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ. ಆಯಾ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ, ಪ್ರಚಾರ ಕಾರ್ಯಗಳಲ್ಲಿ ಕಾರ್ಯನಿರತರಾಗಿದ್ದಾರೆ. ಸಭೆ, ಸಮಾರಂಭಗಳನ್ನು ಏರ್ಪಡಿಸುವುದು, ರೋಡ್‌ ಶೋ (Road Show) ಮಾಡುವುದು ಸೇರಿದಂತೆ ಭರ್ಜರಿ ಪ್ರಚಾರ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇತ್ತ ಕಾರು ಅಪಘಾತದಲ್ಲಿ (Road Accident) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರುಮಠಕಲ್‌ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ (Baburao Chinchansur) ಅವರು ಆಸ್ಪತ್ರೆಯಿಂದಲೇ ಮತ ಯಾಚನೆ ಮಾಡಿದ್ದಾರೆ.

ಏಪ್ರಿಲ್ 16ರಂದು ರಸ್ತೆ ಅಪಘಾತದಲ್ಲಿ ಬಾಬುರಾವ್ ಚಿಂಚನಸೂರ್‌ಗೆ ಭಾರಿ ಪೆಟ್ಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅಲ್ಪ ಮಟ್ಟಿಗೆ ಚೇತರಿಕೆ ಕಂಡಿರುವ ಚಿಂಚನಸೂರ್‌ ಅವರು ಆಸ್ಪತ್ರೆಯಲ್ಲಿಯೇ ವಿಡಿಯೊ (Video) ಮಾಡಿಸಿ, ಆ ಮೂಲಕ ಮತ ಪ್ರಚಾರ ಮಾಡಿದ್ದಾರೆ.

ಇದನ್ನೂ ಓದಿ: Karnataka Election: ಕಾರವಾರ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಆಸ್ತಿ ಐದು ವರ್ಷದಲ್ಲೇ ಡಬಲ್‌; ಸಾಲವೂ ದುಪ್ಪಟ್ಟು

ಆಸ್ಪತ್ರೆಯ ಬೇಡ್ ಮೇಲೆ ಕುಳಿತಿರುವ ಚಿಂಚನಸೂರ್‌ ಅವರು ವಿಡಿಯೊ ಮೂಲಕ ತಮಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಮುಖದಲ್ಲಿ ಗಲ್ಲ ಹಾಗೂ ಕಣ್ಣಿನ ಪಕ್ಕ ಪೆಟ್ಟಾಗಿದ್ದು, ಬ್ಯಾಂಡೇಜ್‌ ಹಾಕಿರುವುದು ಕಾಣುತ್ತದೆ.

ವಿಡಿಯೊದಲ್ಲೇನಿದೆ?

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ಮಟ್ಟದ ಉನ್ನತ ಸ್ಥಾನದಲ್ಲಿ ಬೆಳೆದಿದ್ದಾರೆ. ಇವತ್ತು ಇಡೀ ವಿಶ್ವವೇ ಅವರನ್ನು ತಿರುಗಿ ನೋಡುತ್ತಿದೆ. ಹಳ್ಳಿಯಿಂದ ದಿಲ್ಲಿವರೆಗೆ ಅವರು ಬೆಳವಣಿಗೆ ಸಾಧಿಸಿದ್ದಾರೆ. ಇಂದು ಅವರು ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿ ಗುರಮಠಕಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಸಮಸ್ತ ಕುಲ ಬಾಂಧವರಲ್ಲಿ ಕೈ ಮುಗಿದು ನಮಸ್ಕಾರ ಮಾಡುತ್ತೇನೆ. ಇವತ್ತು ಬಿದ್ದು ಹೋಗುವ ಶರೀರ, ಮಣ್ಣು ಪಾಲಾಗುವ ಶರೀರ ಇದು. ಹೀಗೆ ಸಾಯುವುದಕ್ಕಿಂದ ಬಡ ಜನರ ಸೇವೆ ಮಾಡಿ ಸಾಯಬೇಕು ಅಂತ ಬಂದಿದ್ದೀನಿ. ನನ್ನ ಆರೋಗ್ಯ ಚೆನ್ನಾಗಿದೆ. ಸಮಸ್ತ ಮತ ಬಾಂಧವರ ಆಶೀರ್ವಾದ ನನ್ನ ಮೇಲಿರಲಿ. ಮತದಾರರ ಪಾದ ಕಮಲಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಎಂದು ಚಿಂಚನಸೂರ್‌ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Karnataka Election: ಒಂದೊಂದು ರೂಪಾಯಿ ನಾಣ್ಯ ಸಂಗ್ರಹಿಸಿ ಠೇವಣಿ ಹಣ ಭರಿಸಿದ ಪಕ್ಷೇತರ ಅಭ್ಯರ್ಥಿ; ಎಣಿಸಲು ಬೇಕಾಯ್ತು 2 ಗಂಟೆ!

ಚಿಂಚನಸೂರ್‌ ಅವರು ಅಪಘಾತ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅವರ ಪರ ಪ್ರಚಾರ ಮಾಡಲು ಕುಟುಂಬಸ್ಥರ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರು ಆಸ್ಪತ್ರೆಯಲ್ಲಿರುವುದರಿಂದ ಈಗ ಕಾಂಗ್ರೆಸ್‌ಗೆ ಸಹ ಪ್ರಚಾರದ ಆತಂಕ ಎದುರಾಗಿದೆ. ಸೋಮವಾರ (ಏ. 17) ಬಾಬುರಾವ್‌ ಚಿಂಚನಸೂರ್‌ ಪರವಾಗಿ ಅವರ ಪತ್ನಿ ನಾಮಪತ್ರವನ್ನು ಸಲ್ಲಿಸಿದ್ದರು.

Exit mobile version